Home / ಕವನ / ಕವಿತೆ / ನಿಜಬುದ್ಧ

ನಿಜಬುದ್ಧ

ಹಿಂದೊಮ್ಮೆ ಬುದ್ಧ ತನ್ನೊಲವ ಶಿಷ್ಯನ ಕೂಡ
ಮಾತನಾಡುತಲಿರಲು ಸೃಷ್ಟಿಸ್ಥಿತಿಲಯ ವಿಷಯ,
ಆನಂದ ಪ್ರಶ್ನಿಸಿದ “ಗುರುದೇವ, ಹೃದಯದಲಿ
ತೊಡಕುತಿದೆ-ಸಂದೇಹ-ಕೇಳುವೊಡೆ-ಹೇಳುವೆನು!”
ಬುದ್ಧದೇವನು ಆಗ ಚಂದ್ರಮನ ಎಳೆನಗುವ   ೫
ನಕ್ಕು ಪೇಳಿದನಿಂತು – “ಆನಂದ, ಅಂತಹುದು
ಸಂದೇಹವೇನಿಹುದು? – ಮನವ ಮುರಿವಂತಹುದು!
ಅರಿತಿದ್ದರದಕಾನು ಉತ್ತರವ ಹೇಳುವೆನು”
“ಗುರುದೇವ! ಜೀವನದಿ ಎಲ್ಲರೊಡನಾಡುತಲಿ
ಕಾಮಕ್ರೋಧದ ಕ್ರೂರ ಅಲೆಗಳಪ್ಪಳಿಸಿದರು   ೧೦
ಕಲ್ಬಂಡೆಯಂತಿರುವ ಯೋಗವೇ ಮೇಲಹುದೊ?
ಮೇಣ್, ಜಗಕೆ ದೂರಾಗಿ ಜ್ಞಾನಪಡೆವುದು ಮೇಲೊ?”
“ಆನಂದ, ಸಂದೇಹ ತಿಳುಹಿದುದೆ ಮೇಲಾಯ್ತು!
ನಾನು ಜಗವನೆ ತೊರೆದು ದೂರ ಕಾಡನು ಸೇರಿ
ಬುದ್ಧನಾದುದು ನಿನಗೆ ಅರಿತಿಹುದು …..ಎನಗಲ್ಲಿ,   ೧೫
ಕಾನನದಿ ಮಾಯೆಗಳು ಬಂಧನಗಳಿರಲಿಲ್ಲ!
ರಾಹುಲ ಯಶೋಧರರ ಮಾಯೆಯನು ಒಡೆಯಲಿಕೆ
ಕಾಡಿಗೋಡಿದೆ ನಾನು! – ಅದು ಹಿರಿಮೆಯೇನಲ್ಲ!
ಪತ್ನಿ ಪುತ್ರರ ಕೂಡ ನಿಂತು ತನ್ನನು ಗೆಲುವ
ಯೋಗವೇ ಮೇಲಹುದು! ಬುದ್ಧನಾದರು ಮತ್ತೆ   ೨೦
ಅರಿತುದನು ಬಿತ್ತಲಿಕೆ ಜನತೆಯೇನೆಲನೆಮಗೆ!
ಜನತೆಯೊಡಲಲಿ ಹುಟ್ಟಿ, ಜನತೆ ಮಡಿಲಲಿ ಬೆಳೆದು,
ಜನತೆಯೆಡೆಯೇ ಉಳಿದು, ಜನತೆಯಡಿ ಮುಂದೊಯ್ವ
ಜ್ಞಾನ ಕರ್ಮಿಯು ಬುದ್ಧ! – ಮುಂದೆ ಬರುವವನವನು!
ಹಗಲು ಹುಟ್ಟುವ ಮುನ್ನ ಅರುಣನಿಣುಕುವ ಹಾಗೆ   ೨೫
ಮುಂದೆ ಜನಿಸುವ ಅವನ ಆಗಮನ ಸೂಚಿಸಲು
ನಾಬಂದೆ! ಆನಂದ- ಈಗ ನಿನಗರಿವಾಯ್ತೆ?
ಜಗದ ನಿಜವನು ಅರಿತ ನಿಜಬುದ್ಧ ಬರುತಿಹನು!
ಜಗವ ನಿಜದಲಿ ನಡೆಪ ಆನಂದ ನನಗಿಲ್ಲ-
ಆತನಿಗೆ ಮೀಸಲದು!”  ಆನಂದ ನಡುವಿನಲಿ   ೩೦
ಬಾಯಿಟ್ಟು ಪ್ರಶ್ನಿಸಿದ, “ಗುರುದೇವ, ಆತನನು
ವರ್ಣಿಪಿರ? – ಎಂತಿರುವ ಆ ಬುದ್ಧ-ನಿಜಬುದ್ಧ?
ಜಗದ ನಡೆನುಡಿಬೆರೆತ, ಜಗದ ಸತ್ಯವನರಿತ
ಜಗದ ಕೂಸಾಬುದ್ಧ ಎಲ್ಲಿ ಜನಿಸಿಹನವನು?”
ಬುದ್ಧ ನಸುನಕ್ಕಿಂತು ಪೇಳಿದನು ಉತ್ತರವ-   ೩೫
“ನಡುವಿಂದ ಮೊಳಕಾಲವರೆಗಿಳಿವ ಬಿಳಿವಸ್ತ್ರ
ತನ್ನ ಕೈಯಿಂ ತಾನೆ ನೂತುನೇದುದು ಖಾದಿ!
ಮೇಲ್ಹೊದಿಕೆ-ಮತ್ತೊಂದು-ಬಿಳಿಯ ಖಾದಿಯ ಚೌಕ
ವಿಶ್ವದಿಗ್ವಜಯಕ್ಕೆ ಹೊರಟ ಸನ್ಯಾಸಿಯವ,
ಕೈಯಲ್ಲಿ ದಂಡವಿದೆ-ಮುಖಬತ್ತಿ ಬಾಡಿಹುದು   ೪೦
ಯೌವನದ ತೇಜವಿದೆ-ಬ್ರಹ್ಮಚರ್‍ಯದ ತೇಜ!
ಮಡದಿಯನು ಮಾತೆಯೊಲು ಕಾಣವವನಾ ತೇಜ!
ಹೃಯದಲಿ ಹಿರಿಕೆಚ್ಚು-ಸ್ವಾತಂತ್ರ್‍ಯದಾ ಕಿಚ್ಚು
ಅದೊ ಆತ ಬರುತಲಿಹ ಈ ಎಡೆಗೆ ನೋಡಲ್ಲಿ
ಭಾರತಿಯ ಹಿರಿಯಮಗ-ಕಿರಿಯಮಕ್ಕಳು ನೋಡು   ೪೫
ಎನಿತು ಜನ ದಂಡಾಗಿ ಹಿಂದೆ ಸಾಗುತಲಿಹರು-
ಬುದ್ಧನವ! – ನಿಜಬುದ್ಧ! ನಾನವನ ಜನ್ಮವನು
ಸೂಚಿಸಲು ಬಂದಿದ್ದ ಮುಂಜಾನೆ! – ಆನಂದ!”
-ಅಷ್ಟರಲೆ ಕನಸೊಡೆದು ಎಚ್ಚೆತ್ತು ನೋಡಿದೆನು
ಸೆರೆಮನೆಯ ಹೊರಬದಿಗೆ ಕಾವಲಿನ ಪೋಲೀಸ   ೫೦
ನಡೆದ ಬೂಟ್ಸಿನ ಸದ್ದು ರಾತ್ರಿಯಾ ಕಡುಮೌನ
ಭೇದಿಸುತ ಬರುತಿತ್ತು- ಸುಂದರ ದಿಗಂತದಲಿ
ನಕ್ಷತ್ರನೂರ್ಲಕ್ಷ ಸ್ವಾತಂತ್ರ್‍ಯಸಿರಿಯಲ್ಲಿ
ನಕ್ಕುನಲಿಯುತಲಿರಲು, ಸೆರೆಮನೆಯ ಒಳಬದಿಯ
ಗಾಳಿ ಸುಂಯ್ಗುಡುತಿತ್ತು! ಕಂಗಳಲಿ ನೀರೂರಿ   ೫೫
ಗೋಡೆಯಲಿ ಮಸಿಯಿಂದ ನಾಬರೆದ ಚಿತ್ರದೆಡೆ
ಕಣ್ತಿರುವಿ ಕೈಮುಗಿದೆ ಗಾಂಧಿಗೆ ಮಹಾತ್ಮನಿಗೆ!
– “ನಿಜಬುದ್ಧ! ಭಾರತಿಯ ಹಿರಿಮಗ-ನಮಗೆಲ್ಲ
ಆತ್ಮ ಸ್ವಾತಂತ್ರ್‍ಯವನು ಸಾಧಿಸುವ ಮಂತ್ರವನು
ಬೋಧಿಸಿದ ನಿಜಗುರುವೆ! – ನಿನಗೆ ಚಿರಜಯಮಕ್ಕೆ!”   ೬೦
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...