Home / ಕವನ / ಕವಿತೆ / ನಾನು ಹೆಂಡತಿಯಾಗಲಾರೆ

ನಾನು ಹೆಂಡತಿಯಾಗಲಾರೆ

ಹೆಣ್ಣಿನ ಕುತ್ತಿಗೆಗೆ ಮಾತ್ರ ತೂಗು ಹಾಕುವ
ಗುರುತಿನ ಕಾರ್‍ಡು
ನೇಣು ಹಗ್ಗದಂತೆ ಕಾಣಿಸುತ್ತದೆ ನನಗೆ
ನಾನು ಹೆಂಡತಿಯಾಗಲಾರೆ.

ಸಂಕೇತಗಳ ಬೇಡಿಯನ್ನು
ಅಂಗಾಂಗಗಳ ಮೇಲೆಲ್ಲಾ ಹೇರಿ
ಕುಂಕುಮವ ನೆತ್ತಿಗೆ ಮೆತ್ತಿ, ಮುತೈದೆ ಮಂಗಳೆ
ಎಂದೆಲ್ಲ ಊದುವ ಶಂಖನಾದ
ಭಂಡಾರ ಬಳಿದು ಬಲಿಗೆ ಸಿದ್ಧಪಡಿಸಿದ
ಯೂಪಸ್ತಂಭದ ಹರಕೆಯ ಕುರಿಯ
ನೆನಪು ತರುತ್ತದೆ ನನಗೆ
ನಾನು ಹೆಂಡತಿಯಾಗಲಾರೆ.

ಅವಕುಂಟನ, ಪರದಾ ಬುರಖಾಗಳಲ್ಲಿ
ನನ್ನ ಮುಚ್ಚಿ ಮೆಚ್ಚುವ ನಿನ್ನ ಪರಿ
ಅಲಂಕೃತಗೊಳಿಸಿದ ಮೃತದೇಹವನ್ನು
ಶವಪೆಟ್ಟಿಗೆಯಲ್ಲಿಟ್ಟು ಮುಚ್ಚಿದಂತೆ
ನನ್ನೊಳಗಿನ ನನ್ನನ್ನು ಅದುಮಿ
ಸಾಯಿಸುವ ನಿನ್ನ ಹಂಬಲ
ಸೂರ್ಯನಷ್ಟೇ ಸ್ಪಷ್ಟ ನನಗೆ
ನಾನು ಹೆಂಡತಿಯಾಗಲಾರೆ.

ನೀನು ಬಿತ್ತಿದ ಬೀಜಕ್ಕೆ ನನ್ನೆಲ್ಲಾ
ರಕ್ತ ಮಾಂಸಗಳ ಗೊಬ್ಬರ ಬೀರಿ
ತೆನೆತೆಗೆದು ನಿನ್ನ ಕೈಯಲ್ಲಿಟ್ಟು
ಕೃತಾರ್ಥಳಾಗಬೇಕು
ರಕ್ತ ಬಸಿಯುವ ಹಾಲೂಡಿಸಿ ಮತ್ತೆ
ನಿನ್ನ ಹೆಸರಿಗೆ ಇಡಬೇಕು
ನಾನು ಹೆಂಡತಿಯಾಗಲಾರೆ

ನನ್ನ ಹೆಸರಿನ ಕೂಡ ನಿನ್ನ ಹೆಸರಿನ
ಧಿಮಾಕು ಜೋಡಿಸಿ
ನಿನ್ನ ಆಸ್ತಿಯಲ್ಲಿ ಭಾವಬತ್ತಿದ ನಾನೊಂದು
ವಸ್ತುವಾಗಬೇಕು
ನಾನು ಹೆಂಡತಿಯಾಗಲಾರೆ.

ಗಾಲವನ ಗಾಳಕ್ಕೆ ಸಿಕ್ಕು ಮದುವೆ ಎಂಬ
ಬಲೆಯೊಳಗೆ ಮರಳಿ ಮರಳಿ ನರಳಿ
ವಿಲವಿಲನೆ ಒದ್ದಾಡಿ ಬಳಲಿ
ಬೆಂಡಾದ ಬಾಡಿದ ಮಾಧವಿಯಲ್ಲ ನಾನು

ದುಶ್ಯಂತನ ಪ್ರೇಮದ ಬಲೆಯಲ್ಲಿ ಕಳೆದುಹೋಗಿ
ಗಾಂಧರ್ವ ವಿವಾಹದಿ ಬಂಧಿಯಾಗಿ
ಮತ್ತೆ ಪರಿತ್ಯಕ್ತೆಯಾಗಿ ಬೆಂದ
ಶಕುಂತಲಾ ಅಲ್ಲ ನಾನು

ಇನ್ನು ಹುಟ್ಟದೇ ಇರಲಿ ನಾರಿ ಎನ್ನವೋಲ್
ಎಂದು ಹಳಹಳಿಸಿ ನೊಂದ ಪಂಚವಲ್ಲಭೆ
ಪಾಂಚಾಲಿಯೂ ಅಲ್ಲ ನಾನು
ನಾನು ಹೆಂಡತಿಯಾಗಲಾರೆ
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...