Home / ಕವನ / ಕವಿತೆ / ಆಗಮನ

ಆಗಮನ

ವಾಯುಸಂಚಾರಿ ಒಂದು ಪಟ್ಟಣದಿಂದ ಇನ್ನೊಂದಕ್ಕೆ ಹಾರಿ
ಬರುತ್ತಿದ್ದಾನೆ, ಕೆಳಗೆ ಮೋಡಗಳ ಮೇಲೆ ಮೋಡಗಳು ಬಿದ್ದು
ಅವುಗಳಂಚಿನಲಿ ಸೂರ್ಯನ ರಶ್ಮಿಗಳೆದ್ದು
ನಿಮಿಷಗಳು ಸರಿದರೂ ಸರಿಯುವುದಿಲ್ಲ ದಾರಿ

ಹೊಸೆಯುತ್ತಾನೆ ಮನಸ್ಸಿನಲ್ಲಿ ಒಂದು ಕವಿತೆಯ ಚರಣ:
ಎಲೆಲೆ ಗಗನ ಸಖಿ ಚಂದ್ರಮುಖಿ ಬಾರೆ
ಕಳಚಿ ಈ ಸೂಟುಬೂಟು ಆ ಅನಗತ್ಯದ ಸೀರೆ
ಮೋಡಗಳ ಮೆತ್ತೆಯೊಳಕ್ಕೆ ಹಾರೋಣ!

ಫಾರೂಕಬ್ದುಲ್ಲನ ಪತನ ವಿರೋಧಪಕ್ಷಗಳ ಪ್ರಕ್ಷೋಭನ
ಆಂತುಲೆಯ ವಿಚಾರಣೆ ಮುಂಬರುವ ಲೋಕಸಭಾ ಚುನಾವಣೆ
ಶೇರುಗಳ ಏರಿಳಿತ ಡಾಲರಿನ ಅನಿರೀಕ್ಷಿತ ಕುಸಿತ
ಶಬನಾ ಆಜ್ಮಿ ಸ್ಮಿತಾಪಾಟೀಲರ ಒಳಜಗಳ

ಆಹ! ಎಂತಹ- ಪೃಷ್ಠ!
ತಬ್ಬಿಕೊಳ್ಳಲೆಂದೇ ಉಬ್ಬಿನಿಂತ ಮಾಟ
ಕೇವಲ ಒಂದು ಒಳಚಡ್ಡಿಯ ಜಾಹೀರು
ಇರಲಿರಲಿ! ಈ ವಾರದ ಭವಿಷ್ಯ
ಏನು ವಿಷಯ?

“ಇಳಿಯಲಿದ್ದೇವೆ ನಾವೀಗ!
ದಯವಿಟ್ಟು ನಿಮ್ಮ ನಿಮ್ಮ
ಸೀಟು ಬೆಲ್ಟುಗಳನ್ನು ಕಟ್ಟಿಕೊಳ್ಳಿರಿ!
ಹೊಗೆಬತ್ತಿ ಸೇದದಿರಿ ! ಕೃತಜ್ಞತೆಗಳು !”
ಎನ್ನುತ್ತಾಳವಳು.

ಹೊರಗೆ ನೋಡುತ್ತಾನೆ-ಮೋಡಗಳಿಲ್ಲ
(ಶುಭ್ರ ವಾತಾವರಣ, ಸುಖಾಗಮನ)
ಎಷ್ಟೋ ದೂರ ಕೆಳಗೆ
ನೆಲ ಬಿದ್ದಿದೆ ಚಾಪೆಯ ಹಾಗೆ
ಮನೆ ಮರ ಕಾರ್ಖಾನೆ
ಮರೆತುಬಿಟ್ಪ ಆಟಿಕೆಗಳಂತೆ
ಮೊಡವೆಗಳಂಥ ಬಂಡೆಗಳು
ಇರುವೆಗಳಂತೆ ಸರಿಯುವ ಮನುಷ್ಯರು
ಇಷ್ಟೆತ್ತರದಿಂದಲೇ ಹೀಗೆ ಕಾಣಿಸಿದರೆ
ಇನ್ನೊಂದು ಗ್ರಹದಿಂದ ಹೇಗೆ ಕಾಣಿಸಬೇಡ!
ಎಂದುಕೊಳ್ಳುತ್ತಾನೆ-ಸೆಜಿಟೇರಿಯಸ್
ಧನುರ್ಧಾರಿ ಎಷ್ಟೋ ಬೇಟೆಗಳ ಹೊಡೆದವನು
ಸೀಟಿನೊಳಕ್ಕೆ ಜಾರಿ

ಎಂಥ ಸೆಕೆ ನೆಲದ ಮೇಲೆ
ನೂಕು ನುಗ್ಗಲು ಬೇರೆ!
ಯಾರ ಹೆಂಡಿರು ಯಾರ ಮಕ್ಕಳು
ಯಾರು ಯಾರಿಗೆ ಹಿಡಿದು ನಿಂತ ಹಾರಗಳು?
ಬಾಗಿಲಿನಿಂದಾಚೆ ಇರಿಸುತ್ತಾನೆ ಪಾದ
ಪರಿಚಯದ ಮುಖಗಳಿಗಾಗಿ ಹುಡುಕುತ್ತಾನೆ
ಇವನಲ್ಲ! ಇವನಲ್ಲ! ಎನ್ನುತ್ತವೆ
ಪ್ರತಿಯೊಂದು ಜತೆ ಕಣ್ಣುಗಳು
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...