Home / ಕವನ / ಕವಿತೆ / ಹಗಲಲ್ಲಿ ಕೆಂಪು ಕತ್ತಲೆ

ಹಗಲಲ್ಲಿ ಕೆಂಪು ಕತ್ತಲೆ

ಹದ್ದು ಹಾರಾಡುತಿವೆ ದೇಶಾಕಾಶದ ಮೇಲೆ
ನಿದ್ದೆ ಮಾಡುತಿವೆ ಹೆಣಗಳು ಈ ನೆಲದ ಮೇಲೆ
ರಾಮಬಾಣಗಳು ಬಡಿಗೆ ಸಲಾಕಿಗಳಾಗಿವೆ
ಮಂದಿರಗಳಲ್ಲಿ ಮಾರಣಹೋಮ ನಡೆದಿದೆ
ವಿದ್ಯಾಮಂದಿರಗಳಲ್ಲಿ ಕೊಲ್ಲುವ ವಿದ್ಯಾಪಠಣ
ಜಗದೊಡೆಯ ಯಾವುದೋ ಸಂದಿಯಲ್ಲಿ ಕುಳಿತುಕೊಂಡು
ಬೇರೆ ಸಂದಿನವರನೆಲ್ಲ ಕೊಲ್ಲಲು ಧರ್ಮಾದೇಶ ನೀಡುತ್ತಾನೆ
ತಿಳಿ ಸರೋವರದಂಥ ಕೂಸು ಕಂದಮ್ಮಗಳ ಕಣ್ಣುಗಳಲ್ಲಿ
ಕೆಂಪು ನದಿಗಳ ಭಯಾನಕ ಕನಸುಗಳು
ಮನಮನಗಳು ಸಿಡಿಮದ್ದುಗಳ ಗೂಡುಗಳಾಗಿವೆ
ಮಾತು ಮಾತುಗಳು ವಿಷ ಒಳಗಿಟ್ಟುಕೊಂಡ ಹೂಗಳು
ಮಚ್ಚು ಚಾಕು ಚೈನುಗಳದೇ ಕಾರುಬಾರು
ಓಣಿ ಓಣಿಗಳಲ್ಲಿ ದೇಶದ ಸಂದುಗೊಂದುಗಳಲ್ಲಿ

ಆದರೆ ಮೇಲೆ ಮೇಲೆ ಹಾಡುತ್ತಿದ್ದಾರೆ
‘ಸಾರೆ ಜಹಾನ್‌ಸೆ ಅಚ್ಚಾ ಹಿಂದೋಸ್ತಾನ್ ಹಮಾರಾ’
‘ಈಶ್ವರ ಅಲ್ಲಾ ತೇರೇ ನಾಮ್ ಸಬಕೋ ಸನ್ಮತಿ ದೇ ಭಗವಾನ್’
ದಮ್ಮೇ ಇಲ್ಲದೆ ಹಾಡು ಗಾಳಿಯಲ್ಲಿ ತೇಲಿ ಕರಗಿ ಹೋಗುತ್ತವೆ

ದೇಶ ಸಮಸ್ಯೆಗಳ ಹಾವುಗಳ ಹುತ್ತ
ಒಳಗೊಳಗೇ ಭುಸುಗುಡುತ್ತಿವೆ
ಉಗುಳುತ್ತಿವೆ ವಿಷವ-ಕೊಲ್ಲುತ್ತಿವೆ ಭವಿಷ್ಯವ
ಮೇಲೆ ಕಟ್ಟಿದ ವಲ್ಮೀಕವ ಗುಡಿಯೆಂದು ಭಾವಿಸಿದ್ದಾರೆ
ರಾಮ ರಹೀಮರ ನಡುವೆ ಮುಗಿಲೆತ್ತರ ಗೋಡೆ
ಒಂದನ್ನೊಂದು ನಿರ್ನಾಮ ಮಾಡುವ ದ್ವೇಷ
ತ್ವೇಷದ ಭ್ರಮೆಯ ಪರಿಕಲ್ಪನೆ

ಜಗವೇ ಮನೆಯಾದವಗೆ ಮಂದಿರ ಮಸೀದಿಗಳಲಿ
ಕಟ್ಟಿ ಹಾಕಿದ್ದಾರೆ, ನಿರಾಕಾರ ನಿರ್ಗುಣನ ಮೈಮೇಲೆ
ನಾಮ ಜನಿವಾರ, ಟೋಪಿ ಗಡ್ಡಗಳ ಅಂಟಿಸಿ
ದಾರಿ ಮಾಡಿಕೊಂಡಿದ್ದಾರೆ ಕೆಂಪು ಕಾಲುವೆಗಳಿಗೆ
ಸಜ್ಜಾಗಿವೆ ಕೆಂಗಣ್ಣುಗಳು ಭಾವುಕತೆಯಿಂದ

ಬಾತುಕೂಂಡಿವೆ ತೋಳುಗಳು ಬಡಿದಾಡುವ ಹಟದಿಂದ
ವಿಜ್ಞಾನ ಸೂರ್ಯ ಒಂದೇ ತೆಕ್ಕೆಯಲ್ಲಿ
ಭೂಮಂಡಲವ ಅಪ್ಪಿಕೊಂಡಿರುವ ಈ ಹಗಲಲ್ಲೇ
ಆವರಿಸಿದೆ ಮತಾಂಧ ಕೆಂಪುಕತ್ತಲು ಸುತ್ತಲು
ತಾಲಿಬಾನೋ ಅಯೋಧ್ಯಯ ನೆಲಬಾನೊ
ಕಾಶ್ಮೀರವೋ ಮಾಯಲಾರದ ಹುಣ್ಣು ಹುಣ್ಣು
ಗಾಂಧೀಜಿಯ ಗುಜರಾತು ನರಮೇಧಗಳ ಸುಡುಗಾಡು
ಅಹಿಂಸಾತತ್ವದ ತೆಳು ಮೋಡ ಮೇಲೆ ಮೇಲೆ
ಹಿಂಸಾ ತಾಂಡವ ನರ್ತಿಸಿದೆ ಕರುಳುಗಳ ಮಾಲೆ ಮಾಲೆ
ರಾಜಕೀಯ ಚೌಕಾಸಿ ನಡೆದಿದೆ ಕುರ್ಚಿಗಳ ಮೇಲೆ
ಅಕರಾಳ ವಿಕರಾಳ ರಕ್ತಮಾಂಸಗಳ ಪಿಪಾಸೆ
ಹಲ್ಲುಕಿಸಿದು ದೇಶದ ಮೂಲೆ ಮೂಲೆಗಳಲ್ಲಿ ತಿನ್ನುತ್ತಿದ್ದರೂ
ದಿಲ್ಲಿ ಸಾರುತ್ತಿದೆ ಮೇರಾ ಭಾರತ್‌ ಮಹಾನ್
ಇಲ್ಲಿ ಅಂತರಾತ್ಮ ಮುನುಗುತಿದೆ ದೇಶದ ಅವಸಾನ್
ಸಬಕೋ ಸನ್ಮತಿ ದೇ ಭಗವಾನ್
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...