Home / ಲೇಖನ / ಇತರೆ / ಮೈ ಝುಮ್ಮಾಗುವ ಸುಳ್ಳು

ಮೈ ಝುಮ್ಮಾಗುವ ಸುಳ್ಳು

ರಘುವೀರನು ನನ್ನ ಗೆಳೆಯ, ನಮಗೆ ಪರಿಚಯವಾದುದು ಮೊದಲು ಲೇಖನಿಯಿಂದ, ಅವನು ಸಂಪಾದಕನು. ನಾನು, ‘ಸಂಪಾದಕ’ರೆಂಬವರನ್ನು ಪ್ರೀತಿಯಿಂದ ನೋಡುವವನು. “ಹೃದಯರಂಜನ” ಪತ್ರಿಕೆಯನ್ನು ರಘುವೀರನು ಆರಂಭಿಸಿದ ಮೇಲೆ ನಮ್ಮ ಪರಿಚಯವೂ ಫಕ್ಕನೆ ಉಂಟಾಗಿ, ಕೆಲವೇ ಕಾಲದಲ್ಲಿ ಬಲವಾಯಿತು. ಈಗ ರಘುವೀರನು ‘ಸಂಪಾದಕ’ನಲ್ಲ; “ಭೂತಪೂರ್ವ….”ವಾಗಿದ್ದಾನೆ. ಅವನ “ಹೃದಯರಂಜನ”ವು ಹೃದಯಭೇದಕವೆನಿಸುವಂತೆ ಹುಟ್ಟಿದ ದಿನವೇ ಸತ್ತಿತೆಂಬುದು ದುಖಃಪೂರ್ಣವಾದ ‘ಬಹಿರಂಗ ರಹಸ್ಯ.’

ನಿಂತು ಹೋಗಲು ಕಾರಣವೇನು? –
(೧) ಕನ್ನಡಿಗರ ಆದರದ ಅಭಾವ
(೨) ಆರ್ಥಿಕ ದುರ್ದಶೆ
(೩) ಪ್ರಚಾರ ಕಾರ್ಯದ ಅಪೂರ್ಣತೆ
(೪) ಪತ್ರಿಕೆಯು ಆಕರ್ಷಕವಾಗಿಲ್ಲದಿರುವದು

– ಇವು ಒಂದು ಪ್ರತಿಕೆಯ ‘ಅಕಾಲ ನಿಧನ’ಕ್ಕೆ ಕಾರಣವೆಂದು ನಿಮ್ಮ ತರ್ಕವಿರಬಹುದು. ಆದರೆ, ರಘುವೀರನ ಪತ್ರಿಕೆಯ ಅವಸಾನವು ಆತನ ದುಂದುವ್ಯಯದಿಂದಲೇ ಉಂಟಾಯಿತು.

ಹೇಗೆ? – ಒಂದು ಉದಾಹರಣೆಯೇ ಇದು.

ಪತ್ರಿಕೆಗೆ ಚಂದಾದಾರರನ್ನು ಕೂಡಿಸಲು ಆತನು ಸರ್ವೋತ್ತಮನೆಂಬವನ ಸಹಾಯ ಪಡೆದನು. ಸರ್ವೊತ್ತಮನು ಸರ್ವ ವಿದ್ಯೆಗಳಲ್ಲೂ ನಿಷ್ಣಾತನು. ಅವನ ನಾಲಗೆಯೂ, ಅದರಂತೆ ಕೈಯೂ ಹರಿತವಾಗಿವೆ. “ಚಂದಾದಾರರನ್ನು ಕೂಡಿಸುತ್ತ ದಣಿವ ಬದಲಾಗಿ ನಿಮ್ಮನ್ನು ಒಂದೇ ಒಂದು ಹತ್ತು ರೂಪಾಯಿ ನೋಟಿನಲ್ಲಿ ಭಾಗ್ಯವಂತನನ್ನಾಗಿ ಮಾಡಬಲ್ಲೆ” ಎಂದು ಆತನು ರಘುವೀರನಿಗೆ ಭಾಷೆಕೊಟ್ಟನು. ಹೇಗೆಂದು ರಘುವೀರನು ಪ್ರಶ್ನಿಸಲಾಗಿ, “ತಾಯಿತ! ನನ್ನ ಅಜ್ಜನು . . .ಲ್ಲಿ ಕಲಿತು ಬಂದು ನನಗೆ ಹೇಳಿಕೊಟ್ಟನು. ಮಹಾರಹಸ್ಯ; ಖಂಡಿತ ಫಲ!” ಎಂದನು.

‘ಸುಶಿಕ್ಷಿತ’ನು ರಘುವು; ಒಂದು ಪತ್ರಿಕೆಯ ಸಂಪಾದಕನು; ಆದರೆ ಮನುಷ್ಯನು. ಆದುದರಿಂದ ಸರ್ವೋತ್ತಮನು ತೆಳ್ಳಗಿನ ನಾಲಗೆಯಿಂದಾಡಿದ ಮಾತುಗಳನ್ನು ತೆಳ್ಳಗಿನ ಕೈಯಿಂದ ಭಾಷೆಯ ವೆಟ್ಟನ್ನಿತ್ತುದೇ – ನಂಬಿದನು. ‘ಸುಶಿಕ್ಷಿತ’ ರೆಂಬವರಲ್ಲಿ ಹೆಚ್ಚಿನವರು ತಾಯಿತವನ್ನು ತಾಯಿಗಿಂತ ಹೆಚ್ಚು ನಂಬುವರೆಂಬುದು ನಿಮಗರಿತಿರಬಹುದು.

ರಘುವು ಕುಂದಾಪುರದಲ್ಲಿ ಚಂದಾದಾರರನ್ನು ಕೂಡಿಸುವ ಮಹಾಯತ್ನದಲ್ಲಿದ್ದನು. ಅಲ್ಲಿಗೆ ಸರ್ವೋತ್ತಮನ ಹತ್ತು ರೂಪಾಯಿ ಮೌಲ್ಯದ ವಿ. ಪಿ. ತಲಪಿತು. ಮೌಲ್ಯ ತೆತ್ತು, ರಘುವು ಅದನ್ನೊಡೆಯಲು ಒಂದು ಉಂಗುರವು ಸಿಕ್ಕಿತು, ಅದನ್ನು ಬೆರಳಿಗೆ ಸಿಕ್ಕಿಸುತ್ತಲೇ ಮೈ ಝುಮ್ಮೆನ್ನುವುದೆಂದೂ, ಆಗಲೇ ಅದರ ಪ್ರಭಾವವು ಆರಂಭವಾಗಿದೆ ಎಂಒ ಲೆಕ್ಕವೆಂದೂ ಸರ್ವೊತ್ತಮನು ಬರೆದಿದ್ದನು. ಇನ್ನಿದನ್ನು ಕೈಗೆ ಸಿಕ್ಕಿಸಿ ಚಂದಾದಾರರನ್ನು ಕೂಡಿಸ ಹೋಗುವೆನೆಂದು ರಘುವು, ಆ ಕೂಡಲೇ ಕೈಗೆ ಸಿಕ್ಕಿಸಿ, ನಡುಗುವ ಹೃದಯದಿಂದ ಮೈ ಜುಮ್ಮನ್ನು ಕಾಯುತ್ತ ಕುಳಿತನು. ಘಂಟೆ- ದಿನ……. ತಿಂಗಳ ತನಕ ಕಾಯ್ದನು.
ಝುಮ್ಮೇ ಇಲ್ಲ. ವಿಷಾದದ ಸಂಗ್ತಿಯೆಂದ್ರೆ-ಕುಂದಾಪುರದಲ್ಲಿ ಇವನಿಗೆ ಒಬ್ಬನಾದರೂ ಚಂದಾದಾರನು ದೊರೆಯಲಿಲ್ಲ.

ಒಂದು ತಿಂಗಳ ನಂತರ ಸರ್ವೋತ್ತಮನು ಸಿಕ್ಕಲು, ರಘವು ಕೋಪದಿಂದ ಆತನನ್ನು ಕುರಿತು – “ಏನಯಾ – ಈ ನೀಚತನವೇ?”

ಸರ್ವ – “ಏನು ನೀಚತನ?”
ರಘು – “ಉಂಗುರದ ಜುಮ್ಮು? ಇಲ್ಲವೇ ಇಲ್ಲ!”
ಸರ್ವ -ನೀನು ಅದನ್ನು ಹೇಗೆ ಕೈಗೆ ಹಾಕಿಕೊಂಡೆ?”
ರಘು- “ಟಪ್ಪಾಲಿನವನ ಕೈಯಿಂದ ಪಡೆದ ಕೂಡಲೇ.”
ಸರ್ವ – “ಆಗ ಊಟಗೀಟವಾಗಿತ್ತೇ?”
ರಘು- “ಇಲ್ಲಪ್ಪಾ -ಸ್ನಾನ ಕೂಡಾ ಆಗಿರಲಿಲ್ಲ.”
ಸರ್ವ (ಸಂತೋಷದಿಂದ) – “ಸರಿ! ನಿನ್ನಂತಹ ಮೂರ್ಖನು ನೀನೆ! ಸ್ನಾನ ಮಾಡದೆ ಕೈಬೆರಳಿಗೆ ತಾಯಿತದ ಉಂಗುರವನ್ನು ಹಾಕಿಕೊಳ್ಳುವ ಬ್ರಾಹ್ಮಣರೂ ಇರುವರೇ? ಹತ್ತು ರೂಪಾಯಿಗಳನ್ನು ನೀರಿಗೆ ಹಾಕಿದಿಯಲ್ಲ!”

ರಘುವಿಗೆ (ಆಗ ಕೈಯ್ಯಲ್ಲಿ ಉಂಗುರವಿರಲಿಲ್ಲ.) ಮೈ ಝುಮ್ಮೆಂದಿತು.

ರಘುವಿನ ೧೯೩೩ನೇ ಇಸವಿಯ ಡೈರಿಯನ್ನು ತೆಗೆದು, ದಶಂಬರ ತಿಂಗಳ ಪುಟವೊಂದರಲ್ಲಿ ನೋಡಿರಿ- “ಮೈ ಝುಮ್ಮಾಗುವ ಸುಳ್ಳಿಗೆ ಕೊಟ್ಟ ಹಣ- ಹತ್ತು ರೂಪಾಯಿ” ಎಂದು ಬರೆದಿದೆ.

ಈಗ ವರ್ಷವೇ ಕಳೆದರೂ, ಆ ತಾಯಿತವಿಲ್ಲದೆ ಅವನ ಮೈ ಆಗಾಗ ಇದನ್ನು ನೆನೆದಾಗಲೆಲ್ಲಾ ಝುಮ್ಮೆನ್ನುತ್ತಿದೆ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...