Home / ಕವನ / ಕವಿತೆ / ಸೇತುವೆ ಕುಸಿದಿದೆ

ಸೇತುವೆ ಕುಸಿದಿದೆ

ನಾನು ಕಳಿಸಿದ್ದು ಮಿಂಚುಗಳನ್ನು
ತಲುಪಿದ್ದು ಮಿಣುಕು ಹುಳುಗಳೇ?
ಹಾಗಾದರೆ ಮಿಂಚೆಲ್ಲ ಹೋಯಿತು?

ನನ್ನ ಕುಂಚದಿಂದ ಮೂಡಿದ ಮೊಲ
ನಿನ್ನಲ್ಲಿಗೆ ಕೊಂಬಿನೊಂದಿಗೆ ಓಡಿಬಂದಿತ್ತೆ?
ಹಾಗಾದರೆ ಮೊಲವೆಲ್ಲಿ ಮಾಯವಾಯಿತು?

ನಾನು ಕಿವಿಯಲ್ಲಿ ಕಿಣಿಕಿಣಿಸಿದ್ದು
ಮೌನದ ಗಂಟೆಯನ್ನು
ಕತ್ತರಿಸಿದ್ದು ಸಿಡಿಲೆ?
ಹಾಗಾದರೆ ಸಿಡಿಲಾದರೂ ಎಲ್ಲಿಂದ ಬಂತು?

ನಾನು ಮುಟ್ಟಿಸ ಬಯಸಿದ್ದು ಬೆಂಕಿ ಬಿಸಿಯನ್ನು
ಬೆಚ್ಚಗಿತ್ತೆ? ಬಿಸಿ ನೀರಿನ ಹಾಗೆಯೇ?
ಹಾಗಾದರೆ ಬೆಂಕಿಗೇನಾಯಿತು?

ಕಗ್ಗಂಟಿನ ಹಾದಿ ಕಾಡಿನಂತಿದೆ.
ತಣ್ಣಗೆ ಕೂತು ಧ್ಯಾನಿಸಿದಂತೆ
ಮಬ್ಬು ಸರಿಯುತ್ತಿದೆ….

ಪೊರೆ ಕಳಚಿದ ಕಣ್ಣಲ್ಲಿ
ಚಿತ್ರ ಮೂಡುತ್ತಿದೆ
ಏನೂ ಅಲ್ಲ-
ಸೇತುವೆ ಕುಸಿದಿದೆ.

ನನ್ನ ಪುಟ್ಟ ಪುಟ್ಟ ಹೆಜ್ಜೆಯೊಂದಿಗೆ
ನನ್ನೆತ್ತರಕ್ಕೂ ಬೆಳೆದ ಸೇತುವೆ
‘ನಾನು’ ಇರುವಂತೆಯೆ ಕುಸಿದಿದೆ.

ನಿನ್ನೆ ಮುಸ್ಸಂಜೆಯನ್ನು ಬೆಚ್ಚಗೆ
ತರುಣನ ಹಾಗೆ ಕಳೆದ ಸೇತುವೆ
ಇದೀಗ ಸಾವಿನ ಸುಖ ನಿದ್ದೆಯಲ್ಲಿದೆ.

ನಾನೇ ನೆಟ್ಟು ನೀರುಣಿಸಿ
ಬೆಳೆಸಿದ ಗಿಡದ ಹೂವ
ಪರಾಗ, ಕೇಸರದ ಸಮೇತ
ಒಂದು ಹನಿ ಮಕರಂದ
ಅಲ್ಲಾಡದ ಹಾಗೆ ಅಷ್ಟೂ ದಳಗಳೊಂದಿಗೆ
ಖುದ್ದಾಗಿ ಒಯ್ಯುವೆನೆಂದು
ಕೊಟ್ಟ ಮಾತು ಇನ್ನೂ
ಹಾಗೆಯೇ ಇರುವಂತೆ
ಸೇತುವೆ ಕುಸಿದಿದೆ.

ಮಿಂಚುಗಳನ್ನು ಮಿಣುಕು
ಹುಳುಗಳನ್ನಾಗಿಸಿ
ಮೊಲಕ್ಕೆ ಕೊಂಬು ಮೂಡಿಸಿ
ಬೆಂಕಿಯನ್ನು ಬಿಸಿನೀರನ್ನಾಗಿಸಿ
ಇಕ್ಕಟ್ಟಿಗೆ ಸಿಲುಕಿಸುತ್ತಲೇ
ಬಿಕ್ಕಟ್ಟಿನಿಂದ ಬಿಡುಗಡೆಗೊಳಿಸಿದ
ಸೇತುವೆ ಕುಸಿದಿದೆ.

ಕುಸಿದ ಸೇತುವೆಯಾಚೆ
ಎಂದಿನಂತೆ ಹೂವು ಅರಳಿದೆ.
ಕುಸಿದ ಸೇತುವೆಯ ಮೇಲೆ ಕೂತು
ಕೋಗಿಲೆ ತನ್ನ ಪಾಡಿಗೆ ತಾನು ಹಾಡಿದೆ.

ನದಿಯಲ್ಲಿ ನೀರು ಹರಿದಿದೆ
ಸಂತನಂತೆ ಸಹಜವಾಗಿದೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...