ಹೇಳದಿದ್ದರು ನೀನು
ಎಲ್ಲ ಬಲ್ಲೆನು ನಾನು
ಏನಿದೆ ಎಂದು ಎದೆಯಾಳದಲ್ಲಿ;
ನಿನ್ನ ಕಣ್ಣಿನೊಳೇನೊ
ನೋವು ತೇಲುತ್ತಿಹುದು
ಕರಿಮೋಡ ಸುಳಿದಂತೆ ಬಾನಿನಲ್ಲಿ
ನೂರು ಹಳೆ ನೆನಪುಗಳು
ಚೀರಿ ಹೊಮ್ಮುತ್ತಲಿವೆ
ಮರವೆಯಲಿ ಹುಗಿದರೂ ಮೇಲಕೆದ್ದು;
ನಮ್ಮ ಮೇಲೇ ಏಕೆ
ವಿಧಿಗೆ ಈ ಬಗೆ ಜಿದ್ದು
ಬೆಂದವರ ಬೆನ್ನಿಗೇ ಏಕೆ ಗುದ್ದು?
ಬಾಗುವುದು ಏಗುವುದು
ಸಹನೆಯಲಿ ಸಾಗುವುದು
ಇಷ್ಟಕೇ ಮುಗಿಯಿತೇ ನಮ್ಮ ಬಾಳು?
ಕಾಣಬಾರದ್ದೆಲ್ಲ
ಕಂಡರೂ ಕಹಿಬೇಡ
ಕನಸಿನಲಿ ಹುಗಿಯೋಣ ನಮ್ಮ ಗೋಳು.
*****
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)
- ಕಾಣ್ಕೆ ಬೇರಾದರೂ ಕರುಳು ಒಂದೇ - January 21, 2021
- ಒಪ್ಪಿಕೊ ಪರಾಭವ! - January 14, 2021
- ಕದನ ವಿರಾಮದ ಮಾತು - January 7, 2021