Home / ಕವನ / ಕವಿತೆ / ಕಬ್ಬಿಣದ ಬುದ್ಧಿವಾದ

ಕಬ್ಬಿಣದ ಬುದ್ಧಿವಾದ

(ಕೆಳಗಿನ ಚರಣಗಳ ಆರ್ಥವು ಸ್ಪಷ್ಟವಾಗಿ ತಿಳಿವಂತೆಯೂ ಓದುವುದಕ್ಕೆ ತೊಡಕಾಗದಂತೆಯೂ ಪದಗಳನ್ನು ಸೇರಿಸಿಕೊಂಡು ಬರೆಯಲಿಲ್ಲ. ಸಂಧಿಯನು ಮಾಡದಿದ್ದರೂ ಅಲ್ಲಲ್ಲಿ ತಿದ್ದಲು ಅನುಕೂಲವಿದೆ)

“ಎಲೆಲೆ! ಕಬ್ಬುನ! ನೀನು ಮಲಿನ ಹಸ್ತದಿ ತುಡುಕಿ,
ಪೊಲೆಗೈದುದೇತಕೆನ್ನಯ ಮೈಯನಿಂದು? |
ಕಲಿಯುಗದ ಪೊಲೆಯ ಸತ್ಯುಲದ್ವಿಜನ ಸೋಂಕುವೊಲ್,
ಖಲನೆ! ಮುಟ್ಟಿದುದೇತಕನ್ನೆಡೆಗೆ ಬಂದು? ||೧||

ಈ ತೆರದಿ ಕಂಚನಂ(೧) ಖಾತಿಯಿಂ ಘುಡುಘುಡಿಸಿ,
ಮಾತಿರದ ಬಡ ಕಬ್ಬುನವ ಜರೆದುಜರೆದು, |
ಭೂತಳದಿ ತಾನೆ ವಿಖ್ಯಾತನೆಂದೆನುತ, ಮಹಿ
ಮಾತಿಶಯವನು ಜೃಂಭಿಸಿತು ಮೆರೆದುಮೆರೆದು ||೨||

“ಕರೆವುದು ಸುವರ್ಣಮೆಂದಿರದೆ ಧರಣೀಮುಖಂ,
ಮಿರುಗುವುದು ನಾಮದಂತೆನ್ನ ಮೈವಣ್ಣ್ಂ. |
ತರಣಿರಶ್ಮಿಯ ಕವಿವ ಕುರುಡುಕತ್ತಲಿನಂತೆ,
ಭರದಿ ಒದೆಯಲ್ಕೆ ನಿನಗೊಡೆದುದೇ ಕಣ್ಣುಂ? ||೩||

“ಲೋಹರಾಜನು ನಾನು ಮೋಹಿಸುವೆ ಜನಮನವ,
(೧ಅ)ಆಹವಂ ನಿರ್ವಹಿಸದೆನ್ನಾಜ್ಞೆ ಇರದೆ. |
ಈ ಹಸ್ತಲಾಗಕ್ಕೆ(೨) ದಾಹಗೊಳ್ಳುತ್ತ, ತಮ್ಮ
ದೇಹವಂ ದಂಡಿಪರ್ ಜನರು ತರತರದೆ. ||೪||

“ಕನಕಮಣಿ ನಿಗಳೆಯರ್,? ‘ಕನಕಾಬ್ಜವದನೆ,’ ‘ಕಾಂ
ಚನಲತಾಕೋಮಲಾಂಗಿ,’ ‘ಸುವರ್ಣಕಾಯೆ,’
ವನಿತೆಯರನಿಂತು ಭೂವಿನುತೆ ಕವಿ ಕೀರ್ತಿಪರ್‌.
ಕನಕಭೂಷಣರಹಿತ ಸ್ತ್ರೀ ನೋಡೆ ಸ್ತ್ರೀಯೆ? ||೫||

“ಅಂಗನೆಯ ಕೇಶಾತರಂಗದೊಳ್‌ ಕ್ರೀಡಿಸುವೆ;
ತುಂಗವಕ್ಷದಿ ಬಿಗಿವೆ ಮುತ್ತುಗಳ ನಾನು, |
(೩) ಭೃಂಗ್ಕುಂತಲಕೊಯ್ದ ಮಂಗಲವ ಗೈಯ್ದು, ವನಿ
ತಾಂಗಸೌಂದರ್ಯ ಕೆಡಿಸುವ, ಪಾಪಿ ನೀನು. || ೬ ||

“ದ್ವಿಜಹಸ್ತ ಸೇರಿ, ನೀರಜ ಮುಖಿಯ ಶಿರವೇರಿ,
ರಜನಿಯೊಳ್‌ ಭದ್ರವಾಗಿಹೆ ಪಿಟಕದೊಳಗೆ. (೪) |
ದ್ವಿಜನ ಕೆರ(೫) ಸೇರ್‍ವ ನೀರಜ ಮುಖಿಯ ತಲೆಗಳೆವ
ರಜನಿಸನ್ನಿಭನೆ!(೬) ನಿಲ್ಲದಿರೆನ್ನ ಬಳಿಗೆ! ||೭||

“ಬಿಡದೆನ್ನನಾಶ್ರಯಿಸೆ ಕಡು ಮೂಢ ಪ್ರೌಢನಹ;
ಬಡವ ಬಲ್ಲಿದ, ದುಷ್ಟನರ ಶಿಷ್ಯನಹನು |
ಪಿಡಿದು ನಿನ್ನಂ ಕರದಿ, ಕಡಿದು ನರತರುಮೃಗವ,
ಕೆಡಿಪ ಮಾನವಶ್ರೇಷ್ಠನತಿ ಭ್ರಷ್ಟನಹನು. ||೮||

“ಅಗ್ರಾಸನಕ್ಕೆ ನಾಂ ಸಮಗ್ರ ವಸ್ತುಗಳೊಳಗ
ವ್ಯಗ್ರದಿಂದರ್ಹನೆಂಬುದು ಲೋಕಸಿದ್ದಂ. |
ಉಗ್ರತೆಯಿನೆನ್ನೊಡನೆ ವಿಗ್ರಹವ(೭) ಬಯಸಿ, ಕೋ
ಪಗ್ರಾಸವಾಗಲ್ಕೆ ನೀನಪ್ರಬುದ್ಧಂ.” ||೯||

ಉಬ್ಬಟೆಯೊಳುಬ್ಬಿ, ತನ್ನಬ್ಬರವ ಬೊಬ್ಬಿಡುತ,
ಕಬ್ಬುನವ ದೊಬ್ಬಿಬಿಡೆ ಕಾಲಿಂದ ಚಿನ್ನಂ; |
ತಬ್ಬಿಕೊಳ್ವಬ್ಬೆಯಾ(೮) ಕಿಬ್ಬದಿಗೆ ಮಗನೊದೆಯ
ಲುಬ್ಬೆಗಂಗೊಳ್ವಂದದಿತ್ತು ಕಾರ್ಬೋನ್ನುಂ. || ೧೦||

ಆರೆಗಳಿಗೆ ತಲೆವಾಗಿ, ಸುರಿವ ಕಂಬನಿಯೊರಸಿ,
ಮರುಗುವದನುಳಿದು, ನುಡಿದುದು ದೀನರೋಹಂ, |
“ಅರರೆ!(೯) ಧಾತುಪ್ರಕರದರಸನೆನಿಸುವ ಕನಕ!
ಅರಿಯೆಯಾ ನಿನಗೆಂತು ಬಂದುದೀ ದೇಹಂ? ||೧೧ ||

“ಬಡವನಾ ಬಿನ್ನಹದ ನುಡಿಗುತ್ತರವ ನೀಡು!
ಪೊಡವಿಯಂ ನಡೆಯಿಸುವರಾರೆಂದು ಪೇಳು? |
ಘುಡುಘುಡಿಸಿ ನುಡಿಯದಿರ್! ಹುಡುಗ ನೀನೆಲೆ ಚಿನ್ನ!
ಬಿಡುಬಿಡೀ ಮೂರ್ಖತೆಯ! ಬುದ್ಧಿಯನೆ ತಾಳು!” ||೧೨ ||

ಇಂತು ಕಬ್ಬುನ ನುಡಿದ ಪಂತದಾ ನುಡಿಗೇಳ್ದು,
ಸಂತಪ್ತಮಾಗಿ ನುಡಿದುದು ಕನತ್ಕಕನಕಂ(೧೦) |
“ನಾಂ ತಳೆದು ಗುಪ್ತವೇಷಂ, ತಿರೆಯೊಳಡಗುವೆಂ.
ಎಂತು ನಡೆವುದು ಜಗಂ ನಾನಿಲ್ಲದನಕಂ? ||೧೩||

“ಲೋಕದೊಳ್ ನಾನೋರ್ವನೇಕಾಧಿಪತಿಯಾಗಿ,
ಲೋಕಮಂ ನಡೆಯಿಪೆಂ ಚಿರಕಾಲದಿಂದಂ, |
ಲೋಕದೊಳಗರಿವರಾರ್ || ಕಾಕವರ್ಣನನಿಂದು? ”
ಲೋಕಮಂ ನಡೆಯಿಪೆಯೆ ಎನ್ನಂದದಿಂದಂ?” ||೧೪||

ಈ ಪ್ರಕಾರದೊಳು ಧಾತುಪ್ರಕರದರಸ ತ
ನ್ನ ಪ್ರತಾಪವ ಕೊಚ್ಚಿ, ಭೂಲೋಕದಿಂದ |
ಕ್ಷಿಪ್ರದಿ೦ ಮೈಮರೆದುದು(೧೨) ಪ್ರಲಾಪಿಸಿತು ಜನ
ಮಪ್ರತಿಮ ಕನಕನಾಶದ ಶೋಕದಿಂದ. ||೧೫||

ಹೇಮರಹಿತಮದಾಯ್ತು ಶ್ರೀಮಂತಮಂದಿರಂ;
ಭೂಮೀಶ ಕರದಂಡ ಗುರುದಂಡಮಾಯ್ತು; |
ಕಾಮಿನೀಜನರ ಕೈ ಮಾಮರದ ಕೈಯಾಯ್ತು,
(೧೩) ಚಾಮೀಕರವನೆಲ್ಲರರಸಿದರ್ ಸೋತು. ||೧೬||

ಟಂಕಸಾಲೆಯೊಳು ಕನಕಂ ಕಾಣದಿರಲು, ಮು
ದ್ರಾಂಕಿತದ ಪತ್ರ ಚಲಿಸಿತು ನಾಣ್ಯಮಾಗಿ |
ಅಂಕೆಯಿಲ್ಲದ ರತ್ನಸಂಕುಲವ ತೊಟ್ಟು, ದಿವ
ಸಂ ಕಳೆದರಾ ಧನಾಢ್ಯರ್‌ ದುಃಖ ನೀಗಿ. ||೧೭||

ತಾಳಿ ಕಿವಿಯೋಲೆ ಹಿತ್ತಾಳಿಯಿಂ ವಿರಚಿಸುತ
ತಾಳಿದರ್ ವನಿತೆಯರ್, ಕನಕದಾ ಮಾತು |
ಕೇಳಿಸದು, ಪರಿಣಯದ ಕೇಳಿಗಳ್ ನಡೆದು, ಸುಖ
(೧೪)ಕೇಳಿಗೆ ಜನಕ್ಕೆ ಮುದಮೆಂದಿನಂತಾಯ್ತು. ||೧೮||

ತಾನಿಲ್ಲದಿರ್ದೊಡಂ ಮಾನವರ್‌ ಚಿರಕಾಲ
ಹಾನಿಗೊಳ್ಳದೆ, ಸುಖಿಪ ಬಗೆನೋಡಿನೋಡಿ, |
ಮಾನಗಳೆದುಂ ಕನಕ ಮೀನೆಲ್ಕೆ ಮಗುಳೆ ಬಂ
ದಾನಮ್ರ ಭಾವ ತಳೆದುದು ಚಿಂತೆಗೂಡಿ. ||೧೯||

ಮೈಗರೆದು ಕಬ್ಬುನಂ ಕೈಗಾಣದಂತಾದು
ದೈಗಳಿಗೆಯೊಳ್‌ ಜಗಂ ದುಃಖಸಾಗರದಿ |
ಮೈಗೊಟ್ಟು ಮುಳುಗಿದುದು-ತ್ರೈಗುಣಾತ್ಮಕನೆ! ಸಲ
ಹೈ! ಗತಿಯ ದೋರೆಂದು ಬಹು ದೀನಸ್ವರದಿ. ||೨೦||

ತೆರಳದೈ ಹಡಗಕಟ! ಪೊರಳದೈ ಶಿಖಿಶಕಟ(೧೫)
ಉರುಳದೈ ಯಂತ್ರದೊಳ್‌ ಚಕ್ರಗಳ್‌ ಭರದಿ! |
ಪರಿದು ವಿದ್ಯುತ್‌ತಂತ್ರಿ, ಮುರಿದು ಕಂಬದ ಹಂತಿ,
ಕೂರಲು ಕಟ್ಟಿದೊಲಾಯ್ತು ವ್ಯಾಪಾರ ಪುರದಿ. ||೨೧||

ಹೊರಬರವು ವಸ್ತ್ರಗಳ್‌! ತರಿಯವಾ ಶಸ್ತ್ರಗಳ್‌!
ಪರಿಯವಾ ಪತ್ರಗಳ್‌ ಮುದ್ರಣಾಲಯದಿ! ||
ಗೊರಸೆ ಸಮೆದುಂ ಕುದುರೆ ಪೂರೆಯೆತ್ತು ನೆಲಕುದುರೆ,
ಧರೆಯ ಕೈ ಬಿಗಿದುದೈ ಕಬ್ಬುನದ ಲಯದಿ! ||೨೨||

ಅರಿವೆ ನೇಯಂ ಜೇಡ| ಕರಿಯ ಕೊಲ್ಲನು ಬೇಡ!
ಮರವ ಸಿಗಿಯಂ ಬಡಗಿಯುಳನೊಕ್ಕಲಿಗನು! |
ಧುರವ ಸೇರಂ ವೀರ! ನರಳುವಂ ಕಮ್ಮಾರ |
ಬರಿಯ ನೂಲ್‌ ಪಿಡಿದು ಚಿಂತಿಪನು ಚಿಪ್ಪಿಗನೂ! ||೨೩||

ಸುರಿಗೆಯದು ತರಿಯದಿರೆ, ತುರಿಪ ಮಣೆ ತುರಿಯದಿರೆ,
ವರಶಾಕಪಾಕಗಳುಮಿಲ್ಲ ಭೋಜನಕೆ!
ಧರಣಿಯೊಳ್‌ ಕಬ್ಬುನಂ ಮೆರೆವಾಗೆ, ದಿನದಿನಂ
ಮರಣ ಜೀವಿತಮಾಯ್ತು ಸಕಲ ಭೂಜನಕೆ. ||೨೪||

“ದೇವದೇವನೆ! ಸತ್ಕೃಪಾವಲೋಕನದಿಂದ
ಕಾವುದೆಮ್ಮಯ ಪಾಪಗಳನೆಲ್ಲ ಹರಿಸಿ,
ಈ ವೇಳೆಯೊಳ್‌ ಲೋಹದಾ ವರವನಿತ್ತು ನ
ಮ್ಮೀ ವಿಪತ್ತಂ ಬೇಗ ನೀನೆ ಪರಿಹರಿಸಿ” ||೨೫||

ಶೋಕದಿಂದಿಂತುಲಿವ ಲೋಕಮಂ ಕಂಡು, ತಾ
ನೀ ಕಬ್ಬುನಂ ದಯದಿ ಮೈದೋರಿ ಬಂದು,
ವ್ಯಾಕುಲಿತ ಹೃದಯಕೆ ವಿವೇಕದಿಂದುಪಚರಿಸು
ತಾಕನಕದೊಡನೆ ನುಡಿಗುಡು ನುಡಿಯನೊಂದು. ||೨೬||

“ಎಲೆ! ಅಣ್ಣ! ಬೇಸರದಿ ತಲೆವಾಗಿಸಲು ಬೇಡ!
ಒಲಿದೆನ್ನ ನುಡಿಗೆ ಕಿವಿಗುಡು ಮನವನಿಟ್ಟು!
ತಲೆದೋರಿಪಂತೆ ನೀಂ, ಬಲಿದ ಭೂಗರ್ಭದಿಂ
ಸೆಳೆದು ನಾಂ ತಂದೆ ನಿನಗೆನ್ನ ಕೈಗೊಟ್ಟು. ||೨೭||

“ಬಳಿಕ ದುಸ್ಸಂಗದಿಂ ಬಳೆವ ಮಲಿನತೆಯ ನಾಂ
ಕಳೆಯಲ್ಕೆ ನಿನ್ನ ಪುಡಿಗೈದೊಡಂ, ಬಿಡದೆ |
ತಳೆದಿರಲದಂ ನೀನು, ಮುಳಿದು ನಿನ್ನಂ ಕಿಚ್ಚಿ
ನೊಳು ಕೆಡವಿದೆನು ನಿನ್ನಸುವಿನಾಸೆಯಿಡದೆ. ||೨೮||

“ಇಕ್ಕುಳದಿ ಪಿಡಿದು ನಾಂ, ಚೊಕ್ಕಟಮದಾಗೆ ನೀಂ
ತಕ್ಕನಿತು ಬಡಿದು ನಿನ್ನಯ ಮೈಯನೆಲ್ಲಂ, |
(೧೬)ಅಕ್ಕರವ ಕಲಸಲ್ಕೆ ತಿಕ್ಕಿದೆಂ ಮಳಲೊಳಗೆ.
ಮಕ್ಕಳಂ ಕಲಿಸದಿಹ ಪಿತನು ಪಿತನಲ್ಲಂ. ||೨೯||

“ಪೆಟ್ಟಿಗೆಯೊಳಿರುಳು ನಾನಿಟ್ಟು ನಿನ್ನಂ, ಕಾಪು
ಕೊಟ್ಟು ಕೈದುಗಳಿಂದ ಸಲಹುವೆಂ ಬಿಡದೆ, |
ಸಿಟ್ಟುಗೊಳಬೇಡ ಮೈಮುಟ್ಟಿದೆಂ ನಾನೆಂದು!
ನಿಟ್ಟುರವ ನುಡಿಯದಿರ್ ಕೋಪಕೆಡೆಗೊಡದೆ! ||೩೦||

“ನಗರದರಸಾದೊಡಂ ಮಗನಲವೆ ತಾಯ್ಗೆ? ನಿ
ನ್ನುಗುವ ಕಾಂತಿಯ ದೇಹಮೆನಗೆ ಪಿರಿದೇನು?
ಜಗದೊಳ್‌ ಕೃತಘ್ನತೆಯನುಗಿವೌಷಧಂ ಕಣ್ಣು
ಬಿಗಿವ ಮದರೋಗಾಂಜನಂ ಕಾಣೆ ನಾನು. ||೩೧||

ಈ ಜಗದಿ ನಮಗಾ ನಿಯೋಜಿಸಿದ ಕಾರ್ಯಂಗ
ಳೋಜೆ ತಪ್ಪದೆ ನಿರ್ವಹಿಪುದೇ ಮಹತ್ವಂ. |
ರಾಜ ನಾಡನು ಜನಂ ರಾಜನಂ ಸೇವಿಸುತ,
ನೈಜದಿಂ ಸುಖಿಸುವುದೆ ನರ ಲೋಕತತ್ವಂ” ||೩೨||

ಉದ್ಧತೆಯ ತರಿದಪ್ರಬುದ್ಧತೆಯ ಪೋಗೊಳಿಸಿ,
ರುದ್ಧ ಕಂಠದಿ ಬರ್ಪ ಶೋಕಾರ್ತಸ್ವರಮಂ |
ವೃದ್ಧ ಲೋಹಂ ನಿಲಿಸಿ, ಬುದ್ಧಿವಾದವ ಕಲಿಸಿ,
ಶುದ್ಧವರ್ತನಕೆ ತಂದುದು(೧೭) ಕಾರ್ತಸ್ವರಮಂ ||೩೩| |

೧ ಚಿನ್ನ.
೧ಅ ಪದದಲ್ಲಿ ಪೂರ್ವ ಸ್ವರವಿದೆ. ಛಂದೋದೋಷವಾಗದಂತೆ ‘ನಾಹವಂ’ ಎಂದು ತಿದ್ದಲುಬಹುದು
೨ ಹಸ್ತಸ್ಪರ್ಶ
೩ ತುಂಬಿಯಂತೆ ಕಪ್ಪಾದ ಕೂದಲು
೪ ಪೆಟ್ಟಿಗೆ
೫ ಮೆಟ್ಟು
೬ ರಾತ್ರಿಯಂತೆ ಕಾಪ್ಪಾದವನೆ
೭ ಯುದ್ಧ
೮ ತಾಯಿ
೯ ಖನಿಜ
೧೦ ಬೆಳಗುವ ಚಿನ್ನ
೧೧ ಕಾಗೆಯಂತೆ ಕಪ್ಪಾದವ
೧೨ ಮಾಯವಾಯಿತು
೧೩ ಚಿನ್ನ
೧೪ ಸುಖದ ವೃದ್ಧಿ
೧೫ ಹೊಗೆಯ ಬಂಡಿ
೧೬ ಪೂರ್ವದಲ್ಲಿ ಮಕ್ಕಳಿಗೆ ಪ್ರಥಮದಲ್ಲಿ ಮಳಲಿನ ಮೇಲೆ ಅಕ್ಷರಾಭ್ಯಾಸವನ್ನು ಮಾಡಿಸುತ್ತಿದ್ದರು.
೧೭ ಚಿನ್ನ
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...