Home / ಕವನ / ಕವಿತೆ / ನಿನ್ನ ಬರುವು

ನಿನ್ನ ಬರುವು

ನಿನ್ನ ಬರವನೇ ಕಾಯ್ದು ಇರುವೆ ಇರವೆಲ್ಲ ಕಾಯ್ವ ಚಿಂತೆ
ಬರದೆ ನೀನು ಬರಡಾದೆ ನಾನು ಬಾಗಿಲನು ತೆರೆದೆ ನಿಂತೆ

ಬಣ್ಣ ಬಣ್ಣ ವೇಷಗಳ ತೊಟ್ಟು ಬಯಲಾಟ ಬೊಂಬೆಯಂತೆ
ಬಣ್ಣಿಸಿದ್ದೆ ನಾ ಹಿಂದೆ ಅಂತೆಯೇ ಎಲ್ಲ ಅಂತೆ ಕಂತೆ

ಜಟೆಕಿರೀಟದಲಿ ನಾಲ್ಕು ಕೈಗಳಲಿ ವಿವಿಧ ಆಯುಧಗಳ
ರೇಷ್ಠ ಬಟ್ಟೆಗಳ ಚಿನ್ನದೊಡವೆಗಳ ಮುತ್ತು ರತ್ನ ಬಹಳ

ತೊಟ್ಟು ಬರುವಿ ನೀ ಬೆಳಕ ತರುವಿ ಝಗ್ಗೆಂದು ಕಣ್ಣ ಕುಕ್ಕಿ
ಎಂಬ ಭ್ರಮೆಯು ಈಗಿಲ್ಲ ತಂದೆ ತಿಳಿದಿಹುದು ತಿಳಿವು ಸಿಕ್ಕಿ

ಬಾ ಬಾರ ದೇವ ಬಂದೀಯ ನೀನು ಗುರುತಿಸಲು ಬಾರದಂತೆ
ಕಣ್ಣ ಮುಂದೆ ಹಗಲಿರುಳು ತಿರುಗಿದರು ನೋಟವರಿಯದಂತೆ

ಸುಕ್ಕುಗಲ್ಲ ಬರಿ ಎಲುಬು ಮೈಯಿ ಒಳಸೇರಿದಂಥ ದಿಟ್ಟಿ
ಭೂಮಿ ಭಾರ ಹೊತ್ತಂತೆ ಬೆನ್ನು ನಸುಬಾಗಿ ಕೋಲು ಕುಟ್ಟಿ

ಬರಿಮೈಯೊ ಏನೊ ಅರಮೈಯೊ ಏನೊ ಮಾನಕ್ಕೆ ಮರೆಯು ಬಟ್ಟೆ
ಬರಿಹೊಟ್ಟೆ ಏನೊ ಅರೆಹೊಟ್ಟೆ ಏನೊ ಬದುಕಿರಲು ನೆವವು ಹೊಟ್ಟೆ

ಮಾತನಾಡಿದರು ಮೂಕನಂತೆ ಮೌನದಲೆ ಎಲ್ಲ ಭಾಷ್ಯ
ಸುಮ್ಮನಿದ್ದರೂ ಮಗುವಿನಂತೆ ಲೀಲೆಯೊಳು ಕೃತಿಯು ವಶ್ಯ

ನೀನು ಬರಲು ಮೆರವಣಿಗೆಯಿಲ್ಲ ತುತ್ತೂರಿ ಕಹಳೆ ಇಲ್ಲ
ಬಾಲ ಹಿಂಬಾಲ ಬೊಗಳು ಹೊಗಳುಗಳು ಯಾರ ತರಲೆ ಇಲ್ಲ
ಗಾಳಿಯಷ್ಟು ಹಗುರಾಗಿ ಬರುವೆ ರವಿಕಿರಣದಂತೆ ನೇರ
ಬೆಳಕಿನಂತೆ ತಿಳಿಯಾಗಿ ಬರುವೆ ಜಲದಂತೆ ತೊಳೆಯ ಬಾರ

ಹಣ್ಣಿಗಿಂತ ಹಣ್ಣಾಗಿ ಬರುವೆ ಅನುಭಾವ ರಸವ ಹನಿಸಿ
ಹೂವಿನಂತೆ ಎದೆ ಅರಳುವಂತೆ ಪರಿಮಳದ ಪ್ರೇಮವೆನಿಸಿ

ತಿರೆಯ ಭ್ರಮಣ ಪರಿಯಂತೆ ಬಿಡುವಿರದ ಕಾಯಕರ್ಮನಿರತ
ಅಮರ ತತ್ವ ತೋರಿಸುವ ಮರಗಳೊಲು ಪ್ರಕೃತಿ ಧರ್ಮ ರಕ್ತ

ಋತು ಋತುವು ಹೊಸದು ಋತ ಸತ್ಯ ನಿತ್ಯ ನಿತ್ಯಾತ್ಮ ಲೀನ ನೀನು
ಇದ್ಧಿಲ್ಲದಂತೆ ಸದ್ದಿಲ್ಲದಂತೆ ಇರದಿರುವ ಯೋಗ ನೀನು
***

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...