ಸಿಂಕ್ಲೇರನಿಗೆ

ಹಸಿದ ಹೊಟ್ಟೆಯ ಹೇರ ಹೊರಲಾರದಿಹ ಜನರ
ಕಾಸಿನಾಸೆಯ ತೋರಿ ಹೇಸಿಗೆಯ ನರಕದಲಿ
ದೂಡಿದುಡಿಸುವ ದುಡ್ಡಿನಪ್ಪಗಳ ವಿಶ್ವವನು,
ನಾಗರಿಕ ಜೀವನದ ಮೇಲ್ಮುಸುಕ ಮರೆಯಲ್ಲಿ
ಬಚ್ಚಿಟ್ಟ ಬ್ರಹ್ಮಾಂಡ ಬಯಲು ಮಾಡಿದ ಬ್ರಹ್ಮ   ೫
ಸಿಂಕ್ಲೇರ ಅಪ್ಟನನೆ ನಿನಗೆ ಜಗ ಚಿರಋಣಿಯು!
ಬಾಳ ಕಗ್ಗಾಡಿನಲಿ ಸಿಕ್ಕಿ ಸೊರಗಿದ ದೀನ
ಕೂಲಿಗಾರನ ಜೀವ-ನೋವು ಕಾವಿನ ಬಾಳು
ಕಾಸುಗಾರನ ಕೈಯ ರಾಕ್ಷಸೀ ಹಿಡಿತದಲಿ
ದಬ್ಬಾಳಿಕೆಯ ಕ್ರೂರಯಂತ್ರದಲಿ ನಶಿಸುತಲಿ   ೧೦
ಅಂಧಕಾರದಿ ಬರಿಯ ಧೂಳಾಗಿ ಬೀಳುವುದ
ತೋರಿಸಿದೆ.  ದೂರದಿಂ ನೋಡಿದೊಡೆ ಕಾರ್ಖಾನೆ
ಬಾಳೂ ಬಲು ಬಲು ಚಂದ, ಕಾಸ ಕೂಡಿಸಬಹುದು
ಎಂಬ ಭ್ರಮೆ ಮುಸುಕುವುದು, ಬೆಳಕಿಲ್ಲೆ ಇಹುದೆಂಬ
ಹಿಗ್ಗಿನಲಿ ಬಂದೊಡನೆ, ಬಯಕೆಗಳು ಬಯಲಾಗಿ   ೧೫
ಎದೆಯೊಡೆದು ನೀರಾಗಿ-ಕತ್ತಲಲಿ ಕುಗ್ಗುವುದು!
ಜೀವ ಮೊದಲಿಂ ತುದಿಗೆ ಮೋಸ, ಮೋಸದಸಂತೆ!
ಕಸವನೇ ರಸವೆಂದು ಮರುಳುಗೊಳಿಸುವ ಜಾಲ!
ಅಮೆರಿಕದ ಜೀವವಿದು!  ಒಳಗನರಿಯದೆ ಬರಿಯ
ಹೊಳೆವ ಹೊರಗನೆ ಕಂಡು ಮುಗ್ಧರಾಗುತ ಓಡಿ   ೨೦
ಸಾರಿ ಬಂದವರೆನಿತು ಜಾರಿಬಿದ್ದರು ಬಲೆಗೆ!
ಕೂಲಿಗಾರನ ಕಷ್ಟ ಬಣ್ಣನೆಯ ಬಣ್ಣಕ್ಕೆ
ನಿಲುಕದಿದೆ.  ಕಲ್ಕೂಡ ಕರಗುವುದು ಕೇಳುತದನು!
ಎಲ್ಲವನು ವರ್ಜಿಸುತ, ಕಷ್ಟಗಳ ಬೆಟ್ಟಗಳ
ಬೆನ್ನ ಮೇಲ್ಹೊರುವುದಕೆ ಸುಖವಿರಹಿ ಬಂದಿಹನು!   ೨೫
ಆವುದನು ಅಮೃತವೆಂದೆಣಿಸಿ ಬಂದಿರ್ದನದೆ
ಸರ್ಪವಿಷ!  ಜೀವನವ-ರಸವನ್ನು-ಕಾವನ್ನು
ಮೆಲ್ಲಮೆಲ್ಲನೆ ಹಿಂಡಿ ಹಿಪ್ಪೆಯಾಗಿಪ ಯಂತ್ರ!
ಕಂಪಸೂಸುವ ಹೂವಹಾರವೆಂದಿರ್ದುದದು
ಫೂತ್ಕಾರ ಮಾಡುತಿಹ ಉರಿವ ಹಾವಿನ ಹೆಡೆಯು!   ೩೦
ಬಂಡವಾಳದ ಬಾಳು!  ಮೊದಲಿನಿಂ ಕೊನೆವರೆಗು
-ಕಾರ್ಖಾನೆ, ಸಹಕಾರ ಸಂಘಗಳು, ಸರ್ಕಾರ-
ಎಲ್ಲ ಮೋಸದ ಬೀಡು!  ಮೋಸವೇ ಉಸಿರವಕೆ!
ಮೇಲ್ಮಾತ್ರ ಬಲು ಚೆನ್ನ!  ಮನಸೆಳೆವ ಮುಗ್ಧಬಗೆ!
ದೂರದಿಂ ನೋಡುತಲೆ ಹೃದಯ ಸಾರುವುದಲ್ಲಿ!   ೩೫
ಬಳಿಗೆ ಸಾರುತಲೊಮ್ಮೆ ಬಿದ್ದರಾಯಿತು ಬಲೆಗೆ,
ಹೊಂಡದಿಂ ಹೊರಬೀಳ್ವ ಆಸೆ ಬರಿ ಹುಡಿಗನಸು!
ಸುತ್ತೆಲ್ಲ ಹಸುರುವನ-ಒಳಗೆ ಗಾಢಾಂಧತೆಯು
ಮುಸುಕಿರುವ ಹೆಗ್ಗವಿಯು! – ಜೀವ ಬರಿ ಕಗ್ಗಾಡು!
ಕಗ್ಗಾಡು! ಗಾಢಾಂಧ!  ಕರೆದೊಯ್ಯುವವರಿಲ್ಲ!   ೪೦
ನೂರಾರು ಕವಲುಗಳು-ಎಲ್ಲ ಒಂದೆಡೆಗೇ!
ದಾರಿಯರಿಯದು, ವೇಳೆಯರಿಯದೆಯೆ ಮುನ್ನಡೆದು,
ಕಾದು ಕುಳಿತಿಹ ಕ್ರೂರ ಧನಪ್ರೇತಗಳ ಬಾಯ್ಗೆ
ತುತ್ತಾಗಿ, ತೊತ್ತಾಗಿ, ಸಾಯುವುದು!  ಕೂಲಿಗಳ
ಜೀವನಕೆ ಬೆಳಕಿಲ್ಲ! ಗಾಢಾಂಧತೆಯ ಬೀಡು!   ೪೫
ಅಂತಾರದರಿದರಿಂದ ಕೂಲಿಗಾರಗೆ ಮುಕ್ತಿ
ದೊರೆಯದೇ?  ಕನಸುಗಳ ಬಯಕೆಗಳ ಬಸಿರಿನಲೆ
ಬಡಿದು ಕೊಲ್ಲುವುದೇನು?  ಬೇರೇನು ಗತಿಯಿಲ್ಲ!
ಬಂಡವಾಳದ ಹಿಡಿತ ಬಲು ಭದ್ರ-ಜಗವೆಲ್ಲ
ಕಾಸಿಗೊಡೆಯರ ಕೈಲಿ ನಶಿಸಿಹೋಗುತಲಿಹುದು!   ೫೦
ದುಡ್ಡಿನಲ್ಲಿದೆ ಜೀವ! ದುಡ್ಡಿನಿಂದಲೆ ಜೀವ!
ಉಳಿದಿಹುದು ಏನೆಮಗೆ?  ಕೂಲಿಗಾರರಿಗೇನು?
ದುಡಿದು ದುಡಿದೂ ಇಂತೆ ಮಡಿಯುವುದೆ ಫಲವೇನು?
ಕಗ್ಗಾಡಿನಂಧತೆಯ ಬೆಳಗಿ ದಾರಿಯತೋರ್ವ
ಕಿರಣವೆಮಗಿಲ್ಲವೇ?- ಆಸೆಯಿದೆ! ಧೈರ್ಯವಿದೆ!   ೫೫
ಬಂಡವಲದಂಗಾಂಗ ಛಿದ್ರಛಿದ್ರವ ಮಾಡಿ
ಕಿತ್ತೊಗೆದು, ಕೂಲಿಗಳ ಜೀವ ಸವಿಯಾಗಿಪುದು
ಕಗ್ಗಾಡ ಬೆಳಗಿಸುವ ಕಿರಣ ಹೊರಹೊಮ್ಮುತಿದೆ
ಕೂಲಿಗಾರರ ಶಕ್ತಿ! ಸಾಮ್ಯವಾದದ ಕತ್ತಿ
ಸಾಮ್ಯವಾದವದೊಂದೆ ಶತ್ರುವಿಗೆ ಹಿರಿಮದ್ದು!   ೬೦
ಸಾಮ್ಯವಾದವದೊಂದೆ ಶತ್ರಿವಿಗೆ ಸಿಡಿಮದ್ದು!
“ಎಮ್ಮದಾಯ್ತು ಚಿಕಾಗೊ! ಎಮ್ಮದಾಯ್ತು ಚಿಕಾಗೊ!”
ಎಂಬ ಕೊನೆಯಾಕೂಗು ಬಂಡವಲದೆದೆ ಒಡೆದು
ದಿಕ್ಕುದಿಕ್ಕುಗಳಲ್ಲಿ ಮೊಳಗುವುದು – ಗುಡುಗುವುದು!
“ಎಮ್ಮದಾಯ್ತು ಚಿಕಾಗೊ!” ಕೂಗು ಬದಲಿಸುತಿಂದು   ೬೫
ಕೂಲಿಗಾರರ ಕೊರಳಿನಿಂದಿಂತು ಹೊರಡುತಿದೆ!
“ವಿಶ್ವವೇ ನಮ್ಮದಿದೆ, ನಮ್ಮ ಹಕ್ಕಿದು ವಿಶ್ವ!
ವಿಶ್ವ ನಮ್ಮದೆ ಅಹುದು! ನಮ್ಮದಾಯ್ತೀ ವಿಶ್ವ!”   ೬೮

“ದಿ ಜಂಗಲ್” ಕಾದಂಬರಿಯನ್ನು ಓದಿದಮೇಲೆ ಬರೆದುದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾಧನೆ
Next post ಅನ್ವೇಷಣೆ

ಸಣ್ಣ ಕತೆ

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…