ನನ್ನ ಮುದ್ದು ಚಿಲಿಪಿ ಗಿಣಿಯೇ
ಬಂಗಾರ ತುಂಬಿದ ಗಣಿಯೇ
ಹೂನಗೆ ಅರಳಿದೀ ಮುಖಕೆ
ಹುಣ್ಣಿಮೆ ಆಕಾಶ ಎಣೆಯೇ?
ಹೇಗಿರದೆ ನೀನಿದ್ದೆ ಮಗುವೇ?
ಕತ್ತಲಾಗಿತ್ತಲ್ಲ ಜಗವೇ
ನೀ ಬಂದು ನಗಲು ಈ ಇಳೆಗೇ
ಹರಿದಿದೆ ಬೆಳಕಿನ ಹೊಳೆಯೇ!
ರಸಹೀನವಾಗಿತ್ತು ಬಾಳು-ಈಗ
ಮೊಸರು ಜೇನು ಬೆಣ್ಣೆ ಹಾಲು
ಹಾಳು ಸುರಿಯುತ್ತಿದ್ದ ಹಾದಿ – ಈಗ
ದೇವರ ಉತ್ಸವ ಬೀದಿ!
ಜನ್ಮ ಜನ್ಮದ ಪೂಜೆ ಫಲಿಸಿ
ದೇವರೆ ಬಂದರೊ ಹರಸಿ
ಬರಿದಿದ್ದ ತೋಳಿನ ತುಂಬ
ಉಡುಪಿ ಕೃಷ್ಣನ ಮುದ್ದು ಬಿಂಬ!
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.