Home / ಲೇಖನ / ಇತರೆ / ಮೈ ಝುಮ್ಮಾಗುವ ಸುಳ್ಳು

ಮೈ ಝುಮ್ಮಾಗುವ ಸುಳ್ಳು

ರಘುವೀರನು ನನ್ನ ಗೆಳೆಯ, ನಮಗೆ ಪರಿಚಯವಾದುದು ಮೊದಲು ಲೇಖನಿಯಿಂದ, ಅವನು ಸಂಪಾದಕನು. ನಾನು, ‘ಸಂಪಾದಕ’ರೆಂಬವರನ್ನು ಪ್ರೀತಿಯಿಂದ ನೋಡುವವನು. “ಹೃದಯರಂಜನ” ಪತ್ರಿಕೆಯನ್ನು ರಘುವೀರನು ಆರಂಭಿಸಿದ ಮೇಲೆ ನಮ್ಮ ಪರಿಚಯವೂ ಫಕ್ಕನೆ ಉಂಟಾಗಿ, ಕೆಲವೇ ಕಾಲದಲ್ಲಿ ಬಲವಾಯಿತು. ಈಗ ರಘುವೀರನು ‘ಸಂಪಾದಕ’ನಲ್ಲ; “ಭೂತಪೂರ್ವ….”ವಾಗಿದ್ದಾನೆ. ಅವನ “ಹೃದಯರಂಜನ”ವು ಹೃದಯಭೇದಕವೆನಿಸುವಂತೆ ಹುಟ್ಟಿದ ದಿನವೇ ಸತ್ತಿತೆಂಬುದು ದುಖಃಪೂರ್ಣವಾದ ‘ಬಹಿರಂಗ ರಹಸ್ಯ.’

ನಿಂತು ಹೋಗಲು ಕಾರಣವೇನು? –
(೧) ಕನ್ನಡಿಗರ ಆದರದ ಅಭಾವ
(೨) ಆರ್ಥಿಕ ದುರ್ದಶೆ
(೩) ಪ್ರಚಾರ ಕಾರ್ಯದ ಅಪೂರ್ಣತೆ
(೪) ಪತ್ರಿಕೆಯು ಆಕರ್ಷಕವಾಗಿಲ್ಲದಿರುವದು

– ಇವು ಒಂದು ಪ್ರತಿಕೆಯ ‘ಅಕಾಲ ನಿಧನ’ಕ್ಕೆ ಕಾರಣವೆಂದು ನಿಮ್ಮ ತರ್ಕವಿರಬಹುದು. ಆದರೆ, ರಘುವೀರನ ಪತ್ರಿಕೆಯ ಅವಸಾನವು ಆತನ ದುಂದುವ್ಯಯದಿಂದಲೇ ಉಂಟಾಯಿತು.

ಹೇಗೆ? – ಒಂದು ಉದಾಹರಣೆಯೇ ಇದು.

ಪತ್ರಿಕೆಗೆ ಚಂದಾದಾರರನ್ನು ಕೂಡಿಸಲು ಆತನು ಸರ್ವೋತ್ತಮನೆಂಬವನ ಸಹಾಯ ಪಡೆದನು. ಸರ್ವೊತ್ತಮನು ಸರ್ವ ವಿದ್ಯೆಗಳಲ್ಲೂ ನಿಷ್ಣಾತನು. ಅವನ ನಾಲಗೆಯೂ, ಅದರಂತೆ ಕೈಯೂ ಹರಿತವಾಗಿವೆ. “ಚಂದಾದಾರರನ್ನು ಕೂಡಿಸುತ್ತ ದಣಿವ ಬದಲಾಗಿ ನಿಮ್ಮನ್ನು ಒಂದೇ ಒಂದು ಹತ್ತು ರೂಪಾಯಿ ನೋಟಿನಲ್ಲಿ ಭಾಗ್ಯವಂತನನ್ನಾಗಿ ಮಾಡಬಲ್ಲೆ” ಎಂದು ಆತನು ರಘುವೀರನಿಗೆ ಭಾಷೆಕೊಟ್ಟನು. ಹೇಗೆಂದು ರಘುವೀರನು ಪ್ರಶ್ನಿಸಲಾಗಿ, “ತಾಯಿತ! ನನ್ನ ಅಜ್ಜನು . . .ಲ್ಲಿ ಕಲಿತು ಬಂದು ನನಗೆ ಹೇಳಿಕೊಟ್ಟನು. ಮಹಾರಹಸ್ಯ; ಖಂಡಿತ ಫಲ!” ಎಂದನು.

‘ಸುಶಿಕ್ಷಿತ’ನು ರಘುವು; ಒಂದು ಪತ್ರಿಕೆಯ ಸಂಪಾದಕನು; ಆದರೆ ಮನುಷ್ಯನು. ಆದುದರಿಂದ ಸರ್ವೋತ್ತಮನು ತೆಳ್ಳಗಿನ ನಾಲಗೆಯಿಂದಾಡಿದ ಮಾತುಗಳನ್ನು ತೆಳ್ಳಗಿನ ಕೈಯಿಂದ ಭಾಷೆಯ ವೆಟ್ಟನ್ನಿತ್ತುದೇ – ನಂಬಿದನು. ‘ಸುಶಿಕ್ಷಿತ’ ರೆಂಬವರಲ್ಲಿ ಹೆಚ್ಚಿನವರು ತಾಯಿತವನ್ನು ತಾಯಿಗಿಂತ ಹೆಚ್ಚು ನಂಬುವರೆಂಬುದು ನಿಮಗರಿತಿರಬಹುದು.

ರಘುವು ಕುಂದಾಪುರದಲ್ಲಿ ಚಂದಾದಾರರನ್ನು ಕೂಡಿಸುವ ಮಹಾಯತ್ನದಲ್ಲಿದ್ದನು. ಅಲ್ಲಿಗೆ ಸರ್ವೋತ್ತಮನ ಹತ್ತು ರೂಪಾಯಿ ಮೌಲ್ಯದ ವಿ. ಪಿ. ತಲಪಿತು. ಮೌಲ್ಯ ತೆತ್ತು, ರಘುವು ಅದನ್ನೊಡೆಯಲು ಒಂದು ಉಂಗುರವು ಸಿಕ್ಕಿತು, ಅದನ್ನು ಬೆರಳಿಗೆ ಸಿಕ್ಕಿಸುತ್ತಲೇ ಮೈ ಝುಮ್ಮೆನ್ನುವುದೆಂದೂ, ಆಗಲೇ ಅದರ ಪ್ರಭಾವವು ಆರಂಭವಾಗಿದೆ ಎಂಒ ಲೆಕ್ಕವೆಂದೂ ಸರ್ವೊತ್ತಮನು ಬರೆದಿದ್ದನು. ಇನ್ನಿದನ್ನು ಕೈಗೆ ಸಿಕ್ಕಿಸಿ ಚಂದಾದಾರರನ್ನು ಕೂಡಿಸ ಹೋಗುವೆನೆಂದು ರಘುವು, ಆ ಕೂಡಲೇ ಕೈಗೆ ಸಿಕ್ಕಿಸಿ, ನಡುಗುವ ಹೃದಯದಿಂದ ಮೈ ಜುಮ್ಮನ್ನು ಕಾಯುತ್ತ ಕುಳಿತನು. ಘಂಟೆ- ದಿನ……. ತಿಂಗಳ ತನಕ ಕಾಯ್ದನು.
ಝುಮ್ಮೇ ಇಲ್ಲ. ವಿಷಾದದ ಸಂಗ್ತಿಯೆಂದ್ರೆ-ಕುಂದಾಪುರದಲ್ಲಿ ಇವನಿಗೆ ಒಬ್ಬನಾದರೂ ಚಂದಾದಾರನು ದೊರೆಯಲಿಲ್ಲ.

ಒಂದು ತಿಂಗಳ ನಂತರ ಸರ್ವೋತ್ತಮನು ಸಿಕ್ಕಲು, ರಘವು ಕೋಪದಿಂದ ಆತನನ್ನು ಕುರಿತು – “ಏನಯಾ – ಈ ನೀಚತನವೇ?”

ಸರ್ವ – “ಏನು ನೀಚತನ?”
ರಘು – “ಉಂಗುರದ ಜುಮ್ಮು? ಇಲ್ಲವೇ ಇಲ್ಲ!”
ಸರ್ವ -ನೀನು ಅದನ್ನು ಹೇಗೆ ಕೈಗೆ ಹಾಕಿಕೊಂಡೆ?”
ರಘು- “ಟಪ್ಪಾಲಿನವನ ಕೈಯಿಂದ ಪಡೆದ ಕೂಡಲೇ.”
ಸರ್ವ – “ಆಗ ಊಟಗೀಟವಾಗಿತ್ತೇ?”
ರಘು- “ಇಲ್ಲಪ್ಪಾ -ಸ್ನಾನ ಕೂಡಾ ಆಗಿರಲಿಲ್ಲ.”
ಸರ್ವ (ಸಂತೋಷದಿಂದ) – “ಸರಿ! ನಿನ್ನಂತಹ ಮೂರ್ಖನು ನೀನೆ! ಸ್ನಾನ ಮಾಡದೆ ಕೈಬೆರಳಿಗೆ ತಾಯಿತದ ಉಂಗುರವನ್ನು ಹಾಕಿಕೊಳ್ಳುವ ಬ್ರಾಹ್ಮಣರೂ ಇರುವರೇ? ಹತ್ತು ರೂಪಾಯಿಗಳನ್ನು ನೀರಿಗೆ ಹಾಕಿದಿಯಲ್ಲ!”

ರಘುವಿಗೆ (ಆಗ ಕೈಯ್ಯಲ್ಲಿ ಉಂಗುರವಿರಲಿಲ್ಲ.) ಮೈ ಝುಮ್ಮೆಂದಿತು.

ರಘುವಿನ ೧೯೩೩ನೇ ಇಸವಿಯ ಡೈರಿಯನ್ನು ತೆಗೆದು, ದಶಂಬರ ತಿಂಗಳ ಪುಟವೊಂದರಲ್ಲಿ ನೋಡಿರಿ- “ಮೈ ಝುಮ್ಮಾಗುವ ಸುಳ್ಳಿಗೆ ಕೊಟ್ಟ ಹಣ- ಹತ್ತು ರೂಪಾಯಿ” ಎಂದು ಬರೆದಿದೆ.

ಈಗ ವರ್ಷವೇ ಕಳೆದರೂ, ಆ ತಾಯಿತವಿಲ್ಲದೆ ಅವನ ಮೈ ಆಗಾಗ ಇದನ್ನು ನೆನೆದಾಗಲೆಲ್ಲಾ ಝುಮ್ಮೆನ್ನುತ್ತಿದೆ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...