ಪಾಣಿಪತ

(ಒಂದು ಯಕ್ಷಗಾನ ದೃಶ್ಯ)
[ವಾರ್ಧಿಕ ಷಟ್ಪದಿ]

ಜಂಬುದ್ವೀಪದ ಹೊರಗೆ ನೆಲಸಿದ್ದ ಅಫ್ಘಾನ
ರಂ ಬಹಳ ಕಾಲದಿಂದಾಳ್ವಹಮ್ಮದ ಶಹನ್
ಎಂಬಾ ದುರಾಣಿ ಕುಲದಗ್ರಣಿ ಮುಸಲ್ಮಾನರೊಡನೆ ಪಾಣೀಪತಕ್ಕೆ ||
ಜಂಭದಿಂದೆಯ್ತಂದು ಪಾಳೆಯರ ಬಿಟ್ಟಿರಲು
ಕುಂಭಜನ ಚಕ್ರಕೋಟೆಗೆ ನಡೆವ ಅಭಿಮನ್ಯು
ವೆಂಬವೋಲ್ ಮಾರಾಟದಳವೆರಸಿ ಪೊರಮಟ್ಟನಾ ಸದಾಶಿವ ಭಾವುವೂ

[ಸೌರಾಷ್ಟ್ರ ತ್ರಿವಿಡೆ]
ಆ ಸಮರದಲ್ಲಿ ಭಾವು ಓಲಗ
ದಾ ಸಭೆಯ ರಚಿಸಿದನು ಸಿಂಧ್ಯ ವಿ
ಲಾಸಿ ಗಾರ್ಡಿಯ ಹೋಳಕರ ವಿಶ್ವಾಸರಾವೊಡನೆ ||

ಭಾವು:- ಹೊಳೆಯ ಕಳೆದೆವು; ಹೊಳಲು ಹಿಡಿದೆವು;
ತುಳಿದೆವಫ್ಘಾನ್‌ ಸರ್ಪವನು ಇ
ನ್ನುಳಿದು ಹೋದರೆ ಕಚ್ಚದಂದದಿ ತಿಳಿಪುದಿಂದೆನಗೆ ||

[ಭಾಮಿನಿ ಷಟ್ಪದಿ]
ಭಾವುವಿನ ನುಡಿಕೇಳಿ ಮಂತ್ರಿ ಸ
ಭಾವಲಯ ಭಟರಂತರಂಗದ
ಭಾವ ತೋರದೆ, ಓರ್ವರೋರ್ವರ ಮೊಗವ ನೋಡುತಿರೆ; |
ನಾವು ತಳುವುದೊ? ತಳರುವುದೂ? ಮೇಣ್
ಸಾವಿಗಂಜುತ ಹಿಂದುಳಿವುದೋ?
ನೀವು ಯೋಚಿಸಿ ಹೇಳ್ವುದೆಂದನು ಕೈಯಮೀಸೆಯಲಿ |

(ಕಾಂಬೋಧಿ-ಝಂಪೆತಾಳ)
ಹೋಳಕರ:- ದಳವಾಯಿ ಲಾಲಿಪುದು ಹಳಬರ ನುಡಿಯೆಂದು
ಹುಲುಗೆಡಹಿ ಹೊಳೆಯ ದಾಟಿರುವೆ!
ತಲೆಗಟ್ಟಿ ಎಂದು ಕಲ್ಲನು ಹಾಯ್ದೆ ಭಾವುವೇ
ತಿಳಿಗೇಡಿ, ಹೊರ ಕುರುಬನಿಗೆ ಕುರಿಯ ಕೊಟ್ಟೆ |
ಘೋರ ಸೈನ್ಯಗಳಿಂದ ಹೋರದೆ, ಕೆಲಮಂದಿ
ವೀರರಿಂ ಕಾದಾಡಿ ಹಗೆಯಾ
ಮಾರಾಯ ಮೇಲ್ಬಿದ್ದು ಹಾರಿಸುವುದನು ತೊರೆದೆ.
ದೂರ ಸೀಮೆಯು! ದವಸ ಪೂರೈಕೆ ಅಹುದೆ ||

[ಸಾರಂಗ-ಅಷ್ಟತಾಳ]
ಗಾರ್ಡಿ:- ವಂಚನೆಯಲಿ ವೈರಿಯನು ಕೊಲ್ಲಲಾಗದು-ಭಾವು ಕೇಳು-ಒಳ
ಸಂಚಿನ ರಣವಿದ್ಯೆಯನ್ನು ತೋರಲಾಗದು, ಭಾವು ಕೇಳು, ||
ಫ್ರೆಂಚರು ಜಯಲಕ್ಷ್ಮಿ ಸೆಳೆಯುವ ಹಂಚಿಕೆ-ಭಾವು ಕೇಳು-ಸಿಡಿ
ಲ್ಮಿಂಚಿನೊಲ್‌ ಒಮ್ಮೆಯೇ ಬಾಳುತ, ಬಡಿವುದು;- ಭಾವುಕೇಳು, ||

[ಮಾರವಿ-ಏಕತಾಳ]
ಹೋಳಕರ:- ಉದ್ಧತ ಗಾರ್ಡಿ, ಪ್ರಸಿದ್ಧನೆ ನಿನ್ನ ಪ್ರಬುದ್ಧಿಯ ಕಾರಣದಿ,||
ಯುದ್ಧದಿ ನುರಿತೀ ವೃದ್ಧರಿಗಪ್ಪುದೆ ಪದ್ಧತಿ ಇದು ರಣದಿ?||
ಹಿರಿಯರ ಕಲೆಯಿಂ ದೊರಕಿತು ಮಾರಾಟರ ರಾಜ್ಯೋದಯವು||
ಬರುವುದು ಗಾರ್ಡಿಯ ಪರದೇಶದ ಹೊಸ ಹರಿಬದಿ ಅಪಜಯವು||
ಹೊತ್ತಿತು ಕಲಹವು ಕತ್ತಿಯನಿಬ್ಬರು ಎತ್ತಲು ಸಭೆಯಲ್ಲಿ
ಮುತ್ತುಗ ಮುಳ್ಳನು ತೆತ್ತಿಸಿದಂತೆಯೆ ನಿತ್ತನು ದೊರೆ ಆಲ್ಲಿ||

[ವಾರ್ಧಿಕ ಷಟ್ಪದಿ]
ಕಾಳಗಕ್ಕನುವಾಗಿ ಬಂದಿದ್ದ ಭಾವುವಿನ
ಪಾಳೆಯದಿ ಕಚ್ಚಾಟವೆಂಬಂತೆ ಮಲ್ಹಾರಿ
ಹೋಳಕರ ಮಹದಾಜಿ ಸಿಂಧ್ಯದಾಮಾಜಿ ಗಾಯಕವಾಡ ವೀರಗಾರ್ಡಿ ||
ಹಾಳುನೆವ ಹೂಡಿ ಜಗಳಾಡಿ ಕೆಲರೋಡಿದರು
ಮಳವಕೆ ಬಳಿಕಾ ಮರಾಟ ಸೈನ್ಯವನೊತ್ತಿ
ತೂಳಿದುದು ಶಹನಪಡೆ ಗೂಡಿನಲಿ ಸಿಲುಕಿದಿಲಿಯಂತಾದನಾ ಭಾವುವು ||

ಎಳೆ ಅಡಕೆ ಕತ್ತರಿಯ ಬಾಯೊಳಗೆ ಬಿದ್ದಂತೆ
ಮಳೆ ಹೊಯ್ವ ಹೊಯ್ಲಿನಲಿ ಹಸಿ ಮಡಕೆ ಅದ್ದಂತೆ,
ಬೆಳೆಯ ತೆಂಗಿನ ಗಿಡಕೆ ಕಾಡ್ಗಿಚ್ಚು ಹೊದ್ದಂತೆ ರಣರಂಗದಬ್ದಾಲಿಯಾ ||
ದಳದುಳಕ್ಕಿಂಬಾಗಿ ಬಾಗಿ ಬೇಸತ್ತು ಸ
ತ್ತುಳಿದು ತುಳಿದಳವಳಿದು ಕೊಳುಗುಳದೊಳಾ ಭಾವು
ದಳವಾಯಿ ಪಡೆಯೊಡನೆ ಪವಡಿಸಿದ ವೀರ ಶ್ರೀ ಹಾರವಂ ಜೋಗುಳಿಸಲು

[ಮೋಹನ-ಏಕತಾಳ]
ಮಂಗಲಮ ಜಯ ಮಂಗಲಂ ಶುಭ ಮಂಗಲಂ ಜಯ ಮಂಗಲಂ,
ನೆತ್ತರ ಮೂಲಕ ಧರ್ಮವನು-ಹಾ!
ಇಂಬು ಗೊಂಡುದ್ರೇಕದಿಂದ ನಿಂದಿರಲಿತ್ತ.
ಬಿತ್ತರಿಸುವ ದುಷ್ಕರ್ಮವನು ||
ಎತ್ತಲು ಮುಂದಕೆ ಸಲ್ಲದು ಎಂಬೀ
ಉತ್ತಮ ಭೇಧವ ತಂದವಗೆ, ||
ಬಲವಂತರು ತಮ್ಮಯ ಬಲದೆ-ದು
ರ್ಬಲರನು ಕಾಳಗದಲಿ ಕೊಲದೆ, ||
ಒಲಿದವರವರಾತ್ಮೋನ್ನತಿಯನು ಗಳಿ
ಸಲು ಬೇಕನ್ನುತ ಸಾರುವಗೆ ||
ಹಿಂದು ಮುಸಲ್ಮಾನ ಸುನ್ನಿ ಶೇಕ್-ಜೈ
ನಾಂಧ್ರ ಕಿರಿಸ್ತಾನ್ ಫಾರಸಿ ಶೀಕ್ ||
ಇಂದಾ ಐದನೆ ಜೋರ್ಜರ ಕೊಡೆಯಲಿ
ಒಂದಾಗಿರಿಸಿದ ಮಹಿಮನಿಗೆ, ||
ಸನ್ನುತ ಜನತೆ ಪ್ರಮುಖವೆಂದು-ರಾ
ಷ್ಟ್ರೋನ್ನತಿಯೇ ಇಹಸುಖವೆಂದು, ||
ಇನ್ನೀ ಮಂತ್ರವನೆಲ್ಲರು ಪಠಿಸಲಿ
ಎನ್ನುತ ಉಪದೇಶಿಸಿದವಗೆ ||
-ಭಕ್ತಿಸಂದೇಶ
(ರೌದ್ರಿ ಸಂವತ್ಸರ)
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದುರ್‍ವಿನೀತ
Next post ಅನಿರೀಕ್ಷಿತ ಭೇಟಿ

ಸಣ್ಣ ಕತೆ

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…