Home / ಕವನ / ಕವಿತೆ / ನಾನು ಹೆಂಡತಿಯಾಗಲಾರೆ

ನಾನು ಹೆಂಡತಿಯಾಗಲಾರೆ

ಹೆಣ್ಣಿನ ಕುತ್ತಿಗೆಗೆ ಮಾತ್ರ ತೂಗು ಹಾಕುವ
ಗುರುತಿನ ಕಾರ್‍ಡು
ನೇಣು ಹಗ್ಗದಂತೆ ಕಾಣಿಸುತ್ತದೆ ನನಗೆ
ನಾನು ಹೆಂಡತಿಯಾಗಲಾರೆ.

ಸಂಕೇತಗಳ ಬೇಡಿಯನ್ನು
ಅಂಗಾಂಗಗಳ ಮೇಲೆಲ್ಲಾ ಹೇರಿ
ಕುಂಕುಮವ ನೆತ್ತಿಗೆ ಮೆತ್ತಿ, ಮುತೈದೆ ಮಂಗಳೆ
ಎಂದೆಲ್ಲ ಊದುವ ಶಂಖನಾದ
ಭಂಡಾರ ಬಳಿದು ಬಲಿಗೆ ಸಿದ್ಧಪಡಿಸಿದ
ಯೂಪಸ್ತಂಭದ ಹರಕೆಯ ಕುರಿಯ
ನೆನಪು ತರುತ್ತದೆ ನನಗೆ
ನಾನು ಹೆಂಡತಿಯಾಗಲಾರೆ.

ಅವಕುಂಟನ, ಪರದಾ ಬುರಖಾಗಳಲ್ಲಿ
ನನ್ನ ಮುಚ್ಚಿ ಮೆಚ್ಚುವ ನಿನ್ನ ಪರಿ
ಅಲಂಕೃತಗೊಳಿಸಿದ ಮೃತದೇಹವನ್ನು
ಶವಪೆಟ್ಟಿಗೆಯಲ್ಲಿಟ್ಟು ಮುಚ್ಚಿದಂತೆ
ನನ್ನೊಳಗಿನ ನನ್ನನ್ನು ಅದುಮಿ
ಸಾಯಿಸುವ ನಿನ್ನ ಹಂಬಲ
ಸೂರ್ಯನಷ್ಟೇ ಸ್ಪಷ್ಟ ನನಗೆ
ನಾನು ಹೆಂಡತಿಯಾಗಲಾರೆ.

ನೀನು ಬಿತ್ತಿದ ಬೀಜಕ್ಕೆ ನನ್ನೆಲ್ಲಾ
ರಕ್ತ ಮಾಂಸಗಳ ಗೊಬ್ಬರ ಬೀರಿ
ತೆನೆತೆಗೆದು ನಿನ್ನ ಕೈಯಲ್ಲಿಟ್ಟು
ಕೃತಾರ್ಥಳಾಗಬೇಕು
ರಕ್ತ ಬಸಿಯುವ ಹಾಲೂಡಿಸಿ ಮತ್ತೆ
ನಿನ್ನ ಹೆಸರಿಗೆ ಇಡಬೇಕು
ನಾನು ಹೆಂಡತಿಯಾಗಲಾರೆ

ನನ್ನ ಹೆಸರಿನ ಕೂಡ ನಿನ್ನ ಹೆಸರಿನ
ಧಿಮಾಕು ಜೋಡಿಸಿ
ನಿನ್ನ ಆಸ್ತಿಯಲ್ಲಿ ಭಾವಬತ್ತಿದ ನಾನೊಂದು
ವಸ್ತುವಾಗಬೇಕು
ನಾನು ಹೆಂಡತಿಯಾಗಲಾರೆ.

ಗಾಲವನ ಗಾಳಕ್ಕೆ ಸಿಕ್ಕು ಮದುವೆ ಎಂಬ
ಬಲೆಯೊಳಗೆ ಮರಳಿ ಮರಳಿ ನರಳಿ
ವಿಲವಿಲನೆ ಒದ್ದಾಡಿ ಬಳಲಿ
ಬೆಂಡಾದ ಬಾಡಿದ ಮಾಧವಿಯಲ್ಲ ನಾನು

ದುಶ್ಯಂತನ ಪ್ರೇಮದ ಬಲೆಯಲ್ಲಿ ಕಳೆದುಹೋಗಿ
ಗಾಂಧರ್ವ ವಿವಾಹದಿ ಬಂಧಿಯಾಗಿ
ಮತ್ತೆ ಪರಿತ್ಯಕ್ತೆಯಾಗಿ ಬೆಂದ
ಶಕುಂತಲಾ ಅಲ್ಲ ನಾನು

ಇನ್ನು ಹುಟ್ಟದೇ ಇರಲಿ ನಾರಿ ಎನ್ನವೋಲ್
ಎಂದು ಹಳಹಳಿಸಿ ನೊಂದ ಪಂಚವಲ್ಲಭೆ
ಪಾಂಚಾಲಿಯೂ ಅಲ್ಲ ನಾನು
ನಾನು ಹೆಂಡತಿಯಾಗಲಾರೆ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...