Home / ಕವನ / ಕವಿತೆ / ಬಾ ಬಾ ಹೊಸ ಗಾಳಿಯೆ

ಬಾ ಬಾ ಹೊಸ ಗಾಳಿಯೆ

ಬಾನು ರೆಪ್ಪೆ ಮುಚ್ಚುತಿದೆ
ಇರುಳು ಸೆರಗ ಹೊಚ್ಚುತಿದೆ
ತಾರೆ ಚಂದ್ರ ತೀರದಲ್ಲಿ
ನಕ್ಕು ಹರಟೆ ಕೊಚ್ಚುತಿವೆ.
ಮಾತಾಡದೆ ಸಡಗರದಲಿ
ತೇಕಾಡಿದೆ ಮುಗಿಲು,
ಹಾಡಲು ಶ್ರುತಿ ಹೂಡುತ್ತಿದೆ
ಬೆಳಂದಿಂಗಳ ಕೊರಳು.
ದಡವ ಕೊಚ್ಚಿ ಹರಿಯುತ್ತಿದೆ
ನದಿಗೆ ಮಹಾಪೂರ,
ಗಡಿಯ ದಾಟಿ ಹಬ್ಬುತ್ತಿದೆ
ಪಾರಿಜಾತ ಸಾರ,
ಹಳತನೆಸೆದು ಹೊಸ ರೂಪಕೆ
ತಡಕುತ್ತಿದೆ ಜೀವ,
ತಳಮಳಿಸುತ ಅನುಭವಿಸಿದೆ
ಹೊಸಸೃಷ್ಟಿಯ ನೋವ.

ಬಂತು ಹೇಗೆ, ಯಾವುದು ಈ
ಕೊಳಲಿನ ಮಧುನಾದ ?
ಗೆಜ್ಜೆ ಕಟ್ಟಿ ನರ್ತಿಸಲು
ತವಕಿಸುತಿದೆ ಪಾದ.
ಜೊಂಪಿನ ತಳದಿಂದ ಚಿತ್ತ
ಮೇಲೆ ತೇಲಿ ಬರುತಿದೆ,
ಮಿಂಚ ನೇಯ್ದ ಬಸಿರಿ ಮುಗಿಲ
ಸಂಚು ಹೂಡಿ ಕಾದಿದೆ.

ಬಾ ಬಾ ಹೊಸ ಗಾಳಿಯೆ ಈ
ಹಳೆ ಬಾಳಿಗೆ ಬಾ.
ಒಣಗಿದೆಲೆಯ ಕೆಳಚಿ ನಿಂತ
ಮೈಯ ತೂರಿ ಬಾ
ಮಳೆಗಾಲದ ನವನೀರದ
ಹರಸುವಂತೆ ಬಾ,
ಬತ್ತಿಹೋದ ಚಿತ್ತದಲ್ಲಿ
ಜಲ ಚಿಮ್ಮಿಸು ಬಾ.

ಉದಾಸೀನ ಜೀವಹೀನ-
ವಾದುವೆಲ್ಲ ಈ
ಕೊನೆಯಿರುಳಿನ ಕಣ್ಣೀರಲಿ
ತೇಲಿ ಹೋಗಲಿ

ಸೃಷ್ಟಿಶಕ್ತಿ ಆರಿಹೋದ
ವಸ್ತುವೆಲ್ಲವೂ
ತನ್ನೊಡಲನು ನವಸೃಷ್ಟಿಗೆ
ತೆರವು ಮಾಡಲಿ.

ಬಾ ಬಾ ಹೊಸ ಗಾಳಿಯೆ ಈ
ಹಳೆ ಬಾಳಿಗೆ ಬಾ,
ಸರಿದುಹೋದ ಹರಯವನ್ನು
ಮರಳಿ ನೆಲಕೆ ತಾ.
ಪ್ರಾಣವೀಣೆಯನ್ನು ದನಿಸಿ
ಕರಣಗಳಿಗೆ ಕಿಚ್ಚನುಣಿಸಿ
ಕಾಯದ ಕಣಕಣವ ಕುಣಿಸಿ
ಸಾವನೊದ್ದು ಬಾ,
ಚೈತ್ರದ ಹೊಸ ಮೈತ್ರಿಯಲ್ಲಿ
ಜಗವನದ್ದು ಬಾ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...