Home / ಕವನ / ಕವಿತೆ / ಸೇತುವೆ ಕುಸಿದಿದೆ

ಸೇತುವೆ ಕುಸಿದಿದೆ

ನಾನು ಕಳಿಸಿದ್ದು ಮಿಂಚುಗಳನ್ನು
ತಲುಪಿದ್ದು ಮಿಣುಕು ಹುಳುಗಳೇ?
ಹಾಗಾದರೆ ಮಿಂಚೆಲ್ಲ ಹೋಯಿತು?

ನನ್ನ ಕುಂಚದಿಂದ ಮೂಡಿದ ಮೊಲ
ನಿನ್ನಲ್ಲಿಗೆ ಕೊಂಬಿನೊಂದಿಗೆ ಓಡಿಬಂದಿತ್ತೆ?
ಹಾಗಾದರೆ ಮೊಲವೆಲ್ಲಿ ಮಾಯವಾಯಿತು?

ನಾನು ಕಿವಿಯಲ್ಲಿ ಕಿಣಿಕಿಣಿಸಿದ್ದು
ಮೌನದ ಗಂಟೆಯನ್ನು
ಕತ್ತರಿಸಿದ್ದು ಸಿಡಿಲೆ?
ಹಾಗಾದರೆ ಸಿಡಿಲಾದರೂ ಎಲ್ಲಿಂದ ಬಂತು?

ನಾನು ಮುಟ್ಟಿಸ ಬಯಸಿದ್ದು ಬೆಂಕಿ ಬಿಸಿಯನ್ನು
ಬೆಚ್ಚಗಿತ್ತೆ? ಬಿಸಿ ನೀರಿನ ಹಾಗೆಯೇ?
ಹಾಗಾದರೆ ಬೆಂಕಿಗೇನಾಯಿತು?

ಕಗ್ಗಂಟಿನ ಹಾದಿ ಕಾಡಿನಂತಿದೆ.
ತಣ್ಣಗೆ ಕೂತು ಧ್ಯಾನಿಸಿದಂತೆ
ಮಬ್ಬು ಸರಿಯುತ್ತಿದೆ….

ಪೊರೆ ಕಳಚಿದ ಕಣ್ಣಲ್ಲಿ
ಚಿತ್ರ ಮೂಡುತ್ತಿದೆ
ಏನೂ ಅಲ್ಲ-
ಸೇತುವೆ ಕುಸಿದಿದೆ.

ನನ್ನ ಪುಟ್ಟ ಪುಟ್ಟ ಹೆಜ್ಜೆಯೊಂದಿಗೆ
ನನ್ನೆತ್ತರಕ್ಕೂ ಬೆಳೆದ ಸೇತುವೆ
‘ನಾನು’ ಇರುವಂತೆಯೆ ಕುಸಿದಿದೆ.

ನಿನ್ನೆ ಮುಸ್ಸಂಜೆಯನ್ನು ಬೆಚ್ಚಗೆ
ತರುಣನ ಹಾಗೆ ಕಳೆದ ಸೇತುವೆ
ಇದೀಗ ಸಾವಿನ ಸುಖ ನಿದ್ದೆಯಲ್ಲಿದೆ.

ನಾನೇ ನೆಟ್ಟು ನೀರುಣಿಸಿ
ಬೆಳೆಸಿದ ಗಿಡದ ಹೂವ
ಪರಾಗ, ಕೇಸರದ ಸಮೇತ
ಒಂದು ಹನಿ ಮಕರಂದ
ಅಲ್ಲಾಡದ ಹಾಗೆ ಅಷ್ಟೂ ದಳಗಳೊಂದಿಗೆ
ಖುದ್ದಾಗಿ ಒಯ್ಯುವೆನೆಂದು
ಕೊಟ್ಟ ಮಾತು ಇನ್ನೂ
ಹಾಗೆಯೇ ಇರುವಂತೆ
ಸೇತುವೆ ಕುಸಿದಿದೆ.

ಮಿಂಚುಗಳನ್ನು ಮಿಣುಕು
ಹುಳುಗಳನ್ನಾಗಿಸಿ
ಮೊಲಕ್ಕೆ ಕೊಂಬು ಮೂಡಿಸಿ
ಬೆಂಕಿಯನ್ನು ಬಿಸಿನೀರನ್ನಾಗಿಸಿ
ಇಕ್ಕಟ್ಟಿಗೆ ಸಿಲುಕಿಸುತ್ತಲೇ
ಬಿಕ್ಕಟ್ಟಿನಿಂದ ಬಿಡುಗಡೆಗೊಳಿಸಿದ
ಸೇತುವೆ ಕುಸಿದಿದೆ.

ಕುಸಿದ ಸೇತುವೆಯಾಚೆ
ಎಂದಿನಂತೆ ಹೂವು ಅರಳಿದೆ.
ಕುಸಿದ ಸೇತುವೆಯ ಮೇಲೆ ಕೂತು
ಕೋಗಿಲೆ ತನ್ನ ಪಾಡಿಗೆ ತಾನು ಹಾಡಿದೆ.

ನದಿಯಲ್ಲಿ ನೀರು ಹರಿದಿದೆ
ಸಂತನಂತೆ ಸಹಜವಾಗಿದೆ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...