Home / ಕವನ / ಕವಿತೆ / ಬರವ ಕಾಯುತಿದೆ

ಬರವ ಕಾಯುತಿದೆ

ನೋವಿನ ಹೇಳಿಗೆ ಹೊತ್ತ ಭಾರಕ್ಕೆ
ಬಾಗಿದೆ ಲೋಕದ ಬೆನ್ನು
ಹಸಿದ ಹೊಟ್ಟೆಯಲಿ ತತ್ತರಿಸುತ್ತಿದೆ
ಕಂಗಾಲಾಗಿದೆ ಕಣ್ಣು
ಕೊರಳನು ಬಿಗಿಯುವ ಕಣ್ಣಿಯ ಕಳಚಲು
ಬರುವನು ಯಾರೋ ಧೀರ,
ಎಂಬ ಮಾತನ್ನೆ ನಂಬಿ ಕಾಯುತಿದೆ
ಜೀವಲೋಕಗಳ ತೀರ.

ಯಾರ ಬೆರಳುಗಳು ಯಾವ ಕೊರಳಿಗೆ
ಕಟ್ಟಲಿರುವುವೋ ತಾಳಿಯ,
ಯಾರ ಹರಸುವುದೊ ಕಾಣದ ಹಸ್ತ
ಯಾರು ಆಳುವರೊ ನಾಳೆಯ,
ಬರೆಯುವವರಾರೋ ಕಿರಣ ಕಾವ್ಯವ
ಮುಗಿಲಿನ ಹಾಳೆಯ ಮೇಲೆ,
ಏಳು ಕುದುರೆಗಳು ಯಾರ ರಥ ಎಳೆದು
ತೆರೆವುವೊ ಬೆಳಗಿನ ಲೀಲೆ!

ಸುತ್ತ ಏಳುತಿದೆ ಕಾಣದ ಹಾಗೆ
ಹುತ್ತ ಅವನ ಸುತ್ತ,
ಮರಗಳ ಜಪದಲಿ ರಾಮಬ್ರಹ್ಮನ
ಸೃಷ್ಟಿಸಿಕೊಳುತಿದೆ ಚಿತ್ತ;
ಸಾಯಲು ಕ್ರೌಂಚ, ಕಾಯಲು ಕವಿತೆ
ಎದುರು ನೋಡುತಿವೆ ಆಜ್ಞೆ,
ಆರು ಚಕ್ರಗಳ ತೂರಿ ಏರಲಿದೆ
ಸಹಸ್ರಾರಕ್ಕೆ ಪ್ರಜ್ಞೆ.

ಆ ಸೌಭಾಗ್ಯದ ಬರವ ಕಾಯುತಿದೆ
ಕವಿತೆಯ ಪಾದ, ಪಲ್ಲವಿ,
ಆ ತಾರಕಕೆ ಮೆಟ್ಟಿಲ ಕಟ್ಟಿದೆ
ಶ್ರುತಿ ಲಯ ಸರಿಗಮಪದನಿ,
ಆ ಶ್ರೀ ಚಿತ್ರಕೆ ಗೆರೆಯ ಹರಸುತಿದೆ
ಅರುಣನ ಮಲ್ಲಿಗೆ ಕಿರಣ,
ಮೂಡಲ ದಡದಲಿ ಕೆಂಪಗೇಳುತಿದೆ
ಹೊಸ ಅವತಾರದ ಚರಣ!
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...