Home / ಕವನ / ಕವಿತೆ / ತೋರಣ ಕಟ್ಟೋಣ!

ತೋರಣ ಕಟ್ಟೋಣ!

ಹಬ್ಬ ಬಂತು, ಓ ಹಬ್ಬ! ಕೆಳೆಯರೇ,
ತೋರಣ ಕಟ್ಟೋಣ!
ಹಬ್ಬ ಹಬ್ಬಕೂ ಮನೆಯ ಬಾಗಿಲಿಗೆ
ತೋರಣ ಕಟ್ಟೋಣ!

ಮಾವಿನ ತೋಪಿಗೆ ಬನ್ನಿರಿ, ಕೆಳೆಯರೆ,
ತೋರಣ ಕಟ್ಟೋಣ;
ಬೆಳಗಿನ ಜಾವ ಮುಗಿಯುವ ಮುನ್ನ
ತೋರಣ ಕಟ್ಟೋಣ!

ಚುಕ್ಕಿಯಾಗಸದೆ ಮಾಸುವ ಮುನ್ನ
ತೋರಣ ಕಟ್ಟೋಣ;
ಹಕ್ಕಿ ಗೂಡಿನಲಿ ಎಚ್ಚರುವ ವೇಳೆ
ತೋರಣ ಕಟ್ಟೋಣ!

ಕೆಂಪು ಮೂಡಲಲಿ ಹುಟ್ಟುವ ಹೊತ್ತಿಗೆ
ತೋರಣ ಕಟ್ಟೋಣ;
ತಂಪು ಹೊತ್ತಿನಲೆ ಸೊಂಪು ತಳಿರಿನ
ತೋರಣ ಕಟ್ಟೋಣ!

ಎಲ್ಲರೊಂದಾಗಿ ಉಲ್ಲಸದಿಂದ
ತೋರಣ ಕಟ್ಟೋಣ;
ನಲ್ಲ ನಲ್ಲೆಯರು ಏಳುವ ಮೊದಲೆ
ತೋರಣ ಕಟ್ಟೋಣ!

ಅಕ್ಕ ರಂಗೋಲಿಯಿಕ್ಕುವ ಮೊದಲೆ
ತೋರಣ ಕಟ್ಟೋಣ;
ಚಿಕ್ಕ ಮಕ್ಕಳೇಳುವ ಹೊತ್ತಿಗೆ ಹೊಸ
ತೋರಣ ಕಟ್ಟೋಣ!

ಸುಂದರಾಂಗಿಯರ ಚೆಂದದ ಹಬ್ಬಕೆ
ತೋರಣ ಕಟ್ಟೋಣ;
ನಂದಗೋಕುಲವ ಹೋಲುವ ಮನೆಗೆ
ತೋರಣ ಕಟ್ಟೋಣ!

ದೇವ ದೇವನಾನಂದದ ಹಬ್ಬಕೆ
ತೋರಣ ಕಟ್ಟೋಣ;
ಪಾವನಮೂರ್ತಿ ಮನೆಗೆ ಬರುವನು
ತೋರಣ ಕಟ್ಟೋಣ!

ಹೊಸತು ಹಬ್ಬವಿದೊ ಕನ್ನಡ ಹಬ್ಬಕೆ
ತೋರಣ ಕಟ್ಟೋಣ!
ಒಸಗೆಯಾಗಲಿದೆ ನಾಡು ನಾಡಿಗೇ
ತೋರಣ ಕಟ್ಟೋಣ!

ಸಾಲು ಹಬ್ಬದಲಿ ಸಾಲು ಸಾಲಾಗಿ
ತೋರಣ ಕಟ್ಟೋಣ;
ಸಾಲ ಸೋಲಗಳು ಇದ್ದರೆ ಇರಲಿ
ತೋರಣ ಕಟ್ಟೋಣ!

ಪಂಚ ಭಕ್ಷ್ಯ ಇಲ್ಲಾ ಎನಲೇತಕೆ?
ತೋರಣ ಕಟ್ಟೋಣ!
ವಂಚನೆಯಿಲ್ಲದ ಬದುಕಿನ ಹಬ್ಬಕೆ
ತೋರಣ ಕಟ್ಟೋಣ!

ಮನೋಮಂದಿರಕೆ ನಿಚ್ಚ ಹಸುರಿನಾ
ತೋರಣ ಕಟ್ಟೋಣ!
ಹೃದಯ ಕಲಶದಾ ಮುಂಗಡೆ ಹರುಷದ
ತೋರಣ ಕಟ್ಟೋಣ!

ಬಂದಿತು ಬಿಡುಗಡೆ! ಬಿಡುಗಡೆ ಹಬ್ಬಕೆ
ತೋರಣ ಕಟ್ಟೋಣ!
ನಾಡು ನಗುತಿರಲಿ! ಅಶೋಕನ ತಳಿರಿನ
ತೋರಣ ಕಟ್ಟೋಣ!
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...