Home / ಕವನ / ಕವಿತೆ / ಸೇತುವೆ ಕುಸಿದಿದೆ

ಸೇತುವೆ ಕುಸಿದಿದೆ

ನಾನು ಕಳಿಸಿದ್ದು ಮಿಂಚುಗಳನ್ನು
ತಲುಪಿದ್ದು ಮಿಣುಕು ಹುಳುಗಳೇ?
ಹಾಗಾದರೆ ಮಿಂಚೆಲ್ಲ ಹೋಯಿತು?

ನನ್ನ ಕುಂಚದಿಂದ ಮೂಡಿದ ಮೊಲ
ನಿನ್ನಲ್ಲಿಗೆ ಕೊಂಬಿನೊಂದಿಗೆ ಓಡಿಬಂದಿತ್ತೆ?
ಹಾಗಾದರೆ ಮೊಲವೆಲ್ಲಿ ಮಾಯವಾಯಿತು?

ನಾನು ಕಿವಿಯಲ್ಲಿ ಕಿಣಿಕಿಣಿಸಿದ್ದು
ಮೌನದ ಗಂಟೆಯನ್ನು
ಕತ್ತರಿಸಿದ್ದು ಸಿಡಿಲೆ?
ಹಾಗಾದರೆ ಸಿಡಿಲಾದರೂ ಎಲ್ಲಿಂದ ಬಂತು?

ನಾನು ಮುಟ್ಟಿಸ ಬಯಸಿದ್ದು ಬೆಂಕಿ ಬಿಸಿಯನ್ನು
ಬೆಚ್ಚಗಿತ್ತೆ? ಬಿಸಿ ನೀರಿನ ಹಾಗೆಯೇ?
ಹಾಗಾದರೆ ಬೆಂಕಿಗೇನಾಯಿತು?

ಕಗ್ಗಂಟಿನ ಹಾದಿ ಕಾಡಿನಂತಿದೆ.
ತಣ್ಣಗೆ ಕೂತು ಧ್ಯಾನಿಸಿದಂತೆ
ಮಬ್ಬು ಸರಿಯುತ್ತಿದೆ….

ಪೊರೆ ಕಳಚಿದ ಕಣ್ಣಲ್ಲಿ
ಚಿತ್ರ ಮೂಡುತ್ತಿದೆ
ಏನೂ ಅಲ್ಲ-
ಸೇತುವೆ ಕುಸಿದಿದೆ.

ನನ್ನ ಪುಟ್ಟ ಪುಟ್ಟ ಹೆಜ್ಜೆಯೊಂದಿಗೆ
ನನ್ನೆತ್ತರಕ್ಕೂ ಬೆಳೆದ ಸೇತುವೆ
‘ನಾನು’ ಇರುವಂತೆಯೆ ಕುಸಿದಿದೆ.

ನಿನ್ನೆ ಮುಸ್ಸಂಜೆಯನ್ನು ಬೆಚ್ಚಗೆ
ತರುಣನ ಹಾಗೆ ಕಳೆದ ಸೇತುವೆ
ಇದೀಗ ಸಾವಿನ ಸುಖ ನಿದ್ದೆಯಲ್ಲಿದೆ.

ನಾನೇ ನೆಟ್ಟು ನೀರುಣಿಸಿ
ಬೆಳೆಸಿದ ಗಿಡದ ಹೂವ
ಪರಾಗ, ಕೇಸರದ ಸಮೇತ
ಒಂದು ಹನಿ ಮಕರಂದ
ಅಲ್ಲಾಡದ ಹಾಗೆ ಅಷ್ಟೂ ದಳಗಳೊಂದಿಗೆ
ಖುದ್ದಾಗಿ ಒಯ್ಯುವೆನೆಂದು
ಕೊಟ್ಟ ಮಾತು ಇನ್ನೂ
ಹಾಗೆಯೇ ಇರುವಂತೆ
ಸೇತುವೆ ಕುಸಿದಿದೆ.

ಮಿಂಚುಗಳನ್ನು ಮಿಣುಕು
ಹುಳುಗಳನ್ನಾಗಿಸಿ
ಮೊಲಕ್ಕೆ ಕೊಂಬು ಮೂಡಿಸಿ
ಬೆಂಕಿಯನ್ನು ಬಿಸಿನೀರನ್ನಾಗಿಸಿ
ಇಕ್ಕಟ್ಟಿಗೆ ಸಿಲುಕಿಸುತ್ತಲೇ
ಬಿಕ್ಕಟ್ಟಿನಿಂದ ಬಿಡುಗಡೆಗೊಳಿಸಿದ
ಸೇತುವೆ ಕುಸಿದಿದೆ.

ಕುಸಿದ ಸೇತುವೆಯಾಚೆ
ಎಂದಿನಂತೆ ಹೂವು ಅರಳಿದೆ.
ಕುಸಿದ ಸೇತುವೆಯ ಮೇಲೆ ಕೂತು
ಕೋಗಿಲೆ ತನ್ನ ಪಾಡಿಗೆ ತಾನು ಹಾಡಿದೆ.

ನದಿಯಲ್ಲಿ ನೀರು ಹರಿದಿದೆ
ಸಂತನಂತೆ ಸಹಜವಾಗಿದೆ.
*****

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...