ವಿಧಿ

ತಾರಣ ವರುಷದ ನಾಲ್ಕನೆ ಮಾಸದ
ಅಂತ್ಯದ ದಿನವದು ಮುಂಜಾನೆ
ಊರಿನ ಜನರಿಗೆ ಹೇಳಲು ತೀರದ
ಸಡಗರ ತುಂಬಿದೆ ಬಿಡುವಿಲ್ಲ

ದಾನವು ಧರ್ಮವು ದಾಸರ ಪದಗಳು
ಸ್ನಾನವು ಜಪಗಳು ನಡೆದಿಹುವು
ಏನಿದು ಎಂದರೆ ಬಾಲಕನೊಬ್ಬನು
ಕನ್ನಡಿಯೊಂದನು ತೋರಿದನು

ಮಸಿಯನು ಪೂಸಿದ ಮುರುಕಿನ ಕನ್ನಡಿ
ಕಂಗಳಿಗಿಟ್ಟನು ನೋಡೆಂದು
ನೀಲಿಯ ಭವನದಿ ಕಾಂತಿವಿಹೀನದ
ಸ್ವಾಮಿಯ ಕಂಡೆನು ಕಾತರದಿ

ಧಗಧಗಿಸುವ ಆ ಕಿರಣಗಳಿಲ್ಲದೆ
ಭಿನ್ನದ ಮೂರುತಿ ಕಾಣಿಸಿತು
‘ರಾಹುವೊ ಕೇತುವೊ ನುಂಗಿವೆ ಸೂರ್ಯನ
ತಿಳಿಯಿತೆ’ ಎಂದನು ಬಾಲಕನು

ಸೃಷ್ಟಿಯನೆಲ್ಲವ ಪಾಲನೆ ಮಾಡುವ
ಸೂರ್ಯನ ಪಾಡನು ನೋಡಿದೆನು
ತಿವಿದನು ಕವಿ ಹೃದಯವ ಆ ಭಾಸ್ಕರ
ಮಗಳೇ ವಿಧಿಯನು ನೋಡೆಂದು

ಏನಿದು ಅಚ್ಚರಿ ಓ ರವಿ ದೇವಾ
ನಿನಗೂ ವಿಧಿಯಾಜ್ಞೆಯು ಉಂಟೇ?
ಬಾನೊಳು ಧಗಿಸುವ ಮಿಹಿರನ ಕೂಡ
ಬಂಧಿಸಿ ಕೆಡಿಸಿತೆ ಆ ವಿಧಿಯು

ನೀನಿರುತಿಹ ಬಹುದೂರದ ಭವನವು
ಕಲ್ಮಷವಿಲ್ಲದ ಆಗಸವು
ನಿನ್ನೊಳು ತುಂಬಿದೆ ಜಗವನು ಬೆಳಗಿಸಿ
ನಿತ್ಯವು ನಡಸುವ ಸಾಹಸವು

ಭುವಿಯನೆ ಕುದಿಸುತ ಪ್ರಜ್ವಲಿಸುವ ಪ್ರಭು
ವಿಧಿಯನು ಗೆಲ್ಲಲು ಅಸದಳವೆ?
ಎದುರಿಸಿ ನಿನ್ನಾ ಜ್ವಾಲೆಯ ಝಳಪಿಸಿ
ಸಹಿಸದೆ ಪೋದೆಯ ಆ ವಿಧಿಯ?

ಆಗದು ಆಗದು ಎಂದಿಗು ಮಗಳೇ
ಸಾಹಸಿಯಾ ವಿಧಿ ಚಿರಜೀವಿ!
ಬಾಳಿನ ತಳಿರಿನ ಕುಡಿಗಳ ಚಿವುಟುತ
ಕಿಲಿ ಕಿಲಿ ನಗುವುದೆ ಅವನಾಟ!

ಸುಖದೊಳು ದುಃಖದ ಮೊಳಕೆಯ ನಾಟಿಸಿ
ಕಂಬನಿಗರಸುತ ಬೆಳಸುವನು
ರೋದನ ದನಿಯನು ಕೇಳುತ ಹರುಷದಿ
ಕರತಾಡನದಿಂ ಕುಣಿಯುವನು

ಇಂತಿರು ಅಂತಿರು ಎನ್ನುತ ಸೃಷ್ಟಿಯ
ನಿಯಮಿಸಿ ಆಜ್ಞೆಯ ವಿಧಿಸುವನು
ಯಂತ್ರ ವಸ್ತುಗಳಾಗಿಹೆವೆಲ್ಲರು
ಆ ವಿಧಿ ಶಾಸನದಡಿಯೊಳಗೆ

ಮಾನುಷ ಯತ್ನಕೆ, ಸೌಖ್ಯಕೆ ದೈವವು
ನಾನಾ ಘಾತವ ತಂದಂತೆ
ಬಾನೊಳು ಸುಳಿಯುತ ಸುಖಿಸವ ನನ್ನನು
ಕ್ರಾಂತಿಯು ಕ್ಷಣದೊಳು ಕೆಡಿಸಿಹುದು

ವಿಧಿ ನಿಯಮದ ಒಂದಾಜ್ಞೆಯು ಮೀರದೆ
ಸಲಿಸುತ ಬಂದಿದೆ ಯುಗ ಯುಗವು
ನಾವದನೆದುರಿಸಲಾಗದು ಅಮ್ಮಾ
ಜನಕಜೆ ಎಂದನು ದಿನಕರನು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎರಡು ಹನಿಗಳು
Next post ಮಲ್ಲಿಗೆ

ಸಣ್ಣ ಕತೆ

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…