Home / ಕವನ / ಕವಿತೆ / ಅವ್ವ

ಅವ್ವ

ರೊಟ್ಟಿ ತಟ್ಟೀ ತಟ್ಟೀ ಅವ್ವನ
ಕೈಯ ರೇಖೆಗಳು ಕರಗಿ
ಚಿಕ್ಕೀ ಬಳೆಗಳು ಮಾಸಿವೆ
ಒಲೆಯ ಖಾವಿಗೆ ಅವಳ ಬೆವರ,
ಹನಿಗಳು ಇಂಗಿ ಆವಿಯಾಗಿ ಮೋಡ
ಕಟ್ಟಿವೆ ಮನೆಯ ಮಾಡಿನ ಮೇಲೆ
ಅವಳೀಗ ನೀಲಿ ಆಕಾಶದ ಜೀವ ಹನಿ.

ಬಸವಳಿದ ಹೆರಿಗೆ ಮನೆ ಸಂಭ್ರಮ
ಸಾಂಬ್ರಾಣಿ ಹೊಗೆಯ ಅಗ್ನಿಕುಂಡ
ಬೆವರ ಋಣ ಉಪ್ಪಿನ ಋಣ
ಎಲ್ಲವನ್ನು ಅಂಟಿಸಿಕೊಂಡ ಅಡುಗೆ ಮನೆ,
ಗೋಡೆ ಅಲ್ಲಲ್ಲಿ ಹಕ್ಕಳು, ತೇಪೆಯ ಸಾರಣಿ
ಹಿಡಿದ್ದಾಳೆ. ತಿಕ್ಕಿದ ಕೊಡಪಾನಗಳಲಿ
ತುಂಬಿ ಜೀವಜಲ ಅವಳು ನದಿಯಾದವಳು.

ಕಣ್ಣು ಮುಚ್ಚಿ ನಿದ್ರಿಸುವ ಕರುಳ ಬಳ್ಳಿ
ತಟ್ಟಿ ಹಬ್ಬಲೆಂದು ಚಪ್ಪರ ಹಾಕಿ
ಪ್ರೀತಿ ಮಮತೆಯ ನೀರೆರೆದು
ಅಂಟಿನ ದಂಟಿನಲಿ ಮೊಗ್ಗು ಅರಳಿಸಿ
ಹಂತ ಹಂತಕ್ಕೇರಿಸುವ ಮಲ್ಲಿಗೆ ಗಿಡ
ಘಮ್ಮೆಂದು ಸೂಸಿ ಸೌರಭ ಒಳ ಹೊರಗೆ
ಗಾಳಿ ಗಂಧವಾಗಿ ಪಸರಿಸಿ ಚಂದನವಾದವಳು.

ಕಣ್ಣ ಬೊಂಬೆಯ ಒಲವಿನಲಿ ಕನಸು ಹರಡಿ
ಕೈ ಹಿಡಿದು ಕಾಲ ಚಲನೆ ಕಲಿಸಿದವಳು
ಪ್ರೀತಿ ಮನಕೆ ಬೀಜಬಿತ್ತಿ ಹಸಿರು ಚಿಗುರಿಸಿ
ಹದ ಮಾಡಿದ ಭೂಮಿ ತುಂಬ ಚರಗ ಚೆಲ್ಲಿ
ನಿಚ್ಚಳದ ಹಾದಿಯಲಿ ಸಾಲು ದೀಪವಿರಿಸಿ
ಎದೆಯ ಹಾಲಿನ ಪಾಯಸ ಉಣಿಸಿ
ಒಲವ ಹುಟ್ಟಿಸಿ ದೇವರ ಮನೆಯ ಮೂರ್ತಿಯಾದವಳು.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...