Home / ಕವನ / ಕವಿತೆ / ಗಂಗಜ್ಜಿ

ಗಂಗಜ್ಜಿ

ಜಾಣೆ ಗಂಗವ್ವನ ಮನೆಯ ಹೊಕ್ಕು ನೋಡು
ನೀನೊಂದು ಕ್ಷಣಕಾಲವಲ್ಲಿ ಕೂಡು
ಜ್ಞಾನಮಯದಾನಂದ ಶಾಂತಿಮಯದಾನಂದ
ತಾನೆ ತಾನಾಗಿಹುದು ಪುಣ್ಯವಂತಳ ಬೀಡು

ಕಟ್ಟಿಹಾಕು ನಿನ್ನ ಮನಸು ಒಳಗೆ, ಒಂದು
ಕೆಟ್ಟ ಯೋಚನೆ ಮಾಡದಂತೆ ಘಳಿಗೆ
ಸೊಟ್ಟಮೋರೆಯ ಮಾತು, ತಳ್ಳಿಬಳ್ಳಿಯ ಮಾತು
ಎಳ್ಳಷ್ಟು ಸೇರದು ನಮ್ಮ ಗಂಗವ್ವನಿಗೆ

ಪೂರ್ಣವಿಕಸನವಾದ ಕುಸುಮದಂತೆ, ನಮ್ಮ
ಅಜ್ಜಿ ಗಂಗವ್ವನ ಮನಸು ಅಂತೆ
ಮುಸಿ ಮುಸಿ ನಸುನಗುತ ಹಸನಾಗಿ ನುಡಿಯುವಳು
ಬಂದವರನಾದರಿಸಿ ಕುಶಲವೇ ನೀವೆಂದು

ಕರ್ಮಯೋಗವನರಿತು ಬಾಳುತಿಹಳು ಜಗದ
ಮರ್ಮಂಗಳನು ತಿಳಿದು ಸುಮ್ಮನಿಹಳು
ಕ್ಷತ್ರಿಯರ ಕುಲದವಳು ವೀರಪುತ್ರರ ಮಗಳು
ಧೈರ್‍ಯವಂತಳು ಅಜ್ಜಿ ನುರಿತವಳು ಸಾಸಿಗಳು

ಹಂಗಿನನ್ನವನುಂಬ ಪ್ರಾಣಿಯಲ್ಲಾ ನಮ್ಮ
ಗಂಗಜ್ಜಿ ವೃಥ ಕಾಲ ಕಳೆವಳಲ್ಲ
ಅತ್ತಿತ್ತ ತಿರುಗದೆ ಚಿತ್ರಕಲೆಗಳ ರಚಿಸಿ
ಉತ್ತಮರಿಗದನಿತ್ತು ಕಾಲಕಳೆಯುವಳೆಲ್ಲ

ಚೌರಿ ಕೂದಲು ತುರುಬು ಸೃಷ್ಟಿಯಂತೆ, ದಿವ್ಯ
ಪಾರಿಜಾತದ ಪುಷ್ಪವೃಕ್ಷವಂತೆ
ಸಕ್ಕರಿಯ ಸರವಂತೆ, ಮಕ್ಕಳಿಗೆ ಮೆಚ್ಚಂತೆ
ಸೂಕ್ಷ್ಮಪಾಕದಿ ಮಾಳ್ಪ ಅಚ್ಚು ಕೆಲಸಗಳಂತೆ

ಚೋರ ಕೃಷ್ಣನು ಸೀರೆ ಕದ್ದುದಂತೆ, ಅಲ್ಲಿ
ಗೋಪಿಯರು ಕೈಮುಗಿದು ನಿಂತುದಂತೆ
ಶಂಕರನ ಗುಡಿಯಂತೆ, ಪೂಜೆ ವಸ್ತುಗಳಂತೆ
ಮೈಸೂರು ಮಲ್ಲಿಗೆಯ ಹಾರಗಳ ಸೊಗಸಂತೆ

ಶೃಂಗಾರವಾಗಿಹುದು ಕೌಶಲ್ಯವು ಅಲ್ಲಿ
ಸ್ವಾಮಿ ಪೂಜೆಗಳೊಡನೆ ಪುಣ್ಯಕಥೆಯು
ಸಂಗೀತ ಸಾಹಿತ್ಯ ಚಿತ್ರ ಶಿಲ್ಪದ ಕಲೆಯು
ತುಂಬಿ ತುಳುಕುತಲಿಹುದು ಮಾತಿನೊಳು ರಸಿಕತೆಯು

ಸದ್ದು ಸಪ್ಪುಳ ಇಲ್ಲದಂತೆ ಪೋದೆ ನಮ್ಮ
ಅಜ್ಜಿ ಗಂಗವ್ವನಿಗೆ ಪ್ರೇಮವಾದೆ
ಮುದ್ದು ಸುರಿಸುತ ಅಲ್ಲಿ ನಾನೊಬ್ಬ ಮಗಳಾದೆ
ಬುದ್ಧಿವಂತಳ ಕಂಡು ಬೆಪ್ಪಾದೆ ಬೆರಗಾದೆ!

ಹಡೆದವ್ವ ದಿನದಿನಕೆ ಮರೆಯುತಿಹಳು, ನಮ್ಮ
ಗಂಗಜ್ಜಿ ಮಾಡಿದಳು ಇಂತು ಮರುಳು
ನನ್ನಮ್ಮ ಎಂದು ಬಹುಲಾಲನೆಯ ಮಾಡುವಳು
ಬಾ ಬಾರೆ ಜನಕಜೇ ಉಣ್ಣೆಂದು ಕರೆಯುವಳು
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...