Home / ಕವನ / ಕವಿತೆ / ಹೊಸಿಲಿಲ್ಲದ ಬಾಗಿಲು

ಹೊಸಿಲಿಲ್ಲದ ಬಾಗಿಲು

ಮನೆಗೆ ಹಿರೀಮಗ
ಹೊಸಿಲು
ಎರಡೂ ಒಂದೇ
ಬೊಟ್ಟು ಬಳಿದುಕೊಂಡರೂ
ಎಡವುವವರು, ತುಳಿಯುವವರು,
ದಾಟುವವರು ಇದ್ದದ್ದೇ

ಮನೆಯ ಕಾಯುವ ಭಾರ
ಹೊಸಿಲಿಗೂ
ಹಿರಿ ಮಗನಿಗೂ
ಸಮನಾಗಿ ಹಂಚಿಕೆಯಾಗಿದೆ
ಆಕಳಿಸಿದರೆ
ತಲಬಾಗಿಲ ಮೇಲೆ
ಹಲ್ಲಿ
ಲೊಚಗುಟ್ಟಿ ಎಚ್ಚರಿಸುತ್ತದೆ

ಭೂಮಿ
ತಾಯಿಯ ಚೊಚ್ಚಿಲ ಮಗ
ನೇಗಿಲು
ಹೆಗಲೇರಿಸಿ ಹುಟ್ಟಿದವನು
ಬಂಜೆ ಎದೆಯೊಳಗೆ
ಹೆಣವಾಗಿ ಕೊಳೆತರೂ
ಉಸಿರಾಡುವವನು

ಕಂಡ ಕನಸುಗಳೆಲ್ಲಾ
ಸಿದಿಗೆ ಕಟ್ಟಿ
ಸಿಂಗರಿಸಿ
ಹೊಸಿಲ ಬುಡಕೆ ಹೂತು
ಊದು ಬತ್ತಿಯ ಹಚ್ಚಿದೆ
ಮುಲುಗುವ ಸದ್ದು
ನಿಮಗೂ ಕೇಳಿಸುತ್ತಿರಬಹುದು

ಅದೇ ಹೊಸಿಲ ಎಡ ಬಲಕು
ಸೂರ್ಯ
ಚಂದ್ರರ ಬರೆದು
ದೀಪ ಹಚ್ಚಿದ
ಒಳಗೂ ಹೊರಗೂ ಬೆಳಕಾಗಲು
ಎಣ್ಣೆ ಇರದಿದ್ದರೂ
ಉರಿದು

ಹೊಸಿಲಿಲ್ಲದ ಬಾಗಿಲು
ಮುಚ್ಚುವ ಕಾಲವಿದು
ಬಂದು ಸೇರಿಕೊಳ್ಳಿ
ಮಣ್ಣಿನ ಮಕ್ಕಳೆಲ್ಲಾ
ಬಾಗಿಲಿಗೆ
‘ಬಾರೇ ಬೇಲಿ’ ಬಡಿಯುವ ಮುನ್ನ
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...