Home / ಬಾಲ ಚಿಲುಮೆ / ಕಥೆ / ತಂದೆಯೂ ಮಕ್ಕಳೂ

ತಂದೆಯೂ ಮಕ್ಕಳೂ

ಆಶ್ರಮದಲ್ಲಿ ಅರಳಿಯ ಮರದ ಕೆಳಗೆ ಒಂದು ಜಿಂಕೆಯ ಚರ್‍ಮದ ಮೇಲೆ ವಿಶ್ವಾಮಿತ್ರರು ಕುಳಿತಿದ್ದರು. ಆಗ ಒಬ್ಬ ಹುಡುಗನು ಏದುತ್ತಾ ಓಡಿಬಂದು ಅವರ ಕಾಲಿಗೆ ಬಿದ್ದನು. ಅವರೂ “ಯಾರು? ಶುನಶ್ಶೇಫನೇನೋ? ಎಲಾ! ಕೊನೆಗೆ ಬದುಕಿಕೂಂಡೆಯಾ? ಭಲೆ! ಸಂತೋಷ! ಬಾ! ಕುಳಿತುಕೋ” ಎಂದರು. ಅವನೂ ಕೈ ಮುಗಿದು ಗುರುಗಳೇ! ತಮ್ಮ ಕೃಪೆಯಿಂದ ನಾನು ಉಳಿದುಕೊಂಡೆನು. ಇನ್ನು ಮುಂದಕ್ಕೆ ತಾಯಿ, ತಂದೆ, ಬಂಧು, ಬಳಗಗಳೆಲ್ಲವೂ ತಾವೇ! ನಾನೂ ತಮ್ಮ ಮಕ್ಕಳಲ್ಲಿ ಒಬ್ಬನಾಗಿ ಸೇವೆ ಮಾಡಿಕೊಂಡು ಇರುತ್ತೇನೆ. ಅಪ್ಪಣೆಯಾಗಬೇಕು” ಎಂದು ಕೇಳಿಕೊಂಡನು. ಅವನ ಕಣ್ಣುಗಳಿಂದ ನೀರು ಹರಿಯುತ್ತ ಇತ್ತು. ಅದನ್ನು ನೋಡಿ ವಿಶ್ವಾಮಿತ್ರರಿಗೆ ಮನಸ್ಸು ಕರಗಿ ಹೋಯಿತು. “ಹೂ! ಹಾಗೆಯೇ ಆಗಲಿ ಇರು!” ಎಂದರು. ಅವನನ್ನು ಕೊಲ್ಲಬೇಕೆಂದು ಯಾರೋ ಹಿಡಿದುಕೊಂಡು ಹೋಗಿದ್ದರು. ವಿಶ್ವಾಮಿತ್ರರ ಕೃಪೆಯಿಂದ ಅವನು ಅವರ ಕಯ್ಯಿಂದ ತಪ್ಪಿಸಿಕೊಂಡು ಬದುಕಿ ಬಂದಿದ್ದನು.

ಅವರಿಗೆ ಆವೇಳೆಗಾಗಲೆ ಆರು ಜನ ಮಕ್ಕಳಿದ್ದರು. ಮೊದಲಿನ ಮೂವರು ಯಾವಾಗಲೂ ತಂದೆಯು ಹೇಳಿದಕ್ಕೆ ಪ್ರತಿಯನ್ನೇ ಹೇಳುವರು. ಕೊನೆಯ ಮೂವರು ತಂದೆಯ ಮಾತು ಎಂದರೆ, ಏನೇ ಆಗಲಿ ಎರಡು ಮಾತು ಆಡುತ್ತಿರಲಿಲ್ಲ. ಆರು ಜನರನ್ನೂ ಕರೆಸಿ “ಅಯ್ಯಾ! ಈ ಶುನಶ್ಶೇಫನು ಗುರುಹಿರಿಯರಲ್ಲಿ ಭಕ್ತಿಯುಳ್ಳವನು. ಇವನು ನಿಮ್ಮೆಲ್ಲರಿಗಿಂತಲೂ ವಿದ್ಯೆಯಲ್ಲಿಯೂ, ತಪಸ್ಸಿನಲ್ಲಿಯೂ ಹಿರಿಯನು. ಇವನೂ ನಿಮ್ಮಲ್ಲಿ ಒಬ್ಬನಾಗಿ ಇದ್ದು ಕೊಂಡಿರಲಿ” ಎಂದು ಹೇಳಿದರು.

ಮೊದಲ ಮೂವರು ಎಂದಿನಂತೆ ಎದುರು ಆಡಿದರು. ವಿಶ್ವಾಮಿತ್ರರೂ ಒಂದು ಸಲ ಹೇಳಿದರು. ಎರಡು ಸಲ ಹೇಳಿದರು. ಮೂರನೆಯ ಸಲವೂ ಹೇಳಿದರು. ಅವರು ಕೇಳಲಿಲ್ಲ. “ನಿಮ್ಮ ಮನೆಯೇ ಬೇಡ” ಎಂದು ಎಲ್ಲಿಗೋ ಹೊರಟು ಹೋದರು.

ಕೊನೆಯ ಮೂವರು “ತಂದೆಯೇ! ನೀನೇ ನಮಗೆ ದೇವರು. ನೀನು ಹೇಳಿದುದೇ ನಮಗೆ ವೇದವಾಕ್ಯವು. ನಿನ್ನ ಇಷ್ಟದಂತೆಯೇ ಆಗಲಿ. ಶುನಶ್ಶೇಫನೇ ನಮಗೆಲ್ಲ ಹಿರಿಯವನಾಗಲಿ” ಎಂದು ಒಪ್ಪಿಕೊಂಡರು. ವಿಶ್ವಾಮಿತ್ರರಿಗೆ ಸಂತೋಷವಾಯಿತು. ಆ ನಾಲ್ವರಿಗೂ ಸಕಲ ವಿದ್ಯೆಗಳನ್ನೂ ಉಪದೇಶಿಸಿ, ಸಿದ್ಧಿಯಾಗುವಂತೆ ಅನುಗ್ರಹಿಸಿದರು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...