Home / ಕವನ / ಕವಿತೆ / ನಿನ್ನ ಬರುವು

ನಿನ್ನ ಬರುವು

ನಿನ್ನ ಬರವನೇ ಕಾಯ್ದು ಇರುವೆ ಇರವೆಲ್ಲ ಕಾಯ್ವ ಚಿಂತೆ
ಬರದೆ ನೀನು ಬರಡಾದೆ ನಾನು ಬಾಗಿಲನು ತೆರೆದೆ ನಿಂತೆ

ಬಣ್ಣ ಬಣ್ಣ ವೇಷಗಳ ತೊಟ್ಟು ಬಯಲಾಟ ಬೊಂಬೆಯಂತೆ
ಬಣ್ಣಿಸಿದ್ದೆ ನಾ ಹಿಂದೆ ಅಂತೆಯೇ ಎಲ್ಲ ಅಂತೆ ಕಂತೆ

ಜಟೆಕಿರೀಟದಲಿ ನಾಲ್ಕು ಕೈಗಳಲಿ ವಿವಿಧ ಆಯುಧಗಳ
ರೇಷ್ಠ ಬಟ್ಟೆಗಳ ಚಿನ್ನದೊಡವೆಗಳ ಮುತ್ತು ರತ್ನ ಬಹಳ

ತೊಟ್ಟು ಬರುವಿ ನೀ ಬೆಳಕ ತರುವಿ ಝಗ್ಗೆಂದು ಕಣ್ಣ ಕುಕ್ಕಿ
ಎಂಬ ಭ್ರಮೆಯು ಈಗಿಲ್ಲ ತಂದೆ ತಿಳಿದಿಹುದು ತಿಳಿವು ಸಿಕ್ಕಿ

ಬಾ ಬಾರ ದೇವ ಬಂದೀಯ ನೀನು ಗುರುತಿಸಲು ಬಾರದಂತೆ
ಕಣ್ಣ ಮುಂದೆ ಹಗಲಿರುಳು ತಿರುಗಿದರು ನೋಟವರಿಯದಂತೆ

ಸುಕ್ಕುಗಲ್ಲ ಬರಿ ಎಲುಬು ಮೈಯಿ ಒಳಸೇರಿದಂಥ ದಿಟ್ಟಿ
ಭೂಮಿ ಭಾರ ಹೊತ್ತಂತೆ ಬೆನ್ನು ನಸುಬಾಗಿ ಕೋಲು ಕುಟ್ಟಿ

ಬರಿಮೈಯೊ ಏನೊ ಅರಮೈಯೊ ಏನೊ ಮಾನಕ್ಕೆ ಮರೆಯು ಬಟ್ಟೆ
ಬರಿಹೊಟ್ಟೆ ಏನೊ ಅರೆಹೊಟ್ಟೆ ಏನೊ ಬದುಕಿರಲು ನೆವವು ಹೊಟ್ಟೆ

ಮಾತನಾಡಿದರು ಮೂಕನಂತೆ ಮೌನದಲೆ ಎಲ್ಲ ಭಾಷ್ಯ
ಸುಮ್ಮನಿದ್ದರೂ ಮಗುವಿನಂತೆ ಲೀಲೆಯೊಳು ಕೃತಿಯು ವಶ್ಯ

ನೀನು ಬರಲು ಮೆರವಣಿಗೆಯಿಲ್ಲ ತುತ್ತೂರಿ ಕಹಳೆ ಇಲ್ಲ
ಬಾಲ ಹಿಂಬಾಲ ಬೊಗಳು ಹೊಗಳುಗಳು ಯಾರ ತರಲೆ ಇಲ್ಲ
ಗಾಳಿಯಷ್ಟು ಹಗುರಾಗಿ ಬರುವೆ ರವಿಕಿರಣದಂತೆ ನೇರ
ಬೆಳಕಿನಂತೆ ತಿಳಿಯಾಗಿ ಬರುವೆ ಜಲದಂತೆ ತೊಳೆಯ ಬಾರ

ಹಣ್ಣಿಗಿಂತ ಹಣ್ಣಾಗಿ ಬರುವೆ ಅನುಭಾವ ರಸವ ಹನಿಸಿ
ಹೂವಿನಂತೆ ಎದೆ ಅರಳುವಂತೆ ಪರಿಮಳದ ಪ್ರೇಮವೆನಿಸಿ

ತಿರೆಯ ಭ್ರಮಣ ಪರಿಯಂತೆ ಬಿಡುವಿರದ ಕಾಯಕರ್ಮನಿರತ
ಅಮರ ತತ್ವ ತೋರಿಸುವ ಮರಗಳೊಲು ಪ್ರಕೃತಿ ಧರ್ಮ ರಕ್ತ

ಋತು ಋತುವು ಹೊಸದು ಋತ ಸತ್ಯ ನಿತ್ಯ ನಿತ್ಯಾತ್ಮ ಲೀನ ನೀನು
ಇದ್ಧಿಲ್ಲದಂತೆ ಸದ್ದಿಲ್ಲದಂತೆ ಇರದಿರುವ ಯೋಗ ನೀನು
***

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...