Home / ಕವನ / ಕವಿತೆ / ಚೆಲುವಿನ ಬೇಟೆ

ಚೆಲುವಿನ ಬೇಟೆ


ಹಗಲು ಮುಗಿವ ಸಮಯ ; ದಿನಪ ಜಿಗಿಯಲಿದ್ದ ಬಾನಿನಿಂದೆ.
ಒಗೆದು ಸಂಜೆಗೆಂಪ ತುಂಡುಮುಗಿಲುಗಳಿಗೆ ಬಣ್ಣ ಬರೆದು,
ಪಸಲೆನೆಲಕೆ ಸೊಬಗ ಸಲಿಸಿ, ಹಸಿರಿನೆಲೆಯ ಕಳೆಯ ಬೆಳಸಿ,
ಮಿಸುನಿವಿಸಿಲ ಪಸರಿಸುತಲಿ ರಸೆಯನಾತ ರಂಜಿಸಿದ್ದ.
ಕಾಲವೇನೊ ಬಾಳ ಸೊಗಸು
ಎಲ್ಲ ಕಡೆಗು ಚೆಲ್ಲ ಬೆಳಸು,
ಬಯಸಿತದನು ಉಣಸು ಮನಸು,
ಬಳಿಯಲಿರುವ ಗೆಳೆಯರನೂ ಬರಲು ಕರೆದೆನು –
ಹೊಳೆಯ ತಡಿಯ ತೋಟದೆಡೆಗೆ ಹೊರಟು ನಡೆದೆನು.


ಗೆಳೆಯರೊಡನೆ ಕೆಲೆದು ನಗುತ ಹೊಳೆಯ ಬಳಿಗೆ ಬರುತಲಿರೆ-
ಬಲದ ಬದಿಗೆ ಹೊಂದಿಯಿರುವ ತಳಿತ ಹೊಂಗೆಮರವ ಕಂಡೆ;
ತಿಳಿಯ ಹಸಿರಿನೆಳೆಯ ತಳಿರು ಬೆಳೆದ ಹಸಿರ ಬಲಿತ ತಳಿರು,
ಇಳಿಯ ಬಿಸಿಲಿನೊಳುಪ ಹೊರೆದು, ಸುಳಿವ ಗಾಳಿಗೊನೆದು ತೊನೆದು
ಸೂಸುತಿದ್ದುವಲ್ಲಿ ನಗೆಯ,
ಸೂರೆಗೈದುವೆನ್ನ ಬಗೆಯ,
ಮುಂದಕರಿಸದಾದೆನಡಿಯ;
ತಳಿರ ಸೊಬಗಿನಲಿಯೆ ನೋಟ ನೆಲಸಿ ನಿಂದೆನು;
ಚೆಲುವನಿದನು ಕಳೆದು ನಡೆವುದೆಂತು ಎಂದೆನು!


ಒಡನೆ ಕೆಳೆಯರಿದ್ದರಲೆ ? ನಡೆದುಬಿಟ್ಟರವರು ಮುಂದೆ;
ತಡೆವುದೆಂತು ನಾನು ಹಿಂದೆ ? ಹಾಗೆ ನಸುವೆ ನಿಂತು ಬಗೆದೆ :
ಮನವನೆಳೆದುಕೊಂಡ ತಳಿರ ಗೊನೆಯನೊಂದ ಮುರಿದುಕೊಂಡೆ,
ಎನಿತೊ ನಲುಮೆಯಿಂದಲದನು ತನುವಿಗೊತ್ತಿಕೊಳುತ ನಡೆದೆ.
ಅಡಿಯನಿಟ್ಟೆ ಬೇಗ; ಮುಂದೆ
ನಡೆದಿರುವರ ಸಾರಿ ಬಂದೆ;
ನಡೆಯಿತೆನಿತೊ ಮಾತು ಅಂದೆ.
ಓತು ತಂದ ಗೊನೆಯ ತಳಿರನೊಂದನೊಂದನು-
ಮಾತಿನಲ್ಲಿ ಮರೆತು ಹರಿದು ಹಿಸುಕಿ ಒಗೆದೆನು.


ಬಂದೆವಾಗ ಬನಕೆ; ಒಡನೆ ಬಂದ ಕೆಳೆಯರವರು ಕಲ್ಲಿ-
ನೊಂದು ಜಗುಲಿಯಲ್ಲಿ ಕುಳಿತು, ಮುಂದೆ ಸಾಗಿಸಿದರು ಮಾತು
ಕುಳಿತುಕೊಳ್ಳಲಿಲ್ಲ ನಾನು ಉಳಿದೆನವರ ಬರಿಯ ಹರಟೆ;
ಸುಳಿದು ಬರುವೆ ಬನದೊಳೆಂದು ಅಲೆದಾಡುತ ಹಾಗೆ ಹೊರಟೆ.
ಕಂಪಿನೆಲೆಯ ಗಿಡಗಳೇನು!
ಜೊಂಪಿನಲರ ಲತೆಗಳೇನು!
ಸೊಂಪ ನೋಡಿ ತಣಿದೆ ನಾನು.
ಎಡೆಯೊಳೊಂದು ಒಳುಗುಲಾಬಿಗಿಡವ ಕಂಡು ತಡೆದನು;
ಗಿಡದೊಳಿದ್ದದೊಂದೆ ಹೂವ ಬೆಡಗನೇನನೆಂಬೆನು ?


ಹಸಿರುತಳಿರ ತುತ್ತತುದಿಗೆ ಮಿಸುಕಾಡುತ ಮೆಲುಗಾಳಿಗೆ-
ಎಸೆಯುವರಳ ಕಂಡು ಕಣ್ಣ ಹಸಿವು ಹೆಚ್ಚೆ, ನಿಂತೆ ಹಾಗೆ,
‘ಹಸಿರು ಸೀರೆಯುಟ್ಟು ಸೆರಗ ಮುಸುರೆ ತಾಯಿ ಮಲಗಿಸಿರಲು-
ಮುಸುಕ ಸರಿಸಿ ತಾಯ ನೋಳ್ಪ ಹಸುಳೆಯ ಮೊಗವಿದುವೊ?’ ಎಂದೆ.
ನಲ್ಲ ಬಿನದದಲ್ಲಿ ನುಡಿದ
ಲಲ್ಲೆ ವಾತುಗಳಿಗೆ ನಾಚಿ
ನಲ್ಲೆ ತನ್ನ ಸೆರಗ ಚಾಚಿ-
ಚೆಲ್ವಮೊಗವ ಮುಚ್ಚಿಕೊಳ್ಳಲು ಸೆರಗು ಸರಿದು ತೋರುವ-
ಗಲ್ಲದ ತೆರ ಬೀರಿತರಳು ಹೊಸತುಬಗೆಯ ಚೆಂದವ


‘ಇನಿದುತಿನಿಸ ನಿನಗೀಯುವೆ, ಕುಣಿಕುಣಿಯುತ ಬಳಿಗೆ ಬಾರೊ!’
ಎನುತ ಕರೆಯೆ ನಮ್ಮ ಮುದ್ದ ಮಿನುಗುನಗೆಯ ಮೊಗದಿ ಬಂದು,
ಕೈಯ ನೀಡಿ ಬೇಡಲದನು, ‘ಬಾಯನು ತೆರೆ’ ಎನಲು ನಾನು,
ಬಾಯ ತರೆದು ನಿಲ್ಲಲವನ ಬಾಯಿ ಹೀಗೆ ಹೊಳವುದಲೇ?’-
ಹೀಗೆ ಎನಿತೊ ಮನದಿ ಬಗೆದೆ,
ಎವೆಯಿಕ್ಕದೆ ನೋಡುತಿರ್‍ದೆ,
ನೆಟ್ಟ ದಿಟ್ಟ ಕೀಳದಾದೆ.
ಕಳೆದೆನಿಂತದೇಸೊ ಕಾಲ; ಬಳಿಕ ಮೆ-ಲ್ಲ-ಕೆ-
ಅಲರ ಕೊಯಿದುಕೊಂಡು ಮರಳಿ ನಡೆದ ಹಿಂದಕೆ.


ಎತ್ತಿಕೊಂಡು ಕೈಗೆ ಹೂವ ಮುತ್ತು ಕೊಟ್ಟೆ ಮೋಹದಿಂದೆ;
ಒತ್ತಿಕೊಂಡೆ ಗಲ್ಲಗಳಿಗೆ, ಮತ್ತೆ ಮತ್ತೆ ಮೂಸಿ ನಲಿದೆ.
ಬೆರಳಿಂದಲಿ ತಿರುಗಿಸುತಲಿ, ಮರಳಿ ಮರಳಿ ನಿರುಕಿಸುತಲಿ,
ಅರಿವು ಇರದ ತೆರದಿ ನಡೆದುಬರುತ ಕೆಳೆಯರನ್ನು ಕಂಡೆ.
ನಡೆದೆ ಇದ್ದಿತವರ ಮಾತು,
ಹರಟೆಗೆನ್ನ ಮನವೆಳಸಿತು,
ವಾದ-ಚರ್ಚೆ ಬಲು ನಡೆಯಿತು.
ಹುರುಳು ಇರದ ಹರಟೆಗಳಿಗೆ ಮನವನಾಗ ಮಾರಿದೆ;
ಅರಳಿನೆಸಳನೊಂದೊಂದನು ಹರಿದು ಹೊಸೆದು ತೂರಿದೆ.


ಕೊನೆಯ ಕಾಣಲಿಲ್ಲ ಮಾತು; ದಣಿದು ನಿಲ್ಲಿಸಿದೆವು ವಾದ;
‘ಮನೆಗೆ ತೆರಳೆ ಸಮಯವಾಯ್ತೆ!’ ಎನುತಲೆಲ್ಲರೆದ್ದೆವಾಗ-
ಕೆಳಗೆ ನೆಲದಿ ಬಾಡಿ ಬಿದ್ದ ಅಲರಿನೆಸಳುಗಳನು ಕಂಡೆ ;
ಮರವೆ ತೊಲಗೆ, ನನ್ನ ಹುಚ್ಚನರಿದು ಹೀಗೆ ಎಂದುಕೊಂಡೆ :
‘ಅಲ್ಲಿ ತಳಿರ ಮುರಿದುದೇನು!
ಇಲ್ಲಿ ಹೂವ ಕೊಯ್ದುದೇನು !
ಮಾತಿಗೆ ಮರುಳಾದುದೇನು !
ಒಲಿದು ತಂದ ಚೆಲುವಿನೊಡನೆ ಬರಿದೆ ಮಣ್ಗೆ ಬೆರಸಿದೆ;
ಗಳಿಗೆಗಾಗಿ ಮಳಿಗೆ ಸುಡುವ ಮೂಳನಂತೆ ಮಾಡಿದೆ.


‘ಮುರಿದು ನಾನು ಕಿಡಿಸದಿರಲು ಮೆರೆಯುತಿದ್ದಿತಲ್ಲಿ ತಳಿರು ;
ಹರಿದು ಹೊಸೆದು ಹಾಕದಿರಲು ಮಿರುಗುತಿದ್ದತಿಲ್ಲಿ ಅಲರು.
ಹಲವರಿದರ ಚೆಲುವ ನೋಡಿ ನಲಿವನಾನುತಿರ್‍ದರಲೆ ?
ಚೆಲುವ ಬೇಟೆಯಾಡಿ ಕಣ್ಗೆ ಬಲಿಯ ಸಲಿಸಿಕೊಂಡೆನಲೆ ?
ಇಳೆಯ ಕಳೆಯ ಕಿಡಿಯನೊಂದು
ತೊಳೆದು ಬಿಟ್ಟೆ ನಾನು ಇಂದು ;
ನುಡಿದೆನಿಂತು ಒಳಗೆ ನೊಂದು
ಬಗೆವ ಬಗೆಯ ಮುಗಿದ ಬಾಯ ದುಗುಡವೊಗೆದ ಮೊಗದಲಿ,
ಮುಗುದನಂತೆ ನಡೆಯುತಿರ್‍ದೆ ಆಗಿ ನಾನು ಮಾತಿಲಿ!
* * * *

ಚೆಲುವಿಗೊಲಿದು ತಳಿರ ಅಲರ ಕೊಂಡುದೇನು ತಪ್ಪೊ?
ಬಳಿಕ ಅದರ ಅಳಿವಿಗಾಗಿ ನೊಂದು ನುಡಿದುದೊಪ್ಪೊ?
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...