Home / ಲೇಖನ / ಇತರೆ / ಆಡಿಸಿ ನೋಡು ಬೀಳಿಸಿ ನೋಡು ಎಂದೂ ಉರುಳದು

ಆಡಿಸಿ ನೋಡು ಬೀಳಿಸಿ ನೋಡು ಎಂದೂ ಉರುಳದು

ಸೋಲಿರಲಿ, ಗೆಲುವಿರಲಿ, ನಗುವಿರಲಿ ಅಳುವಿರಲಿ ದಿನಗಳು ಉರುಳುತ್ತವೆ. ಉರುಳುತ್ತಿರುವ ದಿನಗಳಲ್ಲಿ ನಮ್ಮ ಅಸ್ತಿತ್ವವನ್ನು ಉಳಿಸಿಕೊಂಡು ಯಾರಿಗೂ ಭಾರವಾಗದೆ ಜೀವಿಸುವ ಛಲವಿದೆಯಲ್ಲ ಅದು ಜೀವನಕ್ಕೆ ಎಸೆಯುವ ಸವಾಲು. ಎಷ್ಟು ಆಡಿಸುತ್ತಿಯೋ ಅಷ್ಟು ಆಡಿಸು ನಾನು ಮಾತ್ರ ಕೆಳಕ್ಕೆ ಉರುಳುವುದಿಲ್ಲ ಎನ್ನುವ ಎದೆಗಾರಿಕೆಯ ನಿರ್ಧಾರಕ್ಕೆ ಯಾವ ದೇವರಾದರೂ ತಲೆಬಾಗಲೇಬೇಕು.

ಎಲ್ಲರೂ ಇಂತಹ ಎದೆಗಾರಿಕೆಯನ್ನು ಬೆಳೆಸಿಕೊಳ್ಳಬೇಕು. ಜೀವನಕ್ಕೆ ಸವಾಲು ಹಾಕಬೇಕು. “ಸತ್ತೆನೆಂದೆನಬೇಡ; ಸೋತೆನೆಂದೆನಬೇಡ; ಬತ್ತಿತೆನ್ನೊಳು ಸತ್ವದೂಟೆಯೆನಬೇಡ; ಮೃತ್ಯುವೆನ್ನುವುದೊಂದು ತೆರೆಯಿಳಿತ; ತೆರೆಯೇರು! ಮತ್ತೆ ತೋರ್ಪುದು ನಾಳೆ- ಮಂಕುತಿಮ್ಮ!” ಇದು ಜೀವನ. ಹೀಗೆ ಬಾಳಲು ಆತ್ಮವಿಶ್ವಾಸ ಬೇಕು. ಜೀವನವನ್ನು ಪ್ರೀತಿಸುವ ಮನಸ್ಸು ಬೇಕು. ಜೀವನದಲ್ಲಿ ಶ್ರದ್ಧೆ ಇರಬೇಕು. ಏನಾದರೂ ಕೆಳಕ್ಕೆ ಉರುಳಬಾರದು, ಒಂದು ವೇಳೆ ಬಿದ್ದರೂ ಎದ್ದು ನಿಲ್ಲಬೇಕು ಎನ್ನುವ ಛಲಬೇಕು. ಈ ಮನೋಭಾವವಿದ್ದಲ್ಲಿ ಬಿದ್ದಲ್ಲಿಂದ ಎದ್ದು, ಅಳುನುಂಗಿ ನಗುವ, ನೋವಲ್ಲೂ ನಗುವ ಕಲೆಯನ್ನು ಕರಗತ ಮಾಡಿಕೊಳ್ಳಬಹುದು. ಜೀವನದಲ್ಲಿ ಮುಂದೆ ಸಾಗಬಹುದು.

ಯಾರಾದರೂ ಸದಾ ನಗುತ್ತಿದ್ದರೆ, ಅವರಿಗೆ ಯಾವ ನೋವೂ ಇಲ್ಲ ಎನ್ನುವುದು ಸತ್ಯವಲ್ಲ. ಆಳುವಿನಲ್ಲೂ ನಗುವ ಎದೆಗಾರಿಕೆಯನ್ನು ಅವರು ರೂಢಿಸಿಕೊಂಡಿದ್ದಾರೆ ಎನ್ನುವುದು ಸತ್ಯ. ಚಾರ್ಲಿ ಚಾಪ್ಲಿನ್ ಹೇಳುವ ಒಂದು ಮಾತಿದೆ. ‘ಮಳೆಯಲ್ಲಿ ತೊಯ್ದುಕೊಂಡು ನಡೆಯುವುದೆಂದರೆ ನನಗಿಷ್ಟ, ಯಾಕೆಂದರೆ, ಆಗ ನನ್ನ ಕಣ್ಣೀರು ಯಾರಿಗೂ ಕಾಣಿಸುವುದಿಲ್ಲ.’ ಅವನ ಕಣ್ಣೀರು ಬೇರೆಯವರಿಗೆ ಕಾಣಿಸುತ್ತಿದ್ದರೆ ಅವನನ್ನು ನೋಡಿ ನಗುವವರಿಗೂ ಮುಜುಗರವಾಗುತ್ತಿತ್ತು. ಅನುಕಂಪ ಮೂಡುತ್ತಿತ್ತು. ಅನುಕಂಪಕ್ಕೆ ಸಿಕ್ಕಿದಿದ್ದರೆ ಅವನು ಯಾವಾಗಲೋ ಸತ್ತು ಹೋಗುತ್ತಿದ್ದ. ಚಾರ್ಲಿ ಚಾಪ್ಲಿನ್ ಆಗಿ ಎಲ್ಲರ ಮನದಲ್ಲಿ ಇವತ್ತಿಗೂ ಜೀವಂತವಾಗಿ ಉಳಿಯುತ್ತಿರಲಿಲ್ಲ. ಅವನಂತೆ ತಮ್ಮ ಕಣ್ಣೀರನ್ನು ಯಾರಿಗೂ ಕಾಣಿಸದಂತೆ ಇಂಗಿಸುವವರು ಬಹಳ ಜನರಿರುತ್ತಾರೆ. ಹೊರಗೆ ನಗುನಗುತ್ತಾ ಇದ್ದು ಬಚ್ಚಲು ಮನೆಯಲ್ಲಿ ತಮ್ಮ ಕಣ್ಣೀರನ್ನು ಹರಿಬಿಡುವ ಇಂಥವರ ಕಣ್ಣೀರು ಯಾರಿಗೂ ಕಾಣಿಸದೆ ಇಂಗಿ ಹೋಗುತ್ತದೆ. ಇವರು ತಮ್ಮ ಒಳಗಿನ ದಾವಾನಲವನ್ನು ಮುಚ್ಚಿಟ್ಟು ನಗುನಗುತ್ತಾ ಮುಂದೆ ಹೆಜ್ಜೆ ಹಾಕುತ್ತಾರೆ. ಹೊರ ಪ್ರಪಂಚಕ್ಕೆ ಇವರು ಸುಖಿಗಳು.

ನೋವು ನುಂಗಿ ನಗಲಾಗದವರು ಜೀವನದಲ್ಲಿ ಅಳುತ್ತಾ ಹೆಜ್ಜೆ ಹಾಕುತ್ತಾರೆ. ಅವರ ಹೆಜ್ಜೆಗಳು ಭಾರವಾಗಿ ಬಿದ್ದಲ್ಲಿಂದ ಏಳುವುದು ಕಷ್ಟವಾಗುತ್ತದೆ. ನಗುವವರ ಹೆಜ್ಜೆಗಳು ಹಗುರವಾಗಿ ಬಿದ್ದಲ್ಲಿಂದ ಏಳಲು ಸುಲಭವಾಗುತ್ತದೆ. ನಗು ಜೀವನವನ್ನು ಹಗುರ ಮಾಡುತ್ತದೆ.

ಜೀವನದಲ್ಲಿ ಎಲ್ಲ ರೀತಿಯ ಅನುಭವಗಳಿಗೂ ಸ್ಥಾನವಿದೆ. ಅನುಭವಗಳು ಮನುಷ್ಯನನ್ನು ತಿದ್ದುವುದೆನ್ನುತ್ತಾರೆ. ಶ್ರೀಮಂತಗೊಳಿಸುವುದೆನ್ನುತ್ತಾರೆ. ಪಾಠ ಕಲಿಸುವುದೆನ್ನುತ್ತಾರೆ. ಅನುಭವಗಳು ಕೊಡುವ ಶಿಕ್ಷಣ ಯಾವ ವಿಶ್ವವಿದ್ಯಾಲಯಗಳಿಂದಲೂ ದೊರಕಲಾರದು. ಪ್ರತಿಯೊಂದು ಕೆಟ್ಟ ಅನುಭವಗಳು ಆ ಕ್ಷಣಕ್ಕೆ ನಮ್ಮನ್ನು ಸೋಲಿಸುವಂತೆ ಕಂಡರೂ ಜೀವನಕ್ಕೆ ಒಗ್ಗಿಕೊಳ್ಳುವುದನ್ನು ಕಲಿಸಿಕೊಡುತ್ತದೆ. ನೋವು ನುಂಗಿ ನಗುವ ಜಾಣತನ ಕಲಿಸಿಕೊಡುತ್ತದೆ. ಜೀವಿಸುವ ಧೈರ್ಯ ತುಂಬಿಸುತ್ತದೆ.

‘ಆಡಿಸಿ ನೋಡು ಬೀಳಿಸಿ ನೋಡು ಎಂದೂ ಉರುಳದು’ ಎನ್ನುವ ಒಂದು ಸುಂದರವಾದ ಹಾಡಿದೆ. ಈ ಹಾಡು ನನ್ನ ಸೋಲಿನ ಕ್ಷಣಗಳಲ್ಲಿ ನನ್ನನ್ನು ಬಡಿದೆಬ್ಬಿಸಿದೆ. ಕಾಲಿಗೆ ಎದ್ದುನಿಲ್ಲುವ ಶಕ್ತಿ ನೀಡಿದೆ. ನಗುನಗುತ್ತ ಜೀವನವನ್ನು ಎದುರಿಸಲು ಸಹಾಯ ಮಾಡಿದೆ. ಹಾಡು ಎಲ್ಲರ ಕಿವಿಯಲ್ಲೂ ಗುನುಗುಣಿಸುವಂತಾಗಬೇಕು. ಸೋತು ಕುಸಿಯುವುದರಲ್ಲಿ ಅರ್ಥವೇ ಇಲ್ಲ. ಎದ್ದು ನಿಂತು ಮುಂದೆ ಹೆಜ್ಜೆ ಹಾಕಬೇಕು. ಜೀವನವನ್ನು ಎದುರಿಸಬೇಕು. ಯಾವತ್ತೂ ಹೆದರಿ ಕುಸಿಯುವ ಅಗತ್ಯವಿಲ್ಲ.

“ಸತ್ತನೆಂದೆನಬೇಡ; ಸೋತೆನೆಂದೆನಬೇಡ; ಬತ್ತಿತೆನ್ನೊಳು ಸತ್ವದೂಟೆಯೆನ ಬೇಡ; ಮೃತ್ಯುವೆನ್ನುವುದೊಂದು ತೆರೆಯಿಳಿತ; ತೆರೆಯೇರು! ಮತ್ತೆ ತೋರ್ಪುದು ನಾಳೆ- ಮಂಕುತಿಮ್ಮ!” ಇದು ಡಿವಿಜಿ ಕಂಡುಕೊಂಡ ಜೀವನದ ಸತ್ಯ. ಆಡಿಸಿ ನೋಡು ಬೀಳಿಸಿ ನೋಡು ಎಂದೂ ಉರುಳದು ಎನ್ನುತ್ತಲೇ ಬಾಳುವ ಕಲೆಯಿದು.

ಕೊನೆಗೊಂದು ಕಿವಿಮಾತು –

ನಮ್ಮ ನಗು ಎಲ್ಲರಿಗೆ; ಆದರೆ ಅಳು ನಮಗೆ ಮಾತ್ರ. ನಗುವಿಗೆ ಪಾಲುದಾರರಿದ್ದಾರೆ. ಆದರೆ ಅಳುವಿಗೆ ಪಾಲುದಾರರಿಲ್ಲ.
*****
(ಚಿಂತನ- ಆಕಾಶವಾಣಿ: ಮಂತಣಿ)

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...