Home / ಕವನ / ಕವಿತೆ / ವಸ್ತು ಪ್ರದರ್ಶನ

ವಸ್ತು ಪ್ರದರ್ಶನ

ವಸ್ತು ಪ್ರದರ್ಶನದಲ್ಲಿ
ಮುಗಿಯುವ ಹಗಲಿನ ತುದಿಗೆ
ಬಣ್ಣದ ಬೆಳಕಿನ ಹೊಳೆ.
ಸಂಜೆ ಹಾಯಾದ ಹೊತ್ತಲ್ಲೂ
ಇಗೊ ಬಂದೆ ಎಂದು
ಬೆದರಿಕೆ ಹಾಕುವ ಮಳೆ.
ಹೊಳಚುವ ಮೀನಿನ ಹಿಂಡು
ಪ್ರಮೀಳೆಯರ ಹಿಂಡು.
ಅವರನ್ನು ಕಣ್ಣಲ್ಲೇ ಉಣ್ಣುತ್ತ
ಬೀದಿಕಾಮಣ್ಣರ ಗಸ್ತು
ಕಾಯುವ ಪೋಲೀಸರೂ ಸುಸ್ತು
ಹೊಳೆಯುತ್ತಿದೆ ಸುತ್ತ
ಥರಾವರಿ ಸ್ಟಾಲುಗಳಲ್ಲಿ
ಚಿಲಿಪಿಲಿ ಬಣ್ಣಗಳಲ್ಲಿ
ನಾನಾ ಥರ ವಸ್ತು

ಬಂದೇ ಬಿಟ್ಟಿತು ನೋಡಿ
ಬೆದರಿಕೆ ಹಾಕಿದ ಮಳೆ-
ಆಕಾಶ ಅಕ್ಷತೆ ಎರಚಿದಂತೆ
ಸಣ್ಣಗೆ ಪನ್ನೀರ ಹನಿಸಿದಂತೆ
ಮಂಜಿನ ಬೆರಳನ್ನು ಯಾರೋ
ಬೆನ್ನಲ್ಲಿ ಆಡಿಸಿದಂತೆ.
ಬಿಡಿಸಿದಂತೆ ಬಾನಲ್ಲಿ
ಬಣ್ಣದ ರಂಗೋಲಿ
ಬಗೆ ಬಗೆ ನಮೂನೆ ಮುಗಿಲು
ಸಂಜೆ ಬೆಳಕಲ್ಲಿ ಮಿಂಚಿದೆ
ಕನಕಾಂಬರಿ ಹಗಲು.

ಹವೆ ತುಂಬ ಹರಡುತ್ತಿದೆ
ಬೆಚ್ಚನೆ ಹಾಯಾದ ಪರಿಮಳ
ಬಿರಿದಿವೆ ಮೂಗಿನ ಹೊಳ್ಳ
ಮುದುಕರ ನಾಲಿಗೆಯಲ್ಲೂ ತಳಮಳ
ಗಾಲಿಗಾಡಿಗಳಲ್ಲಿ
ಟೆಂಟಿನ ಅಂಗಡಿಗಳಲ್ಲಿ
ಕರಿದ ತಿಂಡಿಗಳ ಭಾಂಡ,
ಅಲ್ಲೇ
ಪಳಕ್ಕನೆ ಜಿಗಿಯುತ್ತಿವೆ
ಬಾಣಲಿಯಿಂದ ತಟ್ಟೆಗೆ
ಬಿಸಿ ಬಿಸಿ ಬೊಂಬಾಯ್ ಬೋಂಡ!
ಕಾಫಿ ಟೀ ಕೋಲಾ
ಐಸ್-ಕ್ರೀಮ್ ಪಾಪ್‌ಕಾರನ್ ಜಾಲ,
ಜಗ್ಗಿ ಎಳೆಯುತ್ತಿವೆ ಮಕ್ಕಳು
ಅಮ್ಮಂದಿರ ಸೆರಗನ್ನು
ಗುರಿಸಾಧಿಸಿ ಕಡೆಗೂ
ಅಂಗಡಿಯವನ ಗಾಳ!

ವಸ್ತು ಪ್ರದರ್ಶನ ನೋಡುತ್ತ
ವಸ್ತು ಪ್ರದರ್ಶನ ಮಾಡುವ ಹುಚ್ಚು
ಬಣ್ಣದ ವಸ್ತ್ರ ಒಡವೆ
ತಿದ್ದಿದ ತುಟಿ ಕಣ್ಣು,
ಪ್ರಾಯದ ದಡ ಕುಸಿದಿದ್ದರೂ
ಮೈಮರೆಸುವ ಹೆಣ್ಣು
ಏರು ಪೇರು, ಮಿದುಬದಿ
ಕಿಬ್ಬೊಟ್ಟೆಯ ಜಾರು ;
ಚಲಿಸಿದೆ ಬಣ್ಣದ ಬಾವುಟ
ಬೆಡಗಿನ ತೇರು.

ಮುಗಿಸಿ ಬರುವಾಗ ಪ್ರದರ್ಶನ
ಏನೋ ತಳಮಳ,
ಮುಗಿದೇ ಹೋಯಿತೆ ಸಂಭ್ರಮ ?
ಏನೋ ಕಳವಳ.
ಒದ್ದುಡುತ್ತಿದೆ ಸುಮ್ಮನೆ
ಯಾಕೋ ಚಡಪಡಿಸಿ
ನೀರಾಚೆಗೆ ಎಸೆದ ಮೀನು ಮನಸ್ಸು ವಿಲವಿಲ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...