ದೀಪಿಕಾ – ಸ್ವಗತ

ಯಾಕೆ ಈ ಆನಂದ ಕಾಡುತ್ತಾನೋ ಹೀಗೆ
ಆಡುತ್ತಾನೆ ಆಡುತ್ತಾನೆ ಆಡುತ್ತಾನೆ ದೇವರೇ
ನಡುಬೀದಿಯಲ್ಲಿ ಬಟ್ಟೆ ಎಳೆದ ಹಾಗೆ ಥಟ್ಟನೆ
ಕಿಬ್ಬೊಟ್ಟೆ ಮೇಲೆ ಕೈಯಿಟ್ಟಂತೆ ಫಕ್ಕನೆ!
ಒಳಗೆ ಕತ್ತಲೆಯಲ್ಲಿ ಹುಗಿದ ಗುಟ್ಟಿಗೆ ಕಡ್ಡಿ ಗೀರಿ
ಭಾರಿ ಪಟಾಕಿ ಸಿಡಿಸಿ ಬೆಚ್ಚಿಸುತ್ತಾನೆ
ರೇಗಿದರು ಹೊರಗೆ ಕತ್ತಲು ಮುಚ್ಚಿದೊಳಗೆ
ಸಣ್ಣ ದೀಪಾವಳಿ
ಮುಖದ ಮೇಲೆಲ್ಲ ಬೆವರಿನ ಕಡಲೆ ಹನಿಮೂಡಿ
ನೆನೆಸಿಕೊಂಡರೆ ಈಗ ತಂಗಾಳಿ.

ಆಡುತ್ತ ಆಡುತ್ತ ಬೇಲಿದಾಟಿದ ಮಾತ
ನಾಲಿಗೆಯ ಮೇಲೆ ಎದೆ ಹಿಂಡಿ ಹರವುತ್ತಾನೆ,
ಹಾಡುತ್ತ ಹಾಡುತ್ತ ಹಂಸಧ್ವನಿಯ ಬಿಟ್ಟು
ಕಾಮವರ್ಧಿನಿ ಕಡೆಗೆ ಕೊರಳಾಗುತ್ತಾನೆ,
ಕಣ್ಣಲ್ಲಿ ಬ್ಲೇಡಿಟ್ಟು ಕಳ್ಳವೇಷಗಳನ್ನ
ಗೀರಿಕೊಯ್ಯುತ್ತಾನೆ ಮಾತಿನಲ್ಲೆ,
ಕತ್ತಿನ ಕಣ್ಣಿಯ ಕಿತ್ತು ಹುಟ್ಟಿದ ಹೊತ್ತಿಗೆ ಮುಟ್ಟಿಸಿ
ಪೂರ ತುಂಬಿದ ಕೆರೆಯ ತೂಬು ತೆರೆಯುತ್ತಾನೆ.

ಹತ್ತಿರ ಬಂದಾಗ ಇವನು ಕಣ್ಣಲ್ಲಿ ಕತ್ತಿ ಹಿರಿದು
ಎದೆಗೆ ಎತ್ತಿಬಡಿದು ದೂರ ಓಡಿದ್ದೇನೆ,
ತುಟಿಯ ಕೊಂಕಿನಲ್ಲಿ ಥೂಛೀಗಳನ್ನು ಬರೆದು
ಬೆಕ್ಕಿನುಗುರಾಗಿ ಕತ್ತೆ ಪರಚಿದ್ದೇನೆ,
ಉರಿಮಾತ ಕಾರಿ ಬೆಂಕಿ ಬಾಣಲೆಯಲ್ಲಿ
ಕರಿಕಾಗುವಷ್ಟು ಬೇಯಿಸಿದ್ದೇನೆ;

ಆದರೂ ಈ ಭಂಡ
ಎಚ್ಚರಿದ್ದಾಗೆಲ್ಲ ಕೀಚಕನಾಗಿ ಕಂಡು
ರೆಪ್ಪೆ ಮುಚ್ಚಿದ ಗಳಿಗೆ ಕೊಳಲು ಹಿಡಿದು ಬಂದು
ಬಿಗಿಯಾಗಿ ಮುಚ್ಚಿದ್ದ ಎದೆಯೊಳಗೆ ಬಾಗಿ-
ಲುಗಳ ತೆರೆದಿದ್ದಾನೆ.
‘ಅಂತರಾಳಗಳಲ್ಲಿ ನಿಂತ ನೀರುಗಳಲ್ಲಿ
ಕಂತಿ ಕೈಬಡಿವ ಬೀಜಾಣುವ’ನ್ನ
ಹಿಡಿದೆತ್ತಿ ದಡದಲ್ಲಿ ನೀರು ಗೊಬ್ಬರ ಉಣಿಸಿ
ಕಾಮಕಸ್ತೂರಿವನ ಬೆಳಯಿಸಿದ್ದಾನೆ.
*****
ದೀಪಿಕಾ ಕವನಗುಚ್ಛ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಂತೃಪ್ತಿ
Next post ಹಾವಿನ ಹಾಡು

ಸಣ್ಣ ಕತೆ

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…