Home / ಕವನ / ಕವಿತೆ / ಆಗಮನ

ಆಗಮನ

ವಾಯುಸಂಚಾರಿ ಒಂದು ಪಟ್ಟಣದಿಂದ ಇನ್ನೊಂದಕ್ಕೆ ಹಾರಿ
ಬರುತ್ತಿದ್ದಾನೆ, ಕೆಳಗೆ ಮೋಡಗಳ ಮೇಲೆ ಮೋಡಗಳು ಬಿದ್ದು
ಅವುಗಳಂಚಿನಲಿ ಸೂರ್ಯನ ರಶ್ಮಿಗಳೆದ್ದು
ನಿಮಿಷಗಳು ಸರಿದರೂ ಸರಿಯುವುದಿಲ್ಲ ದಾರಿ

ಹೊಸೆಯುತ್ತಾನೆ ಮನಸ್ಸಿನಲ್ಲಿ ಒಂದು ಕವಿತೆಯ ಚರಣ:
ಎಲೆಲೆ ಗಗನ ಸಖಿ ಚಂದ್ರಮುಖಿ ಬಾರೆ
ಕಳಚಿ ಈ ಸೂಟುಬೂಟು ಆ ಅನಗತ್ಯದ ಸೀರೆ
ಮೋಡಗಳ ಮೆತ್ತೆಯೊಳಕ್ಕೆ ಹಾರೋಣ!

ಫಾರೂಕಬ್ದುಲ್ಲನ ಪತನ ವಿರೋಧಪಕ್ಷಗಳ ಪ್ರಕ್ಷೋಭನ
ಆಂತುಲೆಯ ವಿಚಾರಣೆ ಮುಂಬರುವ ಲೋಕಸಭಾ ಚುನಾವಣೆ
ಶೇರುಗಳ ಏರಿಳಿತ ಡಾಲರಿನ ಅನಿರೀಕ್ಷಿತ ಕುಸಿತ
ಶಬನಾ ಆಜ್ಮಿ ಸ್ಮಿತಾಪಾಟೀಲರ ಒಳಜಗಳ

ಆಹ! ಎಂತಹ- ಪೃಷ್ಠ!
ತಬ್ಬಿಕೊಳ್ಳಲೆಂದೇ ಉಬ್ಬಿನಿಂತ ಮಾಟ
ಕೇವಲ ಒಂದು ಒಳಚಡ್ಡಿಯ ಜಾಹೀರು
ಇರಲಿರಲಿ! ಈ ವಾರದ ಭವಿಷ್ಯ
ಏನು ವಿಷಯ?

“ಇಳಿಯಲಿದ್ದೇವೆ ನಾವೀಗ!
ದಯವಿಟ್ಟು ನಿಮ್ಮ ನಿಮ್ಮ
ಸೀಟು ಬೆಲ್ಟುಗಳನ್ನು ಕಟ್ಟಿಕೊಳ್ಳಿರಿ!
ಹೊಗೆಬತ್ತಿ ಸೇದದಿರಿ ! ಕೃತಜ್ಞತೆಗಳು !”
ಎನ್ನುತ್ತಾಳವಳು.

ಹೊರಗೆ ನೋಡುತ್ತಾನೆ-ಮೋಡಗಳಿಲ್ಲ
(ಶುಭ್ರ ವಾತಾವರಣ, ಸುಖಾಗಮನ)
ಎಷ್ಟೋ ದೂರ ಕೆಳಗೆ
ನೆಲ ಬಿದ್ದಿದೆ ಚಾಪೆಯ ಹಾಗೆ
ಮನೆ ಮರ ಕಾರ್ಖಾನೆ
ಮರೆತುಬಿಟ್ಪ ಆಟಿಕೆಗಳಂತೆ
ಮೊಡವೆಗಳಂಥ ಬಂಡೆಗಳು
ಇರುವೆಗಳಂತೆ ಸರಿಯುವ ಮನುಷ್ಯರು
ಇಷ್ಟೆತ್ತರದಿಂದಲೇ ಹೀಗೆ ಕಾಣಿಸಿದರೆ
ಇನ್ನೊಂದು ಗ್ರಹದಿಂದ ಹೇಗೆ ಕಾಣಿಸಬೇಡ!
ಎಂದುಕೊಳ್ಳುತ್ತಾನೆ-ಸೆಜಿಟೇರಿಯಸ್
ಧನುರ್ಧಾರಿ ಎಷ್ಟೋ ಬೇಟೆಗಳ ಹೊಡೆದವನು
ಸೀಟಿನೊಳಕ್ಕೆ ಜಾರಿ

ಎಂಥ ಸೆಕೆ ನೆಲದ ಮೇಲೆ
ನೂಕು ನುಗ್ಗಲು ಬೇರೆ!
ಯಾರ ಹೆಂಡಿರು ಯಾರ ಮಕ್ಕಳು
ಯಾರು ಯಾರಿಗೆ ಹಿಡಿದು ನಿಂತ ಹಾರಗಳು?
ಬಾಗಿಲಿನಿಂದಾಚೆ ಇರಿಸುತ್ತಾನೆ ಪಾದ
ಪರಿಚಯದ ಮುಖಗಳಿಗಾಗಿ ಹುಡುಕುತ್ತಾನೆ
ಇವನಲ್ಲ! ಇವನಲ್ಲ! ಎನ್ನುತ್ತವೆ
ಪ್ರತಿಯೊಂದು ಜತೆ ಕಣ್ಣುಗಳು
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...