Home / ಕವನ / ಕವಿತೆ / ನಾನು ಹೆಂಡತಿಯಾಗಲಾರೆ

ನಾನು ಹೆಂಡತಿಯಾಗಲಾರೆ

ಹೆಣ್ಣಿನ ಕುತ್ತಿಗೆಗೆ ಮಾತ್ರ ತೂಗು ಹಾಕುವ
ಗುರುತಿನ ಕಾರ್‍ಡು
ನೇಣು ಹಗ್ಗದಂತೆ ಕಾಣಿಸುತ್ತದೆ ನನಗೆ
ನಾನು ಹೆಂಡತಿಯಾಗಲಾರೆ.

ಸಂಕೇತಗಳ ಬೇಡಿಯನ್ನು
ಅಂಗಾಂಗಗಳ ಮೇಲೆಲ್ಲಾ ಹೇರಿ
ಕುಂಕುಮವ ನೆತ್ತಿಗೆ ಮೆತ್ತಿ, ಮುತೈದೆ ಮಂಗಳೆ
ಎಂದೆಲ್ಲ ಊದುವ ಶಂಖನಾದ
ಭಂಡಾರ ಬಳಿದು ಬಲಿಗೆ ಸಿದ್ಧಪಡಿಸಿದ
ಯೂಪಸ್ತಂಭದ ಹರಕೆಯ ಕುರಿಯ
ನೆನಪು ತರುತ್ತದೆ ನನಗೆ
ನಾನು ಹೆಂಡತಿಯಾಗಲಾರೆ.

ಅವಕುಂಟನ, ಪರದಾ ಬುರಖಾಗಳಲ್ಲಿ
ನನ್ನ ಮುಚ್ಚಿ ಮೆಚ್ಚುವ ನಿನ್ನ ಪರಿ
ಅಲಂಕೃತಗೊಳಿಸಿದ ಮೃತದೇಹವನ್ನು
ಶವಪೆಟ್ಟಿಗೆಯಲ್ಲಿಟ್ಟು ಮುಚ್ಚಿದಂತೆ
ನನ್ನೊಳಗಿನ ನನ್ನನ್ನು ಅದುಮಿ
ಸಾಯಿಸುವ ನಿನ್ನ ಹಂಬಲ
ಸೂರ್ಯನಷ್ಟೇ ಸ್ಪಷ್ಟ ನನಗೆ
ನಾನು ಹೆಂಡತಿಯಾಗಲಾರೆ.

ನೀನು ಬಿತ್ತಿದ ಬೀಜಕ್ಕೆ ನನ್ನೆಲ್ಲಾ
ರಕ್ತ ಮಾಂಸಗಳ ಗೊಬ್ಬರ ಬೀರಿ
ತೆನೆತೆಗೆದು ನಿನ್ನ ಕೈಯಲ್ಲಿಟ್ಟು
ಕೃತಾರ್ಥಳಾಗಬೇಕು
ರಕ್ತ ಬಸಿಯುವ ಹಾಲೂಡಿಸಿ ಮತ್ತೆ
ನಿನ್ನ ಹೆಸರಿಗೆ ಇಡಬೇಕು
ನಾನು ಹೆಂಡತಿಯಾಗಲಾರೆ

ನನ್ನ ಹೆಸರಿನ ಕೂಡ ನಿನ್ನ ಹೆಸರಿನ
ಧಿಮಾಕು ಜೋಡಿಸಿ
ನಿನ್ನ ಆಸ್ತಿಯಲ್ಲಿ ಭಾವಬತ್ತಿದ ನಾನೊಂದು
ವಸ್ತುವಾಗಬೇಕು
ನಾನು ಹೆಂಡತಿಯಾಗಲಾರೆ.

ಗಾಲವನ ಗಾಳಕ್ಕೆ ಸಿಕ್ಕು ಮದುವೆ ಎಂಬ
ಬಲೆಯೊಳಗೆ ಮರಳಿ ಮರಳಿ ನರಳಿ
ವಿಲವಿಲನೆ ಒದ್ದಾಡಿ ಬಳಲಿ
ಬೆಂಡಾದ ಬಾಡಿದ ಮಾಧವಿಯಲ್ಲ ನಾನು

ದುಶ್ಯಂತನ ಪ್ರೇಮದ ಬಲೆಯಲ್ಲಿ ಕಳೆದುಹೋಗಿ
ಗಾಂಧರ್ವ ವಿವಾಹದಿ ಬಂಧಿಯಾಗಿ
ಮತ್ತೆ ಪರಿತ್ಯಕ್ತೆಯಾಗಿ ಬೆಂದ
ಶಕುಂತಲಾ ಅಲ್ಲ ನಾನು

ಇನ್ನು ಹುಟ್ಟದೇ ಇರಲಿ ನಾರಿ ಎನ್ನವೋಲ್
ಎಂದು ಹಳಹಳಿಸಿ ನೊಂದ ಪಂಚವಲ್ಲಭೆ
ಪಾಂಚಾಲಿಯೂ ಅಲ್ಲ ನಾನು
ನಾನು ಹೆಂಡತಿಯಾಗಲಾರೆ
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...