Home / ಕವನ / ಕವಿತೆ / ಬರವ ಕಾಯುತಿದೆ

ಬರವ ಕಾಯುತಿದೆ

ನೋವಿನ ಹೇಳಿಗೆ ಹೊತ್ತ ಭಾರಕ್ಕೆ
ಬಾಗಿದೆ ಲೋಕದ ಬೆನ್ನು
ಹಸಿದ ಹೊಟ್ಟೆಯಲಿ ತತ್ತರಿಸುತ್ತಿದೆ
ಕಂಗಾಲಾಗಿದೆ ಕಣ್ಣು
ಕೊರಳನು ಬಿಗಿಯುವ ಕಣ್ಣಿಯ ಕಳಚಲು
ಬರುವನು ಯಾರೋ ಧೀರ,
ಎಂಬ ಮಾತನ್ನೆ ನಂಬಿ ಕಾಯುತಿದೆ
ಜೀವಲೋಕಗಳ ತೀರ.

ಯಾರ ಬೆರಳುಗಳು ಯಾವ ಕೊರಳಿಗೆ
ಕಟ್ಟಲಿರುವುವೋ ತಾಳಿಯ,
ಯಾರ ಹರಸುವುದೊ ಕಾಣದ ಹಸ್ತ
ಯಾರು ಆಳುವರೊ ನಾಳೆಯ,
ಬರೆಯುವವರಾರೋ ಕಿರಣ ಕಾವ್ಯವ
ಮುಗಿಲಿನ ಹಾಳೆಯ ಮೇಲೆ,
ಏಳು ಕುದುರೆಗಳು ಯಾರ ರಥ ಎಳೆದು
ತೆರೆವುವೊ ಬೆಳಗಿನ ಲೀಲೆ!

ಸುತ್ತ ಏಳುತಿದೆ ಕಾಣದ ಹಾಗೆ
ಹುತ್ತ ಅವನ ಸುತ್ತ,
ಮರಗಳ ಜಪದಲಿ ರಾಮಬ್ರಹ್ಮನ
ಸೃಷ್ಟಿಸಿಕೊಳುತಿದೆ ಚಿತ್ತ;
ಸಾಯಲು ಕ್ರೌಂಚ, ಕಾಯಲು ಕವಿತೆ
ಎದುರು ನೋಡುತಿವೆ ಆಜ್ಞೆ,
ಆರು ಚಕ್ರಗಳ ತೂರಿ ಏರಲಿದೆ
ಸಹಸ್ರಾರಕ್ಕೆ ಪ್ರಜ್ಞೆ.

ಆ ಸೌಭಾಗ್ಯದ ಬರವ ಕಾಯುತಿದೆ
ಕವಿತೆಯ ಪಾದ, ಪಲ್ಲವಿ,
ಆ ತಾರಕಕೆ ಮೆಟ್ಟಿಲ ಕಟ್ಟಿದೆ
ಶ್ರುತಿ ಲಯ ಸರಿಗಮಪದನಿ,
ಆ ಶ್ರೀ ಚಿತ್ರಕೆ ಗೆರೆಯ ಹರಸುತಿದೆ
ಅರುಣನ ಮಲ್ಲಿಗೆ ಕಿರಣ,
ಮೂಡಲ ದಡದಲಿ ಕೆಂಪಗೇಳುತಿದೆ
ಹೊಸ ಅವತಾರದ ಚರಣ!
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...