ದೀಪಿಕಾ – ಸ್ವಗತ

ಯಾಕೆ ಈ ಆನಂದ ಕಾಡುತ್ತಾನೋ ಹೀಗೆ
ಆಡುತ್ತಾನೆ ಆಡುತ್ತಾನೆ ಆಡುತ್ತಾನೆ ದೇವರೇ
ನಡುಬೀದಿಯಲ್ಲಿ ಬಟ್ಟೆ ಎಳೆದ ಹಾಗೆ ಥಟ್ಟನೆ
ಕಿಬ್ಬೊಟ್ಟೆ ಮೇಲೆ ಕೈಯಿಟ್ಟಂತೆ ಫಕ್ಕನೆ!
ಒಳಗೆ ಕತ್ತಲೆಯಲ್ಲಿ ಹುಗಿದ ಗುಟ್ಟಿಗೆ ಕಡ್ಡಿ ಗೀರಿ
ಭಾರಿ ಪಟಾಕಿ ಸಿಡಿಸಿ ಬೆಚ್ಚಿಸುತ್ತಾನೆ
ರೇಗಿದರು ಹೊರಗೆ ಕತ್ತಲು ಮುಚ್ಚಿದೊಳಗೆ
ಸಣ್ಣ ದೀಪಾವಳಿ
ಮುಖದ ಮೇಲೆಲ್ಲ ಬೆವರಿನ ಕಡಲೆ ಹನಿಮೂಡಿ
ನೆನೆಸಿಕೊಂಡರೆ ಈಗ ತಂಗಾಳಿ.

ಆಡುತ್ತ ಆಡುತ್ತ ಬೇಲಿದಾಟಿದ ಮಾತ
ನಾಲಿಗೆಯ ಮೇಲೆ ಎದೆ ಹಿಂಡಿ ಹರವುತ್ತಾನೆ,
ಹಾಡುತ್ತ ಹಾಡುತ್ತ ಹಂಸಧ್ವನಿಯ ಬಿಟ್ಟು
ಕಾಮವರ್ಧಿನಿ ಕಡೆಗೆ ಕೊರಳಾಗುತ್ತಾನೆ,
ಕಣ್ಣಲ್ಲಿ ಬ್ಲೇಡಿಟ್ಟು ಕಳ್ಳವೇಷಗಳನ್ನ
ಗೀರಿಕೊಯ್ಯುತ್ತಾನೆ ಮಾತಿನಲ್ಲೆ,
ಕತ್ತಿನ ಕಣ್ಣಿಯ ಕಿತ್ತು ಹುಟ್ಟಿದ ಹೊತ್ತಿಗೆ ಮುಟ್ಟಿಸಿ
ಪೂರ ತುಂಬಿದ ಕೆರೆಯ ತೂಬು ತೆರೆಯುತ್ತಾನೆ.

ಹತ್ತಿರ ಬಂದಾಗ ಇವನು ಕಣ್ಣಲ್ಲಿ ಕತ್ತಿ ಹಿರಿದು
ಎದೆಗೆ ಎತ್ತಿಬಡಿದು ದೂರ ಓಡಿದ್ದೇನೆ,
ತುಟಿಯ ಕೊಂಕಿನಲ್ಲಿ ಥೂಛೀಗಳನ್ನು ಬರೆದು
ಬೆಕ್ಕಿನುಗುರಾಗಿ ಕತ್ತೆ ಪರಚಿದ್ದೇನೆ,
ಉರಿಮಾತ ಕಾರಿ ಬೆಂಕಿ ಬಾಣಲೆಯಲ್ಲಿ
ಕರಿಕಾಗುವಷ್ಟು ಬೇಯಿಸಿದ್ದೇನೆ;

ಆದರೂ ಈ ಭಂಡ
ಎಚ್ಚರಿದ್ದಾಗೆಲ್ಲ ಕೀಚಕನಾಗಿ ಕಂಡು
ರೆಪ್ಪೆ ಮುಚ್ಚಿದ ಗಳಿಗೆ ಕೊಳಲು ಹಿಡಿದು ಬಂದು
ಬಿಗಿಯಾಗಿ ಮುಚ್ಚಿದ್ದ ಎದೆಯೊಳಗೆ ಬಾಗಿ-
ಲುಗಳ ತೆರೆದಿದ್ದಾನೆ.
‘ಅಂತರಾಳಗಳಲ್ಲಿ ನಿಂತ ನೀರುಗಳಲ್ಲಿ
ಕಂತಿ ಕೈಬಡಿವ ಬೀಜಾಣುವ’ನ್ನ
ಹಿಡಿದೆತ್ತಿ ದಡದಲ್ಲಿ ನೀರು ಗೊಬ್ಬರ ಉಣಿಸಿ
ಕಾಮಕಸ್ತೂರಿವನ ಬೆಳಯಿಸಿದ್ದಾನೆ.
*****
ದೀಪಿಕಾ ಕವನಗುಚ್ಛ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಂತೃಪ್ತಿ
Next post ಹಾವಿನ ಹಾಡು

ಸಣ್ಣ ಕತೆ

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…