Home / ಕವನ / ಅನುವಾದ / ಸಾಯುತ್ತಿರುವ ಕವಿಯ ಸಂದೇಶ, ಯುವಕರಿಗೆ

ಸಾಯುತ್ತಿರುವ ಕವಿಯ ಸಂದೇಶ, ಯುವಕರಿಗೆ

ಬರಲಿರುವ ಕಾಲದ ಯುವಕರೇ,
ಇನ್ನೂ ಕಟ್ಟದಿರುವ ನಗರಗಳಲ್ಲಿ
ಹುಟ್ಟದಿರುವ ಎಳೆಯ ಜೀವಗಳೇ,
ಕ್ಷುದ್ರವಾಗಿ ಸತ್ತ ಈ ಮುದುಕನ ಮಾತನ್ನು ಕೇಳಿ.

ತನ್ನ ಹೊಲವನ್ನು ಉತ್ತು ಬಿತ್ತದ ರೈತನಂತೆ.
ಮನೆಯ ಚಾವಣಿಗೆ ತೊಲೆ ಕೂಡಿಸಿವುದನ್ನು ಅರ್‍ಧಕ್ಕೇ ಬಿಟ್ಟು ಓಡಿದ ಬಡಗಿಯಂತೆ

ನಾನೂ ಕಾಲ ದಂಡಮಾಡಿದೆ,
ದಿನಗಳನ್ನು ಸುಮ್ಮನೇ ಕಳೆದೆ.
ಹೇಳದೆ ಉಳಿದಿರುವುದನ್ನೆಲ್ಲ ನೀವು ಹೇಳಿ.
ಮಾಡದೆ ಉಳಿದಿರುವುದನ್ನೆಲ್ಲ ನೀವು ಮಾಡಿ.
ನನ್ನನ್ನು ಮರೆತುಬಿಡಿ. ನನ್ನ ನಿದರ್ಶನ
ನಿಮ್ಮ ದಾರಿ ತಪ್ಪಿಸದಿರಲಿ.

ಬಿತ್ತದ ಬೆಳೆಯದ ಜನರೊಂದಿಗೆ ಕೂತು
ಅವರು ಬೇಯಿಸದ ಔತಣವನ್ನು ಮೆಚ್ಚಿಮೆಚ್ಚಿ ಉಂಡೆ, ಏಕೆ?
ನನ್ನ ಸುಂದರ ಸೂಕ್ತಿಗಳನ್ನು ಅವರ ಹರಟೆಗೆ
ಉಪ್ಪಿನಕಾಯಿ ಹಾಗೆ ಒದಗಿಸಿದೆ, ಏಕೆ?
ಅಕ್ಷರಕ್ಕಾಗಿ ಹಸಿದವರು, ಕವಿತೆಗೆ ಬಾಯಾರಿದವರು
ಬೀದಿಯಲ್ಲಿ ಸುಮ್ಮನೇ ಸುತ್ತುತ್ತಿದ್ದರು.

ಊರುಗಳನ್ನು ಕಟ್ಟುವ ಎಡೆಯಲ್ಲಿ ನನ್ನ ಕವಿತೆಯೇಕೆ ಚಿಗುರುವುದಿಲ್ಲ?
ವೇಗವಾಗಿ ಓಡುವ ಸಿಟಿಯ ರೈಲುಗಳ ಹೊಗೆ
ಆಕಾಶದಲ್ಲಿ ಒಂದಷ್ಟು ಕಾಲ ಉಳಿಯುವಂತೆ
ನನ್ನೆ ಕವಿತೆಯೇಕೆ ಉಳಿಯುವುದಿಲ್ಲ?

ದುಡಿವವರ ಪಾಲಿಗೆ ನನ್ನ ಮಾತು
ಬಾಯಿಗೆ ಹೊಯ್ದ ಬೂದಿಯಂತೆ,
ಕುಡುಕನ ತೊದಲಿನಂತೆ.

ಯುವಕರೇ, ನಿಮಗೆ ಒಂದು ನುಡಿಯನ್ನೂ ಕಲಿಸಲಾರೆ.
ನಡುಗುವ ಬೆರಳೆತ್ತಿ ಇಗೋ ಈ ದಾರಿ ಸರಿ ಎವ್ನಲಾರೆ.
ಎಂದೂ ಎಲ್ಲೂ ಹೋಗದವನು ದಾರಿ ಹೇಗೆ ತೋರಬಲ್ಲ?

ಬದುಕು ದಂಡ ಮಾಡಿದವನು ನಾನು ಹೇಳುವುದಿಷ್ಟೆ-
ನಮ್ಮ ಕೊಳೆತ ಬಾಯಿ ಮುಕ್ಕಳಿಸುವ ಯಾವ ಮಾತನ್ನೂ ಕೇಳಬೇಡಿ.
ಸೋತ ಬೇಸತ್ತ ನಮ್ಮ ಯಾವ ಆದೇಶವನ್ನೂ ಪಾಲಿಸಬೇಡಿ.

ನಾವು ಹಾಳು ಮಾಡಿದ ಹೊಲ ಮತ್ತೆ ವಸುಂಧರೆಯಾಗಲು,
ನಾವು ವಿಷ ತುಂಬಿದ ನಗರ ಜನ ಬದುಕಲು ಯೋಗ್ಯವಾಗಲು
ಏನು ಮಾಡಿದರೆ ಒಳಿತೆಂದು ನಿಮಗೆ ತೋರುವುದೋ ಹಾಗೆ ಮಾಡಿ.
*****
ಮೂಲ: ಬೆರ್ಟಾಲ್ಟ್ ಬ್ರೆಖ್ಟ್ / Bertolt Brecht

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...