Home / ಕವನ / ಕವಿತೆ / ವಿಧಿ

ವಿಧಿ

ತಾರಣ ವರುಷದ ನಾಲ್ಕನೆ ಮಾಸದ
ಅಂತ್ಯದ ದಿನವದು ಮುಂಜಾನೆ
ಊರಿನ ಜನರಿಗೆ ಹೇಳಲು ತೀರದ
ಸಡಗರ ತುಂಬಿದೆ ಬಿಡುವಿಲ್ಲ

ದಾನವು ಧರ್ಮವು ದಾಸರ ಪದಗಳು
ಸ್ನಾನವು ಜಪಗಳು ನಡೆದಿಹುವು
ಏನಿದು ಎಂದರೆ ಬಾಲಕನೊಬ್ಬನು
ಕನ್ನಡಿಯೊಂದನು ತೋರಿದನು

ಮಸಿಯನು ಪೂಸಿದ ಮುರುಕಿನ ಕನ್ನಡಿ
ಕಂಗಳಿಗಿಟ್ಟನು ನೋಡೆಂದು
ನೀಲಿಯ ಭವನದಿ ಕಾಂತಿವಿಹೀನದ
ಸ್ವಾಮಿಯ ಕಂಡೆನು ಕಾತರದಿ

ಧಗಧಗಿಸುವ ಆ ಕಿರಣಗಳಿಲ್ಲದೆ
ಭಿನ್ನದ ಮೂರುತಿ ಕಾಣಿಸಿತು
‘ರಾಹುವೊ ಕೇತುವೊ ನುಂಗಿವೆ ಸೂರ್ಯನ
ತಿಳಿಯಿತೆ’ ಎಂದನು ಬಾಲಕನು

ಸೃಷ್ಟಿಯನೆಲ್ಲವ ಪಾಲನೆ ಮಾಡುವ
ಸೂರ್ಯನ ಪಾಡನು ನೋಡಿದೆನು
ತಿವಿದನು ಕವಿ ಹೃದಯವ ಆ ಭಾಸ್ಕರ
ಮಗಳೇ ವಿಧಿಯನು ನೋಡೆಂದು

ಏನಿದು ಅಚ್ಚರಿ ಓ ರವಿ ದೇವಾ
ನಿನಗೂ ವಿಧಿಯಾಜ್ಞೆಯು ಉಂಟೇ?
ಬಾನೊಳು ಧಗಿಸುವ ಮಿಹಿರನ ಕೂಡ
ಬಂಧಿಸಿ ಕೆಡಿಸಿತೆ ಆ ವಿಧಿಯು

ನೀನಿರುತಿಹ ಬಹುದೂರದ ಭವನವು
ಕಲ್ಮಷವಿಲ್ಲದ ಆಗಸವು
ನಿನ್ನೊಳು ತುಂಬಿದೆ ಜಗವನು ಬೆಳಗಿಸಿ
ನಿತ್ಯವು ನಡಸುವ ಸಾಹಸವು

ಭುವಿಯನೆ ಕುದಿಸುತ ಪ್ರಜ್ವಲಿಸುವ ಪ್ರಭು
ವಿಧಿಯನು ಗೆಲ್ಲಲು ಅಸದಳವೆ?
ಎದುರಿಸಿ ನಿನ್ನಾ ಜ್ವಾಲೆಯ ಝಳಪಿಸಿ
ಸಹಿಸದೆ ಪೋದೆಯ ಆ ವಿಧಿಯ?

ಆಗದು ಆಗದು ಎಂದಿಗು ಮಗಳೇ
ಸಾಹಸಿಯಾ ವಿಧಿ ಚಿರಜೀವಿ!
ಬಾಳಿನ ತಳಿರಿನ ಕುಡಿಗಳ ಚಿವುಟುತ
ಕಿಲಿ ಕಿಲಿ ನಗುವುದೆ ಅವನಾಟ!

ಸುಖದೊಳು ದುಃಖದ ಮೊಳಕೆಯ ನಾಟಿಸಿ
ಕಂಬನಿಗರಸುತ ಬೆಳಸುವನು
ರೋದನ ದನಿಯನು ಕೇಳುತ ಹರುಷದಿ
ಕರತಾಡನದಿಂ ಕುಣಿಯುವನು

ಇಂತಿರು ಅಂತಿರು ಎನ್ನುತ ಸೃಷ್ಟಿಯ
ನಿಯಮಿಸಿ ಆಜ್ಞೆಯ ವಿಧಿಸುವನು
ಯಂತ್ರ ವಸ್ತುಗಳಾಗಿಹೆವೆಲ್ಲರು
ಆ ವಿಧಿ ಶಾಸನದಡಿಯೊಳಗೆ

ಮಾನುಷ ಯತ್ನಕೆ, ಸೌಖ್ಯಕೆ ದೈವವು
ನಾನಾ ಘಾತವ ತಂದಂತೆ
ಬಾನೊಳು ಸುಳಿಯುತ ಸುಖಿಸವ ನನ್ನನು
ಕ್ರಾಂತಿಯು ಕ್ಷಣದೊಳು ಕೆಡಿಸಿಹುದು

ವಿಧಿ ನಿಯಮದ ಒಂದಾಜ್ಞೆಯು ಮೀರದೆ
ಸಲಿಸುತ ಬಂದಿದೆ ಯುಗ ಯುಗವು
ನಾವದನೆದುರಿಸಲಾಗದು ಅಮ್ಮಾ
ಜನಕಜೆ ಎಂದನು ದಿನಕರನು
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...