Home / ಕವನ / ಕವಿತೆ / ಜೈ MONEY ಭಾರತ

ಜೈ MONEY ಭಾರತ


ನಾಲ್ಕು ಮೂಲೆಯ ಅಟ್ಟದಲ್ಲಿ ಮಾವು ಸಂಭ್ರಮ ತೋರಣ
ಬತ್ತಲೆ ನಿಂತಿದ್ದ ಒಗರು ಬೆಟ್ಟದಲ್ಲಿ ಸುಖಸಂಜೀವಿನಿ ಚಿಗುರು
ಗೊತ್ತಿಲ್ಲವೆ ನಿಮಗೆ? ಇದು ರಸಗಳಿಗೆ
ಮಫ್ತಿಯಲ್ಲಿ ಗಸ್ತು ಹೊಡೆಯುವ ಚರಂಡಿಗಳ ರಾಡಿ ತೆರೆದ ಕಣ್ಣಮುಂದೇ ಗಾಡಿಬಿಟ್ಟು
ತಿಳಿಜುಟ್ಟು ನಿಮಿರಿಸಿ ನಗುತ್ತವೆ; ಊರ ಮರಮುಂಡೆಯರ
ಮಂಡೆಗಳು ಮುತ್ತೈದೆ ಮಲರುಟ್ಟು ಕನಸುತ್ತವೆ
ಗಣಪಸ್ತುತಿಯಾಯಿತು; ಅಪ್ಪಟ ನಮ್ಮದೇ ಮುಖವೇಣಿ
ನಮ್ಮದೇ ಶಾಸ್ತ್ರೀಯ ಸ್ವರ; ತಾಳಹಿಡಿದ ನಮ್ಮ ಜನ ಎರಡು ಸಾಲು
ಕೊಳೆ ತೊಳೆದ ಕೋಟು ತೊಟ್ಟ ಭಾಗವತನ ಹೆಗಲ ಮೇಲೆ ಶಾಲು
ನಾಯಿಕೊಡೆ ಅಂಗಡಿ ಹೋಟೆಲ್ಲುಗಳ ಮುಂದೆ ಹತ್ತೆಂಟು ಬಾಯಿಬೆಲ್ಲು.
ಕರಿಯುವ ಪಕೋಡ ಊದಿದಂತೆ ಎದೆ; ಉಸಿರೆಲ್ಲ ಹೂವು

ಅದೋ ಅತ್ತ ಭಾಗವತಬಾಯಿ ಇಷ್ಟಿಷ್ಟೇ ತೆರೆದಂತೆ ತೆರೆಯೇಳುತ್ತದೆ. ಕತ್ತೆತ್ತಿದ ತೆನೆಗಣ್ಣನೋಟ ಅಟ್ಟದ ಮೇಲಿನ ಪಟ್ಟಕ್ಕೆ ಬೀಳುತ್ತದೆ;
ಪಾಂಡ-ವರ ಪಾಳೆಯದಲ್ಲಿ ಧರ್ಮರಾಜನ ದರಬಾರು ಮೊದಲ ಸೀನು.

ಈ ನಟ್ಟನಡು ರಾತ್ರಿಯಲ್ಲಿ ನೆಟ್ಟಸಸಿಯ ತಲೆಯಲ್ಲಿ ಅರಳಿನಿಂತ ಹಣ್ಣ ಆಸೆ
ಮೇಲೆ ಶುಭ್ರ ತಿಳಿನೀಲ ಬಾನು
ನಲಿವ ನೆಲ ನೆಲವನ್ನು ತಬ್ಬಿ ಕೆಲವೊಮ್ಮೆ ಉಬ್ಬಿ
ಬಯಲಲ್ಲಿ ತೋಳು ಚಾಚಿ ಭರತ ಶಾಸನ ಬರೆಯ ಬಯಸುವ ಬದುಕು.

ಆಗಿನ್ನೂ ಸೈಡ್‌ವಿಂಗ್ಸ್ ಸರಿಮಾಡುವ ತಕ್ಕಸ್ಥಳಕ್ಕೆ ಶ್ವೇತಚ್ಛತ್ರಿ ಸಿಕ್ಕಿಸುವ
ಮರೆತ ಮಾತನ್ನು ಎತ್ತಿಕೊಡುವ ಅವರಿವರ ಹೆಸರುಹೇಳಿ ಹಾರಹಾಕುವ ತರಾ-
ತುರಿ ಬಾಳು ಬರೆಯುವ ಭಾಗವತತಾಳದಲ್ಲಿ ಬಾಯಲ್ಲಿ ಬಂದ ಗಾನಾವಳಿಯ ಗುಂಗಿ-
ನಲ್ಲಿ ನಿಂತ ನೀಲಿ ಕನ್ನಡಕದ ರಾಜನದು ಎಂಥ ಭಂಗಿ!
ಕಂಡ ಜನಪದವೆಲ್ಲ ಒಂದೆ ಬಣ್ಣ
ಮುದುಕ ಮುದುಕಿ ಯುವಕ ಯುವತಿ ಚಿಣ್ಣ
ಒಳಕಲ್ಲಿಗೆ ಕಡ್ಡಿ ಇಟ್ಟು ಕುಟ್ಟಿದ ಭತ್ತದ ಚಿತ್ತ
ಭಯಬಿಟ್ಟು ಹೊಸ ಹುಟ್ಟು ಪಡೆದಂತೆ ನೋಡುತ್ತದೆ:
ತಮ್ಮ ಪ್ರತಿನಿಧಿಯೊಡ್ಡೋಲಗದ ಪ್ರಾರಂಭ ಪುಳಕ ಪಥ
ತಾಳ ತುಡಿಯುತ್ತದೆ: ತಕಥೈ ತದ್ದಿತೋಂಥ

ಏನು ಗಡಿಬಿಡಿ!
ದಾರಿಬಿಡಿ ದಾರಿಬಿಡಿ ದೇವರ ಗುಡಿಯಿಂದ ಬಂದ ಕೌ
ರವೇಶ್ವರ; ಸಿರೀಂಜು ಶೈಲಿಯಲ್ಲೆಳೆದ ಜನರ ಉಸಿರ
ರಕ್ಕಸರೆಕ್ಕೆಯಲ್ಲಿ ರಾಚುತ್ತ ಬಂದಂಥ ಭೂರಿ ಕಿರೀಟದ ಭಾರಿಭೂಪ
ಥಣಮಿಣಿಯ ಉಡುಪಿನೊಳಗೆ ಝಣಝಣಿಸುವ ದುರ್ಯೊ ಧನಕುರು ಕುಲಚಕ್ರವರ್ತಿ ಬಹುಪರಾಕು ಬಹುಪರಾಕು!
ಬಂದವನೆ ಭೋರೆಂದು ಬಯಲಾಟದಟ್ಟಕ್ಕೆ ನೆಗೆದ ರಭಸಕ್ಕೆ
ಭಾಗವತ ನಿಟ್ಟುಬಿದ್ದ; ಕೆಳಗೆ ಬಿದ್ದ
ತಾಳ ಹಿಡಿದು ಈಡುಗಾಯಿ ಹೊಡೆದ
ಈಗ ಬಂದವರು ದಾರೆಂದು ಕೇಳುವುದಕ್ಕೂ ಬಿಡದೆ ಕುಣಿದು ಕುಪ್ಪಳಿಸುವ ಕೌರವ
ನ ಕಾಲು ಕಂಡು ಕಾಲ ನೋಡಿಕೊಂಡ; ಕಾಲ ಮಿಂಚಿದ್ದ ಕಂಡುಕೊಂಡ
ಪಸುಗೆ ಹಾಕಿ ಅಮುಕಿಬಿಟ್ಟ ಸ್ಪ್ರಿಂಗಿನಂತೆಗರಿ ಚಾಟಿಯಿಲ್ಲದ ಬುಗುರಿ
ವಾಲ್ಕೆನೊಬಾಯಿಯ ಬಾಜಾಬಜಂತ್ರಿಯಲ್ಲಿ ಹಸಿರು ಅಟ್ಟ-
ದ ಬಸಿರಲ್ಲಿ ಬೆವರು ತರಿಸಿದ; ತಾಳಗಳಿಗೆ ತೌಡು ತಿನ್ನಿಸಿದ
ದುಡ್ಡಿದ್ದ ದಡ್ಡ ಬಂಧುಗಳು ಎದ್ದೆದ್ದು ಬಂದು ಮೆಡಲುಹಾಕಿ ದೊಡ್ಡಸ್ತಿಕೆ ಕಿಸಿದು
ಮೈದುಂಬಿಸಿದಾಗ ಹೇಗೆ ನಿಂತೀತು ಕುಣಿತ?
ಹೇಗೆ ಮುಂದುವರಿದೀತು ಭಾರತ?

ಆಕಾಶಕ್ಕೇ ಅದುರುಬಂದು ಹನಿಯೊಡೆದು ತೊಟ್ಟಿಕ್ಕಿತು ಬೆವರ ಬೆಳದಿಂಗಳು
ಮಾಳಿಗೆಮನೆಗೆ ಕನ್ನ ಬಿದ್ದು ಮುರುಕು ಮಡಕೆಯ ಲೋಳಿಲೋಳಿ ಅಳು
ಬಂದಾಗ ಬಂಡವಾಳದ ತಾಟು ತುಂಬಿದ ಊಟ
ಕಾಲ ಎಷ್ಟಾದರೇನು ಕುಣಿತ ಸಾಗೇ ಇತ್ತು ಅಂತು
ಅಬ್ಬ! ಮೈಮರದಲ್ಲಿ ಹಣ ಹೂಬಿಟ್ಟು ನಿಂತ ವೈಖರಿ! ಗದಾಪ್ರಹಾರಿ ಅವರಿವರ ಹಣೆಬರಹದ ಹಲಗೆ ಮೇಲೆ ಮೃತ್ಯುಶಾಸನ ಬರೆವ ಬಣ್ಣದ ಹೆಜ್ಜೆ
ರೋಮರೋಮಗಳಲ್ಲಿ ಕಾಂಚನ ಕಾಮ ಕೆನೆದು ಎಲ್ಲೆಲ್ಲಿಂದಲೊ ಬಂದದ್ದು
ಮರವಾದದ್ದು ಇಲ್ಲಿ; ಬಿಳಲ ಕಪ್ಪುಗುರುಳು ಕೆದರಿದ್ದು ಇಲ್ಲಿ;
ಇದಕ್ಕೆ ಕೊನೆಯೆಲ್ಲಿ?


ಬಂಡವಾಳದ ಬೆಟ್ಟದಲ್ಲಿ ಬಂಡೆಕರಡಿಗಳು ಬೆದರಿಸುತ್ತವೆ
ಚೀಟಿಸೀರೆಯ ಹಸಿರು ಕಂಡರೆ ಪರಪರನೆ ಹರಿಯುತ್ತವೆ
ಡಾಣಾಡುಂಗುರ ವಿಷಯ ಗೊತ್ತಲ್ಲ?
ಅದೇ ದೌಪದಿ ಕಿತ್ತಲೆಯ ಸಿಪ್ಪೆ ಸುಲಿತ
ಈಗ ಸಿಪ್ಪೆಯಿಲ್ಲದ ಕಿತ್ತಲೆ; ಕತ್ತಾಳೆ ಕಠಿಣ ಕತ್ತಲೆ
ಬಾಳಪಗಡೆಯಲ್ಲಿ ಬಿಡಿಗಾಸಿಗೂ ಬರಬಂದಾಗ
ಪತ್ನಿಯನ್ನೇ ಪಣವಿಡುವ ಪುಣ್ಯವಂತರಲ್ಲವೆ ನಾವು?
ಆಹಾ!
ವನವಾಸದೊಣಗಿನಲ್ಲಿ ಸತ್ಯಸಂಧರ ಕತೆಯ ಸಮಾಧಾನ ಗೊಣಗು;
ಕತ್ತೆ ಹೊತ್ತ ಬಟ್ಟೆಬರೆಯನ್ನು ಕೆರೆಯ ಕಲಸು ತೀರ್ಥದಲ್ಲಿ ಅದ್ದಿ
ತೆಗೆದು ಹಾಕುವ ಕೆಲಸ
ಇದ್ದಬದ್ದದ್ದೆಲ್ಲ ಹದ್ದುಪಾಲಾದಾಗ ಬೇರಿಳಿದ ಭೀಮಬವಣೆಯ ಬದುಕು
ಕತೆಗೆ ಬಗ್ಗೀತೆ? ಮುಗ್ಗಿದ ಮಾತಿಗೆ ಮಗ್ಗಿಹೇಳುವ ಮಗುವಾದೀತೆ?
ಬಿಸಿಭವಿಷ್ಯದ ಬೋರು ಹೊಡೆಯುತ್ತ ತಂಗಳು ತಂದಿಟ್ಟರೆ ತಿಂದೀತೆ?
ಏನಾದರೇನು ನಾವು ಧರ್ಮರಾಜನ ಒಕ್ಕಲಲ್ಲವೆ?
ಧರ್ಮದೊಡ್ಡಿಯ ಸವಕಲು ಶಿಲ್ಪಗಳ ಮುಂದೆ ಪುಕ್ಕಲಲ್ಲವೆ?
ಯಾಕೆ ಚಿಂತೆ? ಕಪ್ಪು ಕರಗಿಸುವ ಕುಲುಮೆಕೃಷ್ಣ ಇಲ್ಲವೆ?
ಓಂ ಶಾಂತಿಃ ಶಾಂತಿಃ ಶಾಂತಿಃ

ಮೈನೆರೆದು ಹತ್ತಾರು ವರ್ಷವಾದರೂ ಮದುವೆಯಿಲ್ಲದ ಸಂ-
ಯಮ ಶೀಲಕ್ಕೆ ಎಷ್ಟು ದಿನ ಮಹಾಶ್ವೇತೆಯ ಮಜಲು?
ಬಿರಿದ ಬವಣೆ ಬಾಳಲ್ಲಿ ಬಾಯ್ತಗೆದ ಭೀಮ
ಬಿರಟೆ ಬಡಿಸಿಕೊಂಡು ನಿಂತದ್ದು ತಾನೆ ಎಷ್ಟು ದಿನ?
ಇರಲಿಷ್ಟು ಹಳ್ಳಿ ದಕ್ಕದಿದ್ದಾಗ ಕಡೆಗೆ ತುಕ್ಕುಹಿಡಿದ ಮಣ್ಣಿಗೆ ತಕ್ಕಿಬಿದ್ದದ್ದು ಒಂದೇ:
ಮಹಾಭಾರತ ಕುರುಕ್ಷೇತ್ರ
ಬವಣೆಭೀಮ ಬೆದೆಗೆ ಬಂದ ಕ್ಷಾತ್ರ

ಭಾಗವತ ಹೊತ್ತಾಯಿತೆಂದು ಕತ್ತೆತ್ತಿ ನೋಡಿದ:
ಪೂರ್ವ ಆಕಳಿಸಿದ ಬಾಯಲ್ಲಿ ಕೆಂಪುಬಣ್ಣ
ಬೆಳಕಿಗೆ ಕರೆನೀಡುವ ಚಿಲಿಪಿಲಿ ಚಿಣ್ಣ
ಆತುರಾತುರದಲ್ಲಿ ಅಟ್ಟಹತ್ತಿದ ಪಾತ್ರಗಳ ಮಟ್ಟು ಮಾತುಗಳಿಗೆ
ಭಾಗವತ ಕತ್ತರಿಹಾಕಿದ; ಎಷ್ಟಾದರೂ ಭಾಗವತ
ಮುಗಿಸಬೇಕಲ್ಲ ಮಹಾಭಾರತ.
ಹೊತ್ತಾಯಿತೆಂದು ರೋಸಿ ಜನ ಎದ್ದು ನಿಂತಾಗ
ಅಟ್ಟದಲ್ಲಿ ಪಕ್ಷ ಪ್ರತಿಪಕ್ಷವೇ ಪತ್ತೆಯಾಗದ ಪ್ರಗತಿಶೀಲರ ಪವಾಡ!
ಸುತ್ತ ಹತ್ತಾರು ಹದ್ದುಗಳ ಕೆಂಚನ್ನ ಕುರುಡು ನಖಗಳ ಚಕ್ರಬಿಂಬವ್ಯೂಹ
ಮಧ್ಯೆ ಅಭಿಮನ್ಯುದೇಹ!

ರಕ್ಕಸಕೊಕ್ಕು ಇಷ್ಟಿಷ್ಟೇ ತಳಮಟ್ಟ ಹೀರಿ ಬತ್ತಿಹೋದ
ಬಂಜೆಭೂಮಿ ಬಸಿರಾದೀತೆ?
ತೆನೆಯುಸಿರು ತೊನೆದಾಡೀತೆ ?
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...