Home / ಕವನ / ಕವಿತೆ / ಸಂಜೆಯ ಹಾಡು

ಸಂಜೆಯ ಹಾಡು

ಹಗಲೆಲ್ಲಾ ಕಳೆಯಿತು ಸೂರ್ಯನು ಮುಳುಗೆ;
ಖಗ ಹಾರಿತು ಗೂಡಿನ ಒಳಗೆ;
ಜಗವೆಲ್ಲಾ ಬೆಳಗಿತು ದೀಪವು ಬೆಳಗೆ,
ಗಗನಾಂಗಣದಲ್ಲಿ ಉಡು ತೊಳಗೆ;
ಮೃಗವೆಲ್ಲಾ ಅಲೆವವು ಬೆಟ್ಟದ ಕೆಳಗೆ;
ಹೊಗುತಿರುವುದು ಕತ್ತಲೆ ಇಳೆಗೆ.

ಓ-ಮಗುವೇ, ನೀ ಸಂಜೆಯ ಗಳಿಗೆಯಲಿ
ನಗುತಲಿ ಬಾ ನನ್ನಯ ಬಳಿಗೆ; ಕೈ
ಮುಗಿಯುತ ದೇವರ ಪದಗಳಿಗೆ, ಈ
ಹಗಲಲ್ಲಿ ನಿನ್ನನ್ನು ಕಾಯ್ದಾ ದೇವರಿಗೆ,
ಮಿಗೆ ವಂದಿಸು ಸಂತಸದಿಂದಾ.

ವದನಾ ಭೂಷಣವೇ ನೀರಿನ ಕೆರೆಯು
ಘನ ಸರಸಿಗೆ ಕೆಂದಾವರೆಯು;
ವನಿತಾಲಂಕಾರವೆ ಸುಗುಣದ ಸಿರಿಯು;
ಜನರಾಷ್ಟ್ರಕೆ ಧರ್ಮದ ದೊರೆಯು;
ಮನುಜನಿಗಾಭರಣವೆ ವಿದ್ಯೆಯ ಪರಿಯು;
ಮನೆಗಾ ಚೆಲು ಮಕ್ಕಳು ಮರಿಯು.

ಹಾ, ತನಯಾ, ಸಜ್ಜನರೊಡವೆರೆಯು; ದು-
ರ್‍ಜನ ಸಂಗವ ಬೇಗನೆ ತೊರೆಯು; ವಂ-
ಚನೆ ಮರೆಮೋಸಗಳನ್ನು ಮರೆಯು; ನೀ-
ನೆನೆಯದಿರೈ ಕೆಡುಕನು ಲೋಕದ ಜನಕೆ;
ಜನದೂಷಣೆ ಬಿಡಬೇಕೆಂದಾ.

ಇರಬೇಕೈ ಮಕ್ಕಳ ಚೆಲುಮನೆತನವು;
ಸರಿ ಹಾಲನು ಕರೆವಾ ದನವು;
ಬರಬೇಕೈ ತನ್ನಯ ಬೆವರಿನ ಧನವು;
ಭರದಾಪತ್ಕಾಲಕೆ ಜನವು;
ಹೊರಬೇಕೈ ಕಷ್ಟವ ಸಹಿಸುವ ತನುವು;
ಪರದುಃಖಕ ಕೂಗುವ ಮನವು.

ಶ್ರೀ ಗುರುಹಿರಿಯರ ನೀನನುದಿನವು ತಾಂ
ಪರಿಪೂಜಿಪಗುಣ ಲಾಂಛನವು; ಇದು
ದೊರೆಕೊಂಬುದ ಜನಕೆ ಘನವು; ಸೋ
ದರರೆಂಬಾ ಭಾವನೆ ಸರ್‍ವರೊಳಿರಿಸು;
ಭರತಾತ್ಮಜನೆನ್ನಿಸು ಕಂದಾ.

ಕೊಡಬೇಕೈ ಕಿವಿಯನು ಸರ್‍ವರ ನುಡಿಗೆ;
ನುಡಿಬಾರದು ನೀನಡಿಗಡಿಗೆ;
ಉಡಬೇಕೈ ಪದವಿಗೆ ಸರಿಯಾದುಡಿಗೆ;
ತೊಡಬಾರದು ಅನ್ಯರ ತೊಡಿಗೆ;
ಬಿಡಬೇಕೈ ಹಣವನು ಧರ್‍ಮದ ಕುಡಿಗೆ,
ಬಡವಾಗಿರದಂದದಿ ಕಡೆಗೆ.

ನೀ ಪೊಡಮಡು ಗುರುಹಿರಿಯರ ಅಡಿಗೆ; ನೀ
ನಿಡು ಸತ್ಯವ ಕಾರ್‍ಯಗಳೆಡೆಗೆ; ನೀ
ನಡೆವೈ ಸಂಪತ್ತಿನ ತಡಿಗೆ; ಈ
ಮುಡಿಹೂಗಳ್ ಬಾಡದ ಸದ್ವಿಧದಿಂದಾ
ಬಡಕೂಸನು ಸಲಹೋ, ಮುಕುಂದಾ.
*****
(ಕವಿಶಿಷ್ಯ)

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...