ಯಾತ್ರಿಕ

ಜಡ ಮಾನಸವ ತಟ್ಟಿ
ಚೇತನವ ಬಿತ್ತರಿಸಿ
ಸಾಗುತಿಹ ಓ ಯಾತ್ರಿಕ

ತಾಳಣ್ಣ ನಾ ಬರುವೆ
ಹಿಂದಿಷ್ಟು ಸೋತಿರುವೆ
ದಿಬ್ಬಗಳ ಹಾಯ್ವತನಕ

ಮುಳ್ಳೆಷ್ಟೊ ತುಳಿದಿಹೆನು
ಕಲ್ಲೆಷ್ಟೊ ಎಡವಿದೆನು
ಹಸಿವಿನಿಂ ಸೊರಗುತಿಹೆನು

ನಿಲ್ಲಣ್ಣ ನಿಲ್ಲಣ್ಣ
ನಿನ್ನಂಥ ಪಯಣಿಗರ
ಹಾದಿಯನೆ ಕಾದಿದ್ದೆನು

ಕೇಳಿಸಿತು ಹುಚ್ಚು ನುಡಿ
ಕಾಣಿಸಿತು ಹುಚ್ಚು ನಡೆ
ಓಡೋಡಿ ನಾ ಬಂದೆನು

ಅಕ್ಕರೆಯ ಈ ನಿನ್ನ
ಮಾತೊಂದೆ ಸಾಕಣ್ಣ
ಬೇಡೆ ಮತ್ತೊಂದೇನನು

ಒಳ್ಳ ಮನವುಳ್ಳವನು
ಎಲ್ಲರನು ನಲಿಸುವನು
ಮನಗಂಡೆ ಕರುಣಿ ನೀನು

ಕಲ್ಲು ಕರಗಿಸುವಂಥ
ಅದ್ಭುತದ ಬಲವೊಂದು
ತುಂಬಿಹುದು ನಿನ್ನೊಳೇನೊ

ಜೀವಿ ಜೀವಿಯ ಬಯಸಿ
ಬಾಯ್ಬಿಡುವ ಮಿಡುಕುಗುಣ
ವೆನ್ನೊಳಗೆ ಅಣಗುವತನಕ

ಸಾಯಮಾಗಿರು ಎನಗೆ
ನಿನ್ನೊಡನೆ ನಾ ಬರುವೆ
ಸ್ವಸ್ಥಾನ ಸಿಗುವ ತನಕ

ಹೊತ್ತೇರಿ ಬರುತಿಹುದು
ಸುತ್ತಲೂ ಸುಡುತಿಹುದು
ಮರುಭೂಮಿ ನಾ ಬಂದುದು

ಕತ್ತಲಾಗುವ ಮುನ್ನ
ಸುತ್ತಿ ಸಂತೆಯನಣ್ಣ
ಬುತ್ತಿ ಉಂಬುವ ತಂದುದು

ಕುದಿಯೊಳಗೆ ಈ ಮರದ
ನೆಳಲೆಷ್ಟು ತಣುವಿಹುದು
ಈಶಕೃಪೆ ಹರಡಿದಂತೆ

ಚಣಕಾಲ ವಿಶ್ರಮಿಸಿ
ಅರುಹುವೆನು ನಿನಗೆನ್ನ
ಗತಪಯಣಗಳ ಭೀಕರ

ನಾ ಬಿದ್ದ ಕೂಪಗಳ
ನಾ ಗೆದ್ದ ಕೋಟೆಗಳ
ಸೊದೆಯನೆಲ್ಲವ ಪೇಳ್ವೆನು

ಕುರುಡು ಸಡಗರದಿಂದ
ಮುಳುಗಿ ತೇಲುತ ಬಂದ
ಹರುಕು ಮುರುಕಿನ ಕಥೆಯನು

ನೀನೆತ್ತಣಿಂ ಬಂದೆ
ಎಲ್ಲಿಗಿದೆ ಗುರಿ ಮುಂದೆ
ಏನೇನ ಕಂಡೆ ಹಿಂದೆ?

ಮಾನವರ ಕೃತ್ಯಮೇನ್?
ಜಗದೊಡೆಯನಿಚ್ಛೆಯೇನ್?
ಅರುಹು ನೀನರಿತುದಿಂದು

ಅರಿತವರ ನುರಿತವರ
ಒಡನಾಟವಂ ಬಯಸಿ
ನಾನಿತ್ತ ಪೊರಮಟ್ಟೆನು

ನಿರ್ಮಲದ ನಿಶ್ಚಲದ
ಕಾಂತಿಮಯದೈಸಿರಿಯ
ಕರುಣಿಸನು ಪರಮಾತ್ಮನು

ಕಣ್ ಕಟ್ಟಿ ಆಡಿಸುವ
ಕಪಟನಾಟಕ ಸೂತ್ರಿ
ಕಂಡನೇ ನಿನ ದೃಷ್ಟಿಗೆ?

ಕಾಣದಿಹನಾ ಕಳ್ಳ
ಇಟ್ಟಿಹನು ಬೇಗುದಿಯ
ಮಾಯೆಯನು ಬಿತ್ತಿ ಒಳಗೆ

ಅವನಿರುವು ಅಂತಿರಲಿ
ಅವನ ಕೃತಿ ಎಂತಿಹುದೊ
ನೋಡಿದೆಯ ಈ ಶಕ್ತಿಯ?

ಬುವಿ ಬಾನ ಮೂಸೆಯೊಳು
ಜೀವರಾಶಿಯ ಸೃಜಿಸಿ
ತುಂಬಿಹನು ಜಿಜ್ಞಾಸೆಯ

ಮದ ಮತ್ಸರಗಳೇನು
ಮಾಯಜಾಲಗಳೇನು
ನನದೆಂಬ ಭ್ರಾಂತಿಯೇನು

ಕಾಂಬುದೆಲ್ಲವು ಈತ
ನಿನ ರೂಪವೇ ಎಂಬ
ಜ್ಞಾನಿಯೇ ಆನಂದನು

ಆನಂದವಂ ನಿರುತ
ಅನುಭವಿಸುವನು ಜ್ಞಾನಿ
ಅಜ್ಞಾನಿಗೆ ಗತಿಯದೇನು?

ಪಾಮರತ್ವವ ಬಿತ್ತಿ
ಪೈರು ಬೆಳಸಿಹನಿಲ್ಲಿ
ಕುಹುಕನೇಂ ಪರಮ ಶಿವನು?

ಅಲ್ಲದೊಡೆ ಜೀವನಿಗೆ
ಸ್ವಾತಂತ್ರ್‍ಯವುಂಟೇನು
ಊಳಿಗದಿ ತೊಡಗಿದವನು!

ವಿಧಿಯಂತ್ರ ಸೆಳೆದತ್ತ
ಬುದ್ಧಿ, ಮನ ಓಡುತಿರೆ
ಜೀವಿ ತಾನೇಗೈವನು?

ಒಡೆಯಲಾರದ ಒಗಟೆ
ಎಷ್ಟೊ ಉಳಿದಿಹುದಿಂತು
ಬೆಳೆಯುತಿದೆ ಗ್ರಂಥರಾಸಿ

ನುಂಗಲಾರದ ತುತ್ತ
ನೂಕಿದರೆ ಫಲವೇನು?
ಶ್ರಮೆಗೊಳದ ಮಿತವೆ ಲೇಸು

ಅಂತಿರಲಿ ಆ ಮಾತು
ಅವನಿರಲು ಎಮಗೇಕೆ?
ನೀ ದೊರೆತುದೆನ್ನ ಪುಣ್ಯ

ನೆಳಲೊಳಗೆ ನಿನ ಜೊತೆಗೆ
ಮೆಲ್ಲ ಮೆಲ್ಲನೆ ನಡೆವೆ
ಸೊಗವಹುದು ಪಯಣವಿನ್ನು

ಒಬ್ಬರೊಬ್ಬರ ಹಿಂಡಿ
ಈರ್ಷ್ಯೆಯಿಂದುರಿಯದಿಹ
ಹೊಸ ರಾಜ್ಯದೊಳಗೆ ಸುಳಿದು

ಕಂಡುದನು ಬಣ್ಣಿಸುತ
ಕಾಣದುದ ಶೋಧಿಸುತ
ನಡೆವ ನಾವ್ ನಕ್ಕುನಲಿದು

ಆ ಜಾಣನದ್ಭುತದ
ಕೌಶಲವ ಪರಿಕಿಸುವ!
ಶೃಂಗಾರಮೆಂತಿಪ್ಪುದೊ!

ಭೀಭತ್ಸ ಶರಧಿಯಂ
ಮಥಿಸಿ ನೋಡುವ ಅಣ್ಣ
ಹಾಸಾದಮೇಮ್ ದೊರೆವುದೊ!

ನವರಸಗಳೆಲ್ಲವಂ
ಒರೆಗಿಟ್ಟು ಶೋಧಿಸುವ
ಈ ಬುದ್ಧಿ ಯಂತ್ರದೊಳಗೆ

ಜೀವಿ ತಾಂ ಬಯಸಿರುವ
ತಿಳಿಮಧುವನೀಕ್ಷಿಸುವ
ಗುಪ್ತಸಂಧಾನದೊಳಗೆ

ಗೀತೆಯದು ಬೋಧಿಸುವ
ಸಾಹಸದ ಕಾರ್ಯದೊಳ್
ಧೈರ್‍ಯದಿಂ ಮುನ್ನುಗ್ಗುವ

ಮುರವೈರಿ ತೋರಿಸಿದ
ವಿಶ್ವರೂಪದ ಧೃತಿಯ
ನಾವೊಮಮೆ ಕಂಡುಬರುವ

ಇಲ್ಲಿರುವ ಚೆಲುವೇನೊ?
ಅಲ್ಲಿರುವ ತಿಳಿವೇನೊ?
ಎಲ್ಲವಂ ಪರಿಶೋಧಿಸಿ

ನೀನರಿತ ವಿಷಯಗಳ
ತಂಗಿ ಜನಕಜೆಗರುಹಿ
ಸಂತಸದಿ ಯಾತ್ರೆ ನಡೆಸು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾರು ಜೀವವೇ ಯಾರು ಬಂದವರು
Next post Navy man ತನ್ನ ಹೆಂಡತಿಗೆ ಬರೆದ ಪತ್ರ

ಸಣ್ಣ ಕತೆ

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…