Home / ಕವನ / ಕವಿತೆ / ಯಾತ್ರಿಕ

ಯಾತ್ರಿಕ

ಜಡ ಮಾನಸವ ತಟ್ಟಿ
ಚೇತನವ ಬಿತ್ತರಿಸಿ
ಸಾಗುತಿಹ ಓ ಯಾತ್ರಿಕ

ತಾಳಣ್ಣ ನಾ ಬರುವೆ
ಹಿಂದಿಷ್ಟು ಸೋತಿರುವೆ
ದಿಬ್ಬಗಳ ಹಾಯ್ವತನಕ

ಮುಳ್ಳೆಷ್ಟೊ ತುಳಿದಿಹೆನು
ಕಲ್ಲೆಷ್ಟೊ ಎಡವಿದೆನು
ಹಸಿವಿನಿಂ ಸೊರಗುತಿಹೆನು

ನಿಲ್ಲಣ್ಣ ನಿಲ್ಲಣ್ಣ
ನಿನ್ನಂಥ ಪಯಣಿಗರ
ಹಾದಿಯನೆ ಕಾದಿದ್ದೆನು

ಕೇಳಿಸಿತು ಹುಚ್ಚು ನುಡಿ
ಕಾಣಿಸಿತು ಹುಚ್ಚು ನಡೆ
ಓಡೋಡಿ ನಾ ಬಂದೆನು

ಅಕ್ಕರೆಯ ಈ ನಿನ್ನ
ಮಾತೊಂದೆ ಸಾಕಣ್ಣ
ಬೇಡೆ ಮತ್ತೊಂದೇನನು

ಒಳ್ಳ ಮನವುಳ್ಳವನು
ಎಲ್ಲರನು ನಲಿಸುವನು
ಮನಗಂಡೆ ಕರುಣಿ ನೀನು

ಕಲ್ಲು ಕರಗಿಸುವಂಥ
ಅದ್ಭುತದ ಬಲವೊಂದು
ತುಂಬಿಹುದು ನಿನ್ನೊಳೇನೊ

ಜೀವಿ ಜೀವಿಯ ಬಯಸಿ
ಬಾಯ್ಬಿಡುವ ಮಿಡುಕುಗುಣ
ವೆನ್ನೊಳಗೆ ಅಣಗುವತನಕ

ಸಾಯಮಾಗಿರು ಎನಗೆ
ನಿನ್ನೊಡನೆ ನಾ ಬರುವೆ
ಸ್ವಸ್ಥಾನ ಸಿಗುವ ತನಕ

ಹೊತ್ತೇರಿ ಬರುತಿಹುದು
ಸುತ್ತಲೂ ಸುಡುತಿಹುದು
ಮರುಭೂಮಿ ನಾ ಬಂದುದು

ಕತ್ತಲಾಗುವ ಮುನ್ನ
ಸುತ್ತಿ ಸಂತೆಯನಣ್ಣ
ಬುತ್ತಿ ಉಂಬುವ ತಂದುದು

ಕುದಿಯೊಳಗೆ ಈ ಮರದ
ನೆಳಲೆಷ್ಟು ತಣುವಿಹುದು
ಈಶಕೃಪೆ ಹರಡಿದಂತೆ

ಚಣಕಾಲ ವಿಶ್ರಮಿಸಿ
ಅರುಹುವೆನು ನಿನಗೆನ್ನ
ಗತಪಯಣಗಳ ಭೀಕರ

ನಾ ಬಿದ್ದ ಕೂಪಗಳ
ನಾ ಗೆದ್ದ ಕೋಟೆಗಳ
ಸೊದೆಯನೆಲ್ಲವ ಪೇಳ್ವೆನು

ಕುರುಡು ಸಡಗರದಿಂದ
ಮುಳುಗಿ ತೇಲುತ ಬಂದ
ಹರುಕು ಮುರುಕಿನ ಕಥೆಯನು

ನೀನೆತ್ತಣಿಂ ಬಂದೆ
ಎಲ್ಲಿಗಿದೆ ಗುರಿ ಮುಂದೆ
ಏನೇನ ಕಂಡೆ ಹಿಂದೆ?

ಮಾನವರ ಕೃತ್ಯಮೇನ್?
ಜಗದೊಡೆಯನಿಚ್ಛೆಯೇನ್?
ಅರುಹು ನೀನರಿತುದಿಂದು

ಅರಿತವರ ನುರಿತವರ
ಒಡನಾಟವಂ ಬಯಸಿ
ನಾನಿತ್ತ ಪೊರಮಟ್ಟೆನು

ನಿರ್ಮಲದ ನಿಶ್ಚಲದ
ಕಾಂತಿಮಯದೈಸಿರಿಯ
ಕರುಣಿಸನು ಪರಮಾತ್ಮನು

ಕಣ್ ಕಟ್ಟಿ ಆಡಿಸುವ
ಕಪಟನಾಟಕ ಸೂತ್ರಿ
ಕಂಡನೇ ನಿನ ದೃಷ್ಟಿಗೆ?

ಕಾಣದಿಹನಾ ಕಳ್ಳ
ಇಟ್ಟಿಹನು ಬೇಗುದಿಯ
ಮಾಯೆಯನು ಬಿತ್ತಿ ಒಳಗೆ

ಅವನಿರುವು ಅಂತಿರಲಿ
ಅವನ ಕೃತಿ ಎಂತಿಹುದೊ
ನೋಡಿದೆಯ ಈ ಶಕ್ತಿಯ?

ಬುವಿ ಬಾನ ಮೂಸೆಯೊಳು
ಜೀವರಾಶಿಯ ಸೃಜಿಸಿ
ತುಂಬಿಹನು ಜಿಜ್ಞಾಸೆಯ

ಮದ ಮತ್ಸರಗಳೇನು
ಮಾಯಜಾಲಗಳೇನು
ನನದೆಂಬ ಭ್ರಾಂತಿಯೇನು

ಕಾಂಬುದೆಲ್ಲವು ಈತ
ನಿನ ರೂಪವೇ ಎಂಬ
ಜ್ಞಾನಿಯೇ ಆನಂದನು

ಆನಂದವಂ ನಿರುತ
ಅನುಭವಿಸುವನು ಜ್ಞಾನಿ
ಅಜ್ಞಾನಿಗೆ ಗತಿಯದೇನು?

ಪಾಮರತ್ವವ ಬಿತ್ತಿ
ಪೈರು ಬೆಳಸಿಹನಿಲ್ಲಿ
ಕುಹುಕನೇಂ ಪರಮ ಶಿವನು?

ಅಲ್ಲದೊಡೆ ಜೀವನಿಗೆ
ಸ್ವಾತಂತ್ರ್‍ಯವುಂಟೇನು
ಊಳಿಗದಿ ತೊಡಗಿದವನು!

ವಿಧಿಯಂತ್ರ ಸೆಳೆದತ್ತ
ಬುದ್ಧಿ, ಮನ ಓಡುತಿರೆ
ಜೀವಿ ತಾನೇಗೈವನು?

ಒಡೆಯಲಾರದ ಒಗಟೆ
ಎಷ್ಟೊ ಉಳಿದಿಹುದಿಂತು
ಬೆಳೆಯುತಿದೆ ಗ್ರಂಥರಾಸಿ

ನುಂಗಲಾರದ ತುತ್ತ
ನೂಕಿದರೆ ಫಲವೇನು?
ಶ್ರಮೆಗೊಳದ ಮಿತವೆ ಲೇಸು

ಅಂತಿರಲಿ ಆ ಮಾತು
ಅವನಿರಲು ಎಮಗೇಕೆ?
ನೀ ದೊರೆತುದೆನ್ನ ಪುಣ್ಯ

ನೆಳಲೊಳಗೆ ನಿನ ಜೊತೆಗೆ
ಮೆಲ್ಲ ಮೆಲ್ಲನೆ ನಡೆವೆ
ಸೊಗವಹುದು ಪಯಣವಿನ್ನು

ಒಬ್ಬರೊಬ್ಬರ ಹಿಂಡಿ
ಈರ್ಷ್ಯೆಯಿಂದುರಿಯದಿಹ
ಹೊಸ ರಾಜ್ಯದೊಳಗೆ ಸುಳಿದು

ಕಂಡುದನು ಬಣ್ಣಿಸುತ
ಕಾಣದುದ ಶೋಧಿಸುತ
ನಡೆವ ನಾವ್ ನಕ್ಕುನಲಿದು

ಆ ಜಾಣನದ್ಭುತದ
ಕೌಶಲವ ಪರಿಕಿಸುವ!
ಶೃಂಗಾರಮೆಂತಿಪ್ಪುದೊ!

ಭೀಭತ್ಸ ಶರಧಿಯಂ
ಮಥಿಸಿ ನೋಡುವ ಅಣ್ಣ
ಹಾಸಾದಮೇಮ್ ದೊರೆವುದೊ!

ನವರಸಗಳೆಲ್ಲವಂ
ಒರೆಗಿಟ್ಟು ಶೋಧಿಸುವ
ಈ ಬುದ್ಧಿ ಯಂತ್ರದೊಳಗೆ

ಜೀವಿ ತಾಂ ಬಯಸಿರುವ
ತಿಳಿಮಧುವನೀಕ್ಷಿಸುವ
ಗುಪ್ತಸಂಧಾನದೊಳಗೆ

ಗೀತೆಯದು ಬೋಧಿಸುವ
ಸಾಹಸದ ಕಾರ್ಯದೊಳ್
ಧೈರ್‍ಯದಿಂ ಮುನ್ನುಗ್ಗುವ

ಮುರವೈರಿ ತೋರಿಸಿದ
ವಿಶ್ವರೂಪದ ಧೃತಿಯ
ನಾವೊಮಮೆ ಕಂಡುಬರುವ

ಇಲ್ಲಿರುವ ಚೆಲುವೇನೊ?
ಅಲ್ಲಿರುವ ತಿಳಿವೇನೊ?
ಎಲ್ಲವಂ ಪರಿಶೋಧಿಸಿ

ನೀನರಿತ ವಿಷಯಗಳ
ತಂಗಿ ಜನಕಜೆಗರುಹಿ
ಸಂತಸದಿ ಯಾತ್ರೆ ನಡೆಸು!
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...