Home / ಕವನ / ಕವಿತೆ / ನಾ…. ಬರುತ್ತೇನೆ ಕೇಳು!

ನಾ…. ಬರುತ್ತೇನೆ ಕೇಳು!

ಒಂದಲ್ಲ ಒಂದು ದಿನ ನಿನ್ನ
ಕನಸಿನಲ್ಲಿ ಸದ್ದಿಲ್ಲದೆ ಸುಳಿದು
ಬರುವವಳೇ…. ನಾನು
ಜಾಡಿಸಿ ಒದ್ದೋಡಿಸಿದರೆ
ಬಾಗಿಲ ಕಟಕಟಾಯಿಸಿವೆನು.
ನಿನ್ನ ಪೊಗರು ಮಾತೆಲ್ಲ ಗಾಳಿಯಲ್ಲಿ
ತೂರಿ ಹೋಗುವ ಹಾಗೆ ಗೆಜ್ಜೆ-
ಝಣಗುಟ್ಟಿಸುವೆನು, ಕಣ್-
ತಪ್ಪಿಸಿಯಾದರೂ ಒಳನುಗ್ಗುವೆನು.

‘ಹಠಮಾರಿ ಹೆಣ್ಣು’ ಎಂದು
ಅನ್ನುವಿಯಾದರೆ ಅನ್ನು, ಆದರೆ
ಅತ್ತಿಂದಿತ್ತ ಗೋಣಾಡಿಸಿ ಮಾತ್ರ
ತುಂಟ ಕಂಗಳಿಗೆ ಎರಚದಿರು ಮಣ್ಣು,
ದಯವಿಟ್ಟು ದಯೆಯಿಟ್ಟು ದಾರಿಬಿಡು.
ಕೆಣಕದೆ, ಒಳಗೇನಿದೆಯೆಂದು
ಇಣುಕಿ ನೋಡುವೆನು, ಗುಲಾಬಿ
ಮೃದುಪಾದದ ಹೆಜ್ಜೆಯಿಟ್ಟು
ನೋವಾಗದ ಹಾಗೆ ನಡೆದಾಡುವೆನು.
ಖಾಲಿಯೆನಿಸಿದರೆ ಒಂದಿಷ್ಟು
ಹಸಿರ ಬೆಳಸುವೆನು.

ನೋಡು: ನಾಳಿನ ದಿನ ಕಣ್ಣ ಪೊರೆ
ಕಳಚಿ, ನೆನಪು ನಿಚ್ಚಳವಾಗಿ,
ಮಸುಕು ಹೆಜ್ಜೆಯನ್ನಪ್ಪಿ, ನೀ…
ಬಿಕ್ಕಳಿಸುವಾಗ ಸಾವಿರ ಮೈಲುಗಳಾಚೆ
ಸಮಶೃತಿಯಲ್ಲಿ ನುಡಿಯಬಹುದು
ನನ್ನ ಗೆಜ್ಜೆಯ ಗುನುಗು.

ಆಗ: ಬಾಜಾ-ಬಜಂತ್ರಿ ನುಡಿಸಿ
‘ಸುಸ್ವಾಗತ’ ಫಲಕ ತೂಗು ಹಾಕಿದರೂ
ತಿರುಗಿ ನೋಡುವವಳಲ್ಲ ನಾನು.
ಎರಡೂ ಕೈ ಚಾಚಿ ‘ಬಾ’ ಎಂದು
ಕರೆದರೂ ಬರುವವಳಲ್ಲ ನಾನು
ಬರಬೇಕೆನಿಸಿದರೂ ಬರಲಾಗುವುದಿಲ್ಲ ಕೇಳು!
ಹಿಂದಿರುಗಿ ಬರಲಾರದಷ್ಟು ದೂರ
ಹೋದ ಮೇಲೆ ಹೇಗೆ ಬರುವುದು ಹೇಳು?


Tagged:

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...