ನಂತರ ಬಂದೆವು ನಾವು ಹೈದರಾಬಾದಿಗೆ
ಬರುವಾಗಲೇ ಮಧ್ಯಾಹ್ನ ಸುಡುಬಿಸಿಲು
ರಾತ್ರಿ ಧಗೆ ಕಾರಲೆಂದು ಹಗಲೆಲ್ಲ
ಕಾದು ಕೆಂಪಾಗಿರುವ ಕಲ್ಲು ಬಂಡೆಗಳು
ಅವುಗಳ ಕೆಳಗೆ ಮಾತ್ರ ತುಸು ನೆಳಲು
ಕ್ಲಾಕ್ ಟವರಿನ ಕಾಗೆ
ನುಡಿಯಿತೊಂದು ಒಗಟು
ನೀರಿಲ್ಲದ ಸಮುದ್ರ
ಹಾಯಿಯಿಲ್ಲದ ದೋಣಿ
ಇಲ್ಲಿ ಹೊರಟವರು
ಎಲ್ಲಿ ಸೇರುವರು?
ಸೈಕಲಿನ ವ್ಯಕ್ತಿ
ಟಣಟಣನೆ ಬಡಿದ ಗಂಟೆ
ಕನಸು ಕಾಣುವುದಕ್ಕೆ ನಿಮಗೆ
ರಾತ್ರಿಯಿಲ್ಲವೆ ಎ೦ದು ಜರೆದ-
ರಾತ್ರಿ ನಾವು ನಿದ್ರಿಸಿರಲಿಲ್ಲ
ಸಾಲಾರ್ಜಂಗ್ ಮ್ಯೂಸಿಯಮಿನಿಂದ ಕೇಳಿಸುವ ಕೂಗು
ಯಕ್ಷಿಯದೊ, ದೆವ್ವದ್ದೊ, ಒಂಟಿಯಾಗಿರುವ
ಮರದ ಪ್ರತಿಮೆಯ ಭಯವೊ-ಇಲ್ಲ
ಕೇಳುವವರ ಮನಸ್ಸಿನೊಳಗಿನ ಲಯವೊ
ನಾವು ಇದೊಂದನ್ನೂ ನಂಬುವುದಿಲ್ಲ
ನಮ್ಮ ನಮ್ಮ ಕೆಲಸಗಳನ್ನು ಮಾಡುತ್ತೇವೆ
ಏನು ಆಗದವರಂತಿದ್ದೇವೆ
ಕ್ಲಾಕ್ಟವರಿನ ಕಾಗೆಯನ್ನು ಕೂಡ
ಆಮೇಲೆ ಯಾರೂ ಕಂಡಿಲ್ಲ
*****
ಕಾಸರಗೋಡಿನ ಕಾರಡ್ಕ ಎಂಬಲ್ಲಿ ೧೯೪೦ ರಲ್ಲಿ ಜನನ. ಕಾಸರಗೋಡು, ತಿರುವನಂತಪುರ, ಹೈದರಾಬಾದುಗಳಲ್ಲಿ ವಿದ್ಯಾಭ್ಯಾಸ. ಇಂಗ್ಲೀಷ್ ಸಾಹಿತ್ಯದಲ್ಲಿ ಎಂ. ಎ.; ಭಾಷಾಶಾಸ್ತ್ರದಲ್ಲಿ ಪಿಎಚ್.ಡಿ. ಕೇರಳದ ಹಲವೆಡೆ ಇಂಗ್ಲೀಷ್ ಅಧ್ಯಾಪಕರಾಗಿ ವೃತ್ತಿಜೀವನ ಆರಂಭ; ಆನಂತರ ಹೈದರಾಬಾದಿನ ಉನ್ನತ ಶಿಕ್ಷಣ ಸಂಸ್ಥೆ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲಿಷ್ ಎಂಡ್ ಫಾರಿನ್ ಲಾಂಗ್ವೇಜಸ್ನಲ್ಲಿ ಪ್ರಾಧ್ಯಾಪಕ.೨೦೦೨ರಲ್ಲಿ ನಿವೃತ್ತಿ.ಅಮೇಲೆ ಅಮೆರಿಕ, ಯೆಮೆನ್ ದೇಶಗಳಲ್ಲಿ ಅಧ್ಯಾಪನ. ಸದ್ಯ ಹೈದರಾಬಾದಿನಲ್ಲಿ ವಾಸ್ತವ್ಯ. ‘ಮುಖಾಮುಖಿ’ ಕವನಸಂಕಲನಕ್ಕೆ ಕೇರಳದ ಕುಮಾರನ್ ಆಶಾನ್ ಅವಾರ್ಡ್ ಮತ್ತು ಕಾಂತಾವರದ ವರ್ಧಮಾನ ಪ್ರಶಸ್ತಿ; ‘ಅವಧ’ ಕವನ ಸಂಕಲನಕ್ಕೆ ಮತ್ತು ‘ಸಮ್ಮುಖ’ ಲೇಖನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ‘ಅಕ್ಷಯ ಕಾವ್ಯ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ೨೦೧೫ರ ಸಾಲಿನ ಪ್ರಶಸ್ತಿ ಲಭಿಸಿದೆ. ಅಲ್ಲದೆ, ಪುತ್ತೂರು ಕರ್ನಾಟಕ ಸಂಘದ ನಿರಂಜನ ಪ್ರಶಸ್ತಿ, ಮತ್ತು ಶಿವಮೊಗ್ಗ ಕರ್ನಾಟಕ ಸಂಘದ ಹಾ.ಮಾ.ನಾ. ಪ್ರಶಸ್ತಿಗಳೂ ದೊರಕಿವೆ.ಕರ್ನಾಟಕ ಸಹಿತ್ಯ ಅಕಾಡೆಮಿಯ ಗೌರವ ಸಾಹಿತ್ಯ ಪ್ರಶಸ್ತಿಗೂ ಇವರು ಪಾತ್ರರಾಗಿದ್ದಾರೆ. ತಿರುಮಲೇಶ್ ಇಂಗ್ಲೀಷ್ನಲ್ಲೂ ಹಲವಾರು ಲೇಖನಗಳನ್ನು ಮತ್ತು ಪುಸ್ತಕಗಳನ್ನು ಬರೆದಿದ್ದಾರೆ.
*****
Latest posts by ತಿರುಮಲೇಶ್ ಕೆ ವಿ
(see all)