Home / ಕವನ / ಕವಿತೆ / ಗಂಗಜ್ಜಿ

ಗಂಗಜ್ಜಿ

ಜಾಣೆ ಗಂಗವ್ವನ ಮನೆಯ ಹೊಕ್ಕು ನೋಡು
ನೀನೊಂದು ಕ್ಷಣಕಾಲವಲ್ಲಿ ಕೂಡು
ಜ್ಞಾನಮಯದಾನಂದ ಶಾಂತಿಮಯದಾನಂದ
ತಾನೆ ತಾನಾಗಿಹುದು ಪುಣ್ಯವಂತಳ ಬೀಡು

ಕಟ್ಟಿಹಾಕು ನಿನ್ನ ಮನಸು ಒಳಗೆ, ಒಂದು
ಕೆಟ್ಟ ಯೋಚನೆ ಮಾಡದಂತೆ ಘಳಿಗೆ
ಸೊಟ್ಟಮೋರೆಯ ಮಾತು, ತಳ್ಳಿಬಳ್ಳಿಯ ಮಾತು
ಎಳ್ಳಷ್ಟು ಸೇರದು ನಮ್ಮ ಗಂಗವ್ವನಿಗೆ

ಪೂರ್ಣವಿಕಸನವಾದ ಕುಸುಮದಂತೆ, ನಮ್ಮ
ಅಜ್ಜಿ ಗಂಗವ್ವನ ಮನಸು ಅಂತೆ
ಮುಸಿ ಮುಸಿ ನಸುನಗುತ ಹಸನಾಗಿ ನುಡಿಯುವಳು
ಬಂದವರನಾದರಿಸಿ ಕುಶಲವೇ ನೀವೆಂದು

ಕರ್ಮಯೋಗವನರಿತು ಬಾಳುತಿಹಳು ಜಗದ
ಮರ್ಮಂಗಳನು ತಿಳಿದು ಸುಮ್ಮನಿಹಳು
ಕ್ಷತ್ರಿಯರ ಕುಲದವಳು ವೀರಪುತ್ರರ ಮಗಳು
ಧೈರ್‍ಯವಂತಳು ಅಜ್ಜಿ ನುರಿತವಳು ಸಾಸಿಗಳು

ಹಂಗಿನನ್ನವನುಂಬ ಪ್ರಾಣಿಯಲ್ಲಾ ನಮ್ಮ
ಗಂಗಜ್ಜಿ ವೃಥ ಕಾಲ ಕಳೆವಳಲ್ಲ
ಅತ್ತಿತ್ತ ತಿರುಗದೆ ಚಿತ್ರಕಲೆಗಳ ರಚಿಸಿ
ಉತ್ತಮರಿಗದನಿತ್ತು ಕಾಲಕಳೆಯುವಳೆಲ್ಲ

ಚೌರಿ ಕೂದಲು ತುರುಬು ಸೃಷ್ಟಿಯಂತೆ, ದಿವ್ಯ
ಪಾರಿಜಾತದ ಪುಷ್ಪವೃಕ್ಷವಂತೆ
ಸಕ್ಕರಿಯ ಸರವಂತೆ, ಮಕ್ಕಳಿಗೆ ಮೆಚ್ಚಂತೆ
ಸೂಕ್ಷ್ಮಪಾಕದಿ ಮಾಳ್ಪ ಅಚ್ಚು ಕೆಲಸಗಳಂತೆ

ಚೋರ ಕೃಷ್ಣನು ಸೀರೆ ಕದ್ದುದಂತೆ, ಅಲ್ಲಿ
ಗೋಪಿಯರು ಕೈಮುಗಿದು ನಿಂತುದಂತೆ
ಶಂಕರನ ಗುಡಿಯಂತೆ, ಪೂಜೆ ವಸ್ತುಗಳಂತೆ
ಮೈಸೂರು ಮಲ್ಲಿಗೆಯ ಹಾರಗಳ ಸೊಗಸಂತೆ

ಶೃಂಗಾರವಾಗಿಹುದು ಕೌಶಲ್ಯವು ಅಲ್ಲಿ
ಸ್ವಾಮಿ ಪೂಜೆಗಳೊಡನೆ ಪುಣ್ಯಕಥೆಯು
ಸಂಗೀತ ಸಾಹಿತ್ಯ ಚಿತ್ರ ಶಿಲ್ಪದ ಕಲೆಯು
ತುಂಬಿ ತುಳುಕುತಲಿಹುದು ಮಾತಿನೊಳು ರಸಿಕತೆಯು

ಸದ್ದು ಸಪ್ಪುಳ ಇಲ್ಲದಂತೆ ಪೋದೆ ನಮ್ಮ
ಅಜ್ಜಿ ಗಂಗವ್ವನಿಗೆ ಪ್ರೇಮವಾದೆ
ಮುದ್ದು ಸುರಿಸುತ ಅಲ್ಲಿ ನಾನೊಬ್ಬ ಮಗಳಾದೆ
ಬುದ್ಧಿವಂತಳ ಕಂಡು ಬೆಪ್ಪಾದೆ ಬೆರಗಾದೆ!

ಹಡೆದವ್ವ ದಿನದಿನಕೆ ಮರೆಯುತಿಹಳು, ನಮ್ಮ
ಗಂಗಜ್ಜಿ ಮಾಡಿದಳು ಇಂತು ಮರುಳು
ನನ್ನಮ್ಮ ಎಂದು ಬಹುಲಾಲನೆಯ ಮಾಡುವಳು
ಬಾ ಬಾರೆ ಜನಕಜೇ ಉಣ್ಣೆಂದು ಕರೆಯುವಳು
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...