Home / ಲೇಖನ / ಇತರೆ / ಆಧುನಿಕ ಅಜವಿಲಾಪ

ಆಧುನಿಕ ಅಜವಿಲಾಪ

ಹೌದ್ರೆಪಾ; ಜನರಿಗೆ ಸಮಾಧಾನ ಹೇಳುವದು ಸಸಾರ ಇರತದ. ಇದೇ ಪ್ರಸಂಗ ನಿಮ್ಮ ಮೇಲೆ ಬಂದಿದ್ದರ ನಿಮ್ಮ ಬಾಯಿಗೆ ಇಂಥ ಬೋಧಾಮೃತದ ಶೆಲಿ ಬೀಳ್ತಿದ್ದಲ್ಲ. ಅಂತ “ಈ ಜಗತ್ತಿನಲ್ಲಿ ಯಾರೂ ಚಿರಂಜೀವಿಯಲ್ಲ. ಎಲ್ಲರಿಗೂ ಇಂದಿಲ್ಲ ನಾಳೆ ಸಾವಿದ್ದದ್ದೇ. ಇಂದು ನಿಮ್ಮ ಹೆಂಡತಿ ತೀರ ಕೊಂಡ್ಲು. ನಾಳೇ ನೀವು ಹೋಗುವವರು ವಿನಾಕಾರಣ ದುಃಖ ಮಾಡಿ ಉಪಯೋಗವೇನು?”

ವಾವಾ ಹೀಗೆ ಸಮಾಧಾನ ಹೇಳಲಿಕ್ಕೆ ನಮಗೂ ಬರತಿತ್ತು. ನಿಮ್ಮ ಮ್ಯಾಲೆ ಈ ಪ್ರಸಂಗ ಬಂದಿದ್ರ ಆ ಬೋಧದಿಂದ ನಿಮ್ಮ ಸಮಾಧಾನ ಆಗತಿತ್ತೇನು? ಇದೇ ನನ್ನ ಪ್ರಶ್ನೆ.

ಲಗ್ನ ಆದಮ್ಯಾಲೆ ಎಂಟು ಹತ್ತು ವರ್ಷಗಳಲ್ಲಿಯೇ ಆಕಿ ತೀರಿಕೂಂಡಿದ್ದರೆ ಇಷ್ಟು ಕೆಟ್ಟು ಅನಿಸ್ತಿದ್ದಿಲ್ಲ. ಈಗ ಲಗ್ನ ಆಗಿ ನಲವತ್ತು ವರ್‍ಷಾಯ್ತು. ಒಂದು ರೀತಿಯಿಂದ ಆಕಿ ಚಟ ಬಿದ್ಹಾಂಗೇ ಆಗಿತ್ತು. ಮೊನ್ನೆ ಮೊನ್ನೆ ಹತ್ತಿದ ನಾಸೀ ಪುಡೀ ಚೀಟಿ ಬಿಟ್ಬೇನಂದರ ಬಿಡವಲ್ತು. ಇದು ನಲವತ್ತು ವರ್ಷದ ಚಟ, ಬಿಡಬೇಕು ಹ್ಯಾಂಗ, ನನಗಂತೂ ಬೆಳಿಗ್ಗೆದ್ದ ಕೂಡಲೆ ಮಾರೀಮ್ಯಾಲ ಕೈಯಾಡಿಸಬೇಕು ಮತ್ತು ಆ ಕೈಗೆ ಮೂಗುಹತ್ತಬಾರದು ಹೀಗೆ ಸ್ಥಿತಿ ಯಾಗೇದ. ಇನ್ನು ಅವಳ ಜಾಗಾ ತುಂಬೂ ಬಗೀ ಹ್ಯಾಂಗ, ಏನೀ ಇರ್‍ಲಿ ಈಗ ಸಿಟ್ಟಿಗೆದ್ದರ ಬೈಬೇಕು ಯಾರ್‍ನ ಇದರದು ಸಹಿತ ಪಂಚೇತಿ ಬಂದದ.

ಅಡಗೀ ವಿಚಾರ ಮಾಡಿದ್ರ ನೋಡ್ರಿ ಖಾರ, ಹುಳಿ, ಉಪ್ಪು ಪದಾರ್ಥ ಹ್ಯಾಂಗಾದ್ಹಂಗ ನುಂಗಬೇಕು ಸುಮ್ಮನೆ. ಸ್ವಲ್ಪ ಇಳೀಸ್ವರದಲ್ಲಿ ತಪ್ಪು ತಗೀಲಿಕ್ಕೆ ಹೋದರ ಅಡಿಗಿಯವಳು ಸಿಟ್ಟಿಗೆದ್ದು ದುಮು ದುಮು ಉರಿಯಹತ್ತುವಳು. ಮತ್ತ ಅಡಿಗೀಯವಳ್ನ ತಗದು ಯಾವನಾದರೂ ಗಂಡಾಳು ಅಡಿಗೆಯವನ್ನ ಇಡಬೇಕಾದ್ರ ಅಡಿಗೀ ಮನೀ ಒಳಗ ಕಾಲಿಡಬೇಕಾದ್ರ ಮನಸ್ಸು ಹಿಂಜರಿತದ. ಒಲೀ ಹತ್ರ ಸುಟ್ಟ ಬೀಡಿಯರೇ ಕಾಣಸ್ತದ. ಅಥವಾ ಮುಂದು ಬಗ್ಗಿ ಉರಿಯುವ ಒಲಿಯೊಳಗ ತಂಬಾಕದ ಜೀಕಳಿ ಹೊಡೆಯುವ ಬಲ್ಲವಾಚಾರ್‍ಯರೇ ಕಾಣಸ್ತಾರ. ಅವಗ ಸಿಟ್ಟು ಮಾಡ್ತೀನಽ ನನಗಿಂತ ಮೊದಲೇ ಅವನು ನೋಟೀಸ ಕೊಟ್ಟು ಸ್ವತಂತ್ರ ಆಗತಾನ. ಆದರ ಇವಳ ವಿಷಯದಲ್ಲಿ ನೋಟೀಸಿನ ಅಂಜಿಕೆ ಯಾವಾಗಲೂ ಇದ್ದಿದ್ದಿಲ್ಲ ಎಷ್ಟೇ ಸಿಟ್ಟು ಮಾಡಿ ಕಾಲು ಅಪ್ಪಳಿಸುತ್ತಾ ನಾವು ಹೊರಬಿದ್ರೂ ನನ್ನ ಬದಲಿ ಮನೆಯಲ್ಲಿಯ ಹುಡುಗರ್‍ನ ಮಾತ್ರ ನಾಲ್ಕು ಪೆಟ್ಟು ಬಡಕೋತಿದ್ಲು. ಮತ್ತೆ ನಾನು ಸಾಯಂಕಾಲ ತಿರುಗಿ ಬರುವ ಕಾಲಕ್ಕೆ ನನಗೆ ಸೇರುವ ಖಾರಸಜ್ಗಿ ಮಾಡಿಟ್ಟಿರತಿದ್ಲು. ಹೇಳಿದರ ಈಗ ಸಹ ಯಾರಾದರೂ ಖಾರ ಸಜ್ಜಿಗಿ ಮಾಡ್ಯಾರು ಆದರೆ ಹೊಟ್ಟೀಯೊಳಗಿನ ಎಲ್ಲಾ ಸಿಟ್ಟ ನುಂಗಿ ನಗೆಮಾರಿಯಿಂದ ಸಜ್ಜಿಗೀ ತಿನ್ನಲಿಕ್ಕೆ ಕರೆಯುವರ್‍ಯಾರು?

ಖರೇ ಹೇಳ್ತಿನಿ ನಗಬ್ಯಾಡ್ರಿ ಕದಾಚಿತ್‌ ನಿನುಗೆ ಖೊಟ್ಟಿ ಅನಿಸೀತು? ಆದರ ನಿಜವಾಗಿ ಇಕೀಯಿಂದ ನನ್ನ ತಾಯಿಯದು ಸಹ ವಿಸ್ಮರಣೆಯಾಗಿತ್ತು. ನಾನು ಮನೆಯೊಳಗೆ ಇದ್ದೇನೆಂದರೆ ಕೇವಲ ಕಾಲೇಜದೂಳಗಿನ ಒಬ್ಬ ಚೈನೀಬಾಜೀ ವಿದ್ಯಾರ್ಥಿಯಂತೆಯೇ ಇದ್ದೆ. ಸಂತಿ ಇಲ್ಲ ಪ್ಯಾಟಿ ಇಲ್ಲ. ಏನ್‌ ತರೂದಿಲ್ಲ ಬರೂದಿಲ್ಲ. ಎಲ್ಲಾ ವ್ಯವಸ್ಥೆ ಆಯಾ ವ್ಯಾಳ್ಯಾಕ್ಕ ಬರೋ ಬರಿ ಆಗತ್ತಿತ್ತು. ನನಗೇನೂ ನೋಡಬೇಕಾಗ್ತಿದ್ದಿಲ್ಲ. ಈಗ ಪರಿಸ್ಥಿತಿ ಅದರ ಉಪರಾಟಿಯಾಗೇದ. ಬೆಳಿಗ್ಗೆದ್ದು ನೀರು ಕಾಸಲಿಕೆ ಹಂಡೇದ ಒಲಿಗೆ ಉರಿ ಹಚ್ಚುವದರಿಂದ ಹಾಲಿಗೆ ಹೆಪ್ಪು ಹಾಕ್ಯಾರೋ ಇಲ್ಲೋ ಈ ವರಗೆ ಎಲ್ಲ ಕೆಲಸಗಳನ್ನು ನಾನೇ ಮಾಡಬೇಕು. ಅಥವಾ ಆಗ್ಯಾವೋ ಇಲ್ಲೊ ನೋಡಬೇಕು. ಇದಕ್ಕೂ ಹೆಚ್ಚು ತ್ರಾಸಿನ ಸಂಸಾರ ಹುಡುಕಿದರ ಸಿಗಲಿಕ್ಕಿಲ್ಲ.

ಮನೆಯೊಳಗಿನ ಆಳುಗಳು ಸುದ್ದ ಇದೇ ಹಾಡು. ಇಕೀ ಇರುವವರೆಗೆ ಭಾಂಡೀ ತಿಕ್ಕುವ ಹೆಣ್ಮಗಳಿಂದ ಅಗಸರವರೆಗೆ ಎಲ್ಲರ ಕೆಲಸಗಳು ಚನ್ನಾಗಿ ಆಗ್ತಿದ್ದವು. ಈಗ ಈ ಮಕ್ಕಳಿಗೆ ಏನಾಗೇದೋ ಯಾರಿಗೊತ್ತು? ಭಾಂಡೇ ತಿಕ್ಕಾಕಿರೆ ಬಂದ್ರ ಕೈಕೆಳಗಿನ ಆಳು ಬರುವದಿಲ್ಲ. ಇವರಿಬ್ಬರೂ ಬಂದ್ರ ಎಮ್ಮೀ ಕಾಯುವವ ಬರುವದಿಲ್ಲ, ಇವರ ಮರಜೀ ಹಿಡಿದು ಜೀವ ಓಲ್ಯಾಗೇದ. ನಮ್ಮ ಸಂಸಾರ ಮೋಟರದ ಘಾಲಿ ದರುಸ್ತ ಅದ ಎಂದು ಹೇಳಲಿಕ್ಕೆ ಬರೂದಿಲ್ಲ. ಕನಿಷ್ಟಪಕ್ಷಕ್ಕ ಒಂದು ಘಾಲಿಯಾದರೂ ಘಾಳಿ ಹೋಗಿರತದ. ಈ ಬೇಜಾರಕ್ಕ ಬೇಸತ್ತು ಒಮ್ಮೊಮ್ಮೆ ಅತ್ಯಂತ ಭಯಂಕರ ವಿಚಾರಗಳು ಮನಸಿನಲ್ಲಿ ಬರುವವು. ಎಲ್ಲ್ಯಾದರೂ ಒಂದು ಧೊಡ್ಡ ಕಡವಂಡೀ ಮ್ಯಾಲಿಂದ ಹಾರಕೊಂಡು ಜೀವ ಕೊಡಬೇಕು ಅಥವಾ ಹಿಂದು ಮುಂದೆ ನೋಡದೆ ಭರದಿಂದ ಎರಡನೇ ಲಗ್ನಾ ಮಾಡಿಕೊಂಡು ಬಿಡಬೇಕು. ಹೀಗನಸ್ತದ- ಆದರ ಈ ವಯಸ್ಸಿನಲ್ಲಿ ಲಗ್ನಾ ಮಾಡಿಕೂಂಡರ ಒಂದು ಪಂಚೇತಿ. ಬಿಟ್ಟರ ಪಂಚೇತಿ. ಈ ಪೇಚಿನಲ್ಲಿ ಬಿದ್ದಿರುವೆನು. ಈ ಹೊಸ ಕುಟುಂಬದ ಚಟ ಬೀಳುವರ ಒಳಗಾಗಿ ಹೇಮಗರ್‍ಭ ಮಾತ್ರೆ ಅಗತ್ಯ ಬಿದ್ದಿರುತ್ತದೆ ಏನು ಮಾಡ್ಲೀರಿ! ಈಗ! ನನ್ನ ಅರ್‍ಧಾಂಗಿ ತೀರಿಕೊಂಡಿಲ್ಲ ಆದರೆ ಈಗ ನನಗೆ ಅರ್‍ಧಾಂಗವಾಯುವೇ ಆಗೇದ. ಇಂಥ ಸಮಯದಲ್ಲಿ ಅಳದೇ ಏನು? ಶಂಖವಾದ್ಯ ಮಾಡಲ್ಯಾ? ನೀವೇ ಹೇಳ್ರಿ.”
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...