Home / ಕವನ / ಕವಿತೆ / ಒಂದು ಪೇಟೆಯೆಂದರೆ

ಒಂದು ಪೇಟೆಯೆಂದರೆ

ಸಣ್ಣಪುಟ್ಟ ಓಣಿಗಳನ್ನೂ ಬೀದಿಗಳನ್ನೂ ಈ ಪೇಟೆಯ ಒಳಹೊರಕ್ಕೆ
ಹೊಕ್ಕು ಹೊರಟು ಅಚಾನಕ ನಿಮ್ಮ ಕೈಬಿಡುವ ಹಾದಿಗಳನ್ನೂ
ಹೋಲಿಸಬಹುದು ಕ್ಲಿಷ್ಟವಾದೊಂದು ನರಮಂಡಲಕ್ಕೆ

ಅದರಿದರ ಮಿದುಳು ಯಾವುದೋ ನಾನು ಕಾಣೆ
ತಾಲೂಕಾಪೀಸೆ, ನಗರಸಭಾಕಛೇರಿಯೆ, ಜೈಲೆ,
ರೈಲು ನಿಲ್ದಾಣವೆ, ಅಥವ ಕಾವಿ ಬಳಿದ ಪೋಲೀಸು ಠಾಣೆ?

ಮಿದುಳಿರುವುದಕ್ಕೆ ಇದೇನೂ ಸಾವಯವ ಜೀವಿಯಲ್ಲ ಖರೆ
ಬಹುಶಃ ಇದ್ದೀತು ಇದು ಬೆಳೆದುಬಂದ ರೀತಿ ಸರಿಯಲ್ಲದೆ, ಅಥವ
ನಾವು ಮಾಡಿದ ಹೋಲಿಕೆಯಲ್ಲಿ ಏನೊ ತೊಂದರೆ

ಇದ್ದರೂ ಇರಬಹುದು.  ಆದರೂ ಈ ಸ್ಥಾವರಕ್ಕೆಷ್ಟು ನೆನಪು
ಕದಂಬರು ನಿಲ್ಲಿಸಿದ ಶಾಸನ ಮತ್ತೆ ಯಾರೋ ಹೇರಿಸಿದ ಮದರಾಸು
ಸಂಸ್ಥಾನ, ನಿನ್ನೆ ಮೊನ್ನೆ ಈ ಕಡೆ ಬಂದವನು ಟಿಪ್ಪು

ಇದು ಚರಿತ್ರೆ.  ಚರಿತ್ರೆಯೊಂದೇ ನೆನಪಲ್ಲ.  ನೆನಪು ಉಪ್ಪಿನ ಹಾಗೆ
ಸಮುದ್ರದಿಂದ ಮೊಗೆದುದು ಅಥವ ಭೂಮಿಯೊಳಗಿಂದ ಅಗೆದುದು
ಮೈಯಲ್ಲಿ ಕರಗಿರುವುದು, ಹರಳುಗಟ್ಟುವುದಿಲ್ಲ ಒಳಗೆ

ತಲೆಹೊರೆಯಾಗಿ ಇಲ್ಲಿಗಿದು ಬಂತು ಈ ನೆನಪು ಬಳಸು ದಾರಿ
ಸಾಗಿ, ನೆಲಕ್ಕೆ ಸುರಿದ ಇಲ್ಲವೇ ಉಟ್ಟ ವಸ್ತ್ರಕ್ಕೆ ಒರಸಿದ ಬೆವರಾಗಿ
ಕಣ್ಣ ಒಸರಿನಲ್ಲಷ್ಟು ನಡೆಯೆಬ್ಬಿಸಿದ ಧೂಳಿನಲ್ಲಷ್ಟು ಸೇರಿ

ಬಂದರೆ ಆಲ ಅಶ್ವತ್ಥ ಗುಡಿಗುಡಾರಗಳು ಗದ್ದೆ ಬಯಲು
ಗಡಿ ಗಡಿಗೆ ಒಮ್ಮೆ ನಿಲ್ಲಿಸಿದ್ದ ಹೊರೆಕಂಬಗಳು
ಮತ್ತೆ ನಸುಕಿಗೇ ಕಟ್ಟಿದ ಎತ್ತಿನ ಗಾಡಿಗಳ ಸಾಲು

ಈ ನೆನಪಿನ ಸಾಕ್ಷಿ.  ಹೀಗೆ ಈ ಪೇಟೆಯ ನರಗಳಿಗೆ ಎಲ್ಲೆಲ್ಲೂ
ಸಾಗಿ ಸೆಣೆದು ಸೇರುವಾತುರ ಈ ಹೊರೆ ಹೊತ್ತು ಆ ಅಗೋಚರ ಕೇಂದ್ರ
ಯಾವ ಅರೆಗನಸಿನ ತೆಕ್ಕೆಯಲ್ಲೊ ಯಾವ ಕೊಚ್ಚೆಯ ಮಗ್ಗುಲಲ್ಲೊ

ಸೇರುವುವು ಸೇರಲೇಬೇಕಾಗಿ.  ಒಂದು ಪೇಟೆಯೆಂದರೆ ನೆಲ
ಸಾರಿಸಿ ಹಾಕಿದ ರಂಗೋಲಿಯಲ್ಲ, ಟೇಬಲಿನ ಮೇಲೆ ಹೊಳೆಯುವ
ತಾಟಿನಲ್ಲಿ ನೀಟಾಗಿ ಕತ್ತಿರಿಸಿಟ್ಟ ಕಸಿಮಾವಿನ ಹಣ್ಣಲ್ಲ

ಒಂದು ಪೇಟೆಗೆ ತನ್ನದೇ ಎದೆಬಡಿತವಿದೆ.  ಕೇಳಿಲ್ಲವೇ ನಾವದನ್ನು
ಒಂಟಿಯಾಗಿ ಎಲ್ಲಿಂದೆಲ್ಲಿಗೆ ಸಾಗುವ ರಾತ್ರಿ ಉಗಿಬಂಡಿಯ
ಭಾರವಾದ ಕಾಲಸಪ್ಪಳದಲ್ಲಿ ಮಿಳಿಯುವುದನ್ನು

ಕಂಡಿಲ್ಲವೇ ಅದು ಮುದುಕುವುದು ಘಟ್ಟದ ಕೆಳಗೆ ಮಳೆ ಬೀಳುವ ಇರುಳು
ವೃದ್ಧನಂತೆ ಅಥವ ತೆರೆಯುವುದಂಗಾತ ಹೆಣ್ಣಿನಂತೆ
ಮುಂದೊತ್ತುವಾಗ ಯಕ್ಷಿಣೀ ಲಾಂದ್ರದ ನೆರಳು

ಒಂದು ಪೇಟೆಯೆಂದರೆ ಬರೇ ಅಂಗಡಿಬೀದಿಗಳಲ್ಲ.  ಇದರ ವಸ್ತು
ಈ ಹೊಗೆಹಿಡಿದ ಹಂಚಿನ ಮತ್ತು ಮುಳಿಮನೆಗಳ ಬದಿಗೆ
ಅಡ್ಡಾದಿಡ್ಡಿ ಹೆಜ್ಜೆಗಳಲ್ಲಿ ಮೂಡಿದ ಪ್ರತ್ಯೇಕ ಗುರುತು

ಒದಗಬೇಕಷ್ಟೆ ಇಲ್ಲಿ ನಡೆವವರಿಗೆ ಮಾತ್ರ.  ಎಷ್ಟೆ
ಹೊರಟರೂ ಮತ್ತೆ ತನ್ನ ಒಳಪ್ರಾಕಾರಗಳಲ್ಲಿ ಸುತ್ತಿಸುವ ಕೋಟೆ
ನೀವೇ ಹೇಳಿದಂತೆ ನಮಗೆ ವಿಧಿಸುವುದು ನಾವು ಕಲ್ಪಿಸಿದ ಪೇಟೆ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...