Home / ಕವನ / ಕವಿತೆ / ಸಾಯದ ಸಾವು ಬದುಕದ ಬದುಕು

ಸಾಯದ ಸಾವು ಬದುಕದ ಬದುಕು

ಕಣ್ಣೊಳಗೆ ನೋಡಿ ಕುಲುಕಾಟವಾಡಿ
ಮಣ್ಣೊಳಗೆ ಬೆರೆವ ತವಕ
ಬಣ್ಣದಲಿ ತೇಲಿ ಕೆಸರಿನಲಿ ಹೊರಳಿ
ತಣ್ಣಗಿದೆ ಎಮ್ಮೆ ಕುಡುಕ

ತಿಂದಿದ್ದ ಒಂದು ಬೆಂದಿದ್ದೆ ಒಂದು
ನಿಂದಿದ್ದೆ ನಿಲುವು ಗೆಲುವು
ಹೊಂದಿದ್ದೆ ನಡೆತ ಗೊಣಗಿದ್ದೆ ತುಡಿತ
ಕಂದಿದ್ದು ಚಿಗುರು ನಲಿವು

ಆಗಸಕೆ ಏರಿ ಚಿಕ್ಕೆಗಳ ಸಾರಿ
ಸೋಗಿನಲಿ ಬೀರಿ ಮೀರಿ
ಬಾಗಿಲನು ಬಡಿದು ನಿದ್ದೆಯಲಿ ನಡೆದು
ಬೇಗೆಯಲಿ ತೊರೆದು ದಾರಿ

ಕಳಸದಲಿ ಪಾನ ಬಳಸದೆಯೆ ಮೌನ
ತುಳುಕಾಡದಂಥ ಬಿಗುವು
ತಳಕಿತ್ತಿ ಬುಟ್ಟಿ ಚೆಲ್ಲಾಡೆ ಬುತ್ತಿ
ಹಳಸಿದ್ದು ನಾಯಿ ನಗುವು

ಓಡುತಿವೆ ಮೋಡ ಬೀಡಿ ಹೊಗೆ ಕೂಡ
ನಾಡಿಯಲಿ ಕಾಲ ಮಾನ
ಬಾಡುತಿಹ ಹೂವು ಬಿದ್ದಿರಲು ಕೆಳಗೆ
ಕಾಡುತಿದೆ ಸ್ಥಾನ ಮಾನ

ನನಗಾಗಿ ನಾನು ನಿನಗಾಗಿ ನೀನು
ಸೊಣಗನದೆ ಬಣಗು ಮೂಗು
ಮನ ಬೆತ್ತಲಾಗೆ ದಿನ ಕತ್ತಲಾಗೆ
ಘನವಾಯ್ತು ಹಗಲ ಸೋಗು

ಎತ್ತೆತ್ತಲಿಂದೊ ಸಂದೇಶ ಬಂದು
ಹತ್ತಿಲೇ ಗುಯ್ಯಿಗುಡಲು
ಹೊತ್ತಲೇ ಇಲ್ಲ ವಿದ್ಯುತ್ತು ಮೈಗೆ
ಮತ್ತೆಲ್ಲೋ ತರಗು ಸುಡಲು

ಭೂಕೇಂದ್ರದಿಂದ ತರತರವ ದಾಟಿ
ಸೋಕುತ್ತ ಬಿಡಲು ಚರ್ಮ
ಆಕಾಶದಿಂದ ನರನರವ ಮೀಟಿ
ಜೀಕುತಿದೆ ದೇವ ಮರ್ಮ

ಮೈಯನ್ನು ಮಣಿಸಿ ಬಾಯನ್ನು ತಣಿಸಿ
ಬೀಯಗವು ಆಯವ್ಯಯವು
ಸಾಯದಿದೆ ಸಾವು ಬದುಕದಿದೆ ಬದುಕು
ನೋಯದಿಹ ಇಹದ ದ್ವಯವು
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...