Home / ಕವನ / ಕವಿತೆ / ಅಖಿಟೋಪ

ಅಖಿಟೋಪ

ಮೆಸಪೊಟೇಮಿಯಾದ ಒಬ್ಬ ರಾಜ
ಚರಿತ್ರೆಯಲ್ಲಿ ಶಾಶ್ವತವಾಗಿ ಉಳಿಯಬೇಕೆಂದು
ಕೆತ್ತಿಸಿದ ತನ್ನ ಹೆಸರನ್ನು
ಹೆಸರು ಅಖಿಟೋಪನೆಂದು
ಹೆಬ್ಬಂಡೆಗಳ ಮೇಲೆ
ಮೃತ್ತಿಕೆಗಳ ಮೇಲೆ
ಮರದ ಕಾಂಡಗಳ ಮೇಲೆ
ಬರೆಸಿದ ಪಠ್ಯ ಪುಸ್ತಕಗಳಲ್ಲಿ
ಸೇರಿಸಿದ ಧರ್ಮಗ್ರ೦ಥಗಳಲ್ಲಿ
ಪೂಜಾರಿಗಳ ಮಂತ್ರಗಳಲ್ಲಿ
ಎಲ್ಲೆಲ್ಲು ಅಖಿಟೋಪ ಅಖಿಟೋಪ
ಎಷ್ಟೆಂದರವನ ಕೋಪ
ಕುದುರೆಗಳು ಕೆನೆಯುವುದೂ
ಕಪ್ಪೆಗಳು ವಟಗುಟ್ಟುವುದೂ
ಆದವು ಅಖಿಟೋಪ
ಅಖಿಟೋಪನೆಂದರ ಅಂದಿನ ಭಾಷೆಯಲ್ಲಿ
ಅನೇಕ ಸೂರ್ಯರ ತಾಪ-
ವೆಂದು ಅರ್ಥ

ಆದರೆ ಮೊಂಗೋಲರೆಂಬವರು
ಮಹಾ ನಿರ್ದಯರು
ಅವರು ಮಾಂಸ ಬೇಯಿಸದೆ ತಿನ್ನುತ್ತಿದ್ದರು
ಕಳ್ಳಿನ ಭಾಂಡಿ ಕುಡಿಯುತ್ತಿದ್ದರು
ಕುಡಿದು ಢರ್ರನೆ ತೇಗುತಿದ್ದರು
ದೊಡ್ಡದಾಗಿ ನಗುತಿದ್ದರು
ಅವರು ಚೀನಾ ದೇಶದಿಂದ
ಸಿಡಿಮದ್ದನ್ನು ತಂದರು
ಕುದುರೆಗಳ ಮೇಲೆ ಬಂದರು

ಸಂತೆಗೆಂದು ಹೋದ ದೋಣಿಗಳು
ಸಂಜೆಯಾದರೂ ಮರಳಲಿಲ್ಲ
ನಗರದ ಬಾಗಿಲುಗಳು
ಹೊತ್ತಿಗೆ ಮೊದಲೇ ಮುಚ್ಚಿದುವು
ದೀಪಗಳೂ ಆರಿದುವು
ಯಾವಾಗಲೂ ಹಾಡುತಿದ್ದವರು
ಯಾಕೆ ಹಾಡಲಿಲ್ಲ?
ಮತ್ತೆ ಬೆಳಗಾಯಿತು?
ವರ್ಷಗಳು ಉರುಳಿದುವೆ?
ಯಾರಾದರೂ ಸುದ್ದಿಯನು ತಂದರೆ?
ಮೆಸಪೊಟೇಮಿಯಾ!
ಹರಿವ ನೀರಿನಲಿ
ಕೆತ್ತಿರುವುದೆ ಚರಿತ್ರೆ?
ಹೇಳೀಗ ನಮ್ಮ ಮೆಚ್ಚಿನ ಅಖಿಟೋಪನೆಲ್ಲಿ?
ಎಲ್ಲಿ ಆ ಮಂತ್ರಗಳು
ಹೆಸರು ಬರೆಸಿದ ಗ್ರಂಥಗಳು
ಎಲ್ಲಿ ಕುದುರೆಗಳು ಎಲ್ಲಿ ಕಪ್ಪೆಗಳು
ಎಲ್ಲಿ ಆ ಹೆಬ್ಬಂಡೆ
ಸಿಡಿದ ನದಿ ದಂಡೆ
ಅನೇಕ ಸೂರ್ಯರ ತಾಪ
ಅಖಿಟೋಪ
ಯಾವ ಸಮುದ್ರದಲಿ ಬಿದ್ದ
ಹೇಳು ಮೆಸಪೊಟೇಮಿಯಾ
ಅಂಥ ಪತನಕ್ಕೆ
ಇಂಥ ಸಾಲುಗಳು ಸಾಕೆ?
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...