Home / ಕವನ / ಕವಿತೆ / ಹಗಲಲ್ಲಿ ಕೆಂಪು ಕತ್ತಲೆ

ಹಗಲಲ್ಲಿ ಕೆಂಪು ಕತ್ತಲೆ

ಹದ್ದು ಹಾರಾಡುತಿವೆ ದೇಶಾಕಾಶದ ಮೇಲೆ
ನಿದ್ದೆ ಮಾಡುತಿವೆ ಹೆಣಗಳು ಈ ನೆಲದ ಮೇಲೆ
ರಾಮಬಾಣಗಳು ಬಡಿಗೆ ಸಲಾಕಿಗಳಾಗಿವೆ
ಮಂದಿರಗಳಲ್ಲಿ ಮಾರಣಹೋಮ ನಡೆದಿದೆ
ವಿದ್ಯಾಮಂದಿರಗಳಲ್ಲಿ ಕೊಲ್ಲುವ ವಿದ್ಯಾಪಠಣ
ಜಗದೊಡೆಯ ಯಾವುದೋ ಸಂದಿಯಲ್ಲಿ ಕುಳಿತುಕೊಂಡು
ಬೇರೆ ಸಂದಿನವರನೆಲ್ಲ ಕೊಲ್ಲಲು ಧರ್ಮಾದೇಶ ನೀಡುತ್ತಾನೆ
ತಿಳಿ ಸರೋವರದಂಥ ಕೂಸು ಕಂದಮ್ಮಗಳ ಕಣ್ಣುಗಳಲ್ಲಿ
ಕೆಂಪು ನದಿಗಳ ಭಯಾನಕ ಕನಸುಗಳು
ಮನಮನಗಳು ಸಿಡಿಮದ್ದುಗಳ ಗೂಡುಗಳಾಗಿವೆ
ಮಾತು ಮಾತುಗಳು ವಿಷ ಒಳಗಿಟ್ಟುಕೊಂಡ ಹೂಗಳು
ಮಚ್ಚು ಚಾಕು ಚೈನುಗಳದೇ ಕಾರುಬಾರು
ಓಣಿ ಓಣಿಗಳಲ್ಲಿ ದೇಶದ ಸಂದುಗೊಂದುಗಳಲ್ಲಿ

ಆದರೆ ಮೇಲೆ ಮೇಲೆ ಹಾಡುತ್ತಿದ್ದಾರೆ
‘ಸಾರೆ ಜಹಾನ್‌ಸೆ ಅಚ್ಚಾ ಹಿಂದೋಸ್ತಾನ್ ಹಮಾರಾ’
‘ಈಶ್ವರ ಅಲ್ಲಾ ತೇರೇ ನಾಮ್ ಸಬಕೋ ಸನ್ಮತಿ ದೇ ಭಗವಾನ್’
ದಮ್ಮೇ ಇಲ್ಲದೆ ಹಾಡು ಗಾಳಿಯಲ್ಲಿ ತೇಲಿ ಕರಗಿ ಹೋಗುತ್ತವೆ

ದೇಶ ಸಮಸ್ಯೆಗಳ ಹಾವುಗಳ ಹುತ್ತ
ಒಳಗೊಳಗೇ ಭುಸುಗುಡುತ್ತಿವೆ
ಉಗುಳುತ್ತಿವೆ ವಿಷವ-ಕೊಲ್ಲುತ್ತಿವೆ ಭವಿಷ್ಯವ
ಮೇಲೆ ಕಟ್ಟಿದ ವಲ್ಮೀಕವ ಗುಡಿಯೆಂದು ಭಾವಿಸಿದ್ದಾರೆ
ರಾಮ ರಹೀಮರ ನಡುವೆ ಮುಗಿಲೆತ್ತರ ಗೋಡೆ
ಒಂದನ್ನೊಂದು ನಿರ್ನಾಮ ಮಾಡುವ ದ್ವೇಷ
ತ್ವೇಷದ ಭ್ರಮೆಯ ಪರಿಕಲ್ಪನೆ

ಜಗವೇ ಮನೆಯಾದವಗೆ ಮಂದಿರ ಮಸೀದಿಗಳಲಿ
ಕಟ್ಟಿ ಹಾಕಿದ್ದಾರೆ, ನಿರಾಕಾರ ನಿರ್ಗುಣನ ಮೈಮೇಲೆ
ನಾಮ ಜನಿವಾರ, ಟೋಪಿ ಗಡ್ಡಗಳ ಅಂಟಿಸಿ
ದಾರಿ ಮಾಡಿಕೊಂಡಿದ್ದಾರೆ ಕೆಂಪು ಕಾಲುವೆಗಳಿಗೆ
ಸಜ್ಜಾಗಿವೆ ಕೆಂಗಣ್ಣುಗಳು ಭಾವುಕತೆಯಿಂದ

ಬಾತುಕೂಂಡಿವೆ ತೋಳುಗಳು ಬಡಿದಾಡುವ ಹಟದಿಂದ
ವಿಜ್ಞಾನ ಸೂರ್ಯ ಒಂದೇ ತೆಕ್ಕೆಯಲ್ಲಿ
ಭೂಮಂಡಲವ ಅಪ್ಪಿಕೊಂಡಿರುವ ಈ ಹಗಲಲ್ಲೇ
ಆವರಿಸಿದೆ ಮತಾಂಧ ಕೆಂಪುಕತ್ತಲು ಸುತ್ತಲು
ತಾಲಿಬಾನೋ ಅಯೋಧ್ಯಯ ನೆಲಬಾನೊ
ಕಾಶ್ಮೀರವೋ ಮಾಯಲಾರದ ಹುಣ್ಣು ಹುಣ್ಣು
ಗಾಂಧೀಜಿಯ ಗುಜರಾತು ನರಮೇಧಗಳ ಸುಡುಗಾಡು
ಅಹಿಂಸಾತತ್ವದ ತೆಳು ಮೋಡ ಮೇಲೆ ಮೇಲೆ
ಹಿಂಸಾ ತಾಂಡವ ನರ್ತಿಸಿದೆ ಕರುಳುಗಳ ಮಾಲೆ ಮಾಲೆ
ರಾಜಕೀಯ ಚೌಕಾಸಿ ನಡೆದಿದೆ ಕುರ್ಚಿಗಳ ಮೇಲೆ
ಅಕರಾಳ ವಿಕರಾಳ ರಕ್ತಮಾಂಸಗಳ ಪಿಪಾಸೆ
ಹಲ್ಲುಕಿಸಿದು ದೇಶದ ಮೂಲೆ ಮೂಲೆಗಳಲ್ಲಿ ತಿನ್ನುತ್ತಿದ್ದರೂ
ದಿಲ್ಲಿ ಸಾರುತ್ತಿದೆ ಮೇರಾ ಭಾರತ್‌ ಮಹಾನ್
ಇಲ್ಲಿ ಅಂತರಾತ್ಮ ಮುನುಗುತಿದೆ ದೇಶದ ಅವಸಾನ್
ಸಬಕೋ ಸನ್ಮತಿ ದೇ ಭಗವಾನ್
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...