Home / ಲೇಖನ / ಇತರೆ / ಇಂದಿನ ಮಕ್ಕಳೇ ಮುಂದಿನ ಜನಾಂಗ

ಇಂದಿನ ಮಕ್ಕಳೇ ಮುಂದಿನ ಜನಾಂಗ

ಇವತ್ತು ನವೆಂಬರ್ ೧೪ ಮಕ್ಕಳ ದಿನ. ಸುಮಾರು ಐದು ದಶಕಗಳಿಂದ ಮಕ್ಕಳ ನೆಚ್ಚಿನ ಚಾಚಾ ನೆಹರೂ ಅವರ ಜನ್ಮ ದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸುತ್ತಾ ಬರುತ್ತಿದ್ದೇವೆ.

ನಾವು ಚಿಕ್ಕವರಿರುವಾಗ ಮಕ್ಕಳ ದಿನವನ್ನು ಬಹಳ ಸಂಭ್ರಮದಿಂದ ಆಚರಿಸುತ್ತಿದ್ದೆವು. ಶಾಲೆಯಲ್ಲಿ ಹಬ್ಬದ ವಾತಾವರಣ. ಚಾಚಾ ನೆಹರೂ ಅವರ ಬಗ್ಗೆ ಭಾಷಣಗಳು; ವಿವಿಧ ಸ್ಪರ್ಧೆಗಳು; ಮನರಂಜನೆಗಳು; ಬಹುಮಾನಗಳು ಎಲ್ಲವೂ ಇರುತ್ತಿದ್ದುವು. ಇವತ್ತು ಮಕ್ಕಳ ದಿನ ಅಂದರೆ, ಪಾಶ್ಚಾತ್ತೀಕರಣದ ಮೆರುಗಿನಿಂದ ಆಚರಿಸುತ್ತಿರುವ ಪ್ರೇಮಿಗಳ ದಿನ, ಅಮ್ಮನ ದಿನ, ಅಪ್ಪನ ದಿನ, ವೃದ್ಧರ ದಿನ, ಮಹಿಳೆಯರ ದಿನ, ಕಾರ್ಮಿಕರ ದಿನ ಎನ್ನುವ ದಿನಗಳಷ್ಟೇ ನೀರಸವಾಗಿ ಕಳೆದು ಹೋಗುತ್ತಿರುವುದು ನೋವಿನ ಸಂಗತಿ. ಯಾವ ಶಾಲೆಯಲ್ಲೂ ಆಚರಣೆ ಇದ್ದಹಾಗಿಲ್ಲ.

ಈಗಿನ ಮಕ್ಕಳಿಗೆ ‘ಚಾಚಾ ನೆಹರೂ’ ಅನ್ನುವುದೇ ಗೊತ್ತಾಗದ ಸಂಗತಿ, ಜವಾಹರಲಾಲ ನೆಹರೂ ಅಂದರೆ ಮೊದಲ ಪ್ರಧಾನಿ ಎನ್ನುವುದಷ್ಟೇ ಗೊತ್ತು. ಅದೂ ಜನರಲ್ ನಾಲೆಡ್ಜ್ ಪಶ್ನೆಗೆ ಉತ್ತರ ಕೊಡಬೇಕಾಗುವುದರಿಂದ ಇದು ಹೀಗೇ ಮುಂದುವರೆದರೆ ಮುಂದೊಂದು ದಿನ ಚಾಚಾ ನೆಹರೂ ಅಂದರೆ ಯಾರು? ಎಂದು ಮಕ್ಕಳು ಹಾಕುವ ಪ್ರಶ್ನೆಯನ್ನು ಎದುರಿಸಬೇಕಾದೀತು. ಅದಕ್ಕೆ ಉತ್ತರ ಹೇಳಲು ತಡಕಾಡುವ ಪರಿಸ್ಥಿತಿ ಇದ್ದರೂ ಅಚ್ಚರಿಯಿಲ್ಲ. ಮಕ್ಕಳಿಗೆ ಚರಿತ್ರೆ ಏನನ್ನೂ ಕಲಿಸುವುದಿಲ್ಲ. ಕಲಿಸುವ ವಾತಾವರಣವನ್ನು ನಾವು ನಿರ್ಮಿಸಿಯೂ ಇಲ್ಲ.

ಇಂದಿನ ಮಕ್ಕಳೇ ಮುಂದಿನ ಜನಾಂಗ ಎನ್ನುವ ಮಾತನ್ನು ಸದಾ ಉಚ್ಚರಿಸುತ್ತಿರುತ್ತೇವೆ. ಕಳೆದ ಅರ್ಧ ಶತಮಾನದಲ್ಲಿ ನಮ್ಮ ಮುಂದಿನ ಜನಾಂಗ ಮೂವತ್ತಮೂರು ಕೋಟಿಯಿಂದ ಮೂರು ನಾಲ್ಕು ಪಟ್ಟು ಹೆಚ್ಚಿದೆ. ನಮ್ಮ ದೇಶದಲ್ಲಿ ಪ್ರತಿ ನಿಮಿಷದಲ್ಲೂ ಮೂರು ಮಕ್ಕಳು ಹುಟ್ಟುತ್ತಿದ್ದಾರೆ. ಅವರನ್ನು ಮುಂದಿನ ಜನಾಂಗವನ್ನಾಗಿ ರೂಪಿಸುವ ಪ್ರಕ್ರಿಯೆ ನಿರಂತರವಾಗಿ ಸಾಗುತ್ತಲೇ ಇದೆ. ಆದರೆ ಎಷ್ಟು ಸಮರ್ಪಕವಾಗಿ ಈ ಕಾರ್ಯ ನಡೆಯುತ್ತಿದೆ? ಎಲ್ಲರಿಗೂ ವಿದ್ಯೆ ಎನ್ನುತ್ತಿರುವ ಯೋಜನೆಗಳು ಇರುವುದಾದರೂ ಅಕ್ಷರಸ್ತರ ಸಂಖ್ಯೆ ಶೇಕಡಾ ಮೂವತ್ತರ ಗಡಿಯನ್ನೂ ದಾಟುತ್ತಿಲ್ಲ. ಹೆಣ್ಣುಮಕ್ಕಳಿಗೆ ಸಮಾನ ಸ್ಥಾನಮಾನ, ಸ್ತ್ರೀ ಸಬಲೀಕರಣ ಎನ್ನುತ್ತಲೇ ಅವರ ಮೇಲಿನ ಶೋಷಣೆಗಳು ನಿರಂತರವಾಗಿ ಹೆಚ್ಚುತ್ತಿವೆ. ಯಾಕೆ ಹೀಗೆ? ಪ್ರಸ್ತುತದ ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯ ಪರಿಸ್ಥಿತಿ ಮಕ್ಕಳನ್ನು ಯಾವ ದಿಕ್ಕಿಗೆ ಕರೆದೊಯ್ಯುತ್ತಿವೆ?

ಇವತ್ತಿನ ಜೀವನಶೈಲಿ, ಜೀವನದ ಮೌಲ್ಯಗಳೂ ಬದಲಾಗಿವೆ. ಶೋಷಣೆ ಗಂಡಸರ ಮೇಲೂ ನಡೆಯುತ್ತಿದೆ. ನಮ್ಮ ಭಾಷೆ, ನಮ್ಮ ಸಂಸ್ಕೃತಿ, ನಮ್ಮ ದೇಶ ಎಂದು ಹೇಳುತ್ತಲೇ ಮಕ್ಕಳನ್ನು ಸಂಪೂರ್ಣ ಪಾಶ್ಚಾತೀಕರಣದ ಪ್ರಭಾವದಲ್ಲಿ ಬೆಳೆಸುತ್ತಾ ನಮ್ಮೊಳಗೇ ಇರುವ ದ್ವಂದ್ವದಲ್ಲಿ ನಾವಿಂದು ಮಕ್ಕಳನ್ನು ಬೆಳೆಸಿ ಗೊಂದಲದಲ್ಲಿ ಕೆಡವುತ್ತಿದ್ದೇವೆ. ಬಾಲ್ಯದಲ್ಲಿ ನಮಗಿದ್ದಂತಹ ಆದರ್ಶ ವ್ಯಕ್ತಿಗಳು ಇವತ್ತಿನ ಮಕ್ಕಳಿಗೆ ಇಲ್ಲ. ಇವತ್ತಿನ ಆದರ್ಶ ಹಣ ಗಳಿಕೆ, ಹೇಗಾದರೂ ಸರಿ ಹಣ ಮಾಡಬೇಕು ಎನ್ನುವ ಹಪಹಪಿಕೆ. ಹೀಗಾಗಿ ತ್ರಿಶಂಕು ಸ್ವರ್ಗವೆನ್ನುವ ಭ್ರಮಾಲೋಕದಲ್ಲಿ ಇಂದಿನ ಮಕ್ಕಳು ಸಿಕ್ಕಿಬಿದ್ದಿದ್ದಾರೆ. ಹಣ ಅನುಕೂಲತೆಗಳನ್ನು ಒದಗಿಸಬಹುದು ಮಾನಸಿಕ ನೆಮ್ಮದಿ ಒದಗಿಸಬಲ್ಲುದೇ? ಪ್ರೀತಿಯನ್ನು ಕೊಡಬಲ್ಲುದೇ? ಶಾಂತಿಯನ್ನು ಕೊಡಬಲ್ಲುದೇ? ಈ ತ್ರಿಶಂಕು ಸ್ವರ್ಗದಿಂದ ಅವರನ್ನು ಹೊರಗೆಳೆಯುವ ಹೊಣೆ ಹೆತ್ತವರಲ್ಲದೆ ಮತ್ತೆ ಯಾರದ್ದು?

ಮಕ್ಕಳು ನಮ್ಮವು. ಅವರನ್ನು ಬೆಳೆಸುವ ರೀತಿ, ಜವಾಬ್ದಾರಿ ನಮ್ಮವು. ಇವತ್ತು ನಾವೇನು ಮಾಡುತ್ತೇವೆಯೋ ಅದು ಮುಂದಿನ ಜನಾಂಗದ ಭವಿಷ್ಯವನ್ನೇ ಬರೆಯುತ್ತದೆ. ಈಗಿರುವಾಗ ಯಾಕೆ ಈ ಗೊಂದಲ? ಮಕ್ಕಳ ತಲೆಯಲ್ಲಿ ನೀನೇ ಕ್ಲಾಸಿಗೆ ಮೊದಲಿಗನಾಗಬೇಕು ಎನ್ನುವ ನಮ್ಮ ತೀರ್ಮಾನವನ್ನು ತುಂಬಿಸಿ ಹೆಜ್ಜೆ ಹೆಜ್ಜೆಗೆ ಅನಾರೋಗ್ಯಕರ ಸ್ಪರ್ಧೆ, ಸ್ವಾರ್ಥ, ಅಸೂಯೆಯ ಪಾಠವನ್ನು ಚಿಕ್ಕಂದಿನಿಂದಲೂ ಕಲಿಸುತ್ತೇವೆ. ಮಕ್ಕಳು ಬುದ್ಧಿವಂತರಾಗಬೇಕು ಎನ್ನುವುದರಲ್ಲಿ ತಪ್ಪಿಲ್ಲ. ಆದರೆ ಮಕ್ಕಳ ಬುದ್ಧಿವಂತಿಕೆ ಬರೇ ಮಾರ್ಕುಗಳಲ್ಲಿ ಇಲ್ಲ. ಅವರ ಮುಂದೆ ಒಂದು ಸಂಕೀರ್ಣ ಬದುಕಿದೆ. ಅದನ್ನವರು ಎದುರಿಸಲು ಸಾಧ್ಯವಾಗುವಂತಹ ಮಾರ್ಗದರ್ಶನ ಅವರಿಗೆ ಬೇಕು. ಸರಿತಪ್ಪುಗಳನ್ನು ವಿವೇಚಿಸುವ ಬುದ್ಧಿವಂತಿಕೆ, ಜೀವನವನ್ನು ಎದುರಿಸುವ ಛಲ, ಸೋಲನ್ನು ಎದುರಿಸುವ ಮನಸ್ಥೈರ್‍ಯ, ಸೋತಾಗ ಕುಸಿಯದೆ ಎದ್ದುನಿಂತು ಮುನ್ನಡೆಯುವ ಆತ್ಮವಿಶ್ವಾಸ, ಸೋಲುಗೆಲುವು ಎರಡನ್ನೂ ಸಮಚಿತ್ತದಿಂದ ಸ್ವೀಕರಿಸುವ ದಿಟ್ಟತನ, ಹೊರ ಜಗತ್ತಿನ ನೋವು ನಲಿವುಗಳಿಗೆ ಸ್ಪಂದಿಸುವ ಹೃದಯವಂತಿಕೆ, ಇವೆಲ್ಲವನ್ನೂ ಮಕ್ಕಳಲ್ಲಿ ತುಂಬಿ ಸರ್ವತೋಮುಖವಾಗಿ ಬೆಳೆಸಿದರೆ ಮಾತ್ರ ನಮ್ಮ ಮುಂದಿನ ಜನಾಂಗ ಸುದೃಢವಾಗಬಲ್ಲುದು.

ಜೀವನದಲ್ಲಿ ಬದುಕಲು ಕಲಿಯುವ ವಿದ್ಯೆ, ಜಾಣತನ ಬಹಳ ಮುಖ್ಯ ಎನ್ನುವುದನ್ನು ಮರೆತು ಅವರನ್ನು ಮಾರ್ಕು ತೆಗೆಯುವ ಯಂತ್ರಗಳನ್ನಾಗಿ ಮಾತ್ರ ರೂಪಿಸುತ್ತಾ ಸಾಗಿದರೆ ಮುಂದಿನ ಇಂದಿನ ಮಕ್ಕಳು ಜನಾಂಗ ಆಗುವುದು ಹೇಗೆ? ನಮ್ಮ ಮನೆ ನಮ್ಮ ಸಮಾಜ ಇಂತಹ ಯಂತ್ರಗಳಿಂದ ತುಂಬಬೇಕೇ? ಸ್ಪಂದನಗಳಿಲ್ಲದ ಜನರಿಂದ ಸಮಾಜ ಅಥವಾ ಜೀವನ ಮುಂದುವರೆಯುವುದು ಸಾಧ್ಯವೆ? ಮುಂದೊಂದು ಇಂದಿನ ಮಕ್ಕಳು ಮುಂದಿನ ಯಂತ್ರಗಳು ದಿನ ಎಂದು ಹೇಳಿಕೆಯನ್ನು ಬದಲಾಯಿಸಬೇಕಾದೀತು.

ನಮ್ಮ ಭಾಷೆ, ನಮ್ಮ ಸಂಸ್ಕೃತಿ, ನಮ್ಮ ಸಮಾಜ, ನಮ್ಮ ದೇಶವೆನ್ನುವ ಅಭಿಮಾನವಿರುವ ಮಕ್ಕಳು ನಮ್ಮ ಮುಂದಿನ ಜನಾಂಗವಾಗಬೇಕೆನ್ನುವ ಹೊಣೆಗಾರಿಕೆ ಎಲ್ಲರಿಗಿರಲಿ.
*****
(ಚಿಂತನ- ಆಕಾಶವಾಣಿ)

Tagged:

Leave a Reply

Your email address will not be published. Required fields are marked *

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...