Home / ಕವನ / ಕವಿತೆ / ಗಂಗಜ್ಜಿ

ಗಂಗಜ್ಜಿ

ಜಾಣೆ ಗಂಗವ್ವನ ಮನೆಯ ಹೊಕ್ಕು ನೋಡು
ನೀನೊಂದು ಕ್ಷಣಕಾಲವಲ್ಲಿ ಕೂಡು
ಜ್ಞಾನಮಯದಾನಂದ ಶಾಂತಿಮಯದಾನಂದ
ತಾನೆ ತಾನಾಗಿಹುದು ಪುಣ್ಯವಂತಳ ಬೀಡು

ಕಟ್ಟಿಹಾಕು ನಿನ್ನ ಮನಸು ಒಳಗೆ, ಒಂದು
ಕೆಟ್ಟ ಯೋಚನೆ ಮಾಡದಂತೆ ಘಳಿಗೆ
ಸೊಟ್ಟಮೋರೆಯ ಮಾತು, ತಳ್ಳಿಬಳ್ಳಿಯ ಮಾತು
ಎಳ್ಳಷ್ಟು ಸೇರದು ನಮ್ಮ ಗಂಗವ್ವನಿಗೆ

ಪೂರ್ಣವಿಕಸನವಾದ ಕುಸುಮದಂತೆ, ನಮ್ಮ
ಅಜ್ಜಿ ಗಂಗವ್ವನ ಮನಸು ಅಂತೆ
ಮುಸಿ ಮುಸಿ ನಸುನಗುತ ಹಸನಾಗಿ ನುಡಿಯುವಳು
ಬಂದವರನಾದರಿಸಿ ಕುಶಲವೇ ನೀವೆಂದು

ಕರ್ಮಯೋಗವನರಿತು ಬಾಳುತಿಹಳು ಜಗದ
ಮರ್ಮಂಗಳನು ತಿಳಿದು ಸುಮ್ಮನಿಹಳು
ಕ್ಷತ್ರಿಯರ ಕುಲದವಳು ವೀರಪುತ್ರರ ಮಗಳು
ಧೈರ್‍ಯವಂತಳು ಅಜ್ಜಿ ನುರಿತವಳು ಸಾಸಿಗಳು

ಹಂಗಿನನ್ನವನುಂಬ ಪ್ರಾಣಿಯಲ್ಲಾ ನಮ್ಮ
ಗಂಗಜ್ಜಿ ವೃಥ ಕಾಲ ಕಳೆವಳಲ್ಲ
ಅತ್ತಿತ್ತ ತಿರುಗದೆ ಚಿತ್ರಕಲೆಗಳ ರಚಿಸಿ
ಉತ್ತಮರಿಗದನಿತ್ತು ಕಾಲಕಳೆಯುವಳೆಲ್ಲ

ಚೌರಿ ಕೂದಲು ತುರುಬು ಸೃಷ್ಟಿಯಂತೆ, ದಿವ್ಯ
ಪಾರಿಜಾತದ ಪುಷ್ಪವೃಕ್ಷವಂತೆ
ಸಕ್ಕರಿಯ ಸರವಂತೆ, ಮಕ್ಕಳಿಗೆ ಮೆಚ್ಚಂತೆ
ಸೂಕ್ಷ್ಮಪಾಕದಿ ಮಾಳ್ಪ ಅಚ್ಚು ಕೆಲಸಗಳಂತೆ

ಚೋರ ಕೃಷ್ಣನು ಸೀರೆ ಕದ್ದುದಂತೆ, ಅಲ್ಲಿ
ಗೋಪಿಯರು ಕೈಮುಗಿದು ನಿಂತುದಂತೆ
ಶಂಕರನ ಗುಡಿಯಂತೆ, ಪೂಜೆ ವಸ್ತುಗಳಂತೆ
ಮೈಸೂರು ಮಲ್ಲಿಗೆಯ ಹಾರಗಳ ಸೊಗಸಂತೆ

ಶೃಂಗಾರವಾಗಿಹುದು ಕೌಶಲ್ಯವು ಅಲ್ಲಿ
ಸ್ವಾಮಿ ಪೂಜೆಗಳೊಡನೆ ಪುಣ್ಯಕಥೆಯು
ಸಂಗೀತ ಸಾಹಿತ್ಯ ಚಿತ್ರ ಶಿಲ್ಪದ ಕಲೆಯು
ತುಂಬಿ ತುಳುಕುತಲಿಹುದು ಮಾತಿನೊಳು ರಸಿಕತೆಯು

ಸದ್ದು ಸಪ್ಪುಳ ಇಲ್ಲದಂತೆ ಪೋದೆ ನಮ್ಮ
ಅಜ್ಜಿ ಗಂಗವ್ವನಿಗೆ ಪ್ರೇಮವಾದೆ
ಮುದ್ದು ಸುರಿಸುತ ಅಲ್ಲಿ ನಾನೊಬ್ಬ ಮಗಳಾದೆ
ಬುದ್ಧಿವಂತಳ ಕಂಡು ಬೆಪ್ಪಾದೆ ಬೆರಗಾದೆ!

ಹಡೆದವ್ವ ದಿನದಿನಕೆ ಮರೆಯುತಿಹಳು, ನಮ್ಮ
ಗಂಗಜ್ಜಿ ಮಾಡಿದಳು ಇಂತು ಮರುಳು
ನನ್ನಮ್ಮ ಎಂದು ಬಹುಲಾಲನೆಯ ಮಾಡುವಳು
ಬಾ ಬಾರೆ ಜನಕಜೇ ಉಣ್ಣೆಂದು ಕರೆಯುವಳು
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...