Home / ಕವನ / ಕವಿತೆ / ಅಖಿಟೋಪ

ಅಖಿಟೋಪ

ಮೆಸಪೊಟೇಮಿಯಾದ ಒಬ್ಬ ರಾಜ
ಚರಿತ್ರೆಯಲ್ಲಿ ಶಾಶ್ವತವಾಗಿ ಉಳಿಯಬೇಕೆಂದು
ಕೆತ್ತಿಸಿದ ತನ್ನ ಹೆಸರನ್ನು
ಹೆಸರು ಅಖಿಟೋಪನೆಂದು
ಹೆಬ್ಬಂಡೆಗಳ ಮೇಲೆ
ಮೃತ್ತಿಕೆಗಳ ಮೇಲೆ
ಮರದ ಕಾಂಡಗಳ ಮೇಲೆ
ಬರೆಸಿದ ಪಠ್ಯ ಪುಸ್ತಕಗಳಲ್ಲಿ
ಸೇರಿಸಿದ ಧರ್ಮಗ್ರ೦ಥಗಳಲ್ಲಿ
ಪೂಜಾರಿಗಳ ಮಂತ್ರಗಳಲ್ಲಿ
ಎಲ್ಲೆಲ್ಲು ಅಖಿಟೋಪ ಅಖಿಟೋಪ
ಎಷ್ಟೆಂದರವನ ಕೋಪ
ಕುದುರೆಗಳು ಕೆನೆಯುವುದೂ
ಕಪ್ಪೆಗಳು ವಟಗುಟ್ಟುವುದೂ
ಆದವು ಅಖಿಟೋಪ
ಅಖಿಟೋಪನೆಂದರ ಅಂದಿನ ಭಾಷೆಯಲ್ಲಿ
ಅನೇಕ ಸೂರ್ಯರ ತಾಪ-
ವೆಂದು ಅರ್ಥ

ಆದರೆ ಮೊಂಗೋಲರೆಂಬವರು
ಮಹಾ ನಿರ್ದಯರು
ಅವರು ಮಾಂಸ ಬೇಯಿಸದೆ ತಿನ್ನುತ್ತಿದ್ದರು
ಕಳ್ಳಿನ ಭಾಂಡಿ ಕುಡಿಯುತ್ತಿದ್ದರು
ಕುಡಿದು ಢರ್ರನೆ ತೇಗುತಿದ್ದರು
ದೊಡ್ಡದಾಗಿ ನಗುತಿದ್ದರು
ಅವರು ಚೀನಾ ದೇಶದಿಂದ
ಸಿಡಿಮದ್ದನ್ನು ತಂದರು
ಕುದುರೆಗಳ ಮೇಲೆ ಬಂದರು

ಸಂತೆಗೆಂದು ಹೋದ ದೋಣಿಗಳು
ಸಂಜೆಯಾದರೂ ಮರಳಲಿಲ್ಲ
ನಗರದ ಬಾಗಿಲುಗಳು
ಹೊತ್ತಿಗೆ ಮೊದಲೇ ಮುಚ್ಚಿದುವು
ದೀಪಗಳೂ ಆರಿದುವು
ಯಾವಾಗಲೂ ಹಾಡುತಿದ್ದವರು
ಯಾಕೆ ಹಾಡಲಿಲ್ಲ?
ಮತ್ತೆ ಬೆಳಗಾಯಿತು?
ವರ್ಷಗಳು ಉರುಳಿದುವೆ?
ಯಾರಾದರೂ ಸುದ್ದಿಯನು ತಂದರೆ?
ಮೆಸಪೊಟೇಮಿಯಾ!
ಹರಿವ ನೀರಿನಲಿ
ಕೆತ್ತಿರುವುದೆ ಚರಿತ್ರೆ?
ಹೇಳೀಗ ನಮ್ಮ ಮೆಚ್ಚಿನ ಅಖಿಟೋಪನೆಲ್ಲಿ?
ಎಲ್ಲಿ ಆ ಮಂತ್ರಗಳು
ಹೆಸರು ಬರೆಸಿದ ಗ್ರಂಥಗಳು
ಎಲ್ಲಿ ಕುದುರೆಗಳು ಎಲ್ಲಿ ಕಪ್ಪೆಗಳು
ಎಲ್ಲಿ ಆ ಹೆಬ್ಬಂಡೆ
ಸಿಡಿದ ನದಿ ದಂಡೆ
ಅನೇಕ ಸೂರ್ಯರ ತಾಪ
ಅಖಿಟೋಪ
ಯಾವ ಸಮುದ್ರದಲಿ ಬಿದ್ದ
ಹೇಳು ಮೆಸಪೊಟೇಮಿಯಾ
ಅಂಥ ಪತನಕ್ಕೆ
ಇಂಥ ಸಾಲುಗಳು ಸಾಕೆ?
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...