Home / ಕವನ / ಕವಿತೆ / ನಿಜಬುದ್ಧ

ನಿಜಬುದ್ಧ

ಹಿಂದೊಮ್ಮೆ ಬುದ್ಧ ತನ್ನೊಲವ ಶಿಷ್ಯನ ಕೂಡ
ಮಾತನಾಡುತಲಿರಲು ಸೃಷ್ಟಿಸ್ಥಿತಿಲಯ ವಿಷಯ,
ಆನಂದ ಪ್ರಶ್ನಿಸಿದ “ಗುರುದೇವ, ಹೃದಯದಲಿ
ತೊಡಕುತಿದೆ-ಸಂದೇಹ-ಕೇಳುವೊಡೆ-ಹೇಳುವೆನು!”
ಬುದ್ಧದೇವನು ಆಗ ಚಂದ್ರಮನ ಎಳೆನಗುವ   ೫
ನಕ್ಕು ಪೇಳಿದನಿಂತು – “ಆನಂದ, ಅಂತಹುದು
ಸಂದೇಹವೇನಿಹುದು? – ಮನವ ಮುರಿವಂತಹುದು!
ಅರಿತಿದ್ದರದಕಾನು ಉತ್ತರವ ಹೇಳುವೆನು”
“ಗುರುದೇವ! ಜೀವನದಿ ಎಲ್ಲರೊಡನಾಡುತಲಿ
ಕಾಮಕ್ರೋಧದ ಕ್ರೂರ ಅಲೆಗಳಪ್ಪಳಿಸಿದರು   ೧೦
ಕಲ್ಬಂಡೆಯಂತಿರುವ ಯೋಗವೇ ಮೇಲಹುದೊ?
ಮೇಣ್, ಜಗಕೆ ದೂರಾಗಿ ಜ್ಞಾನಪಡೆವುದು ಮೇಲೊ?”
“ಆನಂದ, ಸಂದೇಹ ತಿಳುಹಿದುದೆ ಮೇಲಾಯ್ತು!
ನಾನು ಜಗವನೆ ತೊರೆದು ದೂರ ಕಾಡನು ಸೇರಿ
ಬುದ್ಧನಾದುದು ನಿನಗೆ ಅರಿತಿಹುದು …..ಎನಗಲ್ಲಿ,   ೧೫
ಕಾನನದಿ ಮಾಯೆಗಳು ಬಂಧನಗಳಿರಲಿಲ್ಲ!
ರಾಹುಲ ಯಶೋಧರರ ಮಾಯೆಯನು ಒಡೆಯಲಿಕೆ
ಕಾಡಿಗೋಡಿದೆ ನಾನು! – ಅದು ಹಿರಿಮೆಯೇನಲ್ಲ!
ಪತ್ನಿ ಪುತ್ರರ ಕೂಡ ನಿಂತು ತನ್ನನು ಗೆಲುವ
ಯೋಗವೇ ಮೇಲಹುದು! ಬುದ್ಧನಾದರು ಮತ್ತೆ   ೨೦
ಅರಿತುದನು ಬಿತ್ತಲಿಕೆ ಜನತೆಯೇನೆಲನೆಮಗೆ!
ಜನತೆಯೊಡಲಲಿ ಹುಟ್ಟಿ, ಜನತೆ ಮಡಿಲಲಿ ಬೆಳೆದು,
ಜನತೆಯೆಡೆಯೇ ಉಳಿದು, ಜನತೆಯಡಿ ಮುಂದೊಯ್ವ
ಜ್ಞಾನ ಕರ್ಮಿಯು ಬುದ್ಧ! – ಮುಂದೆ ಬರುವವನವನು!
ಹಗಲು ಹುಟ್ಟುವ ಮುನ್ನ ಅರುಣನಿಣುಕುವ ಹಾಗೆ   ೨೫
ಮುಂದೆ ಜನಿಸುವ ಅವನ ಆಗಮನ ಸೂಚಿಸಲು
ನಾಬಂದೆ! ಆನಂದ- ಈಗ ನಿನಗರಿವಾಯ್ತೆ?
ಜಗದ ನಿಜವನು ಅರಿತ ನಿಜಬುದ್ಧ ಬರುತಿಹನು!
ಜಗವ ನಿಜದಲಿ ನಡೆಪ ಆನಂದ ನನಗಿಲ್ಲ-
ಆತನಿಗೆ ಮೀಸಲದು!”  ಆನಂದ ನಡುವಿನಲಿ   ೩೦
ಬಾಯಿಟ್ಟು ಪ್ರಶ್ನಿಸಿದ, “ಗುರುದೇವ, ಆತನನು
ವರ್ಣಿಪಿರ? – ಎಂತಿರುವ ಆ ಬುದ್ಧ-ನಿಜಬುದ್ಧ?
ಜಗದ ನಡೆನುಡಿಬೆರೆತ, ಜಗದ ಸತ್ಯವನರಿತ
ಜಗದ ಕೂಸಾಬುದ್ಧ ಎಲ್ಲಿ ಜನಿಸಿಹನವನು?”
ಬುದ್ಧ ನಸುನಕ್ಕಿಂತು ಪೇಳಿದನು ಉತ್ತರವ-   ೩೫
“ನಡುವಿಂದ ಮೊಳಕಾಲವರೆಗಿಳಿವ ಬಿಳಿವಸ್ತ್ರ
ತನ್ನ ಕೈಯಿಂ ತಾನೆ ನೂತುನೇದುದು ಖಾದಿ!
ಮೇಲ್ಹೊದಿಕೆ-ಮತ್ತೊಂದು-ಬಿಳಿಯ ಖಾದಿಯ ಚೌಕ
ವಿಶ್ವದಿಗ್ವಜಯಕ್ಕೆ ಹೊರಟ ಸನ್ಯಾಸಿಯವ,
ಕೈಯಲ್ಲಿ ದಂಡವಿದೆ-ಮುಖಬತ್ತಿ ಬಾಡಿಹುದು   ೪೦
ಯೌವನದ ತೇಜವಿದೆ-ಬ್ರಹ್ಮಚರ್‍ಯದ ತೇಜ!
ಮಡದಿಯನು ಮಾತೆಯೊಲು ಕಾಣವವನಾ ತೇಜ!
ಹೃಯದಲಿ ಹಿರಿಕೆಚ್ಚು-ಸ್ವಾತಂತ್ರ್‍ಯದಾ ಕಿಚ್ಚು
ಅದೊ ಆತ ಬರುತಲಿಹ ಈ ಎಡೆಗೆ ನೋಡಲ್ಲಿ
ಭಾರತಿಯ ಹಿರಿಯಮಗ-ಕಿರಿಯಮಕ್ಕಳು ನೋಡು   ೪೫
ಎನಿತು ಜನ ದಂಡಾಗಿ ಹಿಂದೆ ಸಾಗುತಲಿಹರು-
ಬುದ್ಧನವ! – ನಿಜಬುದ್ಧ! ನಾನವನ ಜನ್ಮವನು
ಸೂಚಿಸಲು ಬಂದಿದ್ದ ಮುಂಜಾನೆ! – ಆನಂದ!”
-ಅಷ್ಟರಲೆ ಕನಸೊಡೆದು ಎಚ್ಚೆತ್ತು ನೋಡಿದೆನು
ಸೆರೆಮನೆಯ ಹೊರಬದಿಗೆ ಕಾವಲಿನ ಪೋಲೀಸ   ೫೦
ನಡೆದ ಬೂಟ್ಸಿನ ಸದ್ದು ರಾತ್ರಿಯಾ ಕಡುಮೌನ
ಭೇದಿಸುತ ಬರುತಿತ್ತು- ಸುಂದರ ದಿಗಂತದಲಿ
ನಕ್ಷತ್ರನೂರ್ಲಕ್ಷ ಸ್ವಾತಂತ್ರ್‍ಯಸಿರಿಯಲ್ಲಿ
ನಕ್ಕುನಲಿಯುತಲಿರಲು, ಸೆರೆಮನೆಯ ಒಳಬದಿಯ
ಗಾಳಿ ಸುಂಯ್ಗುಡುತಿತ್ತು! ಕಂಗಳಲಿ ನೀರೂರಿ   ೫೫
ಗೋಡೆಯಲಿ ಮಸಿಯಿಂದ ನಾಬರೆದ ಚಿತ್ರದೆಡೆ
ಕಣ್ತಿರುವಿ ಕೈಮುಗಿದೆ ಗಾಂಧಿಗೆ ಮಹಾತ್ಮನಿಗೆ!
– “ನಿಜಬುದ್ಧ! ಭಾರತಿಯ ಹಿರಿಮಗ-ನಮಗೆಲ್ಲ
ಆತ್ಮ ಸ್ವಾತಂತ್ರ್‍ಯವನು ಸಾಧಿಸುವ ಮಂತ್ರವನು
ಬೋಧಿಸಿದ ನಿಜಗುರುವೆ! – ನಿನಗೆ ಚಿರಜಯಮಕ್ಕೆ!”   ೬೦
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...