Home / ಕವನ / ಕವಿತೆ / ಪಾಣಿಪತ

ಪಾಣಿಪತ

(ಒಂದು ಯಕ್ಷಗಾನ ದೃಶ್ಯ)
[ವಾರ್ಧಿಕ ಷಟ್ಪದಿ]

ಜಂಬುದ್ವೀಪದ ಹೊರಗೆ ನೆಲಸಿದ್ದ ಅಫ್ಘಾನ
ರಂ ಬಹಳ ಕಾಲದಿಂದಾಳ್ವಹಮ್ಮದ ಶಹನ್
ಎಂಬಾ ದುರಾಣಿ ಕುಲದಗ್ರಣಿ ಮುಸಲ್ಮಾನರೊಡನೆ ಪಾಣೀಪತಕ್ಕೆ ||
ಜಂಭದಿಂದೆಯ್ತಂದು ಪಾಳೆಯರ ಬಿಟ್ಟಿರಲು
ಕುಂಭಜನ ಚಕ್ರಕೋಟೆಗೆ ನಡೆವ ಅಭಿಮನ್ಯು
ವೆಂಬವೋಲ್ ಮಾರಾಟದಳವೆರಸಿ ಪೊರಮಟ್ಟನಾ ಸದಾಶಿವ ಭಾವುವೂ

[ಸೌರಾಷ್ಟ್ರ ತ್ರಿವಿಡೆ]
ಆ ಸಮರದಲ್ಲಿ ಭಾವು ಓಲಗ
ದಾ ಸಭೆಯ ರಚಿಸಿದನು ಸಿಂಧ್ಯ ವಿ
ಲಾಸಿ ಗಾರ್ಡಿಯ ಹೋಳಕರ ವಿಶ್ವಾಸರಾವೊಡನೆ ||

ಭಾವು:- ಹೊಳೆಯ ಕಳೆದೆವು; ಹೊಳಲು ಹಿಡಿದೆವು;
ತುಳಿದೆವಫ್ಘಾನ್‌ ಸರ್ಪವನು ಇ
ನ್ನುಳಿದು ಹೋದರೆ ಕಚ್ಚದಂದದಿ ತಿಳಿಪುದಿಂದೆನಗೆ ||

[ಭಾಮಿನಿ ಷಟ್ಪದಿ]
ಭಾವುವಿನ ನುಡಿಕೇಳಿ ಮಂತ್ರಿ ಸ
ಭಾವಲಯ ಭಟರಂತರಂಗದ
ಭಾವ ತೋರದೆ, ಓರ್ವರೋರ್ವರ ಮೊಗವ ನೋಡುತಿರೆ; |
ನಾವು ತಳುವುದೊ? ತಳರುವುದೂ? ಮೇಣ್
ಸಾವಿಗಂಜುತ ಹಿಂದುಳಿವುದೋ?
ನೀವು ಯೋಚಿಸಿ ಹೇಳ್ವುದೆಂದನು ಕೈಯಮೀಸೆಯಲಿ |

(ಕಾಂಬೋಧಿ-ಝಂಪೆತಾಳ)
ಹೋಳಕರ:- ದಳವಾಯಿ ಲಾಲಿಪುದು ಹಳಬರ ನುಡಿಯೆಂದು
ಹುಲುಗೆಡಹಿ ಹೊಳೆಯ ದಾಟಿರುವೆ!
ತಲೆಗಟ್ಟಿ ಎಂದು ಕಲ್ಲನು ಹಾಯ್ದೆ ಭಾವುವೇ
ತಿಳಿಗೇಡಿ, ಹೊರ ಕುರುಬನಿಗೆ ಕುರಿಯ ಕೊಟ್ಟೆ |
ಘೋರ ಸೈನ್ಯಗಳಿಂದ ಹೋರದೆ, ಕೆಲಮಂದಿ
ವೀರರಿಂ ಕಾದಾಡಿ ಹಗೆಯಾ
ಮಾರಾಯ ಮೇಲ್ಬಿದ್ದು ಹಾರಿಸುವುದನು ತೊರೆದೆ.
ದೂರ ಸೀಮೆಯು! ದವಸ ಪೂರೈಕೆ ಅಹುದೆ ||

[ಸಾರಂಗ-ಅಷ್ಟತಾಳ]
ಗಾರ್ಡಿ:- ವಂಚನೆಯಲಿ ವೈರಿಯನು ಕೊಲ್ಲಲಾಗದು-ಭಾವು ಕೇಳು-ಒಳ
ಸಂಚಿನ ರಣವಿದ್ಯೆಯನ್ನು ತೋರಲಾಗದು, ಭಾವು ಕೇಳು, ||
ಫ್ರೆಂಚರು ಜಯಲಕ್ಷ್ಮಿ ಸೆಳೆಯುವ ಹಂಚಿಕೆ-ಭಾವು ಕೇಳು-ಸಿಡಿ
ಲ್ಮಿಂಚಿನೊಲ್‌ ಒಮ್ಮೆಯೇ ಬಾಳುತ, ಬಡಿವುದು;- ಭಾವುಕೇಳು, ||

[ಮಾರವಿ-ಏಕತಾಳ]
ಹೋಳಕರ:- ಉದ್ಧತ ಗಾರ್ಡಿ, ಪ್ರಸಿದ್ಧನೆ ನಿನ್ನ ಪ್ರಬುದ್ಧಿಯ ಕಾರಣದಿ,||
ಯುದ್ಧದಿ ನುರಿತೀ ವೃದ್ಧರಿಗಪ್ಪುದೆ ಪದ್ಧತಿ ಇದು ರಣದಿ?||
ಹಿರಿಯರ ಕಲೆಯಿಂ ದೊರಕಿತು ಮಾರಾಟರ ರಾಜ್ಯೋದಯವು||
ಬರುವುದು ಗಾರ್ಡಿಯ ಪರದೇಶದ ಹೊಸ ಹರಿಬದಿ ಅಪಜಯವು||
ಹೊತ್ತಿತು ಕಲಹವು ಕತ್ತಿಯನಿಬ್ಬರು ಎತ್ತಲು ಸಭೆಯಲ್ಲಿ
ಮುತ್ತುಗ ಮುಳ್ಳನು ತೆತ್ತಿಸಿದಂತೆಯೆ ನಿತ್ತನು ದೊರೆ ಆಲ್ಲಿ||

[ವಾರ್ಧಿಕ ಷಟ್ಪದಿ]
ಕಾಳಗಕ್ಕನುವಾಗಿ ಬಂದಿದ್ದ ಭಾವುವಿನ
ಪಾಳೆಯದಿ ಕಚ್ಚಾಟವೆಂಬಂತೆ ಮಲ್ಹಾರಿ
ಹೋಳಕರ ಮಹದಾಜಿ ಸಿಂಧ್ಯದಾಮಾಜಿ ಗಾಯಕವಾಡ ವೀರಗಾರ್ಡಿ ||
ಹಾಳುನೆವ ಹೂಡಿ ಜಗಳಾಡಿ ಕೆಲರೋಡಿದರು
ಮಳವಕೆ ಬಳಿಕಾ ಮರಾಟ ಸೈನ್ಯವನೊತ್ತಿ
ತೂಳಿದುದು ಶಹನಪಡೆ ಗೂಡಿನಲಿ ಸಿಲುಕಿದಿಲಿಯಂತಾದನಾ ಭಾವುವು ||

ಎಳೆ ಅಡಕೆ ಕತ್ತರಿಯ ಬಾಯೊಳಗೆ ಬಿದ್ದಂತೆ
ಮಳೆ ಹೊಯ್ವ ಹೊಯ್ಲಿನಲಿ ಹಸಿ ಮಡಕೆ ಅದ್ದಂತೆ,
ಬೆಳೆಯ ತೆಂಗಿನ ಗಿಡಕೆ ಕಾಡ್ಗಿಚ್ಚು ಹೊದ್ದಂತೆ ರಣರಂಗದಬ್ದಾಲಿಯಾ ||
ದಳದುಳಕ್ಕಿಂಬಾಗಿ ಬಾಗಿ ಬೇಸತ್ತು ಸ
ತ್ತುಳಿದು ತುಳಿದಳವಳಿದು ಕೊಳುಗುಳದೊಳಾ ಭಾವು
ದಳವಾಯಿ ಪಡೆಯೊಡನೆ ಪವಡಿಸಿದ ವೀರ ಶ್ರೀ ಹಾರವಂ ಜೋಗುಳಿಸಲು

[ಮೋಹನ-ಏಕತಾಳ]
ಮಂಗಲಮ ಜಯ ಮಂಗಲಂ ಶುಭ ಮಂಗಲಂ ಜಯ ಮಂಗಲಂ,
ನೆತ್ತರ ಮೂಲಕ ಧರ್ಮವನು-ಹಾ!
ಇಂಬು ಗೊಂಡುದ್ರೇಕದಿಂದ ನಿಂದಿರಲಿತ್ತ.
ಬಿತ್ತರಿಸುವ ದುಷ್ಕರ್ಮವನು ||
ಎತ್ತಲು ಮುಂದಕೆ ಸಲ್ಲದು ಎಂಬೀ
ಉತ್ತಮ ಭೇಧವ ತಂದವಗೆ, ||
ಬಲವಂತರು ತಮ್ಮಯ ಬಲದೆ-ದು
ರ್ಬಲರನು ಕಾಳಗದಲಿ ಕೊಲದೆ, ||
ಒಲಿದವರವರಾತ್ಮೋನ್ನತಿಯನು ಗಳಿ
ಸಲು ಬೇಕನ್ನುತ ಸಾರುವಗೆ ||
ಹಿಂದು ಮುಸಲ್ಮಾನ ಸುನ್ನಿ ಶೇಕ್-ಜೈ
ನಾಂಧ್ರ ಕಿರಿಸ್ತಾನ್ ಫಾರಸಿ ಶೀಕ್ ||
ಇಂದಾ ಐದನೆ ಜೋರ್ಜರ ಕೊಡೆಯಲಿ
ಒಂದಾಗಿರಿಸಿದ ಮಹಿಮನಿಗೆ, ||
ಸನ್ನುತ ಜನತೆ ಪ್ರಮುಖವೆಂದು-ರಾ
ಷ್ಟ್ರೋನ್ನತಿಯೇ ಇಹಸುಖವೆಂದು, ||
ಇನ್ನೀ ಮಂತ್ರವನೆಲ್ಲರು ಪಠಿಸಲಿ
ಎನ್ನುತ ಉಪದೇಶಿಸಿದವಗೆ ||
-ಭಕ್ತಿಸಂದೇಶ
(ರೌದ್ರಿ ಸಂವತ್ಸರ)
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...