ಕಾರ್ಗಿಲ್ ಯುದ್ಧ – ಯೋಧನ ತಾಯಿಯೊಬ್ಬಳ ಅತ್ಮಗೀತೆ

ಹಿಮಶೈಲ ಕಾಯುವ
ಮಗನೇ ನೀನೆಲ್ಲಿದ್ದೀಯೋ
ನನಗೊಂದೂ ಗೊತ್ತಿಲ್ಲ.
ಕಾಲಿಗೆರಗಿ ಹೊರಟ ಆ ದಿನ-
ಕಣ್ಣೀರು ಒರೆಸಿದ್ದೇನು
ಮುದ್ದಾಗಿ ಮಾತಾಡಿ ನಗಿಸಿದ್ದೇನು
ಚೆನ್ನಾಗಿ ನೋಡಿಕೊಳ್ಳೆಂದು ಅಪ್ಪನಿಗೆ ಹೇಳಿ
ಹೊರಟೆಯಲ್ಲ! ಮಗಾ
ಈಗ ನಿನೆಲ್ಲಿದ್ದೀಯೋ ನನ್ನ ಕಂದಾ.

ಆ ಹಿಮಮಳೆ ಚಳಿಗಂಜದೆ ಮುನ್ನುಗ್ಗುವ
ನಿನ್ನ ಬಿಸಿರಕ್ತದ ಕೆಚ್ಚೆದೆಯ ಹೆಜ್ಜೆಗಳನು
ಕಣ್ಣಲ್ಲೇ ತುಂಬಿಕೊಂಡಿದ್ದೇನೆ.
ಕಾರ್ಗಿಲ್ಲಿನ ಕಿಡಿ
ನಿನ್ನ ಕಿಡಿಕಿಡಿಯಾಗಿರಿಸಿದರೂ
ನನ್ನ ಮನ ಕಾರ್ಗತ್ತಲೆಯಂತೆ
ವ್ಯಾಕುಲಗೊಳ್ಳುತ್ತಿದೆಯಲ್ಲ! ಮಗಾ
ಯಾವ ಕಣಿವೆಯ ಆಳೆತ್ತರದಲ್ಲಿರುವಿಯೋ,
ನನ್ನ ಕಣ್ಮಣಿ.

ಅಬ್ಬರಿಸುವ ಗುಂಡು ಮದ್ದು ಬಂದೂಕುಗಳಿಗೆ
ನೆಲ ನಡುಗಿದಂತೆ ಒಳಗೊಳಗೇ
ನಾನೂ ನಡುಗುತಿರುವೆ
ಅಸಹಾಯಕ ಪಂಜರದ ಗಿಳಿಯಂತೆ
ಅತ್ತಿಂದಿತ್ತ ಸುತ್ತುತ
ದುಃಖ ಗಂಟಲಿನೊಳಗೇ ಹೂತಿಟ್ಟು
ಹೆತ್ತೊಡಲ ಸಂಕಟ ಹೊಟ್ಟೆಯೊಳಗೇ ಹಾಕಿ
ವೀರಯೋಧನ ತಾಯಿ ಎನ್ನುತ
ಒಮ್ಮೊಮ್ಮೆ ಇಬ್ಬಗೆಯ ನೀತಿಗೂ
ಕಣ್ಣೀರು ಸುರಿಸುತ ಒರೆಸುತ
ರಣರಂಗದ ನಿನ್ನೆದೆಯ ಕೆಚ್ಚತನಕೆ
ನಾನೂ ಸೋಲುತ ಗೆಲ್ಲುತ
ನಿನಗಾಗಿ, ದೇಶಕ್ಕಾಗಿ
ಪ್ರಾರ್ಥಿಸುತ್ತಿದ್ದೇನೆ ಮಗಾ.

ಪ್ರೀತಿಪ್ರೇಮ ವಿಶ್ವಾಸಕೆ
ಮೋಸಬಗೆದ ದ್ರೋಹಿಗಳ ನೀತಿಗೆ
ವೀರ ಮಕ್ಕಳು ಜೀವತೆತ್ತು
ಶಿಖರದ ಆಳೆತ್ತರಕೂ ನೆತ್ತರಚಿಮ್ಮಿ
ವೀರಸ್ವರ್ಗ ಏರುತ್ತಿದ್ದಾರಲ್ಲ.
ದೃತಿಗೆಡಬೇಡ ಕಾರ್ಗಿಲ್ಲಿನ
ಕಾರ್ಗತ್ತಲೆಯಲ್ಲೂ ಹೊನ್ನಕಿರಣ
ಬಂದೇ ಬರುತ್ತದೆ ಮಗಾ-
ಕೆಚ್ಚೆದೆಯಿಂದ ಇರು ನನ್ನ ವೀರಪುತ್ರಾ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚೇತನ
Next post ಗಂಡ ಉವಾಚ

ಸಣ್ಣ ಕತೆ

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಮೇಷ್ಟ್ರು ವೆಂಕಟಸುಬ್ಬಯ್ಯ

    ಪ್ರಕರಣ ೧೨ ಜನಾರ್ದನಪುರಕ್ಕೆ ರಂಗಣ್ಣ ಹಿಂದಿರುಗಿದ್ದಾಯಿತು. ತಿಮ್ಮರಾಯಪ್ಪ ಹೇಳಿ ಕೊಟ್ಟಿದ್ದ ಹಾಗೆ ಕಲ್ಲೇಗೌಡರಿಗೆ ಕಾಗದಗಳನ್ನು ಬರೆದದ್ದೂ ಆಯಿತು. ಕಡೆಗೆ ರಿಜಿಸ್ಟರ್ಡ್ ಕಾಗದವನ್ನೂ ಅದಕ್ಕೆ ಒಂದು ಜ್ಞಾಪಕದೋಲೆಯನ್ನೂ ಕಳಿಸಿದ್ದಾಯಿತು.… Read more…

  • ಮೇಷ್ಟ್ರು ಮುನಿಸಾಮಿ

    ಪ್ರಕರಣ ೮ ಮಾರನೆಯ ದಿನ ಬೆಳಗ್ಗೆ ರಂಗಣ್ಣನು, ‘ಶಂಕರಪ್ಪ ! ನೀವೂ ಗೋಪಾಲ ಇಬ್ಬರೂ ನೆಟ್ಟಗೆ ಜನಾರ್ದನಪುರಕ್ಕೆ ಹಿಂದಿರುಗಿ ಹೋಗಿ, ನನ್ನ ಸಾಮಾನುಗಳನ್ನೆಲ್ಲ ಜೋಕೆಯಿಂದ ತೆಗೆದುಕೊಂಡು ಹೋಗಿ.… Read more…