Home / ಕವನ / ಕವಿತೆ / ನಂಬಿಕೆ

ನಂಬಿಕೆ

ದೈವನಂಬಿಕೆಯೊಂದು ದಿನ್ನೆ, ಏರುವ ಜನಕ್ಕೆ.
ಹತ್ತಿನಿಂತರೆ ದಿನ್ನೆನೆತ್ತಿಯಲಿ ಸುತ್ತಲಿನ
ಹತ್ತು ವಿಷಯಗಳೆಲ್ಲ ಕಣ್ಣತೆಕ್ಕೆಗೆ ಸಿಕ್ಕಿ
ನೋಟ ಕೂರಾಗುವುದು, ನಿಲವು ದೃಢವಾಗುವುದು,
ತುಂಬಿ ಹರಿಯುವ ಗಾಳಿ ಬಗೆ ಸೋಸಿ ಮುಖದಲ್ಲಿ
ನೊಂದ ನೆನಪಿನ ಬಿರುಸು ಹರಿದು ನಗೆ ಹಾಸುವುದು.
ತಪ್ಪಲಿನ ಕಣ್ಣತಡೆ ಇಲ್ಲಿ ಕೆಳನಿಲ್ಲುವುವು;
ನೆಲದ ಗದ್ದಲ ಮೇಲಕೇರುತ್ತ ಸಣ್ಣಾಗಿ
ಕಡೆಗೊಮ್ಮೆ ಸಾಯುವುದು; ಮೇಲೆ ನಿಂತವರ ದನಿ
ಕೇಳಿಸದು ; ಹತ್ತು ಜನರ ರೀತಿಗೆ ಹೊರಗು.
ತಪ್ಪಲಿನ ಜನಕ್ಕೆ ಇದ ಕಂಡು ಬೆರಗೋ ಬೆರಗು.

ಇಂಥ ನಂಬಿಕೆಯೊಂದು ನೂಲು; ಬಾಳಿನ ಮೇಲು
ಕೀಳುಗಳ ಎಡೆಯರಿತು ಅದರೊಳಗೆ ಪೋಣಿಸಲು
ಮೂಡುವುದು ಕಾಣದಿಹ ಚೆಲುವು; ಅಳು ನಗು ಇಲ್ಲಿ
ಬೆರೆಯುವುವು ಬಣ್ಣಗಳ ತೊರೆದು, ಒಳಗಿನ ತಿರುಳು
ಒಂದೆ ಎನ್ನುವ ಪರಿಯ ಮೆರೆದು; ಬದುಕಿನ ಪರಿಧಿ
ಬೆಳೆಯುವುದು ಎಲ್ಲೆಯನು ಹರಿದು; ತನ್ನೊಳು ಹೊರಗ
ಕೊಳ್ಳುವುದು. ತನ್ನೆದೆಯ ತಿಳಿವುಗನ್ನಡಿಯಲ್ಲಿ
ಲೋಕಬಿಂಬವ ಕಂಡು ತಣಿಯುವುದು ಮಣಿಯುವುದು.
ನಂಬಿಕೆಗೆ ಕೋದ ಅನುಭವ ಒಂದಲಂಕಾರ
ಲೋಕವನು ಸವಿವ ಜೀವಿಗೆ ಭಾವಶೃಂಗಾರ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...