Home / ಕವನ / ಕವಿತೆ / ಮಹಾತ್ಮರು

ಮಹಾತ್ಮರು

೧. ಚರಮ ಗೀತೆ

ಜಗದಿ ಕತ್ತಲು ಮುಸುಕಿ ಮುಂದರಿಯದಾಯ್ತಿಂದು
ನಡಯಿಸುವ ತಂದೆ ನೀ ಮರೆಯಾಗೆ ನಮ್ಮಿಂದ
ನಾವು ತಬ್ಬಲಿಯಾಗಿ ಬಾಳಲೆ೦ತಿನ್ನಕಟ!
ಜೀವಾತ್ಮ ತೋಲಗಿರುವ ದೇಹದಂತೆ!

ಗಾಂಧಿಗುಂ ಜರೆಯುಂಟೆ-ಮೃತಿಯುಂಟೆ-ಅಳಿವುಂಟೆ
ಎಂದೆಮ್ಮನಾಶ್ಚರ್ಯಗೊಳಿಸಿ ನೀನೊಮ್ಮೆಗೇ
ಮೂಗುವಡಿಸೀ ಜಗವ ಪಯಣಗೈವರೆ ತಾತ
ಸ್ವಾತಂತ್ರ ಸಂಗ್ರಾಮದೇಕವೀರ !!

ಹೃದಯ ಬರಡಾಯ್ತಮಮ ಶೂನ್ಯ ಮಾಯ್ತೀ ಲೋಕ
ತುಂಬಿದೀ ಭರತಪದ ಬರಿದಾಯ್ತು ಬದುಕುಳಿದು
ಭಾರತಿಯ ನಡುನೀರಿನಲಿ ಬಿಟ್ಟು ನಡೆವರೇ
ಓ ಮಹಾತ್ಮನೆ ಜ್ಯೋತಿಯಾರಿಸುವರೆ !!

ಭಾರತಿಯ ಹಿರಿದೆನಿಸಿ ನಲಿಸುವವರಾರಿನ್ನು
ಮೆರೆದಹಿಂಸಾವ್ರತದಿ ಬೆಳಕಿತ್ತ ಭಾಸ್ಕರನೆ
ಅಸ್ತಮಿಸುತೆಲ್ಲಿರುವೆ ಪುಣ್ಯಮೂರುತಿ ನಿನ್ನ
ದಿವ್ಯ ದರ್ಶನವಿತ್ತು ಮುಗುಳುನಗೆಯ !!

ನೊಂದು ಬೆಂದಿತು ಹೃದಯ ಶೋಕವೊಂದೇ ತುಂಬಿ
ದುಃಖಸಾಗರಮಾಯ್ತು ಭರತಭೂಮಿಯ ನೆಲವು
ಭಕ್ತಪದ ಸಮ್ರಾಟ ನುಡಿ ಬಾರೆಲೈ ತಂದೆ,
ಕಣ್ಣೀರಿನಿಂದೊರೆವೆ ಚರಮ ಗೀತೆ!

೨ ಜಗಜ್ಜನಕ ಗಾ೦ಧಿಜೀ

ಭರತರಾಷ್ಟ್ರದ ಜನಕ ಗುರುವರ | ದೇವನನುಪಮ ಯೋಗಿಯೆ
ಸರುವ ಹೃದಯವ ಹೊಕ್ಕು ಸತ್ಯದ | ಮರ್ಮವರುಹಿದ ತ್ಯಾಗಿಯೆ
ಹಿರಿಯ ಸ್ವಾತಂತ್ರ್ಯವನು ಬೋಧಿಸಿ | ಮನವನರಳಿಸಿ ಕೆರಳಿಸಿ
ಧರುಮದರ್ಥವ ತಿಳುಹಿ ಮತಗಳ | ನೊಂದು ಮಾಡಿದ ಮಹಋಷಿ.

ವಿನಯ ಸತ್ಯ ಪ್ರೇಮ ಸಹನ | ತ್ಯಾಗಮೌದಾರ್ಯ೦ಗಳ
ಘನತೆ ಪೌರುಷ ಧೃತಿ ನಿವೇಕ ವಿ| ಚಾರ ನಿರ್ಮಲ ಗುಣಗಳ
ಮುನಿ ವಿರಾಜಿತ ಮನ ಸುಶೋಭಿತ | ಯೋಗಿ ಹೃದಯದ ನಗೆಗಳ
ವನಧಿ ಗಾಂಧಿಮಹಾತ್ಮ ನಿನ್ನನು | ತಿಳಿವರಾರೀ ಬಗೆಗಳ.

ಜೀವಕೆಲ್ಲಕೆ ಕೊಟ್ಟು ಚೇತನ | ಸಕಲ ಹೃದಯವ ಸೇರಿದೆ
ನೋವನೊಪ್ಪಿದೆ ಸಾವನಪ್ಪಿದೆ | ಜಡ ಶರೀರವ ತೂರಿದೆ.
ಭಾವಿತಾತ್ಮನೆ ಬಂದ ಭೂಮಿ ಪ | ವಿತ್ರಮಾಯ್ತು ತ್ಯಾಗದೆ
ಆವ ಘನತೆಯ ಮಹಿಮೆಯಿಂದಲಿ | ನಿನ್ನ ಪಡೆದೆವೊ ಪುಣ್ಯದೆ.

ಲೋಕ ವೈಭವ ನಿನ್ನ ಸುಸ್ವಾ | ಗತಿಸಿ ಕರೆದರೆ ನೋಡದೆ
ಸಾಕು ಹರಿಜನ ಸೇವೆಯೆಂದೇ | ಉಸಿರು ಮೀಸಲು ಮಾಡಿದೆ.
ಬೇಕು ಮನಸಾ ವಾಚ ಕರ್ಮದೊ | ಳೊಂದೆ ಕೃತಿ ಧೃತಿಯೆನ್ನುತೆ
ಏಕಕಂಠದೊಳೊರದೆ ಶ್ರದ್ದಾ | ಸಹನೆ ಪಾವನಮೆನ್ನುತೆ.

ನೀರು-ನಲಮಾಕಾಶ-ಗಾಳಿಯು | ನಿರುತ ಪಾವನವಾದುದು
ಶೌರ್ಯ ಶಮೆ ದಮೆ ತಪಸು ಶೌಚಾ | ಚಾರ ಜೋತಿಯ ಪಡದುದು
ಆರು ಬಳಗಂ ನಿನ್ನದಾವುದು | ಎಲ್ಲ ಲೋಕವ ಸೇರ್ದುದು !
ಆರು ನಿನ್ನವರಲ್ಲ ಧರೆಯಲಿ ? | ನಿನ್ನದಲ್ಲದದಾವುದು?

ಸಿರಿ ಸರಸ್ವತಿ ಶಕ್ತಿ ನಿನಗೂಲಿ | ದಿಹರು ತಾವ್ನಲಿಯುತ್ತಲಿ
ಹರಿಹರಾದಿ ವಿರಿಂಚಿ ಧರ್ಮರು | ಹರಸುತಲಿವರು ಮುದದಲಿ
ವರ ಕುಬೇರನು ತೊತ್ತು ಶಕ್ರನು | ವಿಭವ ತೊರೆದನು ಒಲ್ಲದೆ
ಚರಣಸೇವೆಯ ಮಾಡಿ ನಿಂದರು | ಎಲ್ಲ ಜನಪದಮೂಲದೆ.

ಜಗದ ಹಿತವಂ ಬಗೆದು ನಿನ್ನನೆ | ಮರೆತೆ ಗುಂಡಿಗೆ ನೀಗಿದೆ
ಒಗೆದು ನಶ್ವರದೇಹ ಸೂಕ್ಷ್ಮದಿ | ಎಲ್ಲ ಹೃದಯವ ಸೇರಿದೆ.
ಭಾರತಿಗೆ ನವಜನ್ಮವೀಯುತ | ಸುಪ್ರಕಾಶದಿ ಬೆಳಗಿದೆ.
ಆರತಿಯನೆತ್ತುತಲಿ ಕಣ್ಮರೆ | ಯಾದೆ ಪೂರಣಗೊಳಿಸದೆ.

ಎಲ್ಲ ಜಗವಂ ಸೆಳೆದು ಸಮ್ರಾಟ್ | ಮಕುಟ ತಾಳಿದೆ ಕಾಣದೆ
ಒಲ್ಲೆನೆಂದರು ಬಿಡದು ನಿನ್ನ೦ | ಲೋಕ ಮೆಚ್ಚಿಹ ಪ್ರೇಮದೆ
ರಾಜತಂತ್ರ ವಿವೇಕ ಪರಮಾ| ರ್ಥಗಳು ಭಕ್ತಿ ವಿರಾಗವು
ರಾಜಿಸುತ್ತಿವೆ ಸುಪ್ರಕಾಶದಿ | ನಿನ್ನ ಹೃದಯವ ನೀಗವು.

ಧರೆಯ ಧನ್ವಂತರಿಯೆ ನೀನೆ | ಲ್ಲಿರಲು ನಮ್ಮನು ನೋಳ್ಪುದು
ಕರೆದು ಕೃಪೆಯಂ ಪೊರೆ ಜಗತ್ತನು | ಅಭಯಹಸ್ತವ ತೋರ್ವುದು.
ಹಿರಿಯ ನೀನವತಾರ ಪುರುಷಂ | ಎಂದು ಲೋಕವೆ ಪೇಳ್ವುದು
ಇರಲಿ ನಿನ್ನೀ ಸ್ಮರಣೆ ಸಂತತ | ಎಲ್ಲರೊಳು ಸಮಭಾವದಿ.
*****
೩೦-೧-೧೯೪೮

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...