Home / ಕವನ / ಕವಿತೆ / ಎಂಥ ಭಾರತ ೨

ಎಂಥ ಭಾರತ ೨

ಇಲ್ಲಿಯವರೆಗೆ ನಿರೋಧ-ನಿಷೇಧಗಳ ಹಿಡಿತ-ಬಿಗಿತಗಳ
‘ಋಣ’ ಮಾರ್ಗದಲ್ಲಿ ನಡೆದದ್ದಾಯಿತು
ಹುಲಿಯ ಮೈ ಬೋಳಿಸಿ ಆಕಳ ಮಾಡುವ ಯತ್ನ ನಡೆಯಿತು
ಆಟಗುಳಿ ಬಾಲಕನ ಕೈಕಾಲು ಕಟ್ಟಿ ಮೂಲೆ ಹಿಡಿಸಿದ್ದಾಯಿತು
ಹರಿವ ನಾಲಗೆಯ ಕತ್ತರಿಸಿ, ಉರಿವಗ್ನಿಯ ಮೇಲೆ ತಣ್ಣೀರು ಸುರುವಿ
ಕಡಿವ ಕತ್ತಿಯ ಬಂಡೆಗೆ ಹೊಡೆದು ಮೊಂಡಾಗಿಸಿ ಮೆರೆದ
ಅಹಿಂಸೆಯ ಹಿಂಸೆಯ, ಬ್ರಹ್ಮಚರ್ಯದ ಭಾನಗಡಿಯ,
ಸಾತ್ವಿಕತನದ ಸೂಳೆಗಾರಿಕೆಯ, ಸ್ವರ್ಗದ ದುರ್ಮಾರ್ಗವ
ನೀತಿಯ ನೇಣನು, ಭಕ್ತಿಯ ಭೋಳೆತನವ,
ಯೋಗದ ಗಂಡುಜೋಗತಿತನವ
ಇನ್ನಾದರೂ ಸಾಕು ಮಾಡೋಣ,

ಚೈತನ್ಯವ ಉಸಿರು ಕಟ್ಟಿಸುವ, ಜೀವ ಶವವಾಗುವ ಪರಿಸಾಕು
ಆ ದೈವ ಚಿಂತನೆಯನ್ನು ಯುಗಗಳಿಗೊಮ್ಮೆ ಹುಟ್ಟುವ
ಆ ಮಹಾಪುರುಷರಿಗಷ್ಟೇ ಬಿಟ್ಟುಕೊಟ್ಟು
ನಾವು ‘ಧನ’ ಮಾರ್ಗದ ಇಹಚಿಂತನೆ ಮಾಡೋಣ,
ಚೆನ್ನಾಗಿ ಉಳುವ ಬೆಳೆವ, ಚೆನ್ನಾಗಿ ಉಣ್ಣುವ-ಉಡುವ,
ಕಣ್ದಣಿಯೆ ಸೊಗವಾಡಿ ನೋಡಿ ಹಿಗ್ಗುವ,
ಮನದಣಿಯೆ ನಕ್ಕು ಅತ್ತು, ಭಾವ ಪೂರ ಹರಿಸುವ,
ಬಾಯಿ ತುಂಬ ಮಕಾತಾಡುವ, ತೆಕ್ಕೆತುಂಬಾ ಸ್ನೇಹಿಸುವ
ಕೈಕಾಲು ತಲೆಗಳಿಗೆ ತೆರಪಿಲ್ಲದೆ ಕೆಲಸ ತುಂಬುವ,
ನೋವಿನ ನಂಜುಂಡು, ಎಂಥ ಹೊಡೆತಗಳಿಗೂ ಕಾಯವ ಕಲ್ಲಾಗಿಸುವ,
ನಮ್ಮ ಬೆನ್ನಂಟಿದ ಹೊಟ್ಟೆಗಳ ತುಂಬಿ ತೇಗಿಸುವ,
ರಾತ್ರಿ ತುಂಬಾ ನಿದ್ರಿಸಿ, ಪುನರ್ಜನ್ಮವನಣಕಿಸುವ,
ಹಗಲು ತುಂಬಾ ದಣಿದು ಭೂತಪಾಪಗಳ ಸುಡುವ
ಮಾರ್ಗವನು ಇನ್ನು ಹಿಡಿಯೋಣ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...