ಚೆಲುವಿನ ಬೇಟೆ


ಹಗಲು ಮುಗಿವ ಸಮಯ ; ದಿನಪ ಜಿಗಿಯಲಿದ್ದ ಬಾನಿನಿಂದೆ.
ಒಗೆದು ಸಂಜೆಗೆಂಪ ತುಂಡುಮುಗಿಲುಗಳಿಗೆ ಬಣ್ಣ ಬರೆದು,
ಪಸಲೆನೆಲಕೆ ಸೊಬಗ ಸಲಿಸಿ, ಹಸಿರಿನೆಲೆಯ ಕಳೆಯ ಬೆಳಸಿ,
ಮಿಸುನಿವಿಸಿಲ ಪಸರಿಸುತಲಿ ರಸೆಯನಾತ ರಂಜಿಸಿದ್ದ.
ಕಾಲವೇನೊ ಬಾಳ ಸೊಗಸು
ಎಲ್ಲ ಕಡೆಗು ಚೆಲ್ಲ ಬೆಳಸು,
ಬಯಸಿತದನು ಉಣಸು ಮನಸು,
ಬಳಿಯಲಿರುವ ಗೆಳೆಯರನೂ ಬರಲು ಕರೆದೆನು –
ಹೊಳೆಯ ತಡಿಯ ತೋಟದೆಡೆಗೆ ಹೊರಟು ನಡೆದೆನು.


ಗೆಳೆಯರೊಡನೆ ಕೆಲೆದು ನಗುತ ಹೊಳೆಯ ಬಳಿಗೆ ಬರುತಲಿರೆ-
ಬಲದ ಬದಿಗೆ ಹೊಂದಿಯಿರುವ ತಳಿತ ಹೊಂಗೆಮರವ ಕಂಡೆ;
ತಿಳಿಯ ಹಸಿರಿನೆಳೆಯ ತಳಿರು ಬೆಳೆದ ಹಸಿರ ಬಲಿತ ತಳಿರು,
ಇಳಿಯ ಬಿಸಿಲಿನೊಳುಪ ಹೊರೆದು, ಸುಳಿವ ಗಾಳಿಗೊನೆದು ತೊನೆದು
ಸೂಸುತಿದ್ದುವಲ್ಲಿ ನಗೆಯ,
ಸೂರೆಗೈದುವೆನ್ನ ಬಗೆಯ,
ಮುಂದಕರಿಸದಾದೆನಡಿಯ;
ತಳಿರ ಸೊಬಗಿನಲಿಯೆ ನೋಟ ನೆಲಸಿ ನಿಂದೆನು;
ಚೆಲುವನಿದನು ಕಳೆದು ನಡೆವುದೆಂತು ಎಂದೆನು!


ಒಡನೆ ಕೆಳೆಯರಿದ್ದರಲೆ ? ನಡೆದುಬಿಟ್ಟರವರು ಮುಂದೆ;
ತಡೆವುದೆಂತು ನಾನು ಹಿಂದೆ ? ಹಾಗೆ ನಸುವೆ ನಿಂತು ಬಗೆದೆ :
ಮನವನೆಳೆದುಕೊಂಡ ತಳಿರ ಗೊನೆಯನೊಂದ ಮುರಿದುಕೊಂಡೆ,
ಎನಿತೊ ನಲುಮೆಯಿಂದಲದನು ತನುವಿಗೊತ್ತಿಕೊಳುತ ನಡೆದೆ.
ಅಡಿಯನಿಟ್ಟೆ ಬೇಗ; ಮುಂದೆ
ನಡೆದಿರುವರ ಸಾರಿ ಬಂದೆ;
ನಡೆಯಿತೆನಿತೊ ಮಾತು ಅಂದೆ.
ಓತು ತಂದ ಗೊನೆಯ ತಳಿರನೊಂದನೊಂದನು-
ಮಾತಿನಲ್ಲಿ ಮರೆತು ಹರಿದು ಹಿಸುಕಿ ಒಗೆದೆನು.


ಬಂದೆವಾಗ ಬನಕೆ; ಒಡನೆ ಬಂದ ಕೆಳೆಯರವರು ಕಲ್ಲಿ-
ನೊಂದು ಜಗುಲಿಯಲ್ಲಿ ಕುಳಿತು, ಮುಂದೆ ಸಾಗಿಸಿದರು ಮಾತು
ಕುಳಿತುಕೊಳ್ಳಲಿಲ್ಲ ನಾನು ಉಳಿದೆನವರ ಬರಿಯ ಹರಟೆ;
ಸುಳಿದು ಬರುವೆ ಬನದೊಳೆಂದು ಅಲೆದಾಡುತ ಹಾಗೆ ಹೊರಟೆ.
ಕಂಪಿನೆಲೆಯ ಗಿಡಗಳೇನು!
ಜೊಂಪಿನಲರ ಲತೆಗಳೇನು!
ಸೊಂಪ ನೋಡಿ ತಣಿದೆ ನಾನು.
ಎಡೆಯೊಳೊಂದು ಒಳುಗುಲಾಬಿಗಿಡವ ಕಂಡು ತಡೆದನು;
ಗಿಡದೊಳಿದ್ದದೊಂದೆ ಹೂವ ಬೆಡಗನೇನನೆಂಬೆನು ?


ಹಸಿರುತಳಿರ ತುತ್ತತುದಿಗೆ ಮಿಸುಕಾಡುತ ಮೆಲುಗಾಳಿಗೆ-
ಎಸೆಯುವರಳ ಕಂಡು ಕಣ್ಣ ಹಸಿವು ಹೆಚ್ಚೆ, ನಿಂತೆ ಹಾಗೆ,
‘ಹಸಿರು ಸೀರೆಯುಟ್ಟು ಸೆರಗ ಮುಸುರೆ ತಾಯಿ ಮಲಗಿಸಿರಲು-
ಮುಸುಕ ಸರಿಸಿ ತಾಯ ನೋಳ್ಪ ಹಸುಳೆಯ ಮೊಗವಿದುವೊ?’ ಎಂದೆ.
ನಲ್ಲ ಬಿನದದಲ್ಲಿ ನುಡಿದ
ಲಲ್ಲೆ ವಾತುಗಳಿಗೆ ನಾಚಿ
ನಲ್ಲೆ ತನ್ನ ಸೆರಗ ಚಾಚಿ-
ಚೆಲ್ವಮೊಗವ ಮುಚ್ಚಿಕೊಳ್ಳಲು ಸೆರಗು ಸರಿದು ತೋರುವ-
ಗಲ್ಲದ ತೆರ ಬೀರಿತರಳು ಹೊಸತುಬಗೆಯ ಚೆಂದವ


‘ಇನಿದುತಿನಿಸ ನಿನಗೀಯುವೆ, ಕುಣಿಕುಣಿಯುತ ಬಳಿಗೆ ಬಾರೊ!’
ಎನುತ ಕರೆಯೆ ನಮ್ಮ ಮುದ್ದ ಮಿನುಗುನಗೆಯ ಮೊಗದಿ ಬಂದು,
ಕೈಯ ನೀಡಿ ಬೇಡಲದನು, ‘ಬಾಯನು ತೆರೆ’ ಎನಲು ನಾನು,
ಬಾಯ ತರೆದು ನಿಲ್ಲಲವನ ಬಾಯಿ ಹೀಗೆ ಹೊಳವುದಲೇ?’-
ಹೀಗೆ ಎನಿತೊ ಮನದಿ ಬಗೆದೆ,
ಎವೆಯಿಕ್ಕದೆ ನೋಡುತಿರ್‍ದೆ,
ನೆಟ್ಟ ದಿಟ್ಟ ಕೀಳದಾದೆ.
ಕಳೆದೆನಿಂತದೇಸೊ ಕಾಲ; ಬಳಿಕ ಮೆ-ಲ್ಲ-ಕೆ-
ಅಲರ ಕೊಯಿದುಕೊಂಡು ಮರಳಿ ನಡೆದ ಹಿಂದಕೆ.


ಎತ್ತಿಕೊಂಡು ಕೈಗೆ ಹೂವ ಮುತ್ತು ಕೊಟ್ಟೆ ಮೋಹದಿಂದೆ;
ಒತ್ತಿಕೊಂಡೆ ಗಲ್ಲಗಳಿಗೆ, ಮತ್ತೆ ಮತ್ತೆ ಮೂಸಿ ನಲಿದೆ.
ಬೆರಳಿಂದಲಿ ತಿರುಗಿಸುತಲಿ, ಮರಳಿ ಮರಳಿ ನಿರುಕಿಸುತಲಿ,
ಅರಿವು ಇರದ ತೆರದಿ ನಡೆದುಬರುತ ಕೆಳೆಯರನ್ನು ಕಂಡೆ.
ನಡೆದೆ ಇದ್ದಿತವರ ಮಾತು,
ಹರಟೆಗೆನ್ನ ಮನವೆಳಸಿತು,
ವಾದ-ಚರ್ಚೆ ಬಲು ನಡೆಯಿತು.
ಹುರುಳು ಇರದ ಹರಟೆಗಳಿಗೆ ಮನವನಾಗ ಮಾರಿದೆ;
ಅರಳಿನೆಸಳನೊಂದೊಂದನು ಹರಿದು ಹೊಸೆದು ತೂರಿದೆ.


ಕೊನೆಯ ಕಾಣಲಿಲ್ಲ ಮಾತು; ದಣಿದು ನಿಲ್ಲಿಸಿದೆವು ವಾದ;
‘ಮನೆಗೆ ತೆರಳೆ ಸಮಯವಾಯ್ತೆ!’ ಎನುತಲೆಲ್ಲರೆದ್ದೆವಾಗ-
ಕೆಳಗೆ ನೆಲದಿ ಬಾಡಿ ಬಿದ್ದ ಅಲರಿನೆಸಳುಗಳನು ಕಂಡೆ ;
ಮರವೆ ತೊಲಗೆ, ನನ್ನ ಹುಚ್ಚನರಿದು ಹೀಗೆ ಎಂದುಕೊಂಡೆ :
‘ಅಲ್ಲಿ ತಳಿರ ಮುರಿದುದೇನು!
ಇಲ್ಲಿ ಹೂವ ಕೊಯ್ದುದೇನು !
ಮಾತಿಗೆ ಮರುಳಾದುದೇನು !
ಒಲಿದು ತಂದ ಚೆಲುವಿನೊಡನೆ ಬರಿದೆ ಮಣ್ಗೆ ಬೆರಸಿದೆ;
ಗಳಿಗೆಗಾಗಿ ಮಳಿಗೆ ಸುಡುವ ಮೂಳನಂತೆ ಮಾಡಿದೆ.


‘ಮುರಿದು ನಾನು ಕಿಡಿಸದಿರಲು ಮೆರೆಯುತಿದ್ದಿತಲ್ಲಿ ತಳಿರು ;
ಹರಿದು ಹೊಸೆದು ಹಾಕದಿರಲು ಮಿರುಗುತಿದ್ದತಿಲ್ಲಿ ಅಲರು.
ಹಲವರಿದರ ಚೆಲುವ ನೋಡಿ ನಲಿವನಾನುತಿರ್‍ದರಲೆ ?
ಚೆಲುವ ಬೇಟೆಯಾಡಿ ಕಣ್ಗೆ ಬಲಿಯ ಸಲಿಸಿಕೊಂಡೆನಲೆ ?
ಇಳೆಯ ಕಳೆಯ ಕಿಡಿಯನೊಂದು
ತೊಳೆದು ಬಿಟ್ಟೆ ನಾನು ಇಂದು ;
ನುಡಿದೆನಿಂತು ಒಳಗೆ ನೊಂದು
ಬಗೆವ ಬಗೆಯ ಮುಗಿದ ಬಾಯ ದುಗುಡವೊಗೆದ ಮೊಗದಲಿ,
ಮುಗುದನಂತೆ ನಡೆಯುತಿರ್‍ದೆ ಆಗಿ ನಾನು ಮಾತಿಲಿ!
* * * *

ಚೆಲುವಿಗೊಲಿದು ತಳಿರ ಅಲರ ಕೊಂಡುದೇನು ತಪ್ಪೊ?
ಬಳಿಕ ಅದರ ಅಳಿವಿಗಾಗಿ ನೊಂದು ನುಡಿದುದೊಪ್ಪೊ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಕ್ಷರದೊಳ್ ಅನ್ನವನಿತ್ತ
Next post ವಲೊಲ್ಲೆ ಕೇದಿಗೆ

ಸಣ್ಣ ಕತೆ

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…