ಕಾರ್ಗಿಲ್ ಯುದ್ಧ – ಯೋಧನ ತಾಯಿಯೊಬ್ಬಳ ಅತ್ಮಗೀತೆ

ಹಿಮಶೈಲ ಕಾಯುವ
ಮಗನೇ ನೀನೆಲ್ಲಿದ್ದೀಯೋ
ನನಗೊಂದೂ ಗೊತ್ತಿಲ್ಲ.
ಕಾಲಿಗೆರಗಿ ಹೊರಟ ಆ ದಿನ-
ಕಣ್ಣೀರು ಒರೆಸಿದ್ದೇನು
ಮುದ್ದಾಗಿ ಮಾತಾಡಿ ನಗಿಸಿದ್ದೇನು
ಚೆನ್ನಾಗಿ ನೋಡಿಕೊಳ್ಳೆಂದು ಅಪ್ಪನಿಗೆ ಹೇಳಿ
ಹೊರಟೆಯಲ್ಲ! ಮಗಾ
ಈಗ ನಿನೆಲ್ಲಿದ್ದೀಯೋ ನನ್ನ ಕಂದಾ.

ಆ ಹಿಮಮಳೆ ಚಳಿಗಂಜದೆ ಮುನ್ನುಗ್ಗುವ
ನಿನ್ನ ಬಿಸಿರಕ್ತದ ಕೆಚ್ಚೆದೆಯ ಹೆಜ್ಜೆಗಳನು
ಕಣ್ಣಲ್ಲೇ ತುಂಬಿಕೊಂಡಿದ್ದೇನೆ.
ಕಾರ್ಗಿಲ್ಲಿನ ಕಿಡಿ
ನಿನ್ನ ಕಿಡಿಕಿಡಿಯಾಗಿರಿಸಿದರೂ
ನನ್ನ ಮನ ಕಾರ್ಗತ್ತಲೆಯಂತೆ
ವ್ಯಾಕುಲಗೊಳ್ಳುತ್ತಿದೆಯಲ್ಲ! ಮಗಾ
ಯಾವ ಕಣಿವೆಯ ಆಳೆತ್ತರದಲ್ಲಿರುವಿಯೋ,
ನನ್ನ ಕಣ್ಮಣಿ.

ಅಬ್ಬರಿಸುವ ಗುಂಡು ಮದ್ದು ಬಂದೂಕುಗಳಿಗೆ
ನೆಲ ನಡುಗಿದಂತೆ ಒಳಗೊಳಗೇ
ನಾನೂ ನಡುಗುತಿರುವೆ
ಅಸಹಾಯಕ ಪಂಜರದ ಗಿಳಿಯಂತೆ
ಅತ್ತಿಂದಿತ್ತ ಸುತ್ತುತ
ದುಃಖ ಗಂಟಲಿನೊಳಗೇ ಹೂತಿಟ್ಟು
ಹೆತ್ತೊಡಲ ಸಂಕಟ ಹೊಟ್ಟೆಯೊಳಗೇ ಹಾಕಿ
ವೀರಯೋಧನ ತಾಯಿ ಎನ್ನುತ
ಒಮ್ಮೊಮ್ಮೆ ಇಬ್ಬಗೆಯ ನೀತಿಗೂ
ಕಣ್ಣೀರು ಸುರಿಸುತ ಒರೆಸುತ
ರಣರಂಗದ ನಿನ್ನೆದೆಯ ಕೆಚ್ಚತನಕೆ
ನಾನೂ ಸೋಲುತ ಗೆಲ್ಲುತ
ನಿನಗಾಗಿ, ದೇಶಕ್ಕಾಗಿ
ಪ್ರಾರ್ಥಿಸುತ್ತಿದ್ದೇನೆ ಮಗಾ.

ಪ್ರೀತಿಪ್ರೇಮ ವಿಶ್ವಾಸಕೆ
ಮೋಸಬಗೆದ ದ್ರೋಹಿಗಳ ನೀತಿಗೆ
ವೀರ ಮಕ್ಕಳು ಜೀವತೆತ್ತು
ಶಿಖರದ ಆಳೆತ್ತರಕೂ ನೆತ್ತರಚಿಮ್ಮಿ
ವೀರಸ್ವರ್ಗ ಏರುತ್ತಿದ್ದಾರಲ್ಲ.
ದೃತಿಗೆಡಬೇಡ ಕಾರ್ಗಿಲ್ಲಿನ
ಕಾರ್ಗತ್ತಲೆಯಲ್ಲೂ ಹೊನ್ನಕಿರಣ
ಬಂದೇ ಬರುತ್ತದೆ ಮಗಾ-
ಕೆಚ್ಚೆದೆಯಿಂದ ಇರು ನನ್ನ ವೀರಪುತ್ರಾ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚೇತನ
Next post ಗಂಡ ಉವಾಚ

ಸಣ್ಣ ಕತೆ

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…