Home / ಕವನ / ಕವಿತೆ / ಸಿಂಕ್ಲೇರನಿಗೆ

ಸಿಂಕ್ಲೇರನಿಗೆ

ಹಸಿದ ಹೊಟ್ಟೆಯ ಹೇರ ಹೊರಲಾರದಿಹ ಜನರ
ಕಾಸಿನಾಸೆಯ ತೋರಿ ಹೇಸಿಗೆಯ ನರಕದಲಿ
ದೂಡಿದುಡಿಸುವ ದುಡ್ಡಿನಪ್ಪಗಳ ವಿಶ್ವವನು,
ನಾಗರಿಕ ಜೀವನದ ಮೇಲ್ಮುಸುಕ ಮರೆಯಲ್ಲಿ
ಬಚ್ಚಿಟ್ಟ ಬ್ರಹ್ಮಾಂಡ ಬಯಲು ಮಾಡಿದ ಬ್ರಹ್ಮ   ೫
ಸಿಂಕ್ಲೇರ ಅಪ್ಟನನೆ ನಿನಗೆ ಜಗ ಚಿರಋಣಿಯು!
ಬಾಳ ಕಗ್ಗಾಡಿನಲಿ ಸಿಕ್ಕಿ ಸೊರಗಿದ ದೀನ
ಕೂಲಿಗಾರನ ಜೀವ-ನೋವು ಕಾವಿನ ಬಾಳು
ಕಾಸುಗಾರನ ಕೈಯ ರಾಕ್ಷಸೀ ಹಿಡಿತದಲಿ
ದಬ್ಬಾಳಿಕೆಯ ಕ್ರೂರಯಂತ್ರದಲಿ ನಶಿಸುತಲಿ   ೧೦
ಅಂಧಕಾರದಿ ಬರಿಯ ಧೂಳಾಗಿ ಬೀಳುವುದ
ತೋರಿಸಿದೆ.  ದೂರದಿಂ ನೋಡಿದೊಡೆ ಕಾರ್ಖಾನೆ
ಬಾಳೂ ಬಲು ಬಲು ಚಂದ, ಕಾಸ ಕೂಡಿಸಬಹುದು
ಎಂಬ ಭ್ರಮೆ ಮುಸುಕುವುದು, ಬೆಳಕಿಲ್ಲೆ ಇಹುದೆಂಬ
ಹಿಗ್ಗಿನಲಿ ಬಂದೊಡನೆ, ಬಯಕೆಗಳು ಬಯಲಾಗಿ   ೧೫
ಎದೆಯೊಡೆದು ನೀರಾಗಿ-ಕತ್ತಲಲಿ ಕುಗ್ಗುವುದು!
ಜೀವ ಮೊದಲಿಂ ತುದಿಗೆ ಮೋಸ, ಮೋಸದಸಂತೆ!
ಕಸವನೇ ರಸವೆಂದು ಮರುಳುಗೊಳಿಸುವ ಜಾಲ!
ಅಮೆರಿಕದ ಜೀವವಿದು!  ಒಳಗನರಿಯದೆ ಬರಿಯ
ಹೊಳೆವ ಹೊರಗನೆ ಕಂಡು ಮುಗ್ಧರಾಗುತ ಓಡಿ   ೨೦
ಸಾರಿ ಬಂದವರೆನಿತು ಜಾರಿಬಿದ್ದರು ಬಲೆಗೆ!
ಕೂಲಿಗಾರನ ಕಷ್ಟ ಬಣ್ಣನೆಯ ಬಣ್ಣಕ್ಕೆ
ನಿಲುಕದಿದೆ.  ಕಲ್ಕೂಡ ಕರಗುವುದು ಕೇಳುತದನು!
ಎಲ್ಲವನು ವರ್ಜಿಸುತ, ಕಷ್ಟಗಳ ಬೆಟ್ಟಗಳ
ಬೆನ್ನ ಮೇಲ್ಹೊರುವುದಕೆ ಸುಖವಿರಹಿ ಬಂದಿಹನು!   ೨೫
ಆವುದನು ಅಮೃತವೆಂದೆಣಿಸಿ ಬಂದಿರ್ದನದೆ
ಸರ್ಪವಿಷ!  ಜೀವನವ-ರಸವನ್ನು-ಕಾವನ್ನು
ಮೆಲ್ಲಮೆಲ್ಲನೆ ಹಿಂಡಿ ಹಿಪ್ಪೆಯಾಗಿಪ ಯಂತ್ರ!
ಕಂಪಸೂಸುವ ಹೂವಹಾರವೆಂದಿರ್ದುದದು
ಫೂತ್ಕಾರ ಮಾಡುತಿಹ ಉರಿವ ಹಾವಿನ ಹೆಡೆಯು!   ೩೦
ಬಂಡವಾಳದ ಬಾಳು!  ಮೊದಲಿನಿಂ ಕೊನೆವರೆಗು
-ಕಾರ್ಖಾನೆ, ಸಹಕಾರ ಸಂಘಗಳು, ಸರ್ಕಾರ-
ಎಲ್ಲ ಮೋಸದ ಬೀಡು!  ಮೋಸವೇ ಉಸಿರವಕೆ!
ಮೇಲ್ಮಾತ್ರ ಬಲು ಚೆನ್ನ!  ಮನಸೆಳೆವ ಮುಗ್ಧಬಗೆ!
ದೂರದಿಂ ನೋಡುತಲೆ ಹೃದಯ ಸಾರುವುದಲ್ಲಿ!   ೩೫
ಬಳಿಗೆ ಸಾರುತಲೊಮ್ಮೆ ಬಿದ್ದರಾಯಿತು ಬಲೆಗೆ,
ಹೊಂಡದಿಂ ಹೊರಬೀಳ್ವ ಆಸೆ ಬರಿ ಹುಡಿಗನಸು!
ಸುತ್ತೆಲ್ಲ ಹಸುರುವನ-ಒಳಗೆ ಗಾಢಾಂಧತೆಯು
ಮುಸುಕಿರುವ ಹೆಗ್ಗವಿಯು! – ಜೀವ ಬರಿ ಕಗ್ಗಾಡು!
ಕಗ್ಗಾಡು! ಗಾಢಾಂಧ!  ಕರೆದೊಯ್ಯುವವರಿಲ್ಲ!   ೪೦
ನೂರಾರು ಕವಲುಗಳು-ಎಲ್ಲ ಒಂದೆಡೆಗೇ!
ದಾರಿಯರಿಯದು, ವೇಳೆಯರಿಯದೆಯೆ ಮುನ್ನಡೆದು,
ಕಾದು ಕುಳಿತಿಹ ಕ್ರೂರ ಧನಪ್ರೇತಗಳ ಬಾಯ್ಗೆ
ತುತ್ತಾಗಿ, ತೊತ್ತಾಗಿ, ಸಾಯುವುದು!  ಕೂಲಿಗಳ
ಜೀವನಕೆ ಬೆಳಕಿಲ್ಲ! ಗಾಢಾಂಧತೆಯ ಬೀಡು!   ೪೫
ಅಂತಾರದರಿದರಿಂದ ಕೂಲಿಗಾರಗೆ ಮುಕ್ತಿ
ದೊರೆಯದೇ?  ಕನಸುಗಳ ಬಯಕೆಗಳ ಬಸಿರಿನಲೆ
ಬಡಿದು ಕೊಲ್ಲುವುದೇನು?  ಬೇರೇನು ಗತಿಯಿಲ್ಲ!
ಬಂಡವಾಳದ ಹಿಡಿತ ಬಲು ಭದ್ರ-ಜಗವೆಲ್ಲ
ಕಾಸಿಗೊಡೆಯರ ಕೈಲಿ ನಶಿಸಿಹೋಗುತಲಿಹುದು!   ೫೦
ದುಡ್ಡಿನಲ್ಲಿದೆ ಜೀವ! ದುಡ್ಡಿನಿಂದಲೆ ಜೀವ!
ಉಳಿದಿಹುದು ಏನೆಮಗೆ?  ಕೂಲಿಗಾರರಿಗೇನು?
ದುಡಿದು ದುಡಿದೂ ಇಂತೆ ಮಡಿಯುವುದೆ ಫಲವೇನು?
ಕಗ್ಗಾಡಿನಂಧತೆಯ ಬೆಳಗಿ ದಾರಿಯತೋರ್ವ
ಕಿರಣವೆಮಗಿಲ್ಲವೇ?- ಆಸೆಯಿದೆ! ಧೈರ್ಯವಿದೆ!   ೫೫
ಬಂಡವಲದಂಗಾಂಗ ಛಿದ್ರಛಿದ್ರವ ಮಾಡಿ
ಕಿತ್ತೊಗೆದು, ಕೂಲಿಗಳ ಜೀವ ಸವಿಯಾಗಿಪುದು
ಕಗ್ಗಾಡ ಬೆಳಗಿಸುವ ಕಿರಣ ಹೊರಹೊಮ್ಮುತಿದೆ
ಕೂಲಿಗಾರರ ಶಕ್ತಿ! ಸಾಮ್ಯವಾದದ ಕತ್ತಿ
ಸಾಮ್ಯವಾದವದೊಂದೆ ಶತ್ರುವಿಗೆ ಹಿರಿಮದ್ದು!   ೬೦
ಸಾಮ್ಯವಾದವದೊಂದೆ ಶತ್ರಿವಿಗೆ ಸಿಡಿಮದ್ದು!
“ಎಮ್ಮದಾಯ್ತು ಚಿಕಾಗೊ! ಎಮ್ಮದಾಯ್ತು ಚಿಕಾಗೊ!”
ಎಂಬ ಕೊನೆಯಾಕೂಗು ಬಂಡವಲದೆದೆ ಒಡೆದು
ದಿಕ್ಕುದಿಕ್ಕುಗಳಲ್ಲಿ ಮೊಳಗುವುದು – ಗುಡುಗುವುದು!
“ಎಮ್ಮದಾಯ್ತು ಚಿಕಾಗೊ!” ಕೂಗು ಬದಲಿಸುತಿಂದು   ೬೫
ಕೂಲಿಗಾರರ ಕೊರಳಿನಿಂದಿಂತು ಹೊರಡುತಿದೆ!
“ವಿಶ್ವವೇ ನಮ್ಮದಿದೆ, ನಮ್ಮ ಹಕ್ಕಿದು ವಿಶ್ವ!
ವಿಶ್ವ ನಮ್ಮದೆ ಅಹುದು! ನಮ್ಮದಾಯ್ತೀ ವಿಶ್ವ!”   ೬೮

“ದಿ ಜಂಗಲ್” ಕಾದಂಬರಿಯನ್ನು ಓದಿದಮೇಲೆ ಬರೆದುದು.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...