ವಾರಿ ರುಮ್ಮಾಲ ಸುತ್ತಿ

ವಾರಿ ರುಮ್ಮಲ ಸುತ್ತಿ ಓಣ್ಯಾಗ ನಿಂತಾನ|
ಹ್ವಾರ್ಯಾನಿಲ್ಲೇನೊ| ಹೊಲದಾಗ ಹೊಲದಾಗ|
ಹ್ವಾರ್ಯಾನಿಲ್ಲೇನೊ ||
ಹ್ವಾರ್ಯಾನಿಲ್ಲಽ ಏನೊ ಹೊಲದಾಗ ಚಂದರಾಮಾ|
ನಾರ್ಯಾರಿಲ್ಲೇನೊ| ಮನಿಯಾಗ ಮನಿಯಾಗ|
ನಾರ್ಯಾರಿಲ್ಲೇನೊ |೧|

ಮಕಮಕ ಮಲ್ಲೀಗಿ ಅದರಾಗ ಖ್ಯಾದೀಗಿ|
ಬಿಚ್ಚಿ ನೋಡಿದರ| ಬಿಳೆಯೆಲಿಯೊ ಬಿಳಿಯೆಲಿಯೊ|
ಬಿಚ್ಚಿ ನೋಡಿದರ||
ಬಿಚ್ಚೀನೆ ನೋಡಿದರ ಬಿಳೆಯೆಽಲಿಯಂಥವಳು|
ಬಿಟ್ಟ ಮಲಗೂದು| ಛೆಂದೇನೊ ಛೆಂದೇನೊ|
ಬಿಟ್ಟಿ ಮಲಗೂದು |೨|

ಬಿಟ್ಟಽರ ಬಿಡಲ್ಯಾಕ ಬಿಗುವೀನ ಮಾತ್ಯಾಕೊ|
ಬಿಟ್ಟಕ್ಕಿ ಮ್ಯಾಲ| ಮನಸ್ಯಾಕೊ ಮನಸ್ಯಾಕೊ|
ಬಿಟ್ಟಕ್ಕಿ ಮ್ಯಾಲ||
ಬಿಟ್ಟಕ್ಕಿಯಽ ಮ್ಯಾಲ ಮನಸ್ಯಾಕೊ ಚಂದರಾಮಾ|
ಕಟ್ಟಿಕಲ್ಲಾಗಿ| ಇರಹೋಗೊ ಇರಹೋಗೊ
ಕಟ್ಟಿಕಲ್ಲಾಗಿ |೩|

ಬಾಳಿ ಕೊಯ್ದರ ತೋಟ ಹಾಳಾದರರಿದೇನೊ|
ಆಳಲ್ದ ರಾಯಾ| ಮಡೆದೀಗೊ ಮಡದೀಗೊ|
ಆಳಲ್ದ ರಾಯಾ||
ಆಳಲ್ದನಽ ರಾಯಾ ಮಡದೀಗಿ ಬಿಟ್ಟರ|
ಬಾಳೆಹಣ್ಣೇನೊ| ಕೆಡಲಾಕೊ ಕೆಡೆಲಾಕೊ|
ಬಾಳಿಹೆಣ್ಣೇನೊ |೪|

ಮಲ್ಲಿಗ್ಹೂವಿನ ದಂಡಿ ಅಲ್ಲಿಟ್ಟ ಇಲ್ಲಿಟ್ಟಿ|
ಕಲ್ಲ ಮ್ಯಾಲಿಟ್ಟ| ಕೈಯಾಗಿಟ್ಟ ಕೈಯಾಗಿಟ್ಟ|
ಕಲ್ಲ ಮ್ಯಾಲಿಟ್ಟ||
ಕಲ್ಲ ಮ್ಯಾಲಽ ಇಟ್ಟ ಕೈಯಾಗಿಟ್ಟ ಚೆಂದರಾಮಾ|
ಪಾದ ಮ್ಯಾಲಿಟ್ಟ| ಶರಣೆಂದ ಶರಣೆಂದ|
ಪಾದ ಮ್ಯಾಲಿಟ್ಟ |೫|
*****

ಪ್ರಣಯಾಂತರ

ಪ್ರಣಯವು ಜೀವನದ ಒಂದು ಅತಿಮಹತ್ವದ ಭಾಗವಾಗಿದೆಯೆಂಬುದು ನಿರ್ವಿವಾದವಾದ ಮಾತು. ಈಚೆಗೆ ಜಗತ್ತು ಈ ವಿಷಯದಲ್ಲಿ ಬಹಳವಾಗಿ ಲಕ್ಷ್ಯವನ್ನು ಪೂರಯಿಸುತ್ತಿರುವುದು. ಈ ಬಗೆಗೆ ಈಗ ನಡೆದಿರುವ ಘನವಾದ ವಿಚಾರಪ್ರವಾಹವನ್ನು ನೋಡಿದರೆ ಪ್ರಣಯದ ಮೇಲಿನ ಇಂದಿನ ಕಟ್ಟುಗ್ರವಾದ ಬಂಧನಗಳೆಷ್ಟೊ ಇನ್ನು ಮುಂದೆ ಸಡಿಲಬಹುದಾಗಿ ಕಂಡರೂ ಪ್ರಣಯಾಂತರದ ಕೋಪವು ಮಾಯವಾದೀತೋ ಇಲ್ಲವೋ ಎಂಬುದು ಸಂದೇಹದ ಮಾತೇ ಆಗಿದೆ. ಏಕೆಂದರೆ ಈ ಕೋಪವು ನಾವು ತಿಳಿದುಕೊಂಡಿರುವಂತೆ ಕೇವಲ ಸಾಮಾಜಿಕವಾಗಲಿ, ಬೌದ್ಧಿಕವಾಗಲಿ ಆಗಿರದೆ ಅದು ಜೀವದ ಅತ್ಯಂತ ಆಳವಾದ ಹೃದಯವೆಂಬ ಪ್ರದೇಶಕ್ಕೆ ಸಂಬಂಧಿಸಿದುದಾಗಿದೆ ಎಂದು ಎನಿಸುತ್ತದೆ. ಪ್ರಣಯದ ಮಾತಂತೂ ಒತ್ತಟ್ಟಿಗಿರಲಿ, ಆದರೆ ಗೆಳೆತನದ ಆಳವಾದ ಪ್ರೇಮದಲ್ಲಿ ಕೂಡ ಈ ಮಾತು ಅನುವಕ್ಕೆ ಬರುತ್ತದೆ. ತನ್ನ ಅಕ್ಕರತೆಯ ಗೆಳೆಯನು ಇನ್ನೊಬ್ಬನೊಡನೆ ತನಗಿಂತ ಹೆಚ್ಚಿನ ಪ್ರೀತಿಯನ್ನು ತೋರಿಸುತ್ತಿದ್ದಾನೆಂದು ಎನಿಸಿದರೆ, ಈತನ ಹೃದಯದಲ್ಲಿ ಅತುಲನೀಯವಾದ ಸಂಕಟವೇಳುವುದುಂಟು. ಹೀಗೆಂದ ಮೇಲೆ ಪ್ರೇಮದ್ದೇ ಇನ್ನೊಂದು ಸ್ವರೂಪವಾದ ಪ್ರಣಯಕ್ಕೆ ಈ ಮಾತು ಹೇಗೆ ಸಂಬಂಧಿಸದೆ ಇದ್ದೀತೆಂಬುದೇ ಇಂದು ಊಹಿಸಲಶಕ್ಯವಾಗಿದೆ.

ಇದೀಗ ನಾವು ಪ್ರಣಯಾಂತರವೆಂಬ ವಿಭಾಗದಲ್ಲಿ ಸಂಗ್ರಹಿಸಿದ ಹಾಡುಗಳು ಆರು. ಇವುಗಳಲ್ಲಿ ಕೊನೆಯದಾದ ಪಾರ್ವತಿಯ ಪರಿತಾನದ ಹಾಡು ಮೇಲ್ಕಂಡ ನಮ್ಮ ಮಾತನ್ನು ಬಲವಾಗಿ ಸಮರ್ಥಿಸುವಂತಿದೆ. ತಮ ಪ್ರಿಯ ವ್ಯಕ್ತಿಯು ಕೇವಲ ತಮ್ಮೊಬ್ಬರ ಪಾಲಿಗೇ ಸಂಪೂರ್ಣವಾಗಿ ಉಳಿದು ಇರಬೇಕೆಂಬ ಅಂತರಂಗದ ಅಸೆಯು ಬಹು ಪ್ರಬಲವಾಗಿರುತ್ತದೆ ಎಂಬುದು ಅನುಭವದ ಹೊರಗಿನ ಮಾತೇನೂ ಅಲ್ಲ.

ಪ್ರಣಯಾಂತರದ ಮುನಿಸಿಗೆ ಸಾಹಿತ್ಯ ಶಾಸ್ತ್ರದಲ್ಲಿ ಮತ್ತು ಬಂಗಾಲದ ಭಕ್ತಿಶಾಸ್ತ್ರದಲ್ಲಿ `ಮಾನ’ವೆಂದು ಹೆಸರಿಡಲಾಗಿದೆ. `ಗೀತಗೋವಿಂದ’ದಲ್ಲಿ ಈ ಮಾತಿಗೆ ಸಾಕಷ್ಟು ಉದಾಹರಣೆಗಳಿವೆ.

ಪ್ರಣಯಾಂತರದ ಕುಶಲಪ್ರಶ್ನೋತ್ತರಗಳು ರಸಿಕರ ಚಿತ್ತವನ್ನು ರಂಜಿಸುವುದರಲ್ಲಿ ಮಿಗಿಲಾದವುಗಳು. ಪ್ರಣಯಿಗಳಲ್ಲಿ ಆರೋಪಿತವ್ಯಕ್ತಿಯು ತನ್ನ ಅವ್ಯಭಿಚಾರಿತ್ವನನ್ನು ಎಷ್ಟು ಸಮರ್ಥನಗೊಳಿಸಿದರೂ ಆರೋಪಕನಿಗೆ ಸ್ಸಂದೇಹವುಂಟಾಗದಿರಲು ಕೊನೆಗೆ ಸತ್ವಂತಿಕೆಯ ಕೋಪ. ಆರೋಪಕ ವ್ಯಕ್ತಿಯ ಕೋಪವು ವಿಚ್ಛೇದಕರವಾದರೆ ಆರೋಪಿತ ವ್ಯಕ್ತಿಯ ರೋಷವು
ಸಂಯೋಗಕರವಾಗಿರುತ್ತದೆ. ಶಾಕುಂತಳದಲ್ಲಿ ನಾಯಕನ ಸಂದೇಹಗಳಿಗೆಲ್ಲ ಉತ್ತರ ಹೇಳಿ ಬೇಸತ್ತ ನಾಯಿಕೆಯು ಕೊನೆಗೆ ಮುನಿಸಿನಿಂದ `ಅನಾರ್ಯಾ’ ಎಂದು ಸಂಬೋಧಿಸಿದಾಗಲೆ ಆತನಲ್ಲಿ ತುಸುವಾದರೂ ವಿವೇಕವು ಹುಟ್ಟುತ್ತದೆಯಲ್ಲವೇ?

ನಾನು ಮೊದಲಿಗೆ ಹೇಳಿದ ಕೋಪದ ಜಾತಿಯೂ ಇದೂ ಭಿನ್ನವಾಗಿವೆ. ಈ ಹಾಡುಗಳೊಳಗಿನ ರೋಷವು ರಸಪೋಷಕವಾಗಿದೆ.

—–

ವಾರಿ ರುಮ್ಮಾಲ ಸುತ್ತಿ

ಮಗಳನ್ನು ತನ್ನ ತಮ್ಮನಿಗೆ ಮದುವೆಮಾಡಿಕೊಟ್ಟ ಒಬ್ಬ ಅಕ್ಕ ಹೇಳುವ ಹಾಡಿದು. ತಮ್ಮನು ತನ್ನ ಮಡದಿಯನ್ನು ಬಿಟ್ಟಿದ್ದಾನೆ. ಸೂಳಿಗೇರಿಯಲ್ಲಿ ಆತನು ಸುಳಿದಾಡುತ್ತಿರುವುದನ್ನು ನೋಡಿ ಅಕ್ಕನು ಆಡುವ ಮಾತುಗಳು ಮೊದಲಿನ ಎರಡು ನುಡಿಗಳಲ್ಲಿವೆ. ಮುಂದಿನ ಎರಡು ನುಡಿಗಳಲ್ಲಿ ತನ್ನ ಮಗಳ ಕೋಮಲತೆ ಮತ್ತು ಪವಿತ್ರತೆ ಇವುಗಳನ್ನು ಕೊಂಡಾಡಿ
ಪರ್ಯಾಯದಿಂದ ಅವನ ದುರ್ದೈವವನ್ನು ಹೆಳೆಯುವಳು. ಆ ಮೇಲೆ ಅವಳಿಗೆ
ಅಲ್ಲಿ ಆತನ ಸುಳಿದಾಟದ ಕಾರಣವು ಬೇರೆಯಾಗಿ ತೋರುವುದು. ಆತನು
ತನ್ನ ಹೆಂಡತಿಯು ಕೆಟ್ಟಿರಬಹುದೇನೆಂದು ಪರೀಕ್ಷಿಸಲಿಕ್ಕೆ ಹಾಗೆ ಸುಳಿಯುತ್ತಿದ್ದಾನೆಂದು ಎನಿಸಿ, ಅವಳು ಮುಂದಿನ ಎರಡು ನುಡಿಗಳಲ್ಲಿ “ಬಿಟ್ಟವಳ ಮೇಲೆ ಮತ್ತೆ ನಿನ್ನ ಲಕ್ಷ್ಯವೇಕೆ!” ಎಂದು ಅವನನ್ನು ಕುರಿತು ಆಡಿಕೊಳ್ಳುವಳು. ಅದರ ಮುಂದಿನ ಎರಡು ನುಡಿಗಳಲ್ಲಿ ಅವನಿಗೆ ಆಣಕವನ್ನಾಡಿ ತನ್ನ ಮಗಳ ಶುದ್ಧತೆಯನ್ನು ಬಿಂಕದಿಂದ ಪ್ರಶಂಸಿಸುವಳು. ಕೊನೆಯ ಎರಡು ನುಡಿಗಳಲ್ಲಿ ಅಕ್ಕರತೆಯಿಂದ ಜೋಪಾನ ಮಾಡಿದ ತನ್ನ ಮಗಳ ದುರವಸ್ಥೆಯಿಂದ ಪರಿತಾಪ
ಪಡುವಳು.

ಛಂದಸ್ಸು:- ತ್ರಿಪದಿಯೇ

ಶಬ್ದಪ್ರಯೋಗಗಳು:- ವಾರಿ-ಸೊಟ್ಟ. ಹ್ವಾರೆ=ಉದ್ಯೋಗ. ಕಟ್ಟಿ ಕಲ್ಲಾಗಿ ಇರಹೋಗು=ಸೂಳೆಯರ ಮನೆಯ ಮೆಟ್ಟಿಲುಗಳ ಕಲ್ಲಾಗಿ ಅವರ ಪಾದತಾಡನದ ಸುಖನನ್ನು ಉಣ್ಣು ಹೋಗು. ಅಲ್ಲಿಟ್ಟ ಇಲ್ಲಿಟ್ಟ=ಹೂವಿನಂತಹ ಮಗಳನ್ನು ಪರಿಪರಿಯಿಂದ ಎತ್ತಿ ಮುದ್ದಾಡಿ ಜೋಪಾನಮಾಡಿದೆನು. ಕಲ್ಲ ಮ್ಯಾಲಿಟ್ಟ=ಕೊನೆಗೆ ದಾಂಪತ್ಯಧರ್ಮವೆಂಬ ಕಠಿಣಪಾಷಾಣದ ಮೇಲೆ ಇರಿಸಿದೆನು. ಛೆಂದ=ಶೋಭೆ. ನಾರ್ಯಾರು=ನಾರಿಯರು. ಬಿಟ್ಟಕ್ಕಿ=ಬಿಡಲ್ಪಟ್ಟವಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗೂಡು ಕಟ್ಟಿದ ಹಕ್ಕಿ
Next post ನಾ ಕಂಡ ಸಂಗೀತ ಕಾರಂಜಿ

ಸಣ್ಣ ಕತೆ

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

cheap jordans|wholesale air max|wholesale jordans|wholesale jewelry|wholesale jerseys