Home / ಕವನ / ಕವಿತೆ / ಯುದ್ಧಕ್ಕೆ ಹೋದ ಮಗನನ್ನು ಕುರಿತು

ಯುದ್ಧಕ್ಕೆ ಹೋದ ಮಗನನ್ನು ಕುರಿತು

ನಟ್ಟಿರುಳು ಚಳಿ ಮೌನ, ಸಣ್ಣಗೆ ಅಳುವ ದೀಪ
ಕೋಣೆ ಮೂಲೆಯ ಕಡ್ಡಿಚಾಪೆ ಮೇಲೆ
ನಿದ್ದೆಯಿಲ್ಲದೆ ಹಸಿದ ಹೊಟ್ಟೆಯಲ್ಲಿ ಹೊರಳುವ ತಾಯಿ
ಕಪ್ಪಿಟ್ಟ ಮುಖ, ಸುಕ್ಕುಕೆನ್ನೆ, ನಿಟ್ಟುಸಿರು
ಚಿಂತೆ ಮಡುನಿಂತಂತೆ ಕಣ್ಣು
ಯೋಚಿಸುತ್ತಾಳೆ ತಾಯಿ ಯುದ್ಧಕ್ಕೆ ನಡೆದ
ಮಗನನ್ನು ಕುರಿತು
ಯೋಚಿಸುತ್ತಾಳೆ ಇರುಳ ಕಂದರಕ್ಕೇ ಜಿಗಿದ
ಉರಿವ ಧಗಧಗ ಪಂಜು ಕುರಿತು.

“ಚಿಕ್ಕಂದಿನಿಂದಲೂ ಅವನ ರೀತಿಯೆ ಹಾಗೆ
ಮಗುವಾಗಿದ್ದಾಗ ಮರಿ ಹುಲಿಯೇ!
ಕವುಚಿ ತೆವಳುತ್ತ ಹೂಂಕರಿಸುತ್ತ ತಲೆಯೆತ್ತಿ
ಹೆಡೆ ತೂಗುತ್ತಿದ್ದದೋ
ಬಾಚಿ ಹಿಡಿದರೆ ಹೊರಳಿ ಜಿಗಿಯುತ್ತಿದ್ದದ್ದೋ
ಛೀ ಪುಂಡ ಎಂದು ಸೆಳೆದಪ್ಪಿದರೆ ಮುಖವನ್ನೆ
ಕಚ್ಚುತ್ತಿದ್ದದ್ದೋ –
ಹೊಟ್ಟೆಯುರಿಸುವ ನೆನಪು ಉಕ್ಕಿ ಕಾಡುತ್ತದೆ
ತೊಡೆ ಮೇಲೆ ಹಾಗೆ ಥಕ ಥೈ ಕುಣಿವ ಮುದ್ದುಮಗು
ಈಗ ಎಲ್ಲಿ?
ಸಾವಿನ ಕರಾಳಬಾಯಿ ಜೀವ ಮೇಯುವ
ಯಾವ ಜಾಗದಲ್ಲಿ ?

“ಹೇಗೆ ಬೆಳೆದ ಹುಡುಗ ಕೆಚ್ಚು ಬೆಳೆದಂತೆ!
ಕಟ್ಟಿಗೆಯಲ್ಲಡಗಿದ್ದ ಕಿಚ್ಚು ಎದ್ದಂತೆ.
ಕ್ರಿಕೆಟ್ ಕೊಕ್ಕೋ ಅಂತ ಊರು ತಿರುಗಿದ್ದೇನು
ಹೋದಲ್ಲೆಲ್ಲ ಕಪ್ಪು ಷೀಲ್ಡು ಬಾಚಿದ್ದೇನು
ಚೆಂಡು ತೂರುವ ಕಪಿಲ್, ಬ್ಯಾಟು ಬೀಸುವ ಸುನೀಲ್
ಮನೆಗೋಡೆ ಮೇಲೆಲ್ಲ ‌ಚಿತ್ರ ತೂಗಿದ್ದೇನು

ಶಕ್ತಿಯ ಆರಾಧನೆಯೆ ಕೌಮಾರ್‍ಯವಲ್ಲ!
ಯುದ್ಧಕ್ಕಾಗೇ ನಡೆದ ಪೂರ್ವ ಸಿದ್ಧತೆ, ಆಗ ತಿಳಿಯಲೇ ಇಲ್ಲ.
ಆಡಿ ಹಸಿದು ಬಂದು
ಅಮ್ಮಾ ಕೈ ತುತ್ತು ಎಂದು
ಇನ್ನೂ ಬೇಕೆಂದು ಮುಕ್ಕಿ ಉಣ್ಣುತ್ತಿದ್ದ ಹುಡುಗ
ಈಗ ಎಲ್ಲಿ?
ಸಾವಿನ ಕರಾಳಬಾಯಿ ಜೀವ ಮೇಯುವ
ಯಾವ ಜಾಗದಲ್ಲಿ?

“ಬೆಚ್ಚನೆಯ ಮನೆರಕ್ಷೆ ಇತ್ತು ಆಗ
ಹೇಗಿರಬಹುದು ಈಗ ಇರುವ ಜಾಗ ?
ಕತ್ತಲ ಹೊಟ್ಟೆ ತಿವಿವ ಹಿಮದ ದಿಬ್ಬಗಳು
ಹೆಪ್ಪುಗಟ್ಟಿದ ಥಂಡಿ ಸುತ್ತಮುತ್ತ,
ಸಿಳ್ಳು ಹಾಕುತ್ತ ಮೈಯ ಒತ್ತಿ ತಳ್ಳುವ ಗಾಳಿ,
ಮೈಗೆ ಫಟ್ಟೆಂದು ಬಡಿದು ಬೊಬ್ಬೆ ಹೊಡೆಸುವ ಬಂಡೆ
ಉಂಡದ್ದು ನಿನ್ನೆ ಮಧ್ಯಾಹ್ನ, ಹಿಡಿಯಷ್ಟು
ಆದರೂ ……… ಆದರೂ
ಹತ್ತಲೇಬೇಕು ಕತ್ತಲಲ್ಲೂ ಕೂಡ
ಶಸ್ತ್ರಾಸ್ತ್ರ ಹೊತ್ತು ತಡಕುತ್ತ ತೆವಳುತ್ತ;
ಏರಬೇಕು, ಏರಿ ಹೋಗಬೇಕು
ದಿಟ್ಟ ಪತಾಕೆಯಂತೆ ಸೆಟೆದು ತಲೆಯೆತ್ತಿ
ಸಿಡಿಸಬೇಕು ತುಪಾಕಿ,
ಉರಿವ ಶೆಲ್ಲುಗಳನ್ನು ವೈರಿ ಠಾಣೆಯ ಮೇಲೆ
ಸುರಿಸಬೇಕು,
ಸಾಯಲೂ ನೋಯಲೂ ವೈರಿ ಕೈಸೇರಲೂ
ಊನಾಗಿ ಬಾಳಲೂ ಸಿದ್ಧನಿರಬೇಕು.

“ಯುದ್ಧವಂತೆ ಯುದ್ಧ !
ಯಾಕಾಗಿ ಈ ಯುದ್ಧ?
ಮನುಷ್ಯ ಮುಖ ಹೊತ್ತ ಯಾವ ದೆವ್ವಗಳನ್ನು ತಣಿಸಲಿಕ್ಕೆ,
ಯಾವ ಅವಿವೇಕಿ ಮುಟ್ಠಾಳ ಕೊಳಕರ ರಾಜಕಾರಣ ಕುತಂತ್ರಕ್ಕೆ?
ಎಂದೂ ಕಾಣದ ಯಾವನನ್ನೊ ದ್ವೇಷವೆ ಇರದೆ
ಇರಿದು ಕೊಲ್ಲುವುದು.
ಗೊತ್ತೇ ಇರದ ಯಾವ ಮಗನನ್ನೊ ಪತಿಯನ್ನೊ
ತುಪಾಕಿಗುಣಿಸಿ
ನಗುತ್ತಿದ್ದ ಮನೆಯ ಸುಡುಗಾಡು ಮಾಡುವುದು.
ಸಾಕು ದೇವರೆ ಹೀಗೆ
ಬೆಳೆದ ಹುಡುಗರ ಮೈಗೆ ಉರಿ ಹಚ್ಚಿ ಸುಡುವ ರೋಗ
ಯುದ್ಧಕ್ಕೆ ಮೂಲ ಕಾರಣ ಯಾರೊ ಅವನ ಮನೆ
ಹಾಳಾಗಿ ಹೋಗ!

ಲೋಕಕ್ಕೆಲ್ಲ ಬೆಳಕ ಕರುಣಿಸುವ ದೇವರೇ
ಹಚ್ಚಿಡುವೆ ನಿನಗೆ ಕಂಪಿಡುವ ಧೂಪ,
ಬೆಳಗುತ್ತಲೇ ಇರಲಿ ಎಲ್ಲೆ ಇದ್ದರು ಸದಾ
ನನ್ನ ಹುಡುಗನ ಕಣ್ಣ ದೀಪ,
ಮುಕ್ಕಾಗದಿರಲಿ ಎಂದೂ ಅವನ ಮೈಮಾಟ.
ನಾಡ ಕೇಡನ್ನು ಅವನು ಮೆಟ್ಟಿ ಬರಲಿ
ಕಿರುಬಗಳ ಗಡಿಯಾಚೆ ಅಟ್ಟಿ ಬರಲಿ
ಮ್ಯತ್ಯುವಿನ ಕಣದಲ್ಲೆ ಕಾದಿ ಗೆದ್ದು
ಮತ್ತೆ ನಚಿಕೇತ ಮನೆಗೆ ಬರಲಿ”.
*****

Tagged:

Leave a Reply

Your email address will not be published. Required fields are marked *

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...