ಕೃಷ್ಣ ನಮ್ಮ ಈ ಗೋಕುಲಕೆ
ಬಂದುದೇಕೆ ಗೊತ್ತೇ?
ನಮ್ಮ ಒಳಗಿನ ಮಿಂಚನು ಭೂಮಿಗೆ
ಇಳಿಸಿ ಹೊಳೆಸಲಿಕ್ಕೆ
ಬಾನಿನ ಬೆಳಕಿಗೆ ಭೂಮಿಯ ತಮವ
ಗುಡಿಸಿ ಹಾಕುವಂಥ
ಬಲವಿದೆ, ಹಾಗೇ ಒಲವಿದೆ ನಮ್ಮೊಳು
ಸ್ವಾರ್ಥವ ಗೆಲುವಂಥ
ತೆತ್ತುಕೊಳ್ಳುವ ಪ್ರೇಮವೆ ಸಾಲದು
ಬಾಳಿನ ಸಂತಸಕೆ
ತುತ್ತುಗೊಳ್ಳುವ ಬೆಳಕೂ ಬೇಕು
ಪ್ರೀತಿಯ ಪೂರ್ಣತೆಗೆ
ಕೃಷ್ಣನ ತಬ್ಬಿ ಬಿಡಿಸಿಕೊಂಡೆವು
ಎಲ್ಲ ಮಾಯೆಯಿಂದ
ಕೊಳಲು ನುಡಿಸಲು ತುಂಬಿಹೋಯಿತು
ಬದುಕು ರಾಗದಿಂದ
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.