Home / ಕವನ / ಕವಿತೆ / ಬಾ ಬಾ ಹೊಸ ಗಾಳಿಯೆ

ಬಾ ಬಾ ಹೊಸ ಗಾಳಿಯೆ

ಬಾನು ರೆಪ್ಪೆ ಮುಚ್ಚುತಿದೆ
ಇರುಳು ಸೆರಗ ಹೊಚ್ಚುತಿದೆ
ತಾರೆ ಚಂದ್ರ ತೀರದಲ್ಲಿ
ನಕ್ಕು ಹರಟೆ ಕೊಚ್ಚುತಿವೆ.
ಮಾತಾಡದೆ ಸಡಗರದಲಿ
ತೇಕಾಡಿದೆ ಮುಗಿಲು,
ಹಾಡಲು ಶ್ರುತಿ ಹೂಡುತ್ತಿದೆ
ಬೆಳಂದಿಂಗಳ ಕೊರಳು.
ದಡವ ಕೊಚ್ಚಿ ಹರಿಯುತ್ತಿದೆ
ನದಿಗೆ ಮಹಾಪೂರ,
ಗಡಿಯ ದಾಟಿ ಹಬ್ಬುತ್ತಿದೆ
ಪಾರಿಜಾತ ಸಾರ,
ಹಳತನೆಸೆದು ಹೊಸ ರೂಪಕೆ
ತಡಕುತ್ತಿದೆ ಜೀವ,
ತಳಮಳಿಸುತ ಅನುಭವಿಸಿದೆ
ಹೊಸಸೃಷ್ಟಿಯ ನೋವ.

ಬಂತು ಹೇಗೆ, ಯಾವುದು ಈ
ಕೊಳಲಿನ ಮಧುನಾದ ?
ಗೆಜ್ಜೆ ಕಟ್ಟಿ ನರ್ತಿಸಲು
ತವಕಿಸುತಿದೆ ಪಾದ.
ಜೊಂಪಿನ ತಳದಿಂದ ಚಿತ್ತ
ಮೇಲೆ ತೇಲಿ ಬರುತಿದೆ,
ಮಿಂಚ ನೇಯ್ದ ಬಸಿರಿ ಮುಗಿಲ
ಸಂಚು ಹೂಡಿ ಕಾದಿದೆ.

ಬಾ ಬಾ ಹೊಸ ಗಾಳಿಯೆ ಈ
ಹಳೆ ಬಾಳಿಗೆ ಬಾ.
ಒಣಗಿದೆಲೆಯ ಕೆಳಚಿ ನಿಂತ
ಮೈಯ ತೂರಿ ಬಾ
ಮಳೆಗಾಲದ ನವನೀರದ
ಹರಸುವಂತೆ ಬಾ,
ಬತ್ತಿಹೋದ ಚಿತ್ತದಲ್ಲಿ
ಜಲ ಚಿಮ್ಮಿಸು ಬಾ.

ಉದಾಸೀನ ಜೀವಹೀನ-
ವಾದುವೆಲ್ಲ ಈ
ಕೊನೆಯಿರುಳಿನ ಕಣ್ಣೀರಲಿ
ತೇಲಿ ಹೋಗಲಿ

ಸೃಷ್ಟಿಶಕ್ತಿ ಆರಿಹೋದ
ವಸ್ತುವೆಲ್ಲವೂ
ತನ್ನೊಡಲನು ನವಸೃಷ್ಟಿಗೆ
ತೆರವು ಮಾಡಲಿ.

ಬಾ ಬಾ ಹೊಸ ಗಾಳಿಯೆ ಈ
ಹಳೆ ಬಾಳಿಗೆ ಬಾ,
ಸರಿದುಹೋದ ಹರಯವನ್ನು
ಮರಳಿ ನೆಲಕೆ ತಾ.
ಪ್ರಾಣವೀಣೆಯನ್ನು ದನಿಸಿ
ಕರಣಗಳಿಗೆ ಕಿಚ್ಚನುಣಿಸಿ
ಕಾಯದ ಕಣಕಣವ ಕುಣಿಸಿ
ಸಾವನೊದ್ದು ಬಾ,
ಚೈತ್ರದ ಹೊಸ ಮೈತ್ರಿಯಲ್ಲಿ
ಜಗವನದ್ದು ಬಾ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...