Home / ಕವನ / ನೀಳ್ಗವಿತೆ / ದೇವರು ದೊಡ್ಡವ

ದೇವರು ದೊಡ್ಡವ

ಖಲೀಫ ಹಕೀಮರ ಹೊಗಳಿ
ಮನೆ ಮನೆ ಬಾಗಿಲ ಅಗಳಿ…

ಅಲ್ಲವೆ ಮತ್ತೆ
ಮುಂದೆ ಹೋದರು ಕತ್ತೆ
ಹಿಂದೆ ಬಂದರು ಕತ್ತೆ
ಕತ್ತೆಯೇ
ಹಾಗೆಯೇ ಆವತ್ತು
ಅಂಥ ಕತೆ ಕೇಳಿ
ಅಂಥ ಕತೆಯೇ ಅಥವ
ದಂತ ಕತೆಯೇ
ಆಹ ! ಅವನೇ ಬಂದ
ಖದೀಮ
ಹೆಸರು ಮಾತ್ರ ಹಕೀಮ

ಖಲೀಫ ಹಕೀಮರ ಹೊಗಳಿ
ಮನೆ ಮನೆ ಬಾಗಿಲ ಅಗಳಿ…

ಕಾಲ ಕ್ರಿಸ್ತಶಕ
ಒಂದು ಸಾವಿರ ವರುಷ
ಜಾಗ ಕೈರೋ ಎಂಬ ದೇಶ
ಅವರೂ ಖಲೀಫರೇ
ಬರುತಾರೆ ಕೆಲವು ಸಲ
ಗರೀಬ ಫಕೀರನ ಹಾಗೆ
ಬರುತಾರೆ ಕೆಲವು ಸಲ
ತಳವಾರನ ವೇಷ

ಇಂಥಾ ಹೊತ್ತಿಗೆ
ಕುಂಟರ ಕುರುಡರ ಪರವೂರವರ
ಸಂತರ ಶ್ರೀಮಂತರ ನಂಬುವುದಾದರು ಹೇಗೆ !

ಮಾರನೆ ದಿನ
ಸೆರೆಮನೆಯಲಿ ಹತ್ತು ಜನ
ಹೆಚ್ಚಿದರೂ ಹೆಚ್ಚೀತು
ಐದಾರು ಹೆಣ
ಕೊಚ್ಚಿದರೂ ಕೊಚ್ಚೀತು

ಹೀಗಿತ್ತವನ
ಹೀಗಿದ್ದವನ
ಹೀಗೇ ಒಂದು ದಿನ

ಖಲೀಫ ಹಕೀಮರ ಹೊಗಳಿ
ಮನೆ ಮನೆ ಬಾಗಿಲ ಅಗಳಿ…

ನಾವು ಮಸೀದಿಯ ಮೆಟ್ಟಿಲ ಮೇಲೆ
ಸುಮ್ಮನೆ ನೋಡುತ್ತ
ಅಂಗಡಿ ಕಣಗಳು ಕೂಡ
ಅರ್ಧಕ್ಕೆ ತೆರೆಯುತ್ತ
ಇನ್ನೂ ಕೆಲವರು ಹುಕ್ಕದ ಸುತ್ತ
ಕತೆಗಳ ಹೇಳುತ್ತ

ಹತ್ತು ಜನ ಹೊಂತಗಾರರು
ಹೀಗೇ ಹಾದಿ ನಡೆದಿದ್ದಾರೆ
ಒಬ್ಬಾನೊಬ, ವ್ಯಾಪಾರಿ
ಜತೆಗೇ ಬರುವುದ
ಕಂಡಿದಾರೆ.
ತಲೆಗೇನೋ ಹೊಳೆದಂತಾಗಿ
ತಟ್ಟನೆ ತಿರುಗಿ ನಿಂತಿದ್ದಾರೆ

“ಸಲಾಂ ಖಲೀಫರ
ಅನಕಾ ದೂರ
ಬರಿಗಾಲಲ್ಲೆ ಬಂದಿದ್ದೀರ !
ಏನ ನಡೆಸೀರಿ
ವ್ಯಾಪಾರ ?”

ಎಂದರು-ಹತ್ತಿರ
ಹತ್ತಿರ ಬಂದರು, ಹತ್ತೂ ಮಂದಿ
ಸುತ್ತ ಮುತ್ತ ಯಾರಿಲ್ಲ
ಬಿಟ್ಟರೆ ಬೀದಿಯ ಹಂದಿ

ಖಲೀಫ ಹಕೀಮರ ಹೊಗಳಿ
ಮನೆ ಮನೆ ಬಾಗಿಲ ಅಗಳಿ
“ಆಹ ! ಏನಂದಿರಿ-
ವ್ಯಾಪಾರ ?
ಅದೂ ಪರವಾಯಿಲ್ಲ!
ಇದೋ!” ಎಂದರು ಖಾವಂದರು
ಮುಷ್ಟಿ ದಿನಾರವ ತೆಗೆದು

ಅವು ಅಂಗೈ ತುಂಬಾ ಹೊಳೆದು
ಸಂಜೆಯ ಸೂರ್ಯನ ಕಿರಣ
ಹೆಕ್ಕಿದುವೊಂದನು ಬಿಡದೆ
ನೋಡದೆ ಬೇರೆ ಕಡೆ

“ಯಾರಿಗೆ ಇವು
ಯಾರಿಗೆ ಹೇಳಿ-
ಕಪ್ಪು ಸಮುದ್ರವ
ಕುಡಿದಾತನಿಗೆ
ಕೆಂಪು ಸಮುದ್ರವ
ಹಿಡಿದಾತನಿಗೆ
ಕೊನೆ ತನಕವು
ಉಳಿವಾತನಿಗೆ !”

ಖಲೀಫ ಹಕೀಮರ ಹೊಗಳಿ
ಮನೆ ಮನೆ ಬಾಗಿಲ ಅಗಳಿ…

ಎಲ್ಲರು ಬಿದ್ದಿದ್ದರು-ಒಬ್ಬ ಮಾತ್ರವೇ
ಎದ್ದು ನಿಂತಿದ್ದ
ಅವ ಖಲೀಫರ ಸಮ್ಮುಖ
ಬಂದು ನಿಂತಿದ್ದ

“ಏನ ನೋಡತಿ, ಮಗನೇ ?
ಕೊನೆಗೂ ಗೆದ್ದವ ನೀನೇ-
ನಮ್ಮ ಕಾಲಿಗೆ ಬಿದ್ದು
ತಗೊ ನಿನ್ನ ನಿಧಿಯನು ನೀನೇ !”

ಆಮೇಲಿನ ಕತೆ
ಗೊತ್ತಿದ್ದದ್ದೇ-
ದೇವರು ದೊಡ್ಡವ ಗೆದ್ದೇ-
ನೆಂದು ಮನಸಿನ ಒಳಗೇ
ನೆತ್ತರ ಒರೆಸಿ
ಖಡ್ಗವ ಮರೆಸಿ
ನಡೆದರು ಮೊದಲಿನ ಹಾಗೇ

ಖಲೀಫ ಹಕೀಮರ ಹೊಗಳಿ
ಮನೆ ಮನೆ ಬಾಗಿಲ ಅಗಳಿ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...