Home / ಕವನ / ಕವಿತೆ / ಮುದುಕ

ಮುದುಕ

ಹೆಗಲೇರಿ ಕುಳಿತುಬಿಟ್ಟಿದ್ದಾನೆ ಮರ್ಕಟಿ ಮುದುಕ
ಇಳಿಯುವುದಿಲ್ಲ ಕೊಡವಿದರೆ ಬೀಳುವುದಿಲ್ಲ
ಕಾಲದ ಆಯಾಮಕ್ಕೆ ಸುತ್ತಿಹಾಕಿದ
ಸ್ಥಿರವಾದ ಬಾಧಕ ಸ್ವಯಂಕೃತ
ಕೃತತ್ರೇತಗಳ ಗೂನು
ನಾನು ನಡೆಯಬೇಕಾದಲ್ಲಿ ನಡೆಯ ಗೊಡದೇ
ನಾನು ಓಡಬೇಕಾದಲ್ಲಿ ಓಡಗೊಡದೇ
ನನಗೆ ವಿಶ್ರಾಂತಿ ಬೇಕಾದಲ್ಲಿ ಬಿಡದೇ
ಹೆಗಲ ಮೇಲೇರಿ ಕುಳಿತ ಅಜೀಗರ್ತ
ಲೆಪ್ರಸಿಯಂತೆ ಮೈಗೆ
ಕ್ಯಾನ್ಸರಿನಂತೆ ಸ್ಮೃತಿಗೆ
ಅಂಟಿಕೊಂಡಿದ್ದಾನೆ ಈತ!

ಮುತ್ತಾತ
ಇವನ ಮೂಗಿನ ತುದಿಗೆ ಬೆವರಿನ ಬಿಂದು ಇಳಿದು
ದಾಡಿಯಲ್ಲಿ ಹರಿದು ಚಹಾದ ಕಪ್ಪಿಗೆ ಬಿದ್ದು
ಮೈ ಬೆವರು ಕರೆದು ನಕ್ಕಿದ್ದ ಬಾಯಿಗಟಾರ
ಈತ ದೊಡ್ಡ ಎರೆಹುಳವಾಗಿ ಉದ್ದಕ್ಕೆ ಹೊದ್ದು
ನಡು ಬಗ್ಗಿಸಿ ಲಾಳದಂತೆದ್ದು ಅಲ್ಲೇ ಬಿದ್ದು
ನಶಾದ ವೃದ್ಧನ ಬೇಡಾದ ರತಿಯ ನಿಷ್ಫಲ
ಕಚಗುಳಿಯ ಹೇಸಿಗೆ ಮೈಮೇಲೆ ಹರಿಸಿ
ಈತ ಲಕ್ವಾ ಹೊಡಿಸಿ ಮೌನಿ!

ಶೂನ್ಯಕ್ಕೆ ನೋಡಿ
ಕೊನೆಗೊಂದು ದಿನ ನನ್ನ ಹೆಗಲ ಮೇಲೆ ಚಟ್ಟಾದಲ್ಲಿ ಸವಾರಿ ಬಿಟ್ಟ
ಕಪ್ಪು ಹೊಗೆಬಂಡಿಯಂತೆ ಕಟ್ಟೆಗೆ ಇವನ ಚುಟ್ಟಾ ಸೇದಿ
ಎಲ್ಲಾ ಮುಗಿಯಿತೆಂದು ಮುಳುಗು ಹಾಕಿದರೆ
ಎದ್ದಾಗ ಹೆಗಲ ಮೇಲೆ ಇವನ ಇಮ್ಮಡಿ ಒಜ್ಜೆ
ಮಂತ್ರದ ಮಾಟದ ಸೋಗು ಹಾಕಿ ವಿಚಿತ್ರ ಮುಖವಾಡದೊಳಗೆ
ಒಸಡು ಬಿರಿಯುವ ಹಾಗೆ ಧ್ವನಿಸುತ್ತದೆ ಇದು
ಇದಕ್ಕೆ ಪ್ರತಿಧ್ವನಿ ಕೊಟ್ಟೆನೇ?
ಇದರ ವರ್ತುಲದಲ್ಲಿ ಸುತ್ತಿದೆನೇ?
ಸುತ್ತಾ ಸುತ್ತಾ ನಾನೂ ಮುದುಕಾ
ಬರಿ ಕಂಬಕ್ಕೆ ನನ್ನ ಕಟ್ಟಿ ನಾನೇ ಕಟ್ಟಿದೆನೇ?
ಕತ್ತಿ ಹಿರಿದು ಹಲ್ಗಿರಿದು
ಬರುತ್ತಿದ್ದಾನೆ-ನಾನೇ ಬಂದೆನೇ?
ಬಲಿ ಕೊಡುವುದಕ್ಕೆ ನನ್ನ ನಾನೇ?

ಏಪ್ರಿಲಿನ ಝಳಕ್ಕೆ ಒಂಟಿ ಹಾಸಿಗೆಯಲ್ಲಿ ಬಿದ್ದು
ಕಣ್ಣರಳಿಸಿ ನೋಡಿದೆ; ಸಿಗಾರು ಹಚ್ಚೆ ಸೇದಿದೆ;
ಆ ಮುದುಕ ಸತ್ತದ್ದು ನಿಜ
ಆದರೆ ಇವರಾರು ಸುತ್ತ ಮುತ್ತ
ದುಃಸ್ವಪ್ನದ ತುಂಡುಗಳು
ಬಿಸಿಲಿಗೆ ಬಿದ್ದ ಎರೆ ಹುಳುಗಳು
ಬೆಂಕಿಗೆ ಬಿದ್ದ ನರೆಳುಗಳು
ಇದು ಯಾರ ಸಂತಾನ?
ನನ್ನದೇ? ಅವನದೇ?
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...