Home / ಕವನ / ಕವಿತೆ / ಗಂಗೀ ಗೌರೀ ಹಾಡು – ೨

ಗಂಗೀ ಗೌರೀ ಹಾಡು – ೨

ಅಡವಿಯನ್ನಿ ಮರನೆ
ಗಿಡವ ಬನ್ನಿ ಮರನೆ
ಅಡವ್ಯಾಗೆ ಇರುವಂಥ
ಸಾರಂಗ ಸರದೂಳಿ
ಹೆಬ್ಬುಽಲಿ ಹುಲಿಕರಡಿ
ಎಡಬಲ ಹಾಂವುತೇಳೋ ದೇವಾ|
ಎನ್ನ ಮೇಲಾಡಿ ಶ್ರೀಗಂಗೀನ ತಂದಿ|
ಎನ್ನ ತಪ್ಪೇನು ಕಂಡಿ ||೧||

ಪಟ್ಟಣದ ದಾರಿ ಮ್ಯಾಲ
ಹಿಟ್ಟಗಳ್ಲಿನ ಮ್ಯಾಲ
ಕತ್ತಿಽಯ ವರಿಯಂಗ
ವರಿಯವರು ಇದ್ದಲ್ಲಿ
ಇಪ್ಪತ್ತು ಗಾಂವುದ ತಪನಿದ್ದೊಽ ದೇವಾ
ಎನ್ನ ಮೇಲಾಡಿ ಶ್ರೀಗಂಗೀನ ತಂದಿ|
ಎನ್ನ ತಪ್ಪೇನು ಕಂಡಿ ||೨||

ಸಾರಂಗ ದಾರಿಮ್ಯಾಲ
ಸಾಲಗಲ್ಲಿನ ಮ್ಯಾಲ
ಛೂಜಿಽಯ ಮಣಿಯಂಗ
ಮಣಿಯವರು ಇದ್ದಲ್ಲಿ
ನಾಲ್ಪತ್ತು ಗಾಂವುರದ ತಪನಿದ್ದೊಽ ದೇವಾ
ಎನ್ನ ಮೇಲಾಡಿ ಶ್ರೀಗಂಗೀನ ತಂದಿ |
ಎನ್ನ ತಪ್ಪೇನು ಕಂಡಿ ||೩||

ತನುವ ಇಲ್ಲದ ಗಂಗಿ
ಥಣ್ಣೀರಿಗ್ಹೋದಾಗ
ನಿಂಬೀಹಣ್ಣಿಽನಂಗ
ತುಂಬಿಽದ ಕುಚಗಳು
ಬಂದ ಕುಂತಾಳ ಜಡಿಯೊಳಗೋ ದೇವಾ
ಎನ್ನ ಮೇಲಾಡಿ ಶ್ರೀಗಂಗೀನ ತಂದಿ |
ಎನ್ನ ತಪ್ಪೇನು ಕಂಡಿ ||೪||

ಒಟ್ಟಿಽದ ಭಣವಿಽಗಿ
ಕಿಚಗುಳ್ಳ ಬಿದ್ದಂಗ
ಮುತ್ತಿಽನ ರಾಸಿಽಗಿ
ಕಳ್ಳರು ಬಿದ್ದಂಗ
ಚಿಕ್ಕಂದಿನೊಗತಾನಾ
ಮತ್ತೊಬ್ಳಿಗಾಯ್ತಂದ
ಹೊಟ್ಯಾಗ ಭೆಂಕಿ ಬರಕ್ಯಾದೋ ದೇವಾ
ಎನ್ನ ಮೇಲಾಡಿ ಶ್ರೀಗಂಗೀನ ತಂದಿ |
ಎನ್ನ ತಪ್ಪೇನು ಕಂಡಿ ||೫||
*****

ಇದೊಂದು ಭಾವಗೀತೆ. ಲೆಕ್ಕದಂತೆ ಮುಂದಿನ ವಿಭಾಗದಲ್ಲಿ ಸೇರಿಸಬೇಕಿತ್ತು. ಅದರೆ ಈ ನಾಡಿನ ವಿಷಯವು ಪ್ರಣಯಾಂತರದ ಪರಿತಾಪವನ್ನು ಸ್ಪಷ್ಟಗೊಳಿಸುವುದರಿಂದ ಈ ನಿಭಾಗದಲ್ಲಿಯೇ ಸೇರಿಸಬೇಕಾಯಿತು. ಇದರಲ್ಲಿ ಗಂಗೆಗೆ ಶಿವನೊಲಿದದ್ದಕ್ಕಾಗಿ ಗೌರಿಯು ಅನುತಾಪಗೊಳ್ಳುವಳು. ಹಿಂದೆ ಗಿರಿರಾಜನ ಮನೆಯಲ್ಲಿದ್ದಾಗ ಶಿವನ ಸಲುವಾಗಿ ಮಾಡಿದ ಘೋರತಪಶ್ಚರ್ಯವನ್ನೆಲ್ಲ ನೆನಪಿಗೆ ತಂದುಕೊಟ್ಟು ಶಿವನ ಎದುರಿಗೇ ಕನವರಿಸುತ್ತಾಳೆ.

ಆನ್ನೀಮರ, ಬನ್ನೀಮರ ಮುಂತಾದವುಗಳಿಂದ ತುಂಬಿದ ಕಟ್ಟಡವಿಯೊಳಗೆ ಹಿಂಸ್ರಪಶುಗಳ ಮಧ್ಯದಲ್ಲಿ ತಾನು ತಪಗೈದೆನೆಂದು ಮೊದಲನೆಯ ನುಡಿಯಲ್ಲಿ, ಸ್ವರ್ಗನಗರಿಯ ದಾರಿಯಲ್ಲಿ ಕಲ್ಲುಬಂಡೆಗಳ ಮೇಲೆ ಕುಳಿತು, ಬಗೆ ಬಗೆಯ ರಾಕ್ಷಸರ ತೊಂದರೆಯನ್ನು ಸಹಿಸಿ, ಹತ್ತಿಪ್ಪತ್ತು ಯುಗಗಳ ವರೆಗೆ ತಪಗೈದೆನೆಂದು ಎರಡನೆಯ ಮೂರನೆಯ ನುಡಿಗಳಲ್ಲಿ ಹೇಳುತ್ತಾಳೆ.

ಛಂದಸ್ಸು:- ಲಲಿತರಗಳೆ

ಶಬ್ದಪ್ರಯೋಗಗಳು:- ಸಾರಂಗಸರದೂಳಿ=ಸಾರಂಗ ಮತ್ತು ಶಾರ್ದೂಲ. ಎನ್ನ ಮೇಲಾಡಿ=ನನ್ನ ಮೇಲೆ ಮೇಲಾಟಿಮಾಡಿ, ಅಥವಾ ನನಗಿಂತ ಮಿಗಿಲೆಂದು. ಪಟ್ಟಣದ ದಾರಿ=ಕೈಲಾಸ ಪಟ್ಟಣದ ದಾರಿ. ಕತ್ತೀಯ ವರಿಯವರು=ಚರ್ಮದ ಚೀಲದಲ್ಲಿ ಮುಚ್ಚಿದ ಖಡ್ಗವನ್ನು ಧರಿಸಿದ ಅಮಾನುಷರು. ಗಾಂವದ=ಗಾವುದ. ಈ ಶಬ್ದವನ್ನು ಇಲ್ಲಿ `ಯುಗ’ ಎಂಬ ಅರ್ಧದಲ್ಲಿ ಉಪಯೋಗಿಸಿದೆ. ಸಾರಂಗ ದಾರಿ=ಸ್ವರ್ಗ ದಾರಿ. ತಪನಿದ್ದ=ತಪವಿದ್ದೆನು. ಭಣವಿ=ಸೊಪ್ಪಿನ ಬಣಿವೆ ಅಧವಾ ಒಟ್ಟಲು. ಕಿಚಗುಳ್ಳ=ಕಿಚ್ಚಿನ ಬೆರಣಿ, ಎಂದರೆ ಕೆಂಡ. ಒಗತನ=ದಾಂಪತ್ಯ. ಬರಕ್ಯಾದ=ಸುರುವಿದೆ.

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...