Home / ಕವನ / ಕವಿತೆ / ಸಂಜೆಯ ಹಾಡು

ಸಂಜೆಯ ಹಾಡು

ಹಗಲೆಲ್ಲಾ ಕಳೆಯಿತು ಸೂರ್ಯನು ಮುಳುಗೆ;
ಖಗ ಹಾರಿತು ಗೂಡಿನ ಒಳಗೆ;
ಜಗವೆಲ್ಲಾ ಬೆಳಗಿತು ದೀಪವು ಬೆಳಗೆ,
ಗಗನಾಂಗಣದಲ್ಲಿ ಉಡು ತೊಳಗೆ;
ಮೃಗವೆಲ್ಲಾ ಅಲೆವವು ಬೆಟ್ಟದ ಕೆಳಗೆ;
ಹೊಗುತಿರುವುದು ಕತ್ತಲೆ ಇಳೆಗೆ.

ಓ-ಮಗುವೇ, ನೀ ಸಂಜೆಯ ಗಳಿಗೆಯಲಿ
ನಗುತಲಿ ಬಾ ನನ್ನಯ ಬಳಿಗೆ; ಕೈ
ಮುಗಿಯುತ ದೇವರ ಪದಗಳಿಗೆ, ಈ
ಹಗಲಲ್ಲಿ ನಿನ್ನನ್ನು ಕಾಯ್ದಾ ದೇವರಿಗೆ,
ಮಿಗೆ ವಂದಿಸು ಸಂತಸದಿಂದಾ.

ವದನಾ ಭೂಷಣವೇ ನೀರಿನ ಕೆರೆಯು
ಘನ ಸರಸಿಗೆ ಕೆಂದಾವರೆಯು;
ವನಿತಾಲಂಕಾರವೆ ಸುಗುಣದ ಸಿರಿಯು;
ಜನರಾಷ್ಟ್ರಕೆ ಧರ್ಮದ ದೊರೆಯು;
ಮನುಜನಿಗಾಭರಣವೆ ವಿದ್ಯೆಯ ಪರಿಯು;
ಮನೆಗಾ ಚೆಲು ಮಕ್ಕಳು ಮರಿಯು.

ಹಾ, ತನಯಾ, ಸಜ್ಜನರೊಡವೆರೆಯು; ದು-
ರ್‍ಜನ ಸಂಗವ ಬೇಗನೆ ತೊರೆಯು; ವಂ-
ಚನೆ ಮರೆಮೋಸಗಳನ್ನು ಮರೆಯು; ನೀ-
ನೆನೆಯದಿರೈ ಕೆಡುಕನು ಲೋಕದ ಜನಕೆ;
ಜನದೂಷಣೆ ಬಿಡಬೇಕೆಂದಾ.

ಇರಬೇಕೈ ಮಕ್ಕಳ ಚೆಲುಮನೆತನವು;
ಸರಿ ಹಾಲನು ಕರೆವಾ ದನವು;
ಬರಬೇಕೈ ತನ್ನಯ ಬೆವರಿನ ಧನವು;
ಭರದಾಪತ್ಕಾಲಕೆ ಜನವು;
ಹೊರಬೇಕೈ ಕಷ್ಟವ ಸಹಿಸುವ ತನುವು;
ಪರದುಃಖಕ ಕೂಗುವ ಮನವು.

ಶ್ರೀ ಗುರುಹಿರಿಯರ ನೀನನುದಿನವು ತಾಂ
ಪರಿಪೂಜಿಪಗುಣ ಲಾಂಛನವು; ಇದು
ದೊರೆಕೊಂಬುದ ಜನಕೆ ಘನವು; ಸೋ
ದರರೆಂಬಾ ಭಾವನೆ ಸರ್‍ವರೊಳಿರಿಸು;
ಭರತಾತ್ಮಜನೆನ್ನಿಸು ಕಂದಾ.

ಕೊಡಬೇಕೈ ಕಿವಿಯನು ಸರ್‍ವರ ನುಡಿಗೆ;
ನುಡಿಬಾರದು ನೀನಡಿಗಡಿಗೆ;
ಉಡಬೇಕೈ ಪದವಿಗೆ ಸರಿಯಾದುಡಿಗೆ;
ತೊಡಬಾರದು ಅನ್ಯರ ತೊಡಿಗೆ;
ಬಿಡಬೇಕೈ ಹಣವನು ಧರ್‍ಮದ ಕುಡಿಗೆ,
ಬಡವಾಗಿರದಂದದಿ ಕಡೆಗೆ.

ನೀ ಪೊಡಮಡು ಗುರುಹಿರಿಯರ ಅಡಿಗೆ; ನೀ
ನಿಡು ಸತ್ಯವ ಕಾರ್‍ಯಗಳೆಡೆಗೆ; ನೀ
ನಡೆವೈ ಸಂಪತ್ತಿನ ತಡಿಗೆ; ಈ
ಮುಡಿಹೂಗಳ್ ಬಾಡದ ಸದ್ವಿಧದಿಂದಾ
ಬಡಕೂಸನು ಸಲಹೋ, ಮುಕುಂದಾ.
*****
(ಕವಿಶಿಷ್ಯ)

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...