Home / ಕವನ / ಕವಿತೆ / ಪಾಣಿಪತ

ಪಾಣಿಪತ

(ಒಂದು ಯಕ್ಷಗಾನ ದೃಶ್ಯ)
[ವಾರ್ಧಿಕ ಷಟ್ಪದಿ]

ಜಂಬುದ್ವೀಪದ ಹೊರಗೆ ನೆಲಸಿದ್ದ ಅಫ್ಘಾನ
ರಂ ಬಹಳ ಕಾಲದಿಂದಾಳ್ವಹಮ್ಮದ ಶಹನ್
ಎಂಬಾ ದುರಾಣಿ ಕುಲದಗ್ರಣಿ ಮುಸಲ್ಮಾನರೊಡನೆ ಪಾಣೀಪತಕ್ಕೆ ||
ಜಂಭದಿಂದೆಯ್ತಂದು ಪಾಳೆಯರ ಬಿಟ್ಟಿರಲು
ಕುಂಭಜನ ಚಕ್ರಕೋಟೆಗೆ ನಡೆವ ಅಭಿಮನ್ಯು
ವೆಂಬವೋಲ್ ಮಾರಾಟದಳವೆರಸಿ ಪೊರಮಟ್ಟನಾ ಸದಾಶಿವ ಭಾವುವೂ

[ಸೌರಾಷ್ಟ್ರ ತ್ರಿವಿಡೆ]
ಆ ಸಮರದಲ್ಲಿ ಭಾವು ಓಲಗ
ದಾ ಸಭೆಯ ರಚಿಸಿದನು ಸಿಂಧ್ಯ ವಿ
ಲಾಸಿ ಗಾರ್ಡಿಯ ಹೋಳಕರ ವಿಶ್ವಾಸರಾವೊಡನೆ ||

ಭಾವು:- ಹೊಳೆಯ ಕಳೆದೆವು; ಹೊಳಲು ಹಿಡಿದೆವು;
ತುಳಿದೆವಫ್ಘಾನ್‌ ಸರ್ಪವನು ಇ
ನ್ನುಳಿದು ಹೋದರೆ ಕಚ್ಚದಂದದಿ ತಿಳಿಪುದಿಂದೆನಗೆ ||

[ಭಾಮಿನಿ ಷಟ್ಪದಿ]
ಭಾವುವಿನ ನುಡಿಕೇಳಿ ಮಂತ್ರಿ ಸ
ಭಾವಲಯ ಭಟರಂತರಂಗದ
ಭಾವ ತೋರದೆ, ಓರ್ವರೋರ್ವರ ಮೊಗವ ನೋಡುತಿರೆ; |
ನಾವು ತಳುವುದೊ? ತಳರುವುದೂ? ಮೇಣ್
ಸಾವಿಗಂಜುತ ಹಿಂದುಳಿವುದೋ?
ನೀವು ಯೋಚಿಸಿ ಹೇಳ್ವುದೆಂದನು ಕೈಯಮೀಸೆಯಲಿ |

(ಕಾಂಬೋಧಿ-ಝಂಪೆತಾಳ)
ಹೋಳಕರ:- ದಳವಾಯಿ ಲಾಲಿಪುದು ಹಳಬರ ನುಡಿಯೆಂದು
ಹುಲುಗೆಡಹಿ ಹೊಳೆಯ ದಾಟಿರುವೆ!
ತಲೆಗಟ್ಟಿ ಎಂದು ಕಲ್ಲನು ಹಾಯ್ದೆ ಭಾವುವೇ
ತಿಳಿಗೇಡಿ, ಹೊರ ಕುರುಬನಿಗೆ ಕುರಿಯ ಕೊಟ್ಟೆ |
ಘೋರ ಸೈನ್ಯಗಳಿಂದ ಹೋರದೆ, ಕೆಲಮಂದಿ
ವೀರರಿಂ ಕಾದಾಡಿ ಹಗೆಯಾ
ಮಾರಾಯ ಮೇಲ್ಬಿದ್ದು ಹಾರಿಸುವುದನು ತೊರೆದೆ.
ದೂರ ಸೀಮೆಯು! ದವಸ ಪೂರೈಕೆ ಅಹುದೆ ||

[ಸಾರಂಗ-ಅಷ್ಟತಾಳ]
ಗಾರ್ಡಿ:- ವಂಚನೆಯಲಿ ವೈರಿಯನು ಕೊಲ್ಲಲಾಗದು-ಭಾವು ಕೇಳು-ಒಳ
ಸಂಚಿನ ರಣವಿದ್ಯೆಯನ್ನು ತೋರಲಾಗದು, ಭಾವು ಕೇಳು, ||
ಫ್ರೆಂಚರು ಜಯಲಕ್ಷ್ಮಿ ಸೆಳೆಯುವ ಹಂಚಿಕೆ-ಭಾವು ಕೇಳು-ಸಿಡಿ
ಲ್ಮಿಂಚಿನೊಲ್‌ ಒಮ್ಮೆಯೇ ಬಾಳುತ, ಬಡಿವುದು;- ಭಾವುಕೇಳು, ||

[ಮಾರವಿ-ಏಕತಾಳ]
ಹೋಳಕರ:- ಉದ್ಧತ ಗಾರ್ಡಿ, ಪ್ರಸಿದ್ಧನೆ ನಿನ್ನ ಪ್ರಬುದ್ಧಿಯ ಕಾರಣದಿ,||
ಯುದ್ಧದಿ ನುರಿತೀ ವೃದ್ಧರಿಗಪ್ಪುದೆ ಪದ್ಧತಿ ಇದು ರಣದಿ?||
ಹಿರಿಯರ ಕಲೆಯಿಂ ದೊರಕಿತು ಮಾರಾಟರ ರಾಜ್ಯೋದಯವು||
ಬರುವುದು ಗಾರ್ಡಿಯ ಪರದೇಶದ ಹೊಸ ಹರಿಬದಿ ಅಪಜಯವು||
ಹೊತ್ತಿತು ಕಲಹವು ಕತ್ತಿಯನಿಬ್ಬರು ಎತ್ತಲು ಸಭೆಯಲ್ಲಿ
ಮುತ್ತುಗ ಮುಳ್ಳನು ತೆತ್ತಿಸಿದಂತೆಯೆ ನಿತ್ತನು ದೊರೆ ಆಲ್ಲಿ||

[ವಾರ್ಧಿಕ ಷಟ್ಪದಿ]
ಕಾಳಗಕ್ಕನುವಾಗಿ ಬಂದಿದ್ದ ಭಾವುವಿನ
ಪಾಳೆಯದಿ ಕಚ್ಚಾಟವೆಂಬಂತೆ ಮಲ್ಹಾರಿ
ಹೋಳಕರ ಮಹದಾಜಿ ಸಿಂಧ್ಯದಾಮಾಜಿ ಗಾಯಕವಾಡ ವೀರಗಾರ್ಡಿ ||
ಹಾಳುನೆವ ಹೂಡಿ ಜಗಳಾಡಿ ಕೆಲರೋಡಿದರು
ಮಳವಕೆ ಬಳಿಕಾ ಮರಾಟ ಸೈನ್ಯವನೊತ್ತಿ
ತೂಳಿದುದು ಶಹನಪಡೆ ಗೂಡಿನಲಿ ಸಿಲುಕಿದಿಲಿಯಂತಾದನಾ ಭಾವುವು ||

ಎಳೆ ಅಡಕೆ ಕತ್ತರಿಯ ಬಾಯೊಳಗೆ ಬಿದ್ದಂತೆ
ಮಳೆ ಹೊಯ್ವ ಹೊಯ್ಲಿನಲಿ ಹಸಿ ಮಡಕೆ ಅದ್ದಂತೆ,
ಬೆಳೆಯ ತೆಂಗಿನ ಗಿಡಕೆ ಕಾಡ್ಗಿಚ್ಚು ಹೊದ್ದಂತೆ ರಣರಂಗದಬ್ದಾಲಿಯಾ ||
ದಳದುಳಕ್ಕಿಂಬಾಗಿ ಬಾಗಿ ಬೇಸತ್ತು ಸ
ತ್ತುಳಿದು ತುಳಿದಳವಳಿದು ಕೊಳುಗುಳದೊಳಾ ಭಾವು
ದಳವಾಯಿ ಪಡೆಯೊಡನೆ ಪವಡಿಸಿದ ವೀರ ಶ್ರೀ ಹಾರವಂ ಜೋಗುಳಿಸಲು

[ಮೋಹನ-ಏಕತಾಳ]
ಮಂಗಲಮ ಜಯ ಮಂಗಲಂ ಶುಭ ಮಂಗಲಂ ಜಯ ಮಂಗಲಂ,
ನೆತ್ತರ ಮೂಲಕ ಧರ್ಮವನು-ಹಾ!
ಇಂಬು ಗೊಂಡುದ್ರೇಕದಿಂದ ನಿಂದಿರಲಿತ್ತ.
ಬಿತ್ತರಿಸುವ ದುಷ್ಕರ್ಮವನು ||
ಎತ್ತಲು ಮುಂದಕೆ ಸಲ್ಲದು ಎಂಬೀ
ಉತ್ತಮ ಭೇಧವ ತಂದವಗೆ, ||
ಬಲವಂತರು ತಮ್ಮಯ ಬಲದೆ-ದು
ರ್ಬಲರನು ಕಾಳಗದಲಿ ಕೊಲದೆ, ||
ಒಲಿದವರವರಾತ್ಮೋನ್ನತಿಯನು ಗಳಿ
ಸಲು ಬೇಕನ್ನುತ ಸಾರುವಗೆ ||
ಹಿಂದು ಮುಸಲ್ಮಾನ ಸುನ್ನಿ ಶೇಕ್-ಜೈ
ನಾಂಧ್ರ ಕಿರಿಸ್ತಾನ್ ಫಾರಸಿ ಶೀಕ್ ||
ಇಂದಾ ಐದನೆ ಜೋರ್ಜರ ಕೊಡೆಯಲಿ
ಒಂದಾಗಿರಿಸಿದ ಮಹಿಮನಿಗೆ, ||
ಸನ್ನುತ ಜನತೆ ಪ್ರಮುಖವೆಂದು-ರಾ
ಷ್ಟ್ರೋನ್ನತಿಯೇ ಇಹಸುಖವೆಂದು, ||
ಇನ್ನೀ ಮಂತ್ರವನೆಲ್ಲರು ಪಠಿಸಲಿ
ಎನ್ನುತ ಉಪದೇಶಿಸಿದವಗೆ ||
-ಭಕ್ತಿಸಂದೇಶ
(ರೌದ್ರಿ ಸಂವತ್ಸರ)
*****

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...