Home / ಲೇಖನ / ಇತರೆ / ಮೈ ಝುಮ್ಮಾಗುವ ಸುಳ್ಳು

ಮೈ ಝುಮ್ಮಾಗುವ ಸುಳ್ಳು

ರಘುವೀರನು ನನ್ನ ಗೆಳೆಯ, ನಮಗೆ ಪರಿಚಯವಾದುದು ಮೊದಲು ಲೇಖನಿಯಿಂದ, ಅವನು ಸಂಪಾದಕನು. ನಾನು, ‘ಸಂಪಾದಕ’ರೆಂಬವರನ್ನು ಪ್ರೀತಿಯಿಂದ ನೋಡುವವನು. “ಹೃದಯರಂಜನ” ಪತ್ರಿಕೆಯನ್ನು ರಘುವೀರನು ಆರಂಭಿಸಿದ ಮೇಲೆ ನಮ್ಮ ಪರಿಚಯವೂ ಫಕ್ಕನೆ ಉಂಟಾಗಿ, ಕೆಲವೇ ಕಾಲದಲ್ಲಿ ಬಲವಾಯಿತು. ಈಗ ರಘುವೀರನು ‘ಸಂಪಾದಕ’ನಲ್ಲ; “ಭೂತಪೂರ್ವ….”ವಾಗಿದ್ದಾನೆ. ಅವನ “ಹೃದಯರಂಜನ”ವು ಹೃದಯಭೇದಕವೆನಿಸುವಂತೆ ಹುಟ್ಟಿದ ದಿನವೇ ಸತ್ತಿತೆಂಬುದು ದುಖಃಪೂರ್ಣವಾದ ‘ಬಹಿರಂಗ ರಹಸ್ಯ.’

ನಿಂತು ಹೋಗಲು ಕಾರಣವೇನು? –
(೧) ಕನ್ನಡಿಗರ ಆದರದ ಅಭಾವ
(೨) ಆರ್ಥಿಕ ದುರ್ದಶೆ
(೩) ಪ್ರಚಾರ ಕಾರ್ಯದ ಅಪೂರ್ಣತೆ
(೪) ಪತ್ರಿಕೆಯು ಆಕರ್ಷಕವಾಗಿಲ್ಲದಿರುವದು

– ಇವು ಒಂದು ಪ್ರತಿಕೆಯ ‘ಅಕಾಲ ನಿಧನ’ಕ್ಕೆ ಕಾರಣವೆಂದು ನಿಮ್ಮ ತರ್ಕವಿರಬಹುದು. ಆದರೆ, ರಘುವೀರನ ಪತ್ರಿಕೆಯ ಅವಸಾನವು ಆತನ ದುಂದುವ್ಯಯದಿಂದಲೇ ಉಂಟಾಯಿತು.

ಹೇಗೆ? – ಒಂದು ಉದಾಹರಣೆಯೇ ಇದು.

ಪತ್ರಿಕೆಗೆ ಚಂದಾದಾರರನ್ನು ಕೂಡಿಸಲು ಆತನು ಸರ್ವೋತ್ತಮನೆಂಬವನ ಸಹಾಯ ಪಡೆದನು. ಸರ್ವೊತ್ತಮನು ಸರ್ವ ವಿದ್ಯೆಗಳಲ್ಲೂ ನಿಷ್ಣಾತನು. ಅವನ ನಾಲಗೆಯೂ, ಅದರಂತೆ ಕೈಯೂ ಹರಿತವಾಗಿವೆ. “ಚಂದಾದಾರರನ್ನು ಕೂಡಿಸುತ್ತ ದಣಿವ ಬದಲಾಗಿ ನಿಮ್ಮನ್ನು ಒಂದೇ ಒಂದು ಹತ್ತು ರೂಪಾಯಿ ನೋಟಿನಲ್ಲಿ ಭಾಗ್ಯವಂತನನ್ನಾಗಿ ಮಾಡಬಲ್ಲೆ” ಎಂದು ಆತನು ರಘುವೀರನಿಗೆ ಭಾಷೆಕೊಟ್ಟನು. ಹೇಗೆಂದು ರಘುವೀರನು ಪ್ರಶ್ನಿಸಲಾಗಿ, “ತಾಯಿತ! ನನ್ನ ಅಜ್ಜನು . . .ಲ್ಲಿ ಕಲಿತು ಬಂದು ನನಗೆ ಹೇಳಿಕೊಟ್ಟನು. ಮಹಾರಹಸ್ಯ; ಖಂಡಿತ ಫಲ!” ಎಂದನು.

‘ಸುಶಿಕ್ಷಿತ’ನು ರಘುವು; ಒಂದು ಪತ್ರಿಕೆಯ ಸಂಪಾದಕನು; ಆದರೆ ಮನುಷ್ಯನು. ಆದುದರಿಂದ ಸರ್ವೋತ್ತಮನು ತೆಳ್ಳಗಿನ ನಾಲಗೆಯಿಂದಾಡಿದ ಮಾತುಗಳನ್ನು ತೆಳ್ಳಗಿನ ಕೈಯಿಂದ ಭಾಷೆಯ ವೆಟ್ಟನ್ನಿತ್ತುದೇ – ನಂಬಿದನು. ‘ಸುಶಿಕ್ಷಿತ’ ರೆಂಬವರಲ್ಲಿ ಹೆಚ್ಚಿನವರು ತಾಯಿತವನ್ನು ತಾಯಿಗಿಂತ ಹೆಚ್ಚು ನಂಬುವರೆಂಬುದು ನಿಮಗರಿತಿರಬಹುದು.

ರಘುವು ಕುಂದಾಪುರದಲ್ಲಿ ಚಂದಾದಾರರನ್ನು ಕೂಡಿಸುವ ಮಹಾಯತ್ನದಲ್ಲಿದ್ದನು. ಅಲ್ಲಿಗೆ ಸರ್ವೋತ್ತಮನ ಹತ್ತು ರೂಪಾಯಿ ಮೌಲ್ಯದ ವಿ. ಪಿ. ತಲಪಿತು. ಮೌಲ್ಯ ತೆತ್ತು, ರಘುವು ಅದನ್ನೊಡೆಯಲು ಒಂದು ಉಂಗುರವು ಸಿಕ್ಕಿತು, ಅದನ್ನು ಬೆರಳಿಗೆ ಸಿಕ್ಕಿಸುತ್ತಲೇ ಮೈ ಝುಮ್ಮೆನ್ನುವುದೆಂದೂ, ಆಗಲೇ ಅದರ ಪ್ರಭಾವವು ಆರಂಭವಾಗಿದೆ ಎಂಒ ಲೆಕ್ಕವೆಂದೂ ಸರ್ವೊತ್ತಮನು ಬರೆದಿದ್ದನು. ಇನ್ನಿದನ್ನು ಕೈಗೆ ಸಿಕ್ಕಿಸಿ ಚಂದಾದಾರರನ್ನು ಕೂಡಿಸ ಹೋಗುವೆನೆಂದು ರಘುವು, ಆ ಕೂಡಲೇ ಕೈಗೆ ಸಿಕ್ಕಿಸಿ, ನಡುಗುವ ಹೃದಯದಿಂದ ಮೈ ಜುಮ್ಮನ್ನು ಕಾಯುತ್ತ ಕುಳಿತನು. ಘಂಟೆ- ದಿನ……. ತಿಂಗಳ ತನಕ ಕಾಯ್ದನು.
ಝುಮ್ಮೇ ಇಲ್ಲ. ವಿಷಾದದ ಸಂಗ್ತಿಯೆಂದ್ರೆ-ಕುಂದಾಪುರದಲ್ಲಿ ಇವನಿಗೆ ಒಬ್ಬನಾದರೂ ಚಂದಾದಾರನು ದೊರೆಯಲಿಲ್ಲ.

ಒಂದು ತಿಂಗಳ ನಂತರ ಸರ್ವೋತ್ತಮನು ಸಿಕ್ಕಲು, ರಘವು ಕೋಪದಿಂದ ಆತನನ್ನು ಕುರಿತು – “ಏನಯಾ – ಈ ನೀಚತನವೇ?”

ಸರ್ವ – “ಏನು ನೀಚತನ?”
ರಘು – “ಉಂಗುರದ ಜುಮ್ಮು? ಇಲ್ಲವೇ ಇಲ್ಲ!”
ಸರ್ವ -ನೀನು ಅದನ್ನು ಹೇಗೆ ಕೈಗೆ ಹಾಕಿಕೊಂಡೆ?”
ರಘು- “ಟಪ್ಪಾಲಿನವನ ಕೈಯಿಂದ ಪಡೆದ ಕೂಡಲೇ.”
ಸರ್ವ – “ಆಗ ಊಟಗೀಟವಾಗಿತ್ತೇ?”
ರಘು- “ಇಲ್ಲಪ್ಪಾ -ಸ್ನಾನ ಕೂಡಾ ಆಗಿರಲಿಲ್ಲ.”
ಸರ್ವ (ಸಂತೋಷದಿಂದ) – “ಸರಿ! ನಿನ್ನಂತಹ ಮೂರ್ಖನು ನೀನೆ! ಸ್ನಾನ ಮಾಡದೆ ಕೈಬೆರಳಿಗೆ ತಾಯಿತದ ಉಂಗುರವನ್ನು ಹಾಕಿಕೊಳ್ಳುವ ಬ್ರಾಹ್ಮಣರೂ ಇರುವರೇ? ಹತ್ತು ರೂಪಾಯಿಗಳನ್ನು ನೀರಿಗೆ ಹಾಕಿದಿಯಲ್ಲ!”

ರಘುವಿಗೆ (ಆಗ ಕೈಯ್ಯಲ್ಲಿ ಉಂಗುರವಿರಲಿಲ್ಲ.) ಮೈ ಝುಮ್ಮೆಂದಿತು.

ರಘುವಿನ ೧೯೩೩ನೇ ಇಸವಿಯ ಡೈರಿಯನ್ನು ತೆಗೆದು, ದಶಂಬರ ತಿಂಗಳ ಪುಟವೊಂದರಲ್ಲಿ ನೋಡಿರಿ- “ಮೈ ಝುಮ್ಮಾಗುವ ಸುಳ್ಳಿಗೆ ಕೊಟ್ಟ ಹಣ- ಹತ್ತು ರೂಪಾಯಿ” ಎಂದು ಬರೆದಿದೆ.

ಈಗ ವರ್ಷವೇ ಕಳೆದರೂ, ಆ ತಾಯಿತವಿಲ್ಲದೆ ಅವನ ಮೈ ಆಗಾಗ ಇದನ್ನು ನೆನೆದಾಗಲೆಲ್ಲಾ ಝುಮ್ಮೆನ್ನುತ್ತಿದೆ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...