Home / ಕವನ / ಕವಿತೆ / ವಿಧಿ

ವಿಧಿ

ತಾರಣ ವರುಷದ ನಾಲ್ಕನೆ ಮಾಸದ
ಅಂತ್ಯದ ದಿನವದು ಮುಂಜಾನೆ
ಊರಿನ ಜನರಿಗೆ ಹೇಳಲು ತೀರದ
ಸಡಗರ ತುಂಬಿದೆ ಬಿಡುವಿಲ್ಲ

ದಾನವು ಧರ್ಮವು ದಾಸರ ಪದಗಳು
ಸ್ನಾನವು ಜಪಗಳು ನಡೆದಿಹುವು
ಏನಿದು ಎಂದರೆ ಬಾಲಕನೊಬ್ಬನು
ಕನ್ನಡಿಯೊಂದನು ತೋರಿದನು

ಮಸಿಯನು ಪೂಸಿದ ಮುರುಕಿನ ಕನ್ನಡಿ
ಕಂಗಳಿಗಿಟ್ಟನು ನೋಡೆಂದು
ನೀಲಿಯ ಭವನದಿ ಕಾಂತಿವಿಹೀನದ
ಸ್ವಾಮಿಯ ಕಂಡೆನು ಕಾತರದಿ

ಧಗಧಗಿಸುವ ಆ ಕಿರಣಗಳಿಲ್ಲದೆ
ಭಿನ್ನದ ಮೂರುತಿ ಕಾಣಿಸಿತು
‘ರಾಹುವೊ ಕೇತುವೊ ನುಂಗಿವೆ ಸೂರ್ಯನ
ತಿಳಿಯಿತೆ’ ಎಂದನು ಬಾಲಕನು

ಸೃಷ್ಟಿಯನೆಲ್ಲವ ಪಾಲನೆ ಮಾಡುವ
ಸೂರ್ಯನ ಪಾಡನು ನೋಡಿದೆನು
ತಿವಿದನು ಕವಿ ಹೃದಯವ ಆ ಭಾಸ್ಕರ
ಮಗಳೇ ವಿಧಿಯನು ನೋಡೆಂದು

ಏನಿದು ಅಚ್ಚರಿ ಓ ರವಿ ದೇವಾ
ನಿನಗೂ ವಿಧಿಯಾಜ್ಞೆಯು ಉಂಟೇ?
ಬಾನೊಳು ಧಗಿಸುವ ಮಿಹಿರನ ಕೂಡ
ಬಂಧಿಸಿ ಕೆಡಿಸಿತೆ ಆ ವಿಧಿಯು

ನೀನಿರುತಿಹ ಬಹುದೂರದ ಭವನವು
ಕಲ್ಮಷವಿಲ್ಲದ ಆಗಸವು
ನಿನ್ನೊಳು ತುಂಬಿದೆ ಜಗವನು ಬೆಳಗಿಸಿ
ನಿತ್ಯವು ನಡಸುವ ಸಾಹಸವು

ಭುವಿಯನೆ ಕುದಿಸುತ ಪ್ರಜ್ವಲಿಸುವ ಪ್ರಭು
ವಿಧಿಯನು ಗೆಲ್ಲಲು ಅಸದಳವೆ?
ಎದುರಿಸಿ ನಿನ್ನಾ ಜ್ವಾಲೆಯ ಝಳಪಿಸಿ
ಸಹಿಸದೆ ಪೋದೆಯ ಆ ವಿಧಿಯ?

ಆಗದು ಆಗದು ಎಂದಿಗು ಮಗಳೇ
ಸಾಹಸಿಯಾ ವಿಧಿ ಚಿರಜೀವಿ!
ಬಾಳಿನ ತಳಿರಿನ ಕುಡಿಗಳ ಚಿವುಟುತ
ಕಿಲಿ ಕಿಲಿ ನಗುವುದೆ ಅವನಾಟ!

ಸುಖದೊಳು ದುಃಖದ ಮೊಳಕೆಯ ನಾಟಿಸಿ
ಕಂಬನಿಗರಸುತ ಬೆಳಸುವನು
ರೋದನ ದನಿಯನು ಕೇಳುತ ಹರುಷದಿ
ಕರತಾಡನದಿಂ ಕುಣಿಯುವನು

ಇಂತಿರು ಅಂತಿರು ಎನ್ನುತ ಸೃಷ್ಟಿಯ
ನಿಯಮಿಸಿ ಆಜ್ಞೆಯ ವಿಧಿಸುವನು
ಯಂತ್ರ ವಸ್ತುಗಳಾಗಿಹೆವೆಲ್ಲರು
ಆ ವಿಧಿ ಶಾಸನದಡಿಯೊಳಗೆ

ಮಾನುಷ ಯತ್ನಕೆ, ಸೌಖ್ಯಕೆ ದೈವವು
ನಾನಾ ಘಾತವ ತಂದಂತೆ
ಬಾನೊಳು ಸುಳಿಯುತ ಸುಖಿಸವ ನನ್ನನು
ಕ್ರಾಂತಿಯು ಕ್ಷಣದೊಳು ಕೆಡಿಸಿಹುದು

ವಿಧಿ ನಿಯಮದ ಒಂದಾಜ್ಞೆಯು ಮೀರದೆ
ಸಲಿಸುತ ಬಂದಿದೆ ಯುಗ ಯುಗವು
ನಾವದನೆದುರಿಸಲಾಗದು ಅಮ್ಮಾ
ಜನಕಜೆ ಎಂದನು ದಿನಕರನು
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...