ಯಾತ್ರಿಕ

ಜಡ ಮಾನಸವ ತಟ್ಟಿ
ಚೇತನವ ಬಿತ್ತರಿಸಿ
ಸಾಗುತಿಹ ಓ ಯಾತ್ರಿಕ

ತಾಳಣ್ಣ ನಾ ಬರುವೆ
ಹಿಂದಿಷ್ಟು ಸೋತಿರುವೆ
ದಿಬ್ಬಗಳ ಹಾಯ್ವತನಕ

ಮುಳ್ಳೆಷ್ಟೊ ತುಳಿದಿಹೆನು
ಕಲ್ಲೆಷ್ಟೊ ಎಡವಿದೆನು
ಹಸಿವಿನಿಂ ಸೊರಗುತಿಹೆನು

ನಿಲ್ಲಣ್ಣ ನಿಲ್ಲಣ್ಣ
ನಿನ್ನಂಥ ಪಯಣಿಗರ
ಹಾದಿಯನೆ ಕಾದಿದ್ದೆನು

ಕೇಳಿಸಿತು ಹುಚ್ಚು ನುಡಿ
ಕಾಣಿಸಿತು ಹುಚ್ಚು ನಡೆ
ಓಡೋಡಿ ನಾ ಬಂದೆನು

ಅಕ್ಕರೆಯ ಈ ನಿನ್ನ
ಮಾತೊಂದೆ ಸಾಕಣ್ಣ
ಬೇಡೆ ಮತ್ತೊಂದೇನನು

ಒಳ್ಳ ಮನವುಳ್ಳವನು
ಎಲ್ಲರನು ನಲಿಸುವನು
ಮನಗಂಡೆ ಕರುಣಿ ನೀನು

ಕಲ್ಲು ಕರಗಿಸುವಂಥ
ಅದ್ಭುತದ ಬಲವೊಂದು
ತುಂಬಿಹುದು ನಿನ್ನೊಳೇನೊ

ಜೀವಿ ಜೀವಿಯ ಬಯಸಿ
ಬಾಯ್ಬಿಡುವ ಮಿಡುಕುಗುಣ
ವೆನ್ನೊಳಗೆ ಅಣಗುವತನಕ

ಸಾಯಮಾಗಿರು ಎನಗೆ
ನಿನ್ನೊಡನೆ ನಾ ಬರುವೆ
ಸ್ವಸ್ಥಾನ ಸಿಗುವ ತನಕ

ಹೊತ್ತೇರಿ ಬರುತಿಹುದು
ಸುತ್ತಲೂ ಸುಡುತಿಹುದು
ಮರುಭೂಮಿ ನಾ ಬಂದುದು

ಕತ್ತಲಾಗುವ ಮುನ್ನ
ಸುತ್ತಿ ಸಂತೆಯನಣ್ಣ
ಬುತ್ತಿ ಉಂಬುವ ತಂದುದು

ಕುದಿಯೊಳಗೆ ಈ ಮರದ
ನೆಳಲೆಷ್ಟು ತಣುವಿಹುದು
ಈಶಕೃಪೆ ಹರಡಿದಂತೆ

ಚಣಕಾಲ ವಿಶ್ರಮಿಸಿ
ಅರುಹುವೆನು ನಿನಗೆನ್ನ
ಗತಪಯಣಗಳ ಭೀಕರ

ನಾ ಬಿದ್ದ ಕೂಪಗಳ
ನಾ ಗೆದ್ದ ಕೋಟೆಗಳ
ಸೊದೆಯನೆಲ್ಲವ ಪೇಳ್ವೆನು

ಕುರುಡು ಸಡಗರದಿಂದ
ಮುಳುಗಿ ತೇಲುತ ಬಂದ
ಹರುಕು ಮುರುಕಿನ ಕಥೆಯನು

ನೀನೆತ್ತಣಿಂ ಬಂದೆ
ಎಲ್ಲಿಗಿದೆ ಗುರಿ ಮುಂದೆ
ಏನೇನ ಕಂಡೆ ಹಿಂದೆ?

ಮಾನವರ ಕೃತ್ಯಮೇನ್?
ಜಗದೊಡೆಯನಿಚ್ಛೆಯೇನ್?
ಅರುಹು ನೀನರಿತುದಿಂದು

ಅರಿತವರ ನುರಿತವರ
ಒಡನಾಟವಂ ಬಯಸಿ
ನಾನಿತ್ತ ಪೊರಮಟ್ಟೆನು

ನಿರ್ಮಲದ ನಿಶ್ಚಲದ
ಕಾಂತಿಮಯದೈಸಿರಿಯ
ಕರುಣಿಸನು ಪರಮಾತ್ಮನು

ಕಣ್ ಕಟ್ಟಿ ಆಡಿಸುವ
ಕಪಟನಾಟಕ ಸೂತ್ರಿ
ಕಂಡನೇ ನಿನ ದೃಷ್ಟಿಗೆ?

ಕಾಣದಿಹನಾ ಕಳ್ಳ
ಇಟ್ಟಿಹನು ಬೇಗುದಿಯ
ಮಾಯೆಯನು ಬಿತ್ತಿ ಒಳಗೆ

ಅವನಿರುವು ಅಂತಿರಲಿ
ಅವನ ಕೃತಿ ಎಂತಿಹುದೊ
ನೋಡಿದೆಯ ಈ ಶಕ್ತಿಯ?

ಬುವಿ ಬಾನ ಮೂಸೆಯೊಳು
ಜೀವರಾಶಿಯ ಸೃಜಿಸಿ
ತುಂಬಿಹನು ಜಿಜ್ಞಾಸೆಯ

ಮದ ಮತ್ಸರಗಳೇನು
ಮಾಯಜಾಲಗಳೇನು
ನನದೆಂಬ ಭ್ರಾಂತಿಯೇನು

ಕಾಂಬುದೆಲ್ಲವು ಈತ
ನಿನ ರೂಪವೇ ಎಂಬ
ಜ್ಞಾನಿಯೇ ಆನಂದನು

ಆನಂದವಂ ನಿರುತ
ಅನುಭವಿಸುವನು ಜ್ಞಾನಿ
ಅಜ್ಞಾನಿಗೆ ಗತಿಯದೇನು?

ಪಾಮರತ್ವವ ಬಿತ್ತಿ
ಪೈರು ಬೆಳಸಿಹನಿಲ್ಲಿ
ಕುಹುಕನೇಂ ಪರಮ ಶಿವನು?

ಅಲ್ಲದೊಡೆ ಜೀವನಿಗೆ
ಸ್ವಾತಂತ್ರ್‍ಯವುಂಟೇನು
ಊಳಿಗದಿ ತೊಡಗಿದವನು!

ವಿಧಿಯಂತ್ರ ಸೆಳೆದತ್ತ
ಬುದ್ಧಿ, ಮನ ಓಡುತಿರೆ
ಜೀವಿ ತಾನೇಗೈವನು?

ಒಡೆಯಲಾರದ ಒಗಟೆ
ಎಷ್ಟೊ ಉಳಿದಿಹುದಿಂತು
ಬೆಳೆಯುತಿದೆ ಗ್ರಂಥರಾಸಿ

ನುಂಗಲಾರದ ತುತ್ತ
ನೂಕಿದರೆ ಫಲವೇನು?
ಶ್ರಮೆಗೊಳದ ಮಿತವೆ ಲೇಸು

ಅಂತಿರಲಿ ಆ ಮಾತು
ಅವನಿರಲು ಎಮಗೇಕೆ?
ನೀ ದೊರೆತುದೆನ್ನ ಪುಣ್ಯ

ನೆಳಲೊಳಗೆ ನಿನ ಜೊತೆಗೆ
ಮೆಲ್ಲ ಮೆಲ್ಲನೆ ನಡೆವೆ
ಸೊಗವಹುದು ಪಯಣವಿನ್ನು

ಒಬ್ಬರೊಬ್ಬರ ಹಿಂಡಿ
ಈರ್ಷ್ಯೆಯಿಂದುರಿಯದಿಹ
ಹೊಸ ರಾಜ್ಯದೊಳಗೆ ಸುಳಿದು

ಕಂಡುದನು ಬಣ್ಣಿಸುತ
ಕಾಣದುದ ಶೋಧಿಸುತ
ನಡೆವ ನಾವ್ ನಕ್ಕುನಲಿದು

ಆ ಜಾಣನದ್ಭುತದ
ಕೌಶಲವ ಪರಿಕಿಸುವ!
ಶೃಂಗಾರಮೆಂತಿಪ್ಪುದೊ!

ಭೀಭತ್ಸ ಶರಧಿಯಂ
ಮಥಿಸಿ ನೋಡುವ ಅಣ್ಣ
ಹಾಸಾದಮೇಮ್ ದೊರೆವುದೊ!

ನವರಸಗಳೆಲ್ಲವಂ
ಒರೆಗಿಟ್ಟು ಶೋಧಿಸುವ
ಈ ಬುದ್ಧಿ ಯಂತ್ರದೊಳಗೆ

ಜೀವಿ ತಾಂ ಬಯಸಿರುವ
ತಿಳಿಮಧುವನೀಕ್ಷಿಸುವ
ಗುಪ್ತಸಂಧಾನದೊಳಗೆ

ಗೀತೆಯದು ಬೋಧಿಸುವ
ಸಾಹಸದ ಕಾರ್ಯದೊಳ್
ಧೈರ್‍ಯದಿಂ ಮುನ್ನುಗ್ಗುವ

ಮುರವೈರಿ ತೋರಿಸಿದ
ವಿಶ್ವರೂಪದ ಧೃತಿಯ
ನಾವೊಮಮೆ ಕಂಡುಬರುವ

ಇಲ್ಲಿರುವ ಚೆಲುವೇನೊ?
ಅಲ್ಲಿರುವ ತಿಳಿವೇನೊ?
ಎಲ್ಲವಂ ಪರಿಶೋಧಿಸಿ

ನೀನರಿತ ವಿಷಯಗಳ
ತಂಗಿ ಜನಕಜೆಗರುಹಿ
ಸಂತಸದಿ ಯಾತ್ರೆ ನಡೆಸು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾರು ಜೀವವೇ ಯಾರು ಬಂದವರು
Next post Navy man ತನ್ನ ಹೆಂಡತಿಗೆ ಬರೆದ ಪತ್ರ

ಸಣ್ಣ ಕತೆ

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…