Home / ಕವನ / ಕವಿತೆ / ಬದುಕೆಂದರೆ ಇಲ್ಲಿ…

ಬದುಕೆಂದರೆ ಇಲ್ಲಿ…

ಅನಿಧಿಕೃತ ಸಮರದಲಿ
ಜೀವ ವಿಶೇಷಗಳ ತಾಣ
ಕ್ಷಣದಲ್ಲಾಯ್ತು ಮಸಣ

ಕುಡಿಯೊಡೆದು ಚಿಗುರಿದ
ನಂದನವನವೆಲ್ಲಾ
ನಿಮಿಷದಲಿ
ಮರುಭೂಮಿಯಾಯ್ತಲ್ಲಾ!

ಗಡಿಮೀರಿ
ಒಳನುಗ್ಗಿದ್ದು ಅವರ ತಪ್ಪೊ?
ಬಿಟ್ಟಿದ್ದು ಇವರ ತಪ್ಪೊ?
ಬೇಕಿಲ್ಲ ತಪ್ಪುಸರಿಗಳ ಅಳತೆ
ರಾಜಕೀಯ ಕುತಂತ್ರದಲಿ
ತಕ್ಕಡಿ ಸರಿದೂಗೀತೇ?

ಕಪಟದೂತ್ಯವ ಆಡುವವರಾರೋ?
ದಾಳ ಒಗೆದವರಾರೋ?
ಗೆದ್ದವರಾರೋ? ಸೋತವರಾರೋ?
ಮುನ್ನುಗ್ಗಿದವರಾರೋ? ಹಿಮ್ಮೆಟ್ಟಿದವರಾರೋ?

ಏನಿಲ್ಲಾ, ಎಂತಿಲ್ಲ
ಸುಮ್ಮಸುಮ್ಮನೆ ಮಣ್ಣೊಳಗೆ
ರಕ್ತದ ನದಿಯಾದವರ
ಲೆಕ್ಕವಿಟ್ಟವರಾರು?
ಅವರಿವರ ತಪ್ಪಿಗೆ.
ತಪ್ಪಿಲ್ಲದೆಯೂ
ಬಲಿಪಶುವಾದರು ಹಲರು.

ನಮ್ಮವನದೋ, ಪರಕೀಯನದೋ
ಜೀವ ಜೀವವೇ ತಾನೇ?
ದೇಶಕ್ಕೆ ಗಡಿಯಷ್ಟೆ
ಸೃಷ್ಟಿಗೆ ಗಡಿಗಳಿವೆಯೆ?
ನಾಳೆಗೇ ಬೆಂಕಿಯೆಲ್ಲವೂ ಆರಿ
ಬೂದಿಯುಳಿದೀತು ಬರಿ.

ಆದರೆ… ಆದರೆ ಹೇಗಳಿಸುವುದು?
ಹೇಗಳಿಸುವುದು ಬಿಸಿ ನೆತ್ತರಿನ ಗುರುತುಗಳನ್ನು?
ಹೇಗೆ ಒರೆಸುವುದು ಸಂಬಂಧಿಗಳ
ಕಣ್ಣೀರಿನ ಶರಧಿಗಳನು?
ಬೇಕೆಂದರೂ ಈಗ
ತರಲಾದೀತೆ ಮತ್ತೆ ಜೀವಗಳನ್ನು?

ಬದುಕೆಂದರೆ ಇಲ್ಲಿ ಹೇ ತಂದೆ
ಮಾರಕಾಸ್ತ್ರಗಳಾಟವೇ?
ರುಂಡ ಚೆಂಡಾಡುವ ಹೂಟವೇ?
ರಾಶಿಹೆಣಗಳ ಕೂಟವೇ?
ಕಣ್ಣಾಮುಚ್ಚೆ ಮಕ್ಕಾಳಾಟವೇ?

ಬದುಕಿಸುವ ಮಂತ್ರ ಅರಿಯದ
ಹುಲುಮನುಜ
ಬದುಕು ಅಳಿಸುವ ತಂತ್ರ ಅರಿತದ್ದು
ಸರಿಯೇ ಪ್ರಭುವೇ?
ಇಲ್ಲಿ ಜೀವಕ್ಕೆ
ಬೆಲೆ ಇದೆಯೇ?
*****

Tagged:

Leave a Reply

Your email address will not be published. Required fields are marked *

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...