Home / ಕವನ / ಕವಿತೆ / ದೇವರೆಂದರೇನು ಅಜ್ಜ?

ದೇವರೆಂದರೇನು ಅಜ್ಜ?

“ದೇವರೆಂದರೇನು ಅಜ್ಜ, ದೇವರೆಂದರೇನು ?
ಹೇಳು ಅವನು ಯಾರು, ಏನು, ತಿಳಿಯಬೇಕು ನಾನೂ”

“ಬಾನು ಬುವಿಯ ಕೈಗೆ ಕೊಟ್ಟ ಬೆಳಕಿನೂರೆಗೋಲು,
ಜೀವ ಎಂದೊ ಕುಡಿದು ಮರೆತ ತಾಯಿಯೆದೆಯ ಹಾಲು,
ಕಲ್ಲು ಮಣ್ಣು ಬಳಸದೇನೆ ಕಟ್ಟಿಕೊಂಡ ಮನೆ.
ಏಸು, ಗಾಂಧಿ ಜೀವಜಲವ ಸುರಿಸಿ ಬೆಳೆದ ತೆನೆ.
ಎಂಥ ಮಾರುಕಟ್ಟೆಯಲ್ಲೂ ಸಿಗದ ಸರಕು ಮಗೂ,
ತಾಯ ಕಣ್ಣ ಬೆಳಕಿನಲ್ಲಿ ಹೊಳೆವ ತಾರೆ ಅದು.

“ದೇವರನ್ನೆ ಹೋಲುವುದು ರಾತ್ರಿ ತೆರೆದ ಬಾನು,
ತಲೆಯನೆತ್ತಿ ನೋಡಿದವರಿಗೆಲ್ಲ ಕಂಡರೂನು
ಮುಟ್ಟಬರದು, ಬೆನ್ನನಟ್ಟಿ ಹೋದರೂನು ಸಿಗದು,
ಇದೆ, ಇಲ್ಲ ಎರಡೂ ನಿಜ ತೆಕ್ಕೆಯೊಳಗೆ ಬರದು.
ಬಿತ್ತದೊಳಗೆ ಮಲಗಿರುವ ವೃಕ್ಷದಂತೆ ಅದು,
ಹೂವಿನೆದೆಯ ಮಾರ್ದವದಲಿ ಹರಿವ ಹಾಗೆ ಮಧು.

“ಎಷ್ಟೇ ಮಳೆ ಸುರಿದೂ ಅದು, ಗಾಳಿಯ ಥರ, ನೆನೆಯದು,
ಗಾಳಿ ಎಷ್ಟೆ ಬೀಸಿದರೂ, ಬೆಳಕಿನ ಥರ, ಅಲುಗದು,
ಮತ್ತೆ ಮತ್ತೆ ಮೊಗೆದರೂ ಕುಳಿ ಬೀಳದ ನೀರು,
ಕತ್ತಲ ಪಡೆ ಸೀಳಿ ನಡೆವ ತಂಬೆಳಕಿನ ತೇರು.
ನಮ್ಮ ಸುತ್ತ ಇದ್ದೂ ಅದು ನಮಗೆ ಸಿಗುವುದಲ್ಲ,
ಸಿಕ್ಕವರಿಗೆ ಕೂಡ ಆದನು ತಿಳಿಸಬರುವುದಿಲ್ಲ.

“ಮುಗಿಲ ರೆಕ್ಕೆ ಮಡಚಿ ಕುಂತ ಕಾಲವೆಂಬ ಹಕ್ಕಿ,
ಗ್ರಹ ತಾರಗಳದಕೆ ತಿನ್ನಲೆರಚಿದಂಥ ಅಕ್ಕಿ.
ಮ್ಮೆತುದಿಗಳೆ ಕಾಣದಂಥ ಮಹದಾಕೃತಿ ಅದು,
ಅಣುವಿನೆದುರ ಬೆಟ್ಟದಂತೆ ನಮ್ಮೆದುರಲಿ ಅದು.
ಹೀಗಿದ್ದೂ ಅದು ಸಣ್ಣನೆ ಕಣಕೂ ಕಿರಿದಂತೆ,
ಕೇಳುವ ನಮ್ಮೊಳಗಿನೊಳಗೆ ಅಣುವಾಗಿದೆಯಂತೆ!

“ದೇವರೆನುವುದೆಲ್ಲಕಿಂತ ತುಂಬ ಸರಳ ಮಗೂ.
ಆದರದನು ತಿಳಿದವರು ತುಂಬ ವಿರಳ ಮಗೂ”
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...