Home / ಕವನ / ಕವಿತೆ / ದೇವರೆಂದರೇನು ಅಜ್ಜ?

ದೇವರೆಂದರೇನು ಅಜ್ಜ?

“ದೇವರೆಂದರೇನು ಅಜ್ಜ, ದೇವರೆಂದರೇನು ?
ಹೇಳು ಅವನು ಯಾರು, ಏನು, ತಿಳಿಯಬೇಕು ನಾನೂ”

“ಬಾನು ಬುವಿಯ ಕೈಗೆ ಕೊಟ್ಟ ಬೆಳಕಿನೂರೆಗೋಲು,
ಜೀವ ಎಂದೊ ಕುಡಿದು ಮರೆತ ತಾಯಿಯೆದೆಯ ಹಾಲು,
ಕಲ್ಲು ಮಣ್ಣು ಬಳಸದೇನೆ ಕಟ್ಟಿಕೊಂಡ ಮನೆ.
ಏಸು, ಗಾಂಧಿ ಜೀವಜಲವ ಸುರಿಸಿ ಬೆಳೆದ ತೆನೆ.
ಎಂಥ ಮಾರುಕಟ್ಟೆಯಲ್ಲೂ ಸಿಗದ ಸರಕು ಮಗೂ,
ತಾಯ ಕಣ್ಣ ಬೆಳಕಿನಲ್ಲಿ ಹೊಳೆವ ತಾರೆ ಅದು.

“ದೇವರನ್ನೆ ಹೋಲುವುದು ರಾತ್ರಿ ತೆರೆದ ಬಾನು,
ತಲೆಯನೆತ್ತಿ ನೋಡಿದವರಿಗೆಲ್ಲ ಕಂಡರೂನು
ಮುಟ್ಟಬರದು, ಬೆನ್ನನಟ್ಟಿ ಹೋದರೂನು ಸಿಗದು,
ಇದೆ, ಇಲ್ಲ ಎರಡೂ ನಿಜ ತೆಕ್ಕೆಯೊಳಗೆ ಬರದು.
ಬಿತ್ತದೊಳಗೆ ಮಲಗಿರುವ ವೃಕ್ಷದಂತೆ ಅದು,
ಹೂವಿನೆದೆಯ ಮಾರ್ದವದಲಿ ಹರಿವ ಹಾಗೆ ಮಧು.

“ಎಷ್ಟೇ ಮಳೆ ಸುರಿದೂ ಅದು, ಗಾಳಿಯ ಥರ, ನೆನೆಯದು,
ಗಾಳಿ ಎಷ್ಟೆ ಬೀಸಿದರೂ, ಬೆಳಕಿನ ಥರ, ಅಲುಗದು,
ಮತ್ತೆ ಮತ್ತೆ ಮೊಗೆದರೂ ಕುಳಿ ಬೀಳದ ನೀರು,
ಕತ್ತಲ ಪಡೆ ಸೀಳಿ ನಡೆವ ತಂಬೆಳಕಿನ ತೇರು.
ನಮ್ಮ ಸುತ್ತ ಇದ್ದೂ ಅದು ನಮಗೆ ಸಿಗುವುದಲ್ಲ,
ಸಿಕ್ಕವರಿಗೆ ಕೂಡ ಆದನು ತಿಳಿಸಬರುವುದಿಲ್ಲ.

“ಮುಗಿಲ ರೆಕ್ಕೆ ಮಡಚಿ ಕುಂತ ಕಾಲವೆಂಬ ಹಕ್ಕಿ,
ಗ್ರಹ ತಾರಗಳದಕೆ ತಿನ್ನಲೆರಚಿದಂಥ ಅಕ್ಕಿ.
ಮ್ಮೆತುದಿಗಳೆ ಕಾಣದಂಥ ಮಹದಾಕೃತಿ ಅದು,
ಅಣುವಿನೆದುರ ಬೆಟ್ಟದಂತೆ ನಮ್ಮೆದುರಲಿ ಅದು.
ಹೀಗಿದ್ದೂ ಅದು ಸಣ್ಣನೆ ಕಣಕೂ ಕಿರಿದಂತೆ,
ಕೇಳುವ ನಮ್ಮೊಳಗಿನೊಳಗೆ ಅಣುವಾಗಿದೆಯಂತೆ!

“ದೇವರೆನುವುದೆಲ್ಲಕಿಂತ ತುಂಬ ಸರಳ ಮಗೂ.
ಆದರದನು ತಿಳಿದವರು ತುಂಬ ವಿರಳ ಮಗೂ”
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...