ಜಗತ್ತಿನಲ್ಲಿಯ ಎಲ್ಲ ಸುಖದುಃಖವನ್ನು ಕೊಡಿಸಿ ಸರಿಸಮಾನವಾಗಿ ಹಂಚಿದರೆ ಪ್ರತಿಯೊಬ್ಬನ ಭಾಗಕ್ಕೆ ಬರುವ ಸುಖದುಃಖದಿಂದ ಯಾವನೂ ಸಂತುಷ್ಟನಾಗುವದಿಲ್ಲೆಂದು ಜಗದ್ವಿಖ್ಯಾತ ತತ್ವಜ್ಞಾನಿಯಾದ ಸಾಕ್ರೇಟಿಸನು ಹೇಳಿದ್ದಾನೆ. ಅದೇ ತತ್ವವನ್ನು ವಿಂಗಡಿಸಿ, ವಿಸ್ತರಿಸಿ ಪ್ಲೇಟೋ ಎಂಬ ಬೇರೊಬ್ಬ ತತ್ವಜ್ಞಾನಿಯು ಹೀಗೆ ಕಥಾರೂಪವಾಗಿ ಬರೆದಿದ್ದಾನೆ:-
* * * *
ಒಂದಾನೊಂದು ಕಾಲದಲ್ಲಿ ಜನರು ಬಹಳ ಕಷ್ಟ ಪೀಡಿತರಾದ್ದರಿಂದ, ತಮ್ಮ ತಮ್ಮ ಕಷ್ಟ ನಷ್ಟಗಳನ್ನು ತೆರಬೇಕೆಂದು ದೇವರು ಆಜ್ಞೆ ಮಾಡಿದನು. ಆಗ ಎಲ್ಲರೂ ತಮ್ಮ ತಲೆಯಮೇಲೆ ದುಃಖದ ಗಂಟುಗಳನ್ನು ಹೊತ್ತು ಕೊಂಡು ಬಂದು ಕೂಡಹಾಕಿದರು. ದುಃಖಗಳದೊಂದು ದೊಡ್ಡ ರಾಶಿ ಯಾಯಿತು.
* * * *
ಒಬ್ಬ ಮನುಷ್ಯನಿಗೆ ಒಬ್ಬ ಹಟಿಯಾದ, ಮೂಢನಾದ, ದುರ್ಗುಣಿಯಾದ ಜಗಳಗಂಟನಾದ ತ್ರಾಸದಾಯಕನಾದ ಮಗನಿದ್ದನು. ಮಗ ನಿಂದುಂಟಾಗುವ ತ್ರಾಸದಿಂದ ದೂರಾಗಲು ತನ್ನ ಮಗನನ್ನು ತಂದು ಆ ರಾಶಿಯಲ್ಲಿ ಚಲ್ಲಿದ್ದನು.
****
ಆ ಮೇಲೆ “ಈ ರಾಶಿಯೊಳಗಿಂದ ನಿಮಗೆ ಸುಖ ಕೊಡಬಹುದಾದ ವಸ್ತುಗಳನ್ನು ಆರಿಸಿಕೊಳ್ಳಿರಿ” ಎಂದು ದೇವಾಜ್ಞೆಯಾಯಿತು. ಆಗೆ ಎಲ್ಲರೂ ತಮಗೆ ಸುಖದಾಯಕವೆಂದು ತಿಳಿದುಕೊಂಡ ವಸ್ತುಗಳನ್ನು ಆರಿಸಿಕೊಳ್ಳ ಹತ್ತಿದರು.
****
ಒಬ್ಬ ಮುದುಕನಿಗೆ ಮಕ್ಕಳಿದ್ದಿಲ್ಲ. ಸಂತತಿ ಇರದ್ದರಿಂದ ಆದ ದುಃಖದ ಗಂಟನ್ನು ತಂದು ರಾಶಿಯಲ್ಲಿ ಚಲ್ಲಿದ್ದನು. ಈಗ ಸುಂದರ ತರುಣನನ್ನು ರಾಶಿಯಲ್ಲಿ ಹುಡುಕಹತ್ತಿದನು, ಹುಡುಕುವಾಗ ಮೇಲ್ಕಾಣಿಸಿದ ಆ ಮೂಢ ತ್ರಾಸದಾಯಕ ತರುಣನು ಕೈಗೆ ಸಿಕ್ಕನು. ಅವನನ್ನು ಹೊತ್ತುಕೊಂಡು ತೃಪ್ತಿ ಹೊಂದಿ ಹೊರಟನು.
****
ಇನ್ನೂ ಸ್ವಲ್ಪು ದೂರ ಹೋಗಿದ್ದಿಲ್ಲ. ತಟ್ಟನೆ ತರುಣನು ಕೆಳಗೆ ಜಿಗಿದು ಮುದಕನ ಗಡ್ಡ ಹಿಡಿದು ಎಳೆಯಹತ್ತಿದನು, ಬೈಯಲು, ಹೊಡೆಯಲು ಪ್ರಾರಂಭಿಸಿದನು. ಮುದುಕನಿಗೆ ಸಂತತಿಯು ಇರದ ತಾಪಕ್ಕಿಂತ ಸಂತತಿಯು ದೊರೆತ ಮೇಲಿನ ತ್ರಾಸವು ಮಿತಿಮೀರಿತು.
****
“ದೇವಾ, ನನಗೆ ಸಂತತಿ ಇಲ್ಲದಾಗ ನಾನು ಸುಖಿಯಾಗಿದ್ದೆ. ಈ ದುಷ್ಟ ತರುಣನಿಂದಾಗುವ ತಾಪವನ್ನು ಸಹಿಸಲಾರೆ.. ನೀನೇ ನನ್ನನ್ನು ರಕ್ಷಿಸು” ಎಂದು ದೇವರನ್ನು ಪ್ರಾರ್ಥಿಸಹತ್ತಿದನು.
ಆದರೆ ಸುಖವಾದೀತೆಂದು ತಾನೇ ಆರಿಸಿಕೊಂಡ ವಸ್ತುವಿನಿಂದಾಗುವ ಕಷ್ಟವನ್ನು ಉಪಭೋಗಿಸಲೇಬೇಕಾಯಿತು. ಬಿಟ್ಟಿದ್ದಲ್ಲ. ಬಿಡಲಿಲ್ಲ !
****
ಸದ್ಯಃ ಜಗತ್ತಿನಲ್ಲಿ ಮಿಗಿಲಾದ ನಾಮಾಂಕಿತ ನಾಟಕಕಾರರೆಂದರೆ ಜಾರ್ಜ ಬರ್ನಾರ್ಡ ಶಾ ಇವರು. ಒಮ್ಮೆ ಓರ್ವ ಫ್ರೆಂಚ್ ತರುಣಿಯು ಇವರ ಹತ್ರ ಬಂದು ಪ್ರಸ್ತಾಪಿಸಿದಳು, “ನೀವು ಚತುರರಿರುವಿರಿ, ನಾನು ಸುಂದರಿಯು, ನಾವೀರ್ವರು ಲಗ್ನವಾದರೆ ನಮ್ಮ ಸಂತತಿಯಲ್ಲಿ ನಿಮ್ಮ ಜಾಣತನವೂ ನನ್ನ ಸೌಂದರ್ಯವೂ ಒಡಮೂಡುವವು. ಸರ್ವೋತ್ಕೃಷ್ಟ ಸಂತತಿಯಾಗುವದು. ”ಆಗ ಜಾರ್ಜ ಬರ್ನಾರ್ಡ ಶಾ ಹೀಗೆ ಉತ್ತರ ಕೊಟ್ಟರು. ( ಆದರೆ ಒಂದು ವೇಳೆ ನಮ್ಮ ಸಂತತಿಯಲ್ಲಿ ನಿನ್ನ ಜಾಣತನ (ಮೂರ್ಖತನ ?) ಮತ್ತು ನನ್ನ ಸೌಂದರ್ಯ (ಕುರೂಪ) ಒಡಮೂಡಿದರೆ ಏನು ಮಾಡಬೇಕು ? ” .
* * * *
೧೯೩೨ನೇ ಇಸ್ವಿಯಲ್ಲಿ ಲಾಯಿಡ ಜಾರ್ಜ್ರು ಅಸ್ವಸ್ಥತೆಯ ನಂತರ ಪ್ರಕೃತಿಯನ್ನು ಸುಧಾರಿಸಿಕೊಳ್ಳಲು ಸಿಲೋನ (ಸಿಂಹಳ ದ್ವೀಪಕ್ಕೆ) ಹೋಗಿದ್ದರು. ಆರು ವಾರಗಳ ವರೆಗೆ ಅಲ್ಲಿದ್ದು ತಿರುಗಿ ಹೋದರು. ಕೆಲವು ದಿವಸಗಳ ನಂತರ ಜಾರ್ಜ ಬರ್ನಾರ್ಡ ಶಾ ಇವರು ಜಗತ್ತಿನ ಪ್ರವಾಸ ಮಾಡುವಾಗ ಸಿಂಹಳದ್ವೀಪದಲ್ಲಿ ಮೂರು ದಿವಸ ನಿಂತಿದ್ದರು. ಆಗ ಅಲ್ಲಿಯ ಒಬ್ಬ ನಿವಾಸಿಯೊಂದಿಗೆ ಹೀಗೆ ಸಂಭಾಷಣೆಯಾಯಿತು:
ಅಲ್ಲಿಯ ನಿವಾಸಿ – ನಮ್ಮ ನಡುಗಡ್ಡೆಯ ವಿಷಯವಾಗಿ ನಿಮ್ಮ ಅಭಿಪ್ರಾಯವೇನಿದೆ ?
ಜಾ. ಬ. ಶಾ- ಅಷ್ಟೇನೂ ನನ್ನ ಮನಸ್ಸಿಗೆ ಬರಲಿಲ್ಲ !
ನಿವಾಸಿ:– ಆದರೆ ಇದು ಜಗತ್ತಿನಲ್ಲಿ ಎಲ್ಲಕ್ಕೂ ರಮಣೀಯವಾದ ಸ್ಥಳವೆಂದು ಮೊನ್ನೆ ಲಾಯಡ್ ಜಾರ್ಜ್ರು ಹೇಳಿದರಲ್ಲ ?
ಜಾ. ಬ. ಶಾ:– ಲಾಯಡ್ ಚಾರ್ಜರನ್ನು ನಂಬುವಷ್ಟು ಮೂರ್ಖರಾಗಬೇಡಿರಿ. ಹೋದಹೋದಲ್ಲೆಲ್ಲ ಅವರು ಹಾಗೇ ಹೇಳುತ್ತಾರೆ.
*****






