Home / ಕವನ / ಕವಿತೆ / ಧಿಕ್ಕರಿಸುತ್ತೇನೆ

ಧಿಕ್ಕರಿಸುತ್ತೇನೆ

ನಿನ್ನ ಸಿಟ್ಟು ಸೆಡವುಗಳನ್ನು
ದಿಕ್ಕರಿಸುತ್ತೇನೆ.

ನಿನ್ನ ಪಂಜಿನಂತಹ ಕೈಗಳು
ಸುಕೋಮಲ ಹೂಗಳನ್ನು
ಹೊಸಕಿ ಹಾಕುವುದನ್ನೂ
ನಿನ್ನ ಕೆಂಡದಂತಹ ಕಣ್ಣುಗಳು
ಕೋಗಿಲೆಯ ಹಾಡುಗಳನ್ನು
ನಿಷ್ಕರುಣೆಯಿಂದ ಸುಡುವುದನ್ನೂ
ಧಿಕ್ಕರಿಸುತ್ತೇನೆ.

ನೀನು ಮೈಯೆಲ್ಲಾ
ಕಿಡಿಯಾಗಿರುವ ತನಕ
ಈ ಚೈತನ್ಯಮಯವಾದ
ಕಾಡನ್ನು ಪ್ರವೇಶಿಸಲು ನಿಷೇಧವಿದೆ.

ನಿನ್ನ ಕ್ರೌರ್ಯ, ಆಕ್ರೋಶಗಳನ್ನು
ಧಿಕ್ಕರಿಸುತ್ತೇನೆ.

ನಿನ್ನ ಸಾವಿರ ಸಾವಿರ
ನದಿಗಳಲ್ಲಿ ಬಂದೂಕಿನ
ಅಲೆಗಳು ತೇಲುವುದನ್ನೂ
ಪುಟಿಯುವ ಮೀನುಗಳ ಬದಲು
ಗುಂಡುಗಳು ಹಾರಾಡುವುದನ್ನೂ
ಓಕುಳಿಯ ಬದಲು
ನೆತ್ತರು ಹರಿಯುವುದನ್ನೂ
ಧಿಕ್ಕರಿಸುತ್ತೇನೆ.

ನೀನು ಮೈಯೆಲ್ಲಾ
ಬಂದೂಕಾಗಿರುವ ತನಕ
ಈ ಪ್ರೇಮಮಯ
ಸಮುದ್ರವನ್ನು ಪ್ರವೇಶಿಸಲು
ನಿಷೇಧವಿದೆ

ನಿನ್ನನ್ನು ಒಪ್ಪಿಕೊಳ್ಳುವುದೆಂದರೆ
ಈ ನೆಲದ ಒಡಲಿಂದ
ಕೇವಲ ಜ್ವಾಲಾಮುಖಿಗಳನ್ನೇ
ಅಗೆಯಬೇಕು.
ತಂಪಾದ ಕಾಡುಗಳನ್ನೂ
ತಣ್ಣನೆಯ ನದಿಗಳನ್ನೂ
ನಿರಾಕರಿಸಬೇಕು.

ನಿನ್ನನ್ನು ಒಪ್ಪಿಕೊಳ್ಳಬೇಕೆಂದರೆ
ಆ ಆಕಾಶದ ಒಡಲಲ್ಲಿ
ಕೇವಲ ಸುಡುವ
ಸೂರ್ಯರನ್ನೆ ಎಣಿಸಬೇಕು
ತಣ್ಣನೆಯ ಮೋಡಗಳನ್ನೂ
ತಂಪಾದ ಚಂದ್ರರನ್ನೂ
ನಿರಾಕರಿಸಬೇಕು.

ಜ್ವಾಲಾಮುಖಿಯೇ ಆಗಲಿ
ಸೂರ್ಯನೇ ಆಗಲಿ
ಸಿಟ್ಟಿನಿಂದ, ಆಕ್ರೋಶದಿಂದ
ಯಾರನ್ನೂ ಸುಟ್ಟ ದಾಖಲೆಗಳಿಲ್ಲ.

ನೀನು ಭೂಮಿಯ-ಆಕಾಶದ
ನಿಯಮಗಳನ್ನು ಮೀರಲಾರೆ.
*****

Tagged:

Leave a Reply

Your email address will not be published. Required fields are marked *

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...