Home / ಕವನ / ಕವಿತೆ / ಕಬ್ಬಿಣದ ಬುದ್ಧಿವಾದ

ಕಬ್ಬಿಣದ ಬುದ್ಧಿವಾದ

(ಕೆಳಗಿನ ಚರಣಗಳ ಆರ್ಥವು ಸ್ಪಷ್ಟವಾಗಿ ತಿಳಿವಂತೆಯೂ ಓದುವುದಕ್ಕೆ ತೊಡಕಾಗದಂತೆಯೂ ಪದಗಳನ್ನು ಸೇರಿಸಿಕೊಂಡು ಬರೆಯಲಿಲ್ಲ. ಸಂಧಿಯನು ಮಾಡದಿದ್ದರೂ ಅಲ್ಲಲ್ಲಿ ತಿದ್ದಲು ಅನುಕೂಲವಿದೆ)

“ಎಲೆಲೆ! ಕಬ್ಬುನ! ನೀನು ಮಲಿನ ಹಸ್ತದಿ ತುಡುಕಿ,
ಪೊಲೆಗೈದುದೇತಕೆನ್ನಯ ಮೈಯನಿಂದು? |
ಕಲಿಯುಗದ ಪೊಲೆಯ ಸತ್ಯುಲದ್ವಿಜನ ಸೋಂಕುವೊಲ್,
ಖಲನೆ! ಮುಟ್ಟಿದುದೇತಕನ್ನೆಡೆಗೆ ಬಂದು? ||೧||

ಈ ತೆರದಿ ಕಂಚನಂ(೧) ಖಾತಿಯಿಂ ಘುಡುಘುಡಿಸಿ,
ಮಾತಿರದ ಬಡ ಕಬ್ಬುನವ ಜರೆದುಜರೆದು, |
ಭೂತಳದಿ ತಾನೆ ವಿಖ್ಯಾತನೆಂದೆನುತ, ಮಹಿ
ಮಾತಿಶಯವನು ಜೃಂಭಿಸಿತು ಮೆರೆದುಮೆರೆದು ||೨||

“ಕರೆವುದು ಸುವರ್ಣಮೆಂದಿರದೆ ಧರಣೀಮುಖಂ,
ಮಿರುಗುವುದು ನಾಮದಂತೆನ್ನ ಮೈವಣ್ಣ್ಂ. |
ತರಣಿರಶ್ಮಿಯ ಕವಿವ ಕುರುಡುಕತ್ತಲಿನಂತೆ,
ಭರದಿ ಒದೆಯಲ್ಕೆ ನಿನಗೊಡೆದುದೇ ಕಣ್ಣುಂ? ||೩||

“ಲೋಹರಾಜನು ನಾನು ಮೋಹಿಸುವೆ ಜನಮನವ,
(೧ಅ)ಆಹವಂ ನಿರ್ವಹಿಸದೆನ್ನಾಜ್ಞೆ ಇರದೆ. |
ಈ ಹಸ್ತಲಾಗಕ್ಕೆ(೨) ದಾಹಗೊಳ್ಳುತ್ತ, ತಮ್ಮ
ದೇಹವಂ ದಂಡಿಪರ್ ಜನರು ತರತರದೆ. ||೪||

“ಕನಕಮಣಿ ನಿಗಳೆಯರ್,? ‘ಕನಕಾಬ್ಜವದನೆ,’ ‘ಕಾಂ
ಚನಲತಾಕೋಮಲಾಂಗಿ,’ ‘ಸುವರ್ಣಕಾಯೆ,’
ವನಿತೆಯರನಿಂತು ಭೂವಿನುತೆ ಕವಿ ಕೀರ್ತಿಪರ್‌.
ಕನಕಭೂಷಣರಹಿತ ಸ್ತ್ರೀ ನೋಡೆ ಸ್ತ್ರೀಯೆ? ||೫||

“ಅಂಗನೆಯ ಕೇಶಾತರಂಗದೊಳ್‌ ಕ್ರೀಡಿಸುವೆ;
ತುಂಗವಕ್ಷದಿ ಬಿಗಿವೆ ಮುತ್ತುಗಳ ನಾನು, |
(೩) ಭೃಂಗ್ಕುಂತಲಕೊಯ್ದ ಮಂಗಲವ ಗೈಯ್ದು, ವನಿ
ತಾಂಗಸೌಂದರ್ಯ ಕೆಡಿಸುವ, ಪಾಪಿ ನೀನು. || ೬ ||

“ದ್ವಿಜಹಸ್ತ ಸೇರಿ, ನೀರಜ ಮುಖಿಯ ಶಿರವೇರಿ,
ರಜನಿಯೊಳ್‌ ಭದ್ರವಾಗಿಹೆ ಪಿಟಕದೊಳಗೆ. (೪) |
ದ್ವಿಜನ ಕೆರ(೫) ಸೇರ್‍ವ ನೀರಜ ಮುಖಿಯ ತಲೆಗಳೆವ
ರಜನಿಸನ್ನಿಭನೆ!(೬) ನಿಲ್ಲದಿರೆನ್ನ ಬಳಿಗೆ! ||೭||

“ಬಿಡದೆನ್ನನಾಶ್ರಯಿಸೆ ಕಡು ಮೂಢ ಪ್ರೌಢನಹ;
ಬಡವ ಬಲ್ಲಿದ, ದುಷ್ಟನರ ಶಿಷ್ಯನಹನು |
ಪಿಡಿದು ನಿನ್ನಂ ಕರದಿ, ಕಡಿದು ನರತರುಮೃಗವ,
ಕೆಡಿಪ ಮಾನವಶ್ರೇಷ್ಠನತಿ ಭ್ರಷ್ಟನಹನು. ||೮||

“ಅಗ್ರಾಸನಕ್ಕೆ ನಾಂ ಸಮಗ್ರ ವಸ್ತುಗಳೊಳಗ
ವ್ಯಗ್ರದಿಂದರ್ಹನೆಂಬುದು ಲೋಕಸಿದ್ದಂ. |
ಉಗ್ರತೆಯಿನೆನ್ನೊಡನೆ ವಿಗ್ರಹವ(೭) ಬಯಸಿ, ಕೋ
ಪಗ್ರಾಸವಾಗಲ್ಕೆ ನೀನಪ್ರಬುದ್ಧಂ.” ||೯||

ಉಬ್ಬಟೆಯೊಳುಬ್ಬಿ, ತನ್ನಬ್ಬರವ ಬೊಬ್ಬಿಡುತ,
ಕಬ್ಬುನವ ದೊಬ್ಬಿಬಿಡೆ ಕಾಲಿಂದ ಚಿನ್ನಂ; |
ತಬ್ಬಿಕೊಳ್ವಬ್ಬೆಯಾ(೮) ಕಿಬ್ಬದಿಗೆ ಮಗನೊದೆಯ
ಲುಬ್ಬೆಗಂಗೊಳ್ವಂದದಿತ್ತು ಕಾರ್ಬೋನ್ನುಂ. || ೧೦||

ಆರೆಗಳಿಗೆ ತಲೆವಾಗಿ, ಸುರಿವ ಕಂಬನಿಯೊರಸಿ,
ಮರುಗುವದನುಳಿದು, ನುಡಿದುದು ದೀನರೋಹಂ, |
“ಅರರೆ!(೯) ಧಾತುಪ್ರಕರದರಸನೆನಿಸುವ ಕನಕ!
ಅರಿಯೆಯಾ ನಿನಗೆಂತು ಬಂದುದೀ ದೇಹಂ? ||೧೧ ||

“ಬಡವನಾ ಬಿನ್ನಹದ ನುಡಿಗುತ್ತರವ ನೀಡು!
ಪೊಡವಿಯಂ ನಡೆಯಿಸುವರಾರೆಂದು ಪೇಳು? |
ಘುಡುಘುಡಿಸಿ ನುಡಿಯದಿರ್! ಹುಡುಗ ನೀನೆಲೆ ಚಿನ್ನ!
ಬಿಡುಬಿಡೀ ಮೂರ್ಖತೆಯ! ಬುದ್ಧಿಯನೆ ತಾಳು!” ||೧೨ ||

ಇಂತು ಕಬ್ಬುನ ನುಡಿದ ಪಂತದಾ ನುಡಿಗೇಳ್ದು,
ಸಂತಪ್ತಮಾಗಿ ನುಡಿದುದು ಕನತ್ಕಕನಕಂ(೧೦) |
“ನಾಂ ತಳೆದು ಗುಪ್ತವೇಷಂ, ತಿರೆಯೊಳಡಗುವೆಂ.
ಎಂತು ನಡೆವುದು ಜಗಂ ನಾನಿಲ್ಲದನಕಂ? ||೧೩||

“ಲೋಕದೊಳ್ ನಾನೋರ್ವನೇಕಾಧಿಪತಿಯಾಗಿ,
ಲೋಕಮಂ ನಡೆಯಿಪೆಂ ಚಿರಕಾಲದಿಂದಂ, |
ಲೋಕದೊಳಗರಿವರಾರ್ || ಕಾಕವರ್ಣನನಿಂದು? ”
ಲೋಕಮಂ ನಡೆಯಿಪೆಯೆ ಎನ್ನಂದದಿಂದಂ?” ||೧೪||

ಈ ಪ್ರಕಾರದೊಳು ಧಾತುಪ್ರಕರದರಸ ತ
ನ್ನ ಪ್ರತಾಪವ ಕೊಚ್ಚಿ, ಭೂಲೋಕದಿಂದ |
ಕ್ಷಿಪ್ರದಿ೦ ಮೈಮರೆದುದು(೧೨) ಪ್ರಲಾಪಿಸಿತು ಜನ
ಮಪ್ರತಿಮ ಕನಕನಾಶದ ಶೋಕದಿಂದ. ||೧೫||

ಹೇಮರಹಿತಮದಾಯ್ತು ಶ್ರೀಮಂತಮಂದಿರಂ;
ಭೂಮೀಶ ಕರದಂಡ ಗುರುದಂಡಮಾಯ್ತು; |
ಕಾಮಿನೀಜನರ ಕೈ ಮಾಮರದ ಕೈಯಾಯ್ತು,
(೧೩) ಚಾಮೀಕರವನೆಲ್ಲರರಸಿದರ್ ಸೋತು. ||೧೬||

ಟಂಕಸಾಲೆಯೊಳು ಕನಕಂ ಕಾಣದಿರಲು, ಮು
ದ್ರಾಂಕಿತದ ಪತ್ರ ಚಲಿಸಿತು ನಾಣ್ಯಮಾಗಿ |
ಅಂಕೆಯಿಲ್ಲದ ರತ್ನಸಂಕುಲವ ತೊಟ್ಟು, ದಿವ
ಸಂ ಕಳೆದರಾ ಧನಾಢ್ಯರ್‌ ದುಃಖ ನೀಗಿ. ||೧೭||

ತಾಳಿ ಕಿವಿಯೋಲೆ ಹಿತ್ತಾಳಿಯಿಂ ವಿರಚಿಸುತ
ತಾಳಿದರ್ ವನಿತೆಯರ್, ಕನಕದಾ ಮಾತು |
ಕೇಳಿಸದು, ಪರಿಣಯದ ಕೇಳಿಗಳ್ ನಡೆದು, ಸುಖ
(೧೪)ಕೇಳಿಗೆ ಜನಕ್ಕೆ ಮುದಮೆಂದಿನಂತಾಯ್ತು. ||೧೮||

ತಾನಿಲ್ಲದಿರ್ದೊಡಂ ಮಾನವರ್‌ ಚಿರಕಾಲ
ಹಾನಿಗೊಳ್ಳದೆ, ಸುಖಿಪ ಬಗೆನೋಡಿನೋಡಿ, |
ಮಾನಗಳೆದುಂ ಕನಕ ಮೀನೆಲ್ಕೆ ಮಗುಳೆ ಬಂ
ದಾನಮ್ರ ಭಾವ ತಳೆದುದು ಚಿಂತೆಗೂಡಿ. ||೧೯||

ಮೈಗರೆದು ಕಬ್ಬುನಂ ಕೈಗಾಣದಂತಾದು
ದೈಗಳಿಗೆಯೊಳ್‌ ಜಗಂ ದುಃಖಸಾಗರದಿ |
ಮೈಗೊಟ್ಟು ಮುಳುಗಿದುದು-ತ್ರೈಗುಣಾತ್ಮಕನೆ! ಸಲ
ಹೈ! ಗತಿಯ ದೋರೆಂದು ಬಹು ದೀನಸ್ವರದಿ. ||೨೦||

ತೆರಳದೈ ಹಡಗಕಟ! ಪೊರಳದೈ ಶಿಖಿಶಕಟ(೧೫)
ಉರುಳದೈ ಯಂತ್ರದೊಳ್‌ ಚಕ್ರಗಳ್‌ ಭರದಿ! |
ಪರಿದು ವಿದ್ಯುತ್‌ತಂತ್ರಿ, ಮುರಿದು ಕಂಬದ ಹಂತಿ,
ಕೂರಲು ಕಟ್ಟಿದೊಲಾಯ್ತು ವ್ಯಾಪಾರ ಪುರದಿ. ||೨೧||

ಹೊರಬರವು ವಸ್ತ್ರಗಳ್‌! ತರಿಯವಾ ಶಸ್ತ್ರಗಳ್‌!
ಪರಿಯವಾ ಪತ್ರಗಳ್‌ ಮುದ್ರಣಾಲಯದಿ! ||
ಗೊರಸೆ ಸಮೆದುಂ ಕುದುರೆ ಪೂರೆಯೆತ್ತು ನೆಲಕುದುರೆ,
ಧರೆಯ ಕೈ ಬಿಗಿದುದೈ ಕಬ್ಬುನದ ಲಯದಿ! ||೨೨||

ಅರಿವೆ ನೇಯಂ ಜೇಡ| ಕರಿಯ ಕೊಲ್ಲನು ಬೇಡ!
ಮರವ ಸಿಗಿಯಂ ಬಡಗಿಯುಳನೊಕ್ಕಲಿಗನು! |
ಧುರವ ಸೇರಂ ವೀರ! ನರಳುವಂ ಕಮ್ಮಾರ |
ಬರಿಯ ನೂಲ್‌ ಪಿಡಿದು ಚಿಂತಿಪನು ಚಿಪ್ಪಿಗನೂ! ||೨೩||

ಸುರಿಗೆಯದು ತರಿಯದಿರೆ, ತುರಿಪ ಮಣೆ ತುರಿಯದಿರೆ,
ವರಶಾಕಪಾಕಗಳುಮಿಲ್ಲ ಭೋಜನಕೆ!
ಧರಣಿಯೊಳ್‌ ಕಬ್ಬುನಂ ಮೆರೆವಾಗೆ, ದಿನದಿನಂ
ಮರಣ ಜೀವಿತಮಾಯ್ತು ಸಕಲ ಭೂಜನಕೆ. ||೨೪||

“ದೇವದೇವನೆ! ಸತ್ಕೃಪಾವಲೋಕನದಿಂದ
ಕಾವುದೆಮ್ಮಯ ಪಾಪಗಳನೆಲ್ಲ ಹರಿಸಿ,
ಈ ವೇಳೆಯೊಳ್‌ ಲೋಹದಾ ವರವನಿತ್ತು ನ
ಮ್ಮೀ ವಿಪತ್ತಂ ಬೇಗ ನೀನೆ ಪರಿಹರಿಸಿ” ||೨೫||

ಶೋಕದಿಂದಿಂತುಲಿವ ಲೋಕಮಂ ಕಂಡು, ತಾ
ನೀ ಕಬ್ಬುನಂ ದಯದಿ ಮೈದೋರಿ ಬಂದು,
ವ್ಯಾಕುಲಿತ ಹೃದಯಕೆ ವಿವೇಕದಿಂದುಪಚರಿಸು
ತಾಕನಕದೊಡನೆ ನುಡಿಗುಡು ನುಡಿಯನೊಂದು. ||೨೬||

“ಎಲೆ! ಅಣ್ಣ! ಬೇಸರದಿ ತಲೆವಾಗಿಸಲು ಬೇಡ!
ಒಲಿದೆನ್ನ ನುಡಿಗೆ ಕಿವಿಗುಡು ಮನವನಿಟ್ಟು!
ತಲೆದೋರಿಪಂತೆ ನೀಂ, ಬಲಿದ ಭೂಗರ್ಭದಿಂ
ಸೆಳೆದು ನಾಂ ತಂದೆ ನಿನಗೆನ್ನ ಕೈಗೊಟ್ಟು. ||೨೭||

“ಬಳಿಕ ದುಸ್ಸಂಗದಿಂ ಬಳೆವ ಮಲಿನತೆಯ ನಾಂ
ಕಳೆಯಲ್ಕೆ ನಿನ್ನ ಪುಡಿಗೈದೊಡಂ, ಬಿಡದೆ |
ತಳೆದಿರಲದಂ ನೀನು, ಮುಳಿದು ನಿನ್ನಂ ಕಿಚ್ಚಿ
ನೊಳು ಕೆಡವಿದೆನು ನಿನ್ನಸುವಿನಾಸೆಯಿಡದೆ. ||೨೮||

“ಇಕ್ಕುಳದಿ ಪಿಡಿದು ನಾಂ, ಚೊಕ್ಕಟಮದಾಗೆ ನೀಂ
ತಕ್ಕನಿತು ಬಡಿದು ನಿನ್ನಯ ಮೈಯನೆಲ್ಲಂ, |
(೧೬)ಅಕ್ಕರವ ಕಲಸಲ್ಕೆ ತಿಕ್ಕಿದೆಂ ಮಳಲೊಳಗೆ.
ಮಕ್ಕಳಂ ಕಲಿಸದಿಹ ಪಿತನು ಪಿತನಲ್ಲಂ. ||೨೯||

“ಪೆಟ್ಟಿಗೆಯೊಳಿರುಳು ನಾನಿಟ್ಟು ನಿನ್ನಂ, ಕಾಪು
ಕೊಟ್ಟು ಕೈದುಗಳಿಂದ ಸಲಹುವೆಂ ಬಿಡದೆ, |
ಸಿಟ್ಟುಗೊಳಬೇಡ ಮೈಮುಟ್ಟಿದೆಂ ನಾನೆಂದು!
ನಿಟ್ಟುರವ ನುಡಿಯದಿರ್ ಕೋಪಕೆಡೆಗೊಡದೆ! ||೩೦||

“ನಗರದರಸಾದೊಡಂ ಮಗನಲವೆ ತಾಯ್ಗೆ? ನಿ
ನ್ನುಗುವ ಕಾಂತಿಯ ದೇಹಮೆನಗೆ ಪಿರಿದೇನು?
ಜಗದೊಳ್‌ ಕೃತಘ್ನತೆಯನುಗಿವೌಷಧಂ ಕಣ್ಣು
ಬಿಗಿವ ಮದರೋಗಾಂಜನಂ ಕಾಣೆ ನಾನು. ||೩೧||

ಈ ಜಗದಿ ನಮಗಾ ನಿಯೋಜಿಸಿದ ಕಾರ್ಯಂಗ
ಳೋಜೆ ತಪ್ಪದೆ ನಿರ್ವಹಿಪುದೇ ಮಹತ್ವಂ. |
ರಾಜ ನಾಡನು ಜನಂ ರಾಜನಂ ಸೇವಿಸುತ,
ನೈಜದಿಂ ಸುಖಿಸುವುದೆ ನರ ಲೋಕತತ್ವಂ” ||೩೨||

ಉದ್ಧತೆಯ ತರಿದಪ್ರಬುದ್ಧತೆಯ ಪೋಗೊಳಿಸಿ,
ರುದ್ಧ ಕಂಠದಿ ಬರ್ಪ ಶೋಕಾರ್ತಸ್ವರಮಂ |
ವೃದ್ಧ ಲೋಹಂ ನಿಲಿಸಿ, ಬುದ್ಧಿವಾದವ ಕಲಿಸಿ,
ಶುದ್ಧವರ್ತನಕೆ ತಂದುದು(೧೭) ಕಾರ್ತಸ್ವರಮಂ ||೩೩| |

೧ ಚಿನ್ನ.
೧ಅ ಪದದಲ್ಲಿ ಪೂರ್ವ ಸ್ವರವಿದೆ. ಛಂದೋದೋಷವಾಗದಂತೆ ‘ನಾಹವಂ’ ಎಂದು ತಿದ್ದಲುಬಹುದು
೨ ಹಸ್ತಸ್ಪರ್ಶ
೩ ತುಂಬಿಯಂತೆ ಕಪ್ಪಾದ ಕೂದಲು
೪ ಪೆಟ್ಟಿಗೆ
೫ ಮೆಟ್ಟು
೬ ರಾತ್ರಿಯಂತೆ ಕಾಪ್ಪಾದವನೆ
೭ ಯುದ್ಧ
೮ ತಾಯಿ
೯ ಖನಿಜ
೧೦ ಬೆಳಗುವ ಚಿನ್ನ
೧೧ ಕಾಗೆಯಂತೆ ಕಪ್ಪಾದವ
೧೨ ಮಾಯವಾಯಿತು
೧೩ ಚಿನ್ನ
೧೪ ಸುಖದ ವೃದ್ಧಿ
೧೫ ಹೊಗೆಯ ಬಂಡಿ
೧೬ ಪೂರ್ವದಲ್ಲಿ ಮಕ್ಕಳಿಗೆ ಪ್ರಥಮದಲ್ಲಿ ಮಳಲಿನ ಮೇಲೆ ಅಕ್ಷರಾಭ್ಯಾಸವನ್ನು ಮಾಡಿಸುತ್ತಿದ್ದರು.
೧೭ ಚಿನ್ನ
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...