ನಾನು ಹೆಂಡತಿಯಾಗಲಾರೆ

ಹೆಣ್ಣಿನ ಕುತ್ತಿಗೆಗೆ ಮಾತ್ರ ತೂಗು ಹಾಕುವ
ಗುರುತಿನ ಕಾರ್‍ಡು
ನೇಣು ಹಗ್ಗದಂತೆ ಕಾಣಿಸುತ್ತದೆ ನನಗೆ
ನಾನು ಹೆಂಡತಿಯಾಗಲಾರೆ.

ಸಂಕೇತಗಳ ಬೇಡಿಯನ್ನು
ಅಂಗಾಂಗಗಳ ಮೇಲೆಲ್ಲಾ ಹೇರಿ
ಕುಂಕುಮವ ನೆತ್ತಿಗೆ ಮೆತ್ತಿ, ಮುತೈದೆ ಮಂಗಳೆ
ಎಂದೆಲ್ಲ ಊದುವ ಶಂಖನಾದ
ಭಂಡಾರ ಬಳಿದು ಬಲಿಗೆ ಸಿದ್ಧಪಡಿಸಿದ
ಯೂಪಸ್ತಂಭದ ಹರಕೆಯ ಕುರಿಯ
ನೆನಪು ತರುತ್ತದೆ ನನಗೆ
ನಾನು ಹೆಂಡತಿಯಾಗಲಾರೆ.

ಅವಕುಂಟನ, ಪರದಾ ಬುರಖಾಗಳಲ್ಲಿ
ನನ್ನ ಮುಚ್ಚಿ ಮೆಚ್ಚುವ ನಿನ್ನ ಪರಿ
ಅಲಂಕೃತಗೊಳಿಸಿದ ಮೃತದೇಹವನ್ನು
ಶವಪೆಟ್ಟಿಗೆಯಲ್ಲಿಟ್ಟು ಮುಚ್ಚಿದಂತೆ
ನನ್ನೊಳಗಿನ ನನ್ನನ್ನು ಅದುಮಿ
ಸಾಯಿಸುವ ನಿನ್ನ ಹಂಬಲ
ಸೂರ್ಯನಷ್ಟೇ ಸ್ಪಷ್ಟ ನನಗೆ
ನಾನು ಹೆಂಡತಿಯಾಗಲಾರೆ.

ನೀನು ಬಿತ್ತಿದ ಬೀಜಕ್ಕೆ ನನ್ನೆಲ್ಲಾ
ರಕ್ತ ಮಾಂಸಗಳ ಗೊಬ್ಬರ ಬೀರಿ
ತೆನೆತೆಗೆದು ನಿನ್ನ ಕೈಯಲ್ಲಿಟ್ಟು
ಕೃತಾರ್ಥಳಾಗಬೇಕು
ರಕ್ತ ಬಸಿಯುವ ಹಾಲೂಡಿಸಿ ಮತ್ತೆ
ನಿನ್ನ ಹೆಸರಿಗೆ ಇಡಬೇಕು
ನಾನು ಹೆಂಡತಿಯಾಗಲಾರೆ

ನನ್ನ ಹೆಸರಿನ ಕೂಡ ನಿನ್ನ ಹೆಸರಿನ
ಧಿಮಾಕು ಜೋಡಿಸಿ
ನಿನ್ನ ಆಸ್ತಿಯಲ್ಲಿ ಭಾವಬತ್ತಿದ ನಾನೊಂದು
ವಸ್ತುವಾಗಬೇಕು
ನಾನು ಹೆಂಡತಿಯಾಗಲಾರೆ.

ಗಾಲವನ ಗಾಳಕ್ಕೆ ಸಿಕ್ಕು ಮದುವೆ ಎಂಬ
ಬಲೆಯೊಳಗೆ ಮರಳಿ ಮರಳಿ ನರಳಿ
ವಿಲವಿಲನೆ ಒದ್ದಾಡಿ ಬಳಲಿ
ಬೆಂಡಾದ ಬಾಡಿದ ಮಾಧವಿಯಲ್ಲ ನಾನು

ದುಶ್ಯಂತನ ಪ್ರೇಮದ ಬಲೆಯಲ್ಲಿ ಕಳೆದುಹೋಗಿ
ಗಾಂಧರ್ವ ವಿವಾಹದಿ ಬಂಧಿಯಾಗಿ
ಮತ್ತೆ ಪರಿತ್ಯಕ್ತೆಯಾಗಿ ಬೆಂದ
ಶಕುಂತಲಾ ಅಲ್ಲ ನಾನು

ಇನ್ನು ಹುಟ್ಟದೇ ಇರಲಿ ನಾರಿ ಎನ್ನವೋಲ್
ಎಂದು ಹಳಹಳಿಸಿ ನೊಂದ ಪಂಚವಲ್ಲಭೆ
ಪಾಂಚಾಲಿಯೂ ಅಲ್ಲ ನಾನು
ನಾನು ಹೆಂಡತಿಯಾಗಲಾರೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೩
Next post ಮುಸ್ಸಂಜೆಯ ಮಿಂಚು – ೧

ಸಣ್ಣ ಕತೆ

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

cheap jordans|wholesale air max|wholesale jordans|wholesale jewelry|wholesale jerseys