Home / ಕವನ / ಕವಿತೆ / ಸಂಜೆಯ ಹಾಡು

ಸಂಜೆಯ ಹಾಡು

ಹಗಲೆಲ್ಲಾ ಕಳೆಯಿತು ಸೂರ್ಯನು ಮುಳುಗೆ;
ಖಗ ಹಾರಿತು ಗೂಡಿನ ಒಳಗೆ;
ಜಗವೆಲ್ಲಾ ಬೆಳಗಿತು ದೀಪವು ಬೆಳಗೆ,
ಗಗನಾಂಗಣದಲ್ಲಿ ಉಡು ತೊಳಗೆ;
ಮೃಗವೆಲ್ಲಾ ಅಲೆವವು ಬೆಟ್ಟದ ಕೆಳಗೆ;
ಹೊಗುತಿರುವುದು ಕತ್ತಲೆ ಇಳೆಗೆ.

ಓ-ಮಗುವೇ, ನೀ ಸಂಜೆಯ ಗಳಿಗೆಯಲಿ
ನಗುತಲಿ ಬಾ ನನ್ನಯ ಬಳಿಗೆ; ಕೈ
ಮುಗಿಯುತ ದೇವರ ಪದಗಳಿಗೆ, ಈ
ಹಗಲಲ್ಲಿ ನಿನ್ನನ್ನು ಕಾಯ್ದಾ ದೇವರಿಗೆ,
ಮಿಗೆ ವಂದಿಸು ಸಂತಸದಿಂದಾ.

ವದನಾ ಭೂಷಣವೇ ನೀರಿನ ಕೆರೆಯು
ಘನ ಸರಸಿಗೆ ಕೆಂದಾವರೆಯು;
ವನಿತಾಲಂಕಾರವೆ ಸುಗುಣದ ಸಿರಿಯು;
ಜನರಾಷ್ಟ್ರಕೆ ಧರ್ಮದ ದೊರೆಯು;
ಮನುಜನಿಗಾಭರಣವೆ ವಿದ್ಯೆಯ ಪರಿಯು;
ಮನೆಗಾ ಚೆಲು ಮಕ್ಕಳು ಮರಿಯು.

ಹಾ, ತನಯಾ, ಸಜ್ಜನರೊಡವೆರೆಯು; ದು-
ರ್‍ಜನ ಸಂಗವ ಬೇಗನೆ ತೊರೆಯು; ವಂ-
ಚನೆ ಮರೆಮೋಸಗಳನ್ನು ಮರೆಯು; ನೀ-
ನೆನೆಯದಿರೈ ಕೆಡುಕನು ಲೋಕದ ಜನಕೆ;
ಜನದೂಷಣೆ ಬಿಡಬೇಕೆಂದಾ.

ಇರಬೇಕೈ ಮಕ್ಕಳ ಚೆಲುಮನೆತನವು;
ಸರಿ ಹಾಲನು ಕರೆವಾ ದನವು;
ಬರಬೇಕೈ ತನ್ನಯ ಬೆವರಿನ ಧನವು;
ಭರದಾಪತ್ಕಾಲಕೆ ಜನವು;
ಹೊರಬೇಕೈ ಕಷ್ಟವ ಸಹಿಸುವ ತನುವು;
ಪರದುಃಖಕ ಕೂಗುವ ಮನವು.

ಶ್ರೀ ಗುರುಹಿರಿಯರ ನೀನನುದಿನವು ತಾಂ
ಪರಿಪೂಜಿಪಗುಣ ಲಾಂಛನವು; ಇದು
ದೊರೆಕೊಂಬುದ ಜನಕೆ ಘನವು; ಸೋ
ದರರೆಂಬಾ ಭಾವನೆ ಸರ್‍ವರೊಳಿರಿಸು;
ಭರತಾತ್ಮಜನೆನ್ನಿಸು ಕಂದಾ.

ಕೊಡಬೇಕೈ ಕಿವಿಯನು ಸರ್‍ವರ ನುಡಿಗೆ;
ನುಡಿಬಾರದು ನೀನಡಿಗಡಿಗೆ;
ಉಡಬೇಕೈ ಪದವಿಗೆ ಸರಿಯಾದುಡಿಗೆ;
ತೊಡಬಾರದು ಅನ್ಯರ ತೊಡಿಗೆ;
ಬಿಡಬೇಕೈ ಹಣವನು ಧರ್‍ಮದ ಕುಡಿಗೆ,
ಬಡವಾಗಿರದಂದದಿ ಕಡೆಗೆ.

ನೀ ಪೊಡಮಡು ಗುರುಹಿರಿಯರ ಅಡಿಗೆ; ನೀ
ನಿಡು ಸತ್ಯವ ಕಾರ್‍ಯಗಳೆಡೆಗೆ; ನೀ
ನಡೆವೈ ಸಂಪತ್ತಿನ ತಡಿಗೆ; ಈ
ಮುಡಿಹೂಗಳ್ ಬಾಡದ ಸದ್ವಿಧದಿಂದಾ
ಬಡಕೂಸನು ಸಲಹೋ, ಮುಕುಂದಾ.
*****
(ಕವಿಶಿಷ್ಯ)

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...