Home / ಬಾಲ ಚಿಲುಮೆ / ಕಥೆ / ಸುಬ್ಬೂ- ಶಿವೂ

ಸುಬ್ಬೂ- ಶಿವೂ

ಸುಬ್ಬು:- ಶಿವೂ! ಇತ್ತಲಾಗಿ ಬಾ. ಅಲ್ಲಿ ಒಂದು ಕರು ನಿಂತಿದೆ. ಹಾದೀತು.

ಶಿವು:- ಅದು ಹಾಯುವುದಿಲ್ಲ, ನಮ್ಮ ಮನೆಯಲ್ಲಿ ಹುಟ್ಟಿದ ಕರು.

ಸುಬ್ಬು:- ಇದೇನೋ ಹೀಗೆನ್ನುವೆ? ಮನೆಯಲ್ಲಿ ಹುಟ್ಟಿದ ಮಾತ್ರಕ್ಕೆ ಹಾಯುವುದಿಲ್ಲವೆ?

ಶಿವು:- ಅದು ನನ್ನ ಸ್ನೇಹಿತ! ಸುಬ್ಬೂ! ನನ್ನನ್ನು ಹಾಯುವುದಿಲ್ಲ.

ಸುಬ್ಬು:- ‘ಕರು ಸ್ನೇಹಿತ’ ಎಂದರೇನಯ್ಯ?

ಶಿವು:- ಇಲ್ಲ. ಸುಬ್ಬೂ! ಅದಕ್ಕೆ ನನ್ನನ್ನು ಕಂಡರೆ ಬಲು ಇಷ್ಟ. ನಾನು ಕರೆದ ಕಡೆಯೆಲ್ಲಾ ಬರುತ್ತದೆ. ತಾಯಿಯ ಬಳಿ ಹಾಲು ಕುಡಿಯುತ್ತಿದ್ದರೂ, ನಾನು ಕೂಗಿದರೆ ಬಂದು ಬಿಡುವುದು.

ಸುಬ್ಬು:- ಏನೋಪ್ಪ! ನನಗೆ ನಂಬುಗೆಯಿಲ್ಲ. ಹಾಲಿನ ಮಾದಮ್ಮನ ಮನೆಯಲ್ಲಿ ಒಂದು ಕರು ಇದೆ. ಅದರ ವಿಚಿತ್ರ ಏನು ಹೇಳಲಿ? ಯಾರಾದರೂ ಹತ್ತಿರ ಕುಳಿತುಕೊಂಡರೆ ಅವರ ಬಟ್ಟೆಯನ್ನೇ ಮೇದು ಬಿಡುತ್ತದೆ. ಅದನ್ನೇನಾದರೂ ಹುಷ್ ಎಂದರೆ ಹಗ್ಗ ಕಿತ್ತುಕೊಂಡು, ಹಾಯುವುದಕ್ಕೆ ಓಡಿಸಿಕೊಂಡು ಬರುತ್ತದೆ. ಇಂಥಾದುದರಲ್ಲಿ ನೀನು ಇದು ‘ನನ್ನ ಸ್ನೇಹಿತ’ ಎಂದರೆ ನಂಬುವುದು ಹೇಗಯ್ಯಾ?

ಶಿವು:- ಅದೆಲ್ಲ ಸಾಕುವುದರಲ್ಲಿ ಇದೆಯಯ್ಯಾ! ಅವರ ಮನೆಯಲ್ಲಿ ಅದಕ್ಕೆ ಹೊಟ್ಟೆಗೆ ಸರಿಯಾಗಿ ಹಾಕುವುದಿಲವೋ ಏನೋ? ಅಲ್ಲದೆ ದನ ಮೊದಲಾದ ಪ್ರಾಣಿಗಳಿಗೆ ಹೊಟ್ಟೆಗೆ ಹಾಕಿದರೆ ಮಾತ್ರ ಸಾಲದು. ಅದರ ಜತೆಗೆ ನಮ್ಮ ದಯೆಯೂ ಅವುಗಳ ಮೇಲೆ ಇರಬೇಕು. ಆಗ ಅವುಗಳು ನಮ್ಮಲ್ಲಿಯೂ ಪ್ರೀತಿಯಿಡುವುವು. ಈಗ ನೋಡು. ಈ ಕರುಗೆ ನನ್ನಲ್ಲಿ ಎಷ್ಟು ಸ್ನೇಹವಿದೆ! ನನು ಹೋದ ಹೋದ ಕಡೆ ತಾನೂ ಬರುವುದಿರಲಿ. ಇದು ನಿತ್ಯವು ನನ್ನ ಹಾಸಿಗೆಯಲ್ಲಿಯೇ ಮಲಗುವುದು. ಒಂದು ದಿನವಾದರೂ ಹಾಸಿಗೆಯಲ್ಲಿ ಸಗಣಿ ಹಾಕಿಲ್ಲ. ಗಂಜಲವನ್ನು ಹುಯ್ದಿಲ್ಲ. ಒಂದುದಿನವು ನನ್ನನ್ನು ತುಳಿದಿಲ್ಲ. ನಾನು ಹೊರಗೆ ಹೋಗಿ ಬಂದರೆ ನನ್ನ ಮೂತಿಯಲ್ಲಿ ಮೂತಿಯಿಟ್ಟು ನನ್ನನ್ನು ಎಷ್ಟು ಪ್ರೀತಿಯಿಂದ ನೆಕ್ಕುವುದು ಬಲ್ಲೆಯಾ?

ಸುಬ್ಬು:- ಇದಿಷ್ಟೂ ಯಾತರಿಂದ ಆಗುವುದಯ್ಯ?

ಶಿವೂ:- ನಾನು ಮೊದಲೇ ಹೇಳಲಿಲ್ಲವೆ? ಸುಬ್ಬೂ! ಪ್ರಾಣಿಗಳಿಗೂ ನಮ್ಮ ಹಾಗೆಯೇ ‘ಬೇಕು ಬೇಡ’ ಗಳು ಉಂಟು, ನಾವು ಹೇಳಿಕೊಳ್ಳಬಲ್ಲೆವು. ಅವು ಹೇಳಿಕೊಳ್ಳಲಾರವು. ನಾವು ಅವುಗಳಲ್ಲಿ ಮಮತೆಯಿಟ್ಟು, ನಮ್ಮ ಮಕ್ಕಳಂತೆ ಬೆಳಸಿದರೆ ಅವೂ ನಮ್ಮಲ್ಲಿ ಪ್ರೀತಿಯಿಟ್ಟು ನಡೆದು ಕೊಳ್ಳುವುವು. ಈಗ ಈ ಕರುವನ್ನೂ ನೋಡು. ಮಾದಮ್ಮನ ಮನೆಯ ಕರುವನ್ನೂ ನೋಡು. ಅದನ್ನು ನೋಡಿದರೆ ಎಷ್ಟು ಅಸಹ್ಯವಾಗುತ್ತದೆ? ಇದನ್ನು ನೋಡಿದರೆ ಎಷ್ಟು ಸಂತೋಷವಾಗುತ್ತದೆ? ಅಲ್ಲದೆ ಇದು ನನ್ನ ಹಿಂದೆ ಹಂದೆ ಬರುತ್ತಿದ್ದರೆ ನನಗೆಷ್ಟು ಸಂತೋಷ ಬಲ್ಲೆಯಾ? ಇನ್ನೂ ಒಂದು ವಿಚಿತ್ರ ನೋಡು. ಈಗ ನನ್ನನ್ನು ಹೊಡೆಯುವುದಕ್ಕೆ ಬಾ. ನೋಡಿದೆಯಾ? ನೀನು ನನ್ನನ್ನು ಹೊಡೆಯಲು ಬಂದರೆ ಅದು ಹೇಗೆ ನಿನ್ನ ಮೇಲೆ ಬೀಳಲು ಬರುತ್ತದೆ? ಇದು ನನ್ನ ಆಪ್ತನಲ್ಲವೆ?

ಸುಬ್ಬೂ:- ಪ್ರಾಣಿಗಳೂ ಹೀಗೆ ಗೆಳೆತನವನ್ನು ಬೆಳೆಸ ಬಲ್ಲವೆಂದು ನನಗೆ ತಿಳಿದಿರಲಿಲ್ಲ. ಶಿವೂ ಇನ್ನು ಮೇಲೆ ನಾನೂ ಅವುಗಳ ಗೆಳೆತನವನ್ನು ಸಂಪಾದಿಸುವೆನು.
*****

Tagged:

Leave a Reply

Your email address will not be published. Required fields are marked *

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...